ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಅಡ್ಡಿ : ಪೊಲೀಸ್ ರಕ್ಷಣೆ ನೀಡಲು ಡಿ.ಸಿ ಸೂಚನೆ
Tumkur news
ತುಮಕೂರು: ತಾಲ್ಲೂಕಿನ ಕೋರ ಹೋಬಳಿ ಚಿಕ್ಕೋನಹಳ್ಳಿ ಗ್ರಾಮದಲ್ಲಿ ಭೂಸ್ವಾಧೀನಪಡಿಸಿ ಪರಿಹಾರ ಪಾವತಿಸಲಾಗಿದ್ದರೂ ಸಹ ಹಲವು ಭೂಮಾಲೀಕರು, ಕಾಮಗಾರಿಗೆ ಅಡ್ಡಿಪಡಿಸುತ್ತಿರುವುದರಿಂದ ಪೊಲೀಸ್ ರಕ್ಷಣೆ ಕೊಡಿಸುವಂತೆ ತುಮಕೂರು ಎತ್ತಿನಹೊಳೆ ಯೋಜನೆ ಕಾರ್ಯಪಾಲಕ ಅಭಿಯಂತರರು ಕೋರಿದ್ದು, ಇವರ ಕೋರಿಕೆಯಂತೆ ಅಗತ್ಯ ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ವಿವಿಧ ಯೋಜನೆಗಳ ಭೂಸ್ವಾಧೀನ ಮತ್ತು ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಚೌಡ್ಲಾಪುರ ಗ್ರಾಮದ ಭೂಮಾಲೀಕರಿಗೆ ಭೂಸ್ವಾಧೀನ ಪರಿಹಾರವನ್ನು ಶೀಘ್ರವಾಗಿ ಪಾವತಿಸಲು ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ನಿರ್ದೇಶಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ತುಮಕೂರು ತಾಲ್ಲೂಕು ಕಸಬಾ ದಕ್ಷಿಣ ಹೋಬಳಿ ರಂಗಾಪುರ, ಮರಳೇನಹಳ್ಳಿ, ಬಟವಾಡಿ ಗ್ರಾಮಗಳ ಇ.ಹೆಚ್.ಟಿ. ಟವರ್ಸ್ ಗಳನ್ನು ಸ್ಥಳಾಂತರ ಮಾಡುವ ಕುರಿತು ಅಗತ್ಯ ಕ್ರಮ ವಹಿಸಲು ತುಮಕೂರು ಉಪವಿಭಾಗಾಧಿಕಾರಿಗೆ ನಿರ್ದೇಶನ ನೀಡಿದರು.
ಅಕ್ಕ ತಂಗಿ ಕೆರೆ-ಸರ್ವಿಸ್ ರಸ್ತೆ ವಿಸ್ತರಿಸುವ ಕಾಮಗಾರಿಗೆ ಸಂಬಂಧಿಸಿದಂತೆ 7 ಹೆಕ್ಟೇರ್ ಸರ್ಕಾರಿ ಜಮೀನು ಗುರುತಿಸಲು ಅಗತ್ಯ ಕ್ರಮವಹಿಸಲು ತುಮಕೂರು ಉಪವಿಭಾಗಾಧಿಕಾರಿಗೆ ನಿರ್ದೇಶನ ನೀಡಿದರು.
ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ತಿಮ್ಮರಾಜನಹಳ್ಳಿ-ತಾವರೆಕೆರೆ ಮಾರ್ಗದ 1 ಕಿ.ಮೀ.ನಷ್ಟು ಕಾಮಗಾರಿಗೆ ಭೂಮಾಲೀಕರು ಅಡ್ಡಿಪಡಿಸುತ್ತಿದ್ದು, ಭೂಮಾಲೀಕರ ಸಮಸ್ಯೆ ಬಗೆಹರಿಸುವಂತೆ ಹಾಗೂ ಎಲ್.ಸಿ.33-ಪಂಡಿತನಹಳ್ಳಿ ಗೇಟ್ ಕಾಮಗಾರಿಗೆ ಸಂಬಂಧಿಸಿದಂತೆ ಮರ ಕಡಿಯುವ ಸಮಸ್ಯೆಯನ್ನು ಬಗೆಹರಿಸುವಂತೆ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಎತ್ತಿನ ಹೊಳೆ ಯೋಜನೆ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.
