Blog

  • ತುಮಕೂರು: ಎಲೆಕ್ಟ್ರಿಕ್ ಕಾರು ಡಿಕ್ಕಿ: 13 ವರ್ಷದ ಬಾಲಕ ಸಾವು

    ಎಲೆಕ್ಟ್ರಿಕ್ ಕಾರು ಡಿಕ್ಕಿ: 13 ವರ್ಷದ ಬಾಲಕ ಸಾವು

    Tumkur news
    ಗುಬ್ಬಿ: ರಸ್ತೆ ಬದಿ ಆಟವಾಡುತ್ತಿದ್ದ 13 ವರ್ಷದ ಬಾಲಕನ ಮೇಲೆ ಎಲೆಕ್ಟ್ರಿಕ್ ಕಾರು ಹರಿದ ಪರಿಣಾಮ ಬಾಲಕ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
    ಗುಬ್ಬಿ ತಾಲ್ಲೂಕು ನಿಟ್ಟೂರಿನಲ್ಲಿ ಘಟನೆ ನಡೆದಿದ್ದು, ರಾಘವೇಂದ್ರ ಟೆಕ್ಸ್ ಟೈಲ್ಸ್ ಜವಳಿ ಅಂಗಡಿ ಮಾಲೀಕರ ಪುತ್ರ ಶೋಭಿತ್ ರಾಘವ್ ಮೃತ ದುರ್ದೈವಿ.
    ಶಾಲೆಗೆ ರಜೆ ಇದ್ದ ಕಾರಣದಿಂದಾಗಿ ಪೋಷಕರ ಜೊತೆಗೆ ಜವಳಿ ಅಂಗಡಿಗೆ ಬಂದಿದ್ದ ಬಾಲಕ, ಅಂಗಡಿ ಮುಂದೆ ಸೈಕಲ್’ನಲ್ಲಿ ಆಟವಾಡುತ್ತಿದ್ದನು. ಈ ವೇಳೆ ಯಮ ಸ್ವರೂಪಿಯಾಗಿ ಬಂದ ಎಲೆಕ್ಟ್ರಿಕ್ ಕಾರು ಬಾಲಕನಿಗೆ ಡಿಕ್ಕಿಯಾಗಿದೆ. ಸ್ಥಳೀಯರ ಸಹಾಯದಿಂದ ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಾರ್ಗಮಧ್ಯದಲ್ಲಿ ಬಾಲಕ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ಗುಬ್ಬಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ತುಮಕೂರು: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಸವ ಜಯಂತಿ ಆಚರಣೆ

    ಆದರ್ಶ ಸಮಾಜ ನಿರ್ಮಾಣದ ದಾರ್ಶನಿಕ ಬಸವಣ್ಣ:
    ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕ್ರಾಂತಿಯೋಗಿಗೆ ಗೌರವ ನಮನ

    Tumkur news
    ತುಮಕೂರು: ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಬಸವ ಜಯಂತಿ ಅಂಗವಾಗಿ ಮುಖಂಡರು ಜಗಜ್ಯೋತಿ ಬಸವಣ್ಣ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಬಸವಣ್ಣ ನಾಡಿಗೆ ಕೊಟ್ಟ ಕೊಡುಗೆ ಸ್ಮರಿಸಿದರು.
    ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿ, ಶ್ರೇಷ್ಠ ವಚನಕಾರ, ವಿಶ್ವಗುರು ಬಸವಣ್ಣನವರು ಸಾರಿದ ತತ್ವಗಳು ಜಾತ್ಯತೀತತೆ, ಕಾಯಕ, ದಾಸೋಹ ಮತ್ತು ಸಮಾನತೆಯ ಆಧಾರದಲ್ಲಿವೆ. ಕಾಯಕವೇ ಕೈಲಾಸ ಎಂದು ಹೇಳಿ ದುಡಿದದ್ದನ್ನು ಸಮಾಜದೊಂದಿಗೆ ಹಂಚಿಕೊಳ್ಳಬೇಕೆಂದ ಆದರ್ಶ ಸಮಾಜದ ಪರಿಕಲ್ಪನೆ ಬಿತ್ತಿದರು ಎಂದು ಹೇಳಿದರು.
    ಆಗಲೇ ಮಹಿಳಾ ಸಬಲೀಕರಣದ ಧ್ವನಿ ಎತ್ತಿದ್ದ ಬಸವಣ್ಣನವರು ಮಹಿಳೆಯರಿಗೆ ಸಮಾನ ಅವಕಾಶ, ವೇದಿಕೆ ಕಲ್ಪಿಸಿದರು. ಜಾತಿಭೇದವಿಲ್ಲದೆ ಮಾನವರೆಲ್ಲರೂ ಒಂದೇ ಎಂದು ಮಾನವ ಧರ್ಮ ಪ್ರತಿಪಾದಿಸಿದ ಬಸವಣ್ಣ, ಶೇಷ್ಠ ಮಾನವತಾವಾದಿ. ದಯವಿಲ್ಲದ ಧರ್ಮ ಯಾವುದಯ್ಯ ಎಂದು ಹೇಳಿ ಸಖಲ ಪ್ರಾಣಿ-ಪಕ್ಷಿ, ಮನುಷ್ಯರಲ್ಲಿ ದಯೆ ತೋರುವುದೇ ನಿಜವಾದ ಧರ್ಮ ಎಂದು ಸಾರಿದ ಬಸವಣ್ಣನವರ ತತ್ವಗಳನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
    ಜಿಲ್ಲಾ ಬಿಜೆಪಿ ಹಿರಿಯ ಉಪಾಧ್ಯಕ್ಷ ವೈ.ಹೆಚ್. ಹುಚ್ಚಯ್ಯ ಮಾತನಾಡಿ, ಜಾತಿ ವೈಷಮ್ಯಗಳನ್ನು ಬಿಟ್ಟು ಮನುಷ್ಯ ಸಮಾನತೆ ಸಾರಿದ ದಾರ್ಶನಿಕರು ಬಸವಣ್ಣ. ಬಸವಣ್ಣನವರ ತತ್ವಗಳು ಎಲ್ಲಾ ಧರ್ಮಗಳಿಗೂ ಆದರ್ಶಪ್ರಾಯ. ಸಮಾಜ ಸುಧಾರಣೆ, ಹೆಣ್ಣುಮಕ್ಕಳಿಗೆ ಸಮಾನ ಅವಕಾಶ ಸೇರಿದಂತೆ ನಮ್ಮ ಸಂವಿಧಾನಕ್ಕೆ ಮಿಗಿಲಾದ ಆಶಯಗಳ ಆದರ್ಶ ಸಮಾಜವನ್ನು ಕಟ್ಟುವ ಪ್ರಯತ್ನ ಮಾಡಿದ್ದರು ಎಂದು ಹೇಳಿದರು.
    ಸಪ್ತಗರಿ ಕಾಲೇಜಿನ ಶಿಕ್ಷಣಾಧಿಕಾರಿ ಚನ್ನಪ್ಪ ಬಾರಿಗಿಡದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಬಸವಣ್ಣನವರ ಆದರ್ಶಗಳನ್ನು ಪರಿಚಯಿಸಿದರು.
    ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಾಗರನಹಳ್ಳಿ ವಿಜಯಕುಮಾರ್, ಕಾರ್ಯದರ್ಶಿಗಳಾದ ಹೆಚ್.ಎಂ. ರವೀಶಯ್ಯ, ಜ್ಯೋತಿ ತಿಪ್ಪೇಸ್ವಾಮಿ, ನಗರ ಅಧ್ಯಕ್ಷ ಟಿ.ಕೆ. ಧನುಷ್, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ, ಜಿಲ್ಲಾ ವಕ್ತಾರ ಟಿ.ಆರ್. ಸದಾಶಿವಯ್ಯ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನವಚೇತನ್, ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ಧರಾಮಣ್ಣ, ನಗರಪಾಲಿಕೆ ಮಾಜಿ ಮೇಯರ್ ಬಿ.ಜಿ. ಕೃಷ್ಣಪ್ಪ, ಮುಖಂಡರಾದ ಕೆ. ಮಲ್ಲಿಕಾರ್ಜುನ್, ಬಂಬೂ ಮೋಹನ್, ಪಂಚಾಕ್ಷರಯ್ಯ, ಗಂಗಾಧರ್ ಸೇರಿದಂತೆ ವಿವಿಧ ಮೋರ್ಚಾಗಳ ಮುಖಂಡರು ಸಮಾರಂಭದಲ್ಲಿ ಭಾಗವಹಿಸಿದ್ದರು.
    ಈ ಸಂದರ್ಭದಲ್ಲಿ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿಜೆಪಿಯಿಂದ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ವೇಳೆ ಕೊಪ್ಪಲ್ ಸಿದ್ಧವೀರಯ್ಯ ಮತ್ತು ಪಾರ್ವತಮ್ಮ ಪ್ರತಿಷ್ಠಾನದಿಂದ ಕೊಪ್ಪಲ್ ನಾಗರಾಜು ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಿದರು.

    ತುಮಕೂರು: ಬಾಸ್ಕೆಟ್ ಬಾಲ್ ಬೇಸಿಗೆ ಶಿಬಿರಕ್ಕೆ ಚಾಲನೆ

  • ತುಮಕೂರು, ತಿಪಟೂರು, ಶಿರಾ ನಗರದಲ್ಲಿ ಎರಡು ದಿನ ನಿಷೇದಾಜ್ಞೆ: ಜಿಲ್ಲಾಧಿಕಾರಿ

    ತುಮಕೂರು, ತಿಪಟೂರು, ಶಿರಾ ನಗರದಲ್ಲಿ ಎರಡು ದಿನ ನಿಷೇದಾಜ್ಞೆ: ಜಿಲ್ಲಾಧಿಕಾರಿ

    ನಿಷೇಧಾಜ್ಞೆಯು ಏಪ್ರಿಲ್ 23 ಮತ್ತು 24ರಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ಗಂಟೆಯವರೆಗೆ ಜಾರಿಯಲ್ಲಿರುತ್ತದೆ

    Tumkur news
    ತುಮಕೂರು: ಜಿಲ್ಲೆಯ ತುಮಕೂರು ನಗರದಲ್ಲಿ 19, ತಿಪಟೂರು ನಗರದಲ್ಲಿ 4 ಹಾಗೂ ಶಿರಾ ನಗರದಲ್ಲಿ 2 ಪರೀಕ್ಷಾ ಕೇಂದ್ರ ಸೇರಿದಂತೆ 25 ಕೇಂದ್ರಗಳಲ್ಲಿ ಏಪ್ರಿಲ್ 23 ಮತ್ತು 24ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಯಲಿದ್ದು, ಪರೀಕ್ಷೆಯನ್ನು ಯಾವುದೇ ಲೋಪದೋಷವಿಲ್ಲದಂತೆ ಹಾಗೂ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯೊಳಗಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶುಭ ಕಲ್ಯಾಣ್ ಅವರು ಆದೇಶ ಹೊರಡಿಸಿದ್ದಾರೆ.
    ನಿಷೇಧಾಜ್ಞೆಯು ಏಪ್ರಿಲ್ 23 ಮತ್ತು 24ರಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಈ ನಿಷೇಧಾಜ್ಞೆಯನ್ವಯ ಪರೀಕ್ಷೆ ನಡೆಯುವ ದಿನಾಂಕದಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್ ಮತ್ತು ಬೆರಳಚ್ಚು ಕೇಂದ್ರಗಳನ್ನು ಮುಚ್ಚತಕ್ಕದ್ದು. ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಅನಧಿಕೃತ ವ್ಯಕ್ತಿಗಳು ಯಾರೂ ನಿರ್ಬಂಧಿತ ಪ್ರದೇಶದೊಳಗೆ ಪ್ರವೇಶಿಸುವಂತಿಲ್ಲ ಹಾಗೂ ನಿಷೇಧಾಜ್ಞೆಯನ್ನು ಉಲ್ಲಂಘನೆ ಮಾಡಿದ ವ್ಯಕ್ತಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಜಿಲ್ಲಾ ಪೊಲೀಸ್ ಇಲಾಖೆಗೆ ಆದೇಶಿಸಲಾಗಿದೆ.
    ಕೆಲವು ಪ್ರಕರಣಗಳಲ್ಲಿ ದುರುದ್ದೇಶದಿಂದ ನಕಲಿ ಪ್ರಶ್ನೆಪತ್ರಿಕೆಗಳ ಫೋಟೋಗಳನ್ನು ತೆಗೆದು ವಾಟ್ಸ್ಆಪ್, ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಕಳುಹಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಮಾಡಲು ಅವಕಾಶವಿರುವುದರಿಂದ ಪರೀಕ್ಷಾ ಮುಖ್ಯ ಅಧೀಕ್ಷಕರಿಗೆ ಬೇಸಿಕ್ ಮೊಬೈಲ್ ಇರಿಸಿಕೊಳ್ಳಲು ಅವಕಾಶವಿದೆ. ಉಳಿದ ಎಲ್ಲಾ ಪರೀಕ್ಷಾ ಸಿಬ್ಬಂದಿ, ವಿದ್ಯಾರ್ಥಿಗಳು ಮೊಬೈಲ್ ತರುವುದು, ಉಪಯೋಗಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
    ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆಗಳ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವಂತಹ ವ್ಯಕ್ತಿಗಳು ಕಂಡುಬಂದಲ್ಲಿ ಅವರ ವಿರುದ್ಧ ಭಾರತೀಯ ನ್ಯಾ ಸಂಹಿತೆ 2023ರಡಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸೂಚಿಸಿದ್ದಾರೆ.

  • ತುಮಕೂರು: ಬಾಸ್ಕೆಟ್ ಬಾಲ್ ಬೇಸಿಗೆ ಶಿಬಿರಕ್ಕೆ ಚಾಲನೆ

    ಬಾಸ್ಕೆಟ್‌ಬಾಲ್ ಬೇಸಿಗೆ ಶಿಬಿರ ಆರಂಭ
    ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಚಾಲನೆ: ಮೊಬೈಲ್ ಬಿಟ್ಟು ಅಂಕಣಕ್ಕಿಳಿದ ಮಕ್ಕಳು

    ತುಮಕೂರು: ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ ತಿಳಿಸಿದರು.
    ನಗರದ ಮಹಾತ್ಮಾಗಾಂಧಿ ಕ್ರೀಡಾಂಗಣದ ಆವರಣದಲ್ಲಿರುವ ಡಾ.ಜಿ.ಪರಮೇಶ್ವರ್ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಬಾಸ್ಕೆಟ್‌ಬಾಲ್ ಅಸೋಸಿಯೇಶನ್‌ ಆಯೋಜಿಸಿದ್ದ ಬಾಸ್ಕೆಟ್‌ಬಾಲ್ ಬೇಸಿಗೆ ಶಿಬಿರ ಉದ್ಟಾಟಿಸಿ ಮಾತನಾಡಿದ ಅವರು, ಜಿಲ್ಲಾಡಳಿತದ ಒತ್ತಾಸೆಯ ಫಲವಾಗಿ ಹೆಚ್ಚು ಹೆಚ್ಚು ಕ್ರೀಡಾ ಚಟುವಟಿಕೆಗಳು ಆರಂಭಗೊಂಡಿವೆ ಎಂದರು.
    ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಹೊಸದಾಗಿ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಿದ ಸಂದರ್ಭದಲ್ಲಿ ಹಳೆಯ ಬಾಸ್ಕೆಟ್‌ಬಾಲ್ ಅಂಕಣವನ್ನು ತೆರವುಗೊಳಿಸಲಾಗಿತ್ತು. ಬಾಸ್ಕೆಟ್‌ಬಾಲ್ ಅಸೋಸಿಯೇಷನ್‌ ಕೊರಿಕೆಯ ಮೇರೆಗೆ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ಬಾಸ್ಕೆಟ್‌ಬಾಲ್ ಅಂಕಣ ಸಿದ್ದಪಡಿಸಿ ನೀಡಿದ್ದೇವೆ. ಸಿಮೆಂಟ್ ಅಂಕಣ ಜಾರುತ್ತಿರುವ ಹಿನ್ನೆಲೆಯಲ್ಲಿ ಸಿಂಥೆಟಿಕ್ ಬಣ್ಣ ಮಾಡಿಸಿಕೊಡಲು ಅಸೋಸಿಯೇಷನ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಕರ್ನಾಟಕ ಒಲಂಪಿಕ್ ಅಸೋಸಿಯೇಷನ್‌ ಮೂಲಕ ಶೀಘ್ರವಾಗಿ ಸಿಂಥೆಟಿಕ್ ಕೋರ್ಟುಗೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು
    ಇಂದು ತುಮಕೂರು ಅಮಾನಿಕೆರೆಯಲ್ಲಿ ಕಯಾಕಿಂಗ್(ಹಾಯಿ ದೋಣಿ)ತರಬೇತಿ ಸಹ ಆರಂಭಗೊಂಡಿದೆ. ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್‌ ನ ನುರಿತ ತಜ್ಞರು ತರಬೇತಿ ನೀಡುತ್ತಿದ್ದಾರೆ. ಹಾಗೆಯೇ ಬಾಸ್ಕೆಟ್‌ಬಾಲ್ ಬೇಸಿಗೆ ಶಿಬಿರ ಅರಂಭಗೊಂಡಿದೆ‌. ನೂರಾರು ಮಕ್ಕಳು ಮೊಬೈಲ್ ಬಿಟ್ಟು ಅಂಕಣಕ್ಕೆ ಇಳಿದಿರುವುದು ಒಳ್ಳೆಯ ಬೆಳವಣಿಗೆ. ಈ ಉತ್ಸಾಹ ಮತ್ತು ಆಸಕ್ತಿಯನ್ನು ಹೆಚ್ಚು ಮಾಡಲು ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ ತಿಳಿಸಿದರು.
    ತುಮಕೂರು ಜಿಲ್ಲಾ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ನ ಅನಿಲ್ ಕುಮಾರ್ ಮಾತನಾಡಿ, ಜಿಲ್ಲಾಡಳಿತದ ನೆರವಿನಿಂದ ಎಂಟು ವರ್ಷಗಳ ನಂತರ ಬಾಸ್ಕೆಟ್‌ಬಾಲ್ ಅಂಕಣ ಆಟಗಾರರಿಗೆ ದೊರೆತಿದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಅಸೋಸಿಯೇಷನ್ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಬಾಸ್ಕೆಟ್‌ಬಾಲ್ ಬೇಸಿಗೆ ಶಿಬಿರದಲ್ಲಿ 6 ರಿಂದ 16 ವರ್ಷ ವಯಸ್ಸಿನ 35ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಹಿರಿಯ ಆಟಗಾರರು ತರಬೇತಿ ನೀಡಲಿದ್ದಾರೆ. ತುಮಕೂರು ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ಎಲ್ಲಾ ವಯೋಮಾನದ ಬಲಿಷ್ಠ ತಂಡ ಕಟ್ಟಲು ಸಹಕಾರಿಯಾಗಲಿದೆ. ಇದಕ್ಕೆ ಸಹಕಾರ ನೀಡಿದ ಅಸೋಸಿಯೇಷನ್ ನ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
    ಈ ವೇಳೆ ಬೋರ್ಡ್‌ನ ಸದಸ್ಯರಾದ ಮಧುಸೂಧನ್.ಬಿ, ರಕ್ಷಿತ ವಿ., ಆರ್.ಕಾರ್ತಿಕ್ ಗೌಡ, ಹರ್ಷ ಮತ್ತು ಸಾಗರ್.ಆರ್ ಮತ್ತಿತರರು ಉಪಸ್ಥಿತರಿದ್ದರು.

  • ತುಮಕೂರು: ‘ಜಿಲ್ಲಾ ಮಟ್ಟದ ಬೃಹತ್ ಜನತಾ ದರ್ಶನ’: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಶುಭ ಕಲ್ಯಾಣ್

    ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ‘ಜಿಲ್ಲಾ ಮಟ್ಟದ ಬೃಹತ್ ಜನತಾ ದರ್ಶನ’:
    ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಶುಭ ಕಲ್ಯಾಣ್

    Tumkur news
    ತುಮಕೂರು: ಜಿಲ್ಲೆಯ ನಾಗರಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳಿಗೆ ಪರಿಹಾರೋಪಾಯವನ್ನು ಒದಗಿಸಲು ಏಪ್ರಿಲ್ 8ರಂದು ಬೆಳಿಗ್ಗೆ 11 ಗಂಟೆಗೆ ತುಮಕೂರಿನ ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
    ಏಪ್ರಿಲ್ 8ರಂದು ಬೆಳಿಗ್ಗೆ 11 ಗಂಟೆಗೆ ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಜಾಗದಲ್ಲಿ 10 ವಿವಿಧ ಪ್ರಮುಖ ಇಲಾಖೆಗಳ ಮಳಿಗೆಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಗುವುದು. ಅಲ್ಲದೆ, ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರು ಸ್ಥಳದಲ್ಲಿ ಹಾಜರಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯಕ್ರಮ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.
    ಕಾರ್ಯಕ್ರಮ ಸ್ಥಳದಲ್ಲಿ ನಿರ್ಮಿಸಲಾಗುವ ತಾತ್ಕಾಲಿಕ ಮಳಿಗೆಗಳಲ್ಲಿ ಐಪಿಜಿಆರ್‌ಎಸ್ ತಂತ್ರಾಂಶ ಒಳಗೊಂಡ ಡಾಟಾ ಎಂಟ್ರಿ, ಕಂಪ್ಯೂಟರ್ ವ್ಯವಸ್ಥೆ, ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕಾರ್ಯಕ್ರಮ ರೂಪಿಸುವ ಸಂಬಂಧ ಆದೇಶವನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
    ಈಗಾಗಲೇ ತುಮಕೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಗಳನ್ನು ನೀಡಲಾಗಿದೆ. ಅಲ್ಲದೆ, ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಟಿಲ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರವನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
    ಜಿಲ್ಲಾದ್ಯಂತ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲಾ ಸೌಲಭ್ಯಗಳನ್ನು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಒದಗಿಸಲು ಕ್ರಮವಹಿಸಲಾಗಿದೆ. ಸಾರ್ವಜನಿಕರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಅವರು ಮನವಿ ಮಾಡಿದ್ದಾರೆ.
    ಜನಸ್ಪಂದನದಲ್ಲಿ ಅಹವಾಲುಗಳಿಗೆ ತಾರ್ಕಿಕ ಅಂತ್ಯ; ಅಧಿಕಾರಿಗಳಿಗೆ ಡಿ.ಸಿ. ಸೂಚನೆ: ಕಾರ್ಯಕ್ರಮದ ದಿನದಂದು ಮೊದಲು ಎಲ್ಲಾ ಇಲಾಖೆಗಳ ಮುಖ್ಯಸ್ಥರು ಹಾಜರಿದ್ದು, ಎಲ್ಲಾ ಇಲಾಖೆಗಳ ಮುಖ್ಯಸ್ಥರು ಪರಸ್ಪರ ಸಹಕಾರದೊಂದಿಗೆ ಸಾರ್ವಜನಿಕರಿಂದ ಬಂದಂತಹ ಅಹವಾಲುಗಳಿಗೆ ತಾರ್ಕಿಕ ಅಂತ್ಯ ಸಿಗುವಂತೆ ಕೆಲಸ ನಿರ್ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ. ಎಲ್ಲಾ ತಾಲ್ಲೂಕುಗಳಿಂದ ಸುಮಾರು 2500 ಅರ್ಜಿಗಳು ಬಂದಿದ್ದು, ತಮ್ಮ ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಿ, ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಅಧಿಕಾರಿಗಳಿಗೆ ವಹಿಸಿದ ಜವಾಬ್ದಾರಿಯನ್ನು ಲೋಪವಿಲ್ಲದೆ ನಿರ್ವಹಿಸಬೇಕೆಂದು ಅವರು ಸೂಚಿಸಿದ್ದಾರೆ.

  • ತುಮಕೂರು: ಏ.8ರ ಜನಸ್ಪಂದನ ಸಭೆಯಲ್ಲಿ ಗರಿಷ್ಠ ಪರಿಹಾರಗಳು: ಡಿಸಿ ವಿಶ್ವಾಸ

    ಏ.8ರ ಜನಸ್ಪಂದನ ಸಭೆಯಲ್ಲಿ ಗರಿಷ್ಠ ಪರಿಹಾರಗಳು: ಡಿಸಿ ವಿಶ್ವಾಸ

    Tumkur news
    ತುಮಕೂರು: ಏ.8ರಂದು ನಡೆಯಲಿರುವ ಜನ ಸ್ಪಂದನ ಸಭೆಯಲ್ಲಿ ಗರಿಷ್ಠ ಮಟ್ಟದ ಪರಿಹಾರಗಳು ಸಿಗಲಿವೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
    ನಗರ ಕೇಂದ್ರ ಗ್ರಂಥಾಲಯದಲ್ಲಿ ಶುಕ್ರವಾರ ಏಪ್ರಿಲ್ 8 ರಂದು ನಡೆಯಲಿರುವ ಜನ ಸ್ಪಂದನ ಕಾರ್ಯಕ್ರಮಕ್ಕಾಗಿ ಪೂರ್ವ ಸಿದ್ಧತೆ‌ಪರಿಶೀಲನೆ ನಡೆಸಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಜನಸ್ಪಂದನ ಸಭೆ ನಡೆಯಲಿದೆ ಎಂದರು.
    ಈವರೆಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಜನಸಂಪರ್ಕ ಸಭೆಯನ್ನು ಮಾಡಲಾಗಿದೆ. ಕಂದಾಯ, ಪಂಚಾಯತ್ ರಾಜ್ ಇಲಾಖೆ, ಆಹಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಬಂಧಿಸಿದ ಅಹವಾಲುಗಳನ್ನು ಸಾರ್ವಜನಿಕರು ನೀಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ಸ್ಥಳದಲ್ಲೆ ಪರಿಹಾರಗಳನ್ನು‌ ನೀಡಲಾಗಿದೆ. ಕೆಲವು ಕಾಲಮಿತಿಯಲ್ಲಿ ಮಾಡ ಬೇಕಾಗುತ್ತದೆ. ಅಂತಹ ಪ್ರಕರಣಗಳಲ್ಲಿ ಈಗಾಗಲೆ ಕೆಲವು ಬಗೆಹರಿದಿವೆ. ಈ ಪೈಕಿ ಕೆಲವು ಫಲಾನುಭವಿಗಳನ್ನು ಈ ಕಾರ್ಯಕ್ರಮಕ್ಕೆ ಕರೆತರುವಂತೆ ಆಯಾ ತಾಲೂಕು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
    ಜಿಲ್ಲಾದ್ಯಂತ ಸುಮಾರು 2500 ಅಹವಾಲುಗಳು ಬಂದಿದ್ದು, ಈ ಕಾರ್ಯಕ್ರಮದಲ್ಲಿ ಶೇ.15ರಷ್ಟಾದರೂ ಪರಿಹಾರ ನೋಡಬೇಕೆಂಬ ಉದ್ದೇಶವಿದೆ ಎಂದರು.
    ಸಾರ್ವಜನಿಕರು ಏ.8ರಂದು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಮಳಿಗೆಗಳನ್ನು ತೆರೆಯಲಾಗುವುದು. ಐಪಿಜಿಆರ್ ಎಸ್ ಸೌಲಭ್ಯ ಮಾಡಲಾಗಿದೆ. ಅಲ್ಲದೆ ಸಾರ್ವಜನಿಕರಿಗೆ ಕೇಂದ್ರ ಗ್ರಂಥಾಲಯದ ತಳಮಹಡಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ತಿಳಿಸಿದ್ದಾರೆ.
    ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್ ತಿಪ್ಪೇಸ್ವಾಮಿ, ಮಹಾನಗರ ಪಾಲಿಕೆ ಆಯುಕ್ತೆ ಬಿ.ಶುಭ ಉಪಸ್ಥಿತರಿದ್ದರು.

  • ಜನಗಣತಿ: ಏ.15ರವರೆಗೆ ಸ್ವಯಂ ಗಣನೆಗೆ ಡಿ.ಸಿ. ಕರೆ

    ಜನಗಣತಿ: ಏ.15ರವರೆಗೆ ಸ್ವಯಂ ಗಣನೆಗೆ ಡಿ.ಸಿ ಕರೆ

    Tumkur News
    ತುಮಕೂರು: ಭಾರತ ಸರ್ಕಾರದ ಜನಗಣತಿ-2026 ಕಾರ್ಯದ ಅಂಗವಾಗಿ ತುಮಕೂರು ಜಿಲ್ಲೆಯಲ್ಲಿ ಏಪ್ರಿಲ್ 15ರವರೆಗೆ ಸ್ವಯಂ ಗಣನೆ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
    ಈ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಕುಟುಂಬಗಳು ತಮಗೆ ಸಂಬಂಧಿಸಿದ ಜನಗಣತಿ ಮಾಹಿತಿಯನ್ನು ಸ್ವಯಂವಾಗಿ ಆನ್‌ಲೈನ್ ಮೂಲಕ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಸ್ವಯಂ ಗಣನೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದರಿಂದ ಜನಗಣತಿ ಕಾರ್ಯವು ವೇಗವಾಗಿ, ಸುಲಭವಾಗಿ ಮತ್ತು ಶುದ್ಧತೆಯಿಂದ ಪೂರ್ಣಗೊಳ್ಳಲು ಸಹಕಾರಿ ಆಗುತ್ತದೆ.
    ಸ್ವಯಂ ಗಣನೆ ಮಾಡುವ ವಿಧಾನ:
    ಭಾರತ ಸರ್ಕಾರದ ಅಧಿಕೃತ ಪೋರ್ಟಲ್, ಮೊಬೈಲ್ ಆಪ್ ಮೂಲಕ ಆನ್‌ಲೈನ್‌ನಲ್ಲಿ ಪ್ರಶ್ನಾವಳಿಯನ್ನು ಭರ್ತಿ ಮಾಡಬಹುದು. ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒಂದು ಕೋಡ್ ರಚನೆಯಾಗುತ್ತದೆ. ನಂತರ ಗಣತಿ ಸಿಬ್ಬಂದಿ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ, ಈ ಕೋಡ್ ಅನ್ನು ಸ್ಕ್ಯಾನ್ ಮಾಡಿ ಮಾಹಿತಿಯನ್ನು ಪರಿಶೀಲಿಸಲಾಗುತ್ತದೆ. ಸ್ವಯಂ ಗಣನೆ ಮಾಡದ ಕುಟುಂಬಗಳಿಗೆ ನಂತರ ಜನಗಣತಿ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸುವರು.
    ಜಿಲ್ಲೆಯ ಎಲ್ಲಾ ನಾಗರಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಸಮಯಕ್ಕೆ ಸರಿಯಾಗಿ ಸ್ವಯಂ ಗಣನೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಸರ್ಕಾರದ ಮಹತ್ವದ ಕಾರ್ಯಕ್ಕೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
    ಹೆಚ್ಚಿನ ಮಾಹಿತಿಗಾಗಿ ಗ್ರಾಮಾಂತರ ವ್ಯಾಪ್ತಿಯ ಸಮೀಪದ ತಾಲ್ಲೂಕು ಕಚೇರಿ ಮತ್ತು ನಗರ ಪ್ರದೇಶಗಳ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳ ಜನಗಣತಿ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

  • ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿ ಉದ್ಘಾಟಿಸಿದ ರಾಷ್ಟ್ರಪತಿ

    ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿ ಉದ್ಘಾಟಿಸಿದ ರಾಷ್ಟ್ರಪತಿ

    ಮಠದ ಶಿಕ್ಷಣ ಕ್ರಾಂತಿಗೆ ರಾಷ್ಟ್ರಪತಿ ಶ್ಲಾಘನೆ; ಕರ್ನಾಟಕ ರಾಷ್ಟ್ರ ನಿರ್ಮಾಣದ ಪ್ರಮುಖ ಕೇಂದ್ರ;
    ಭಾಷಣದಲ್ಲಿ ಕುವೆಂಪು ನೆನೆದ ರಾಷ್ಟ್ರಪತಿ

    Tumkur News
    ತುಮಕೂರು: ಶಿಕ್ಷಣವು ವ್ಯಕ್ತಿತ್ವ ವಿಕಸನ ಮತ್ತು ವ್ಯಕ್ತಿತ್ವ ನಿರ್ಮಾಣದ ಅಡಿಪಾಯವಾಗಿದೆ ಹಾಗೂ ಶಿಕ್ಷಣವು ಸ್ವಾವಲಂಬನೆಗೆ ದಾರಿ ಮಾಡಿಕೊಡಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಪ್ರಾಯ ವ್ಯಕ್ತಪಡಿಸಿದರು.
    ತುಮಕೂರಿನ ಸಿದ್ದಗಂಗಾ ಮಠದಲ್ಲಿ ಬುಧವಾರ ಆಯೋಜಿಸಿದ್ದ ಲಿಂಗೈಕ್ಯ ಡಾ: ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮ ದಿನಾಚರಣೆ ಹಾಗೂ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಶಿಕ್ಷಣ ಅಥವಾ ವಿದ್ಯೆ ವ್ಯಕ್ತಿತ್ವ ವಿಕಸನ ಮತ್ತು ವ್ಯಕ್ತಿತ್ವ ನಿರ್ಮಾಣದ ಅಡಿಪಾಯವಾಗಿದ್ದು, ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಶಿಕ್ಷಣ ಒದಗಿಸುವ ಮೂಲಕ ಸಮಾಜಕ್ಕೆ ಶ್ರೀ ಸಿದ್ದಗಂಗಾ ಮಠವು ಅತ್ಯಂತ ಅಮೂಲ್ಯ ಕೊಡುಗೆ ನೀಡುತ್ತಿರುವುದು ಅತ್ಯಂತ ಪ್ರಶಂಸನೀಯ ಎಂದು ಅವರು ಅಭಿಪ್ರಾಯಿಸಿದರು.
    ಶ್ರೀ ಮಠವು ಬಸವಣ್ಣನವರ ಆದರ್ಶಗಳನ್ನು ಅನುಸರಿಸುವ ಮೂಲಕ ತಾರತಮ್ಯದ ಸಾಮಾಜಿಕ ವ್ಯವಸ್ಥೆ ಮತ್ತು ಸಾರ್ವತ್ರಿಕ ಭಾಗವಹಿಸುವಿಕೆಯ ಆಧಾರದ ಮೇಲೆ ಕಾರ್ಯನಿರ್ವಹಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಕೈಗನ್ನಡಿಯಾಗಿದೆ ಎಂದರು.
    ‘ದಯವೇ ಧರ್ಮದ ಮೂಲವಯ್ಯ’ ಎಂಬ ಬಸವಣ್ಣನವರ ಆಶಯದಂತೆ ಸಿದ್ದಗಂಗಾ ಮಠವು ಎಲ್ಲಾ ಸಮುದಾಯದ ಎಲ್ಲಾ ಜನವರ್ಗಗಳಿಗೆ ಅನ್ನ, ಅಕ್ಷರ, ಆಶ್ರಯದ ಮೂಲ ಮಂತ್ರದೊಂದಿಗೆ ಸಂಸ್ಕಾರವನ್ನು ನೀಡುತ್ತಿದೆ. ಎಲ್ಲಾ ನಂಬಿಕೆಗಳ ಆಧಾರ ಕರುಣೆ. ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲಿ ಇಡೀ ಪ್ರಪಂಚದ ಬಗ್ಗೆ ಪ್ರೀತಿ ಮತ್ತು ಕರುಣೆಯ ಭಾವನೆ ಇರಬೇಕು. ಈ ನಿಟ್ಟಿನಲ್ಲಿ ಸಿದ್ದಗಂಗೆ ಮಠದ ಲಿಂಗೈಕ್ಯ ಡಾ: ಶಿವಕುಮಾರ ಸ್ವಾಮೀಜಿ ಅವರು ತಮ್ಮ ಜನ್ಮ ಶತಮಾನೋತ್ಸವ ಆಚರಿಸಿದ ನಂತರ ಹಲವು ವರ್ಷಗಳ ಕಾಲ ತಮ್ಮ ಆಧ್ಯಾತ್ಮಿಕ ಚಟುವಟಿಕೆಯಿಂದ ಮಾನವೀಯತೆಯನ್ನು ಶ್ರೀಮಂತಗೊಳಿಸಿದ್ದರು ಎಂದು ಕೇಳಲ್ಪಟ್ಟಿದ್ದೇನೆ. ಬಡವರು ಹಾಗೂ ದುರ್ಬಲರ ಸೇವೆಗೆ ತಮ್ಮ ಇಡೀ ಆಯುಷ್ಯವನ್ನು ಮುಡಿಪಾಗಿಟ್ಟಿದ್ದರು. ರಾಷ್ಟ್ರ ನಿರ್ಮಾಣ, ಲೋಕೋಪಕಾರ ಮತ್ತು ಕರ್ತವ್ಯ ನಿಷ್ಠೆಯ ಮಾರ್ಗವನ್ನು ಅನುಸರಿಸಿದರೆ ಮಾತ್ರ ನಾವು ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಅವರು ಹೇಳಿದರು.
    ಕರ್ನಾಟಕ ರಾಷ್ಟ್ರೀ ನಿರ್ಮಾಣದ ಪ್ರಮುಖ ಕೇಂದ್ರ: ಕಠಿಣ ಪರಿಶ್ರಮ, ಸಾರ್ವಜನಿಕ ಸೇವೆ ಮತ್ತು ರಾಷ್ಟ್ರೀಯ ಸೇವೆ ಪರಸ್ಪರ ಸಂಬಂಧ ಹೊಂದಿವೆ. ಸಾರ್ವಜನಿಕ ಸೇವೆ ಮತ್ತು ರಾಷ್ಟ್ರೀಯ ಸೇವೆಗೆ ಆಧ್ಯಾತ್ಮಿಕತೆಯು ಬಲವಾದ ಅಡಿಪಾಯ ಒದಗಿಸುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕವು ಸಾರ್ವಜನಿಕ ಸೇವೆ, ರಾಷ್ಟ್ರೀಯ ಸೇವೆ, ಆಧ್ಯಾತ್ಮಿಕತೆ ಹಾಗೂ ಆಧುನಿಕ ಪ್ರಗತಿಯ ಕೆಲವು ಪ್ರಭಾವಶಾಲಿ ಉದಾಹರಣೆಗಳನ್ನು ನೀಡುತ್ತದೆ. ಇದಕ್ಕಾಗಿ ಕರ್ನಾಟಕದ ಶ್ರಮಶೀಲ ಮತ್ತು ಪ್ರತಿಭಾನ್ವಿತ ನಿವಾಸಿಗಳು ಅಭಿನಂದನೆಗೆ ಅರ್ಹರು. ಕರ್ನಾಟಕದ ಜನರು ನಿರಂತರವಾಗಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಕರ್ನಾಟಕವು ರಾಷ್ಟ್ರ ನಿರ್ಮಾಣದ ಪ್ರಮುಖ ಕೇಂದ್ರವಾಗಬಹುದು ಎಂಬುದು ನನ್ನ ನಂಬಿಕೆ ಎಂದರು.
    ಕುವೆಂಪು ವಿರಚಿತ ನಾಡಗೀತೆಗೆ ರಾಷ್ಟ್ರಪತಿ ನಮನ: ವಂದೇ ಮಾತರಂ ರಾಷ್ಟ್ರೀಯ ಗೀತೆಯ ರಚನೆಗೆ 150 ವರ್ಷಗಳು ಸಂದಿದ್ದು, ದೇಶಾದ್ಯಂತ 150ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ಕರ್ನಾಟಕ ಗೀತೆಯಲ್ಲಿ ಕರ್ನಾಟಕ ಮಾತೆಯನ್ನು ಭಾರತ ಮಾತೆಯ ಮಗಳು ಎಂದು ವರ್ಣಿಸಿರುವುದು ನೆನಪಾಗುತ್ತದೆ ಎಂದ ಅವರು, “ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ” ಎಂಬ ಆ ಅಮರ ವಾಣಿಯು ದೇಶ ವಾಸಿಗಳ ಹೃದಯದಲ್ಲಿ ಕರ್ನಾಟಕದ ಬಗ್ಗೆ ಹಾಗೂ ರಾಷ್ಟ್ರೀಯ ಏಕತೆಯ ಬಗ್ಗೆ ಇರುವ ಹೆಮ್ಮೆಯ ಭಾವನೆಯನ್ನು ಜಾಗೃತಗೊಳಿಸುತ್ತದೆ. ಈ ಮೂಲಕ ಗೀತೆಯ ಭಾರತೀಯ ಮೌಲ್ಯಗಳ ಸಮಗ್ರತೆ ಮತ್ತು ಔದಾರ್ಯದ ವಿವರಣೆಯನ್ನು ಒದಗಿಸುತ್ತದೆ. ಇದೇ ಭಾರತೀಯ ಮೌಲ್ಯಗಳು ಲಿಂಗೈಕ್ಯ ಶ್ರೀಗಳ ಅಸಾಧಾರಣ ಕೊಡುಗೆಯಲ್ಲಿಯೂ ಪ್ರತಿಫಲಿಸುತ್ತವೆ ಎಂದರು.
    ಶ್ರೀ ಶಿವಕುಮಾರ ಸ್ವಾಮೀಜಿಯವರ ಸತ್ಕಾರ್ಯಗಳ ಪರಂಪರೆಯನ್ನು ಇಂದಿನ ಶ್ರೀಗಳು ಮುಂದುವರೆಸಿಕೊಂಡು ಹೋಗುತ್ತಿದ್ದು, ಮಠದೊಂದಿಗಿನ ಭಕ್ತರ ಬಾಂಧವ್ಯ ಶ್ರೀಮಠದಿಂದ ಗ್ರಾಮೀಣ ಮಕ್ಕಳಿಗೆ ಮತ್ತು ಗ್ರಾಮೀಣ ಜನತೆಗೆ ಸಿಗುತ್ತಿರುವ ತ್ರಿವಿಧ ದಾಸೋಹ ಮತ್ತು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಸಿಗುತ್ತಿರುವ ವಿಶೇಷ ಸೌಲಭ್ಯಗಳು ಮತ್ತಷ್ಟು ಉನ್ನತ ಮಟ್ಟದಲ್ಲಿ ನಡೆಯಲಿ ಎಂದು ಆಶಿಸಿದ ಅವರು, ಇಂತಹ ಶ್ರೇಷ್ಠ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಮಗೆ ಅತ್ಯಂತ ಸಂತೋಷದ ದಿನವಾಗಿದೆ ಎಂದರು.
    ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಮಾತನಾಡಿ, ಲಿಂಗೈಕ್ಯ ಡಾ: ಶ್ರೀ ಶಿವಕುಮಾರ ಸ್ವಾಮೀಜಿ ಅವರು ಆದರ್ಶ ಜೀವಿಗಳು. ಸರಳತೆ ಮತ್ತು ಮಾನವೀಯತೆಯ ಮೂಲಕ ಬಡವರಿಗೆ ತ್ರಿವಿಧ ದಾಸೋಹದ ಮೂಲಕ ಸೇವೆಯನ್ನು ಮಾಡುವ ಮೂಲಕ ಆದರ್ಶಪ್ರಾಯರಾಗಿದ್ದಾರೆ ಎಂದರು. ಶ್ರೀ ಸಿದ್ದಗಂಗಾ ಮಠವು ಕೇವಲ ಧಾರ್ಮಿಕ ಕೇಂದ್ರವಲ್ಲದೆ, ಇದು ಆಧ್ಯಾತ್ಮಕತೆಯ ಮೂಲಕ ಸಮಾನತೆ ಮತ್ತು ಮಾನವೀಯ ಮೌಲ್ಯವನ್ನು ಬಿತ್ತುವ ಮೂಲಕ ನಿರಂತರ ಸೇವೆಯನ್ನು ಮಾಡುತ್ತಿರುವ ಸಾಮಾಜಿಕ ಕೇಂದ್ರವಾಗಿದೆ ಎಂದರು.
    ದಿವ್ಯ ಸಾನಿಧ್ಯವಹಿಸಿಕೊಂಡಿದ್ದ ಶ್ರೀ ಸಿದ್ಧಗಂಗಾ ಮಠದ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, 111 ವರ್ಷಗಳ ಸುದೀರ್ಘ ತಮ್ಮ ಜೀವಿತಾವಧಿಯಲ್ಲಿ 79 ವರ್ಷಗಳ ಸುದೀರ್ಘ ಸೇವೆಯನ್ನು ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸಮಾಜ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದರು. ಇದು ಅವರ ಆದರ್ಶ, ಆಚಾರ, ವಿಚಾರ, ವಿಸ್ಮಯ, ಪವಾಡ ಎಂದರೆ ತಪ್ಪಾಗಲಾರದು. ಗ್ರಾಮಾಂತರ ಭಾಗದ ಬಡ ಮಕ್ಕಳಿಗೆ, ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಬೇಕೆಂಬುದು ಶ್ರೀಗಳ ಮಹತ್ತರ ಆಶಯವಾಗಿತ್ತು. ಈ ನಿಟ್ಟಿನಲ್ಲಿ ಭಕ್ತರಿಗೆ ಸನ್ಮಾರ್ಗವನ್ನು ತೋರುವ ಮೂಲಕ ಶ್ರೀ ಮಠವು ನಿರಂತರ ಸೇವೆಯನ್ನು ಮುಂದುವರೆಸಿದೆ ಎಂದರು.
    ಕೇಂದ್ರ ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಶ್ರೀ ಸಿದ್ಧಗಂಗಾ ಮಠವು ಕೇವಲ ಆಧ್ಯಾತ್ಮಿಕ ಕೇಂದ್ರವಲ್ಲದೆ, ಆಧುನಿಕ ಸಂಶೋಧನಾ ಕೇಂದ್ರವಾಗಿದೆ. ಸಂಸ್ಕಾರವನ್ನು ಕೊಡುವ ಮೂಲಕ ಭಕ್ತರಿಗೆ ಸನ್ಮಾರ್ಗವನ್ನು ತೋರಿಸುವ ವಿಶ್ವದ ಏಕೈಕ ಮಠ. ಇದಕ್ಕೆ ಕಾರಣ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಹಸಿವಿನ ಅರ್ಥವಾಗಿತ್ತು. ಜಾತಿ, ಧರ್ಮವನ್ನು ಮೀರಿ ಬಡವರು ಹಸಿವಿನಿಂದ ನರಳಬಾರದು. ಹಣವಿಲ್ಲದವರು ಜ್ಞಾನದಿಂದ ವಂಚಿತರಾಗಬಾರದು ಎಂಬ ಧ್ಯೇಯವನ್ನು ಇಟ್ಟುಕೊಂಡಿರುವ ವಿಶ್ವದ ಏಕೈಕ ಮಠ ಇದಾಗಿದೆ. ಈ ಮೂಲಕ ಲಿಂಗೈಕ್ಯ ಶ್ರೀಗಳು ಮನುಷ್ಯನಿಂದ ಮಹಾದೇವರಾದರು ಎಂದರು.
    ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಸಚಿವರಾದ ಎಂ.ಬಿ. ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್ ಉಪಸ್ಥಿತರಿದ್ದರು.

    ಡಾ.ಶಿವಕುಮಾರ ಸ್ವಾಮಿಗಳ ಜಯಂತಿ ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಶ್ರೀಗಳ ಕಡೆಗಣನೆ!; ಭಕ್ತರ ಆಕ್ರೋಶ

  • ಡಾ.ಶಿವಕುಮಾರ ಸ್ವಾಮಿಗಳ ಜಯಂತಿ ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಶ್ರೀಗಳ ಕಡೆಗಣನೆ!; ಭಕ್ತರ ಆಕ್ರೋಶ

    ಡಾ.ಶಿವಕುಮಾರ ಸ್ವಾಮಿಗಳ ಜಯಂತಿ ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಶ್ರೀಗಳ ಕಡೆಗಣನೆ!; ಭಕ್ತರ ಆಕ್ರೋಶ

    ಗುರುವಂದನೆ ಕಾರ್ಯಕ್ರಮದಲ್ಲಿ ಮಠಾಧ್ಯಕ್ಷರನ್ನೇ ಕಡೆಗಣಿಸಲಾಗಿದೆ ಎಂದು ಭಕ್ತರ ಅಸಮಾಧಾನ

    Tumkur News
    ತುಮಕೂರು: ಶ್ರೀ ಸಿದ್ದಗಂಗಾ ಮಠದಲ್ಲಿ ಬುಧವಾರ ನಡೆದ ಲಿಂ.ಡಾ. ಶ್ರೀ ಶಿವಕುಮಾರ ಸ್ವಾಮಿಗಳ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವದಲ್ಲಿ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಯನ್ನು ಶಿಷ್ಟಾಚಾರದ ಹೆಸರಿನಲ್ಲಿ ಕಡೆಗಣಿಸಲಾಗಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    ಗುರುವಂದನಾ ಮಹೋತ್ಸವ ಕಾರ್ಯಕ್ರಮದಲ್ಲಿ, ಪೀಠಾಧ್ಯಕ್ಷರಿಗೆ ವೇದಿಕೆಯ ತುದಿಯಲ್ಲಿ ಆಸನದ ವ್ಯವಸ್ಥೆಯನ್ನು ಕಲ್ಪಿಸಿರುವುದು ಇದೀಗ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
    ‘ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಶ್ರೀಗಳನ್ನು ವೇದಿಕೆಯ ತುದಿಯ ಆಸನದಲ್ಲಿ ಕುಳ್ಳಿರಿಸಿರುವ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಶ್ರೀ ಮಠದ ಭಕ್ತನಾಗಿ ಹಲವು ಪ್ರಶ್ನೆಗಳು ಹುಟ್ಟುತ್ತಿವೆ. ಶಿಷ್ಟಾಚಾರ ಎಂದರೇನು? ಕಾರ್ಯಕ್ರಮದ ರೂವಾರಿಗಳನ್ನೇ ಕಡೆಗಣಿಸುವುದಾ? ಇದು ಸರ್ಕಾರಿ ಕಾರ್ಯಕ್ರಮವೇ? ಇದರ ಉದ್ದೇಶವೇನು? ಇದಕ್ಕೆ ಯಾರು ಕಾರಣ? ಪೀಠಾಧ್ಯಕ್ಷರಿಗೂ ಶಿಷ್ಟಾಚಾರವೇ? ಯಾರ್ಯಾರು ಎಲ್ಲಿ ಕುಳಿತಿದ್ದಾರೆ?’ ಎಂದು ಮಠದ ಭಕ್ತ ಹುಳಿಯಾರಿನ ಎಚ್.ಆರ್ ಗುರುಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    ‘ಈ ಹಿಂದಿನ ಕಾರ್ಯಕ್ರಮಗಳಲ್ಲಿ, ಪೂಜ್ಯರಿಗೆ ವೇದಿಕೆಯ ಮಧ್ಯಭಾಗದಲ್ಲಿ, ಅಂದರೆ ಅತಿ ಗಣ್ಯರು, ಗಣ್ಯರ ಪಕ್ಕದಲ್ಲಿ ಆಸನ ಮೀಸಲಿರಿಸಲಾಗುತ್ತಿತ್ತು. ಆದರೆ, ಈ ಬಾರಿ ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಿಗೆ ವೇದಿಕೆಯ ಅಂಚಿನಲ್ಲಿ ಆಸನ ನೀಡಿರುವುದು ಎಷ್ಟು ಸಮಂಜಸ…? ಈ ನಡೆ ನಿಜಕ್ಕೂ ಬೇಸರ ತಂದಿದೆ. ಈ ರೀತಿಯ ನಡೆಗೆ ನಿಜಕ್ಕೂ ಪ್ರಾಯಶ್ಚಿತ್ತ ಖಂಡಿತವಾಗಿಯೂ ಆಗೇ ಆಗುತ್ತದೆ. ಕಾಲವೇ ಎಲ್ಲದಕ್ಕೂ ಉತ್ತರಿಸುತ್ತದೆ’ ಎಂದು ಎಚ್.ಆರ್.ಗುರುಪ್ರಸಾದ್ ಹೇಳಿದ್ದಾರೆ.

  • ತುಮಕೂರು: ರಾಮಾಯಣದಿಂದ ಬದುಕಿಗೆ ಸಮಗ್ರ ದೃಷ್ಟಿ: ಸ್ವಾಮಿ ವೀರೇಶಾನಂದ ಸರಸ್ವತೀ

    ರಾಮಾಯಣದಿಂದ ಬದುಕಿಗೆ ಸಮಗ್ರ ದೃಷ್ಟಿ: ಸ್ವಾಮಿ ವೀರೇಶಾನಂದ ಸರಸ್ವತೀ

    Tumkur news
    ತುಮಕೂರು: ‘ರಾಮಾಯಣವು ಮಾನವ ಬದುಕಿಗೆ ಅತಿ ಸಮೀಪದ ಇತಿಹಾಸ, ವ್ಯವಹಾರ ಕ್ಷೇತ್ರಕ್ಕೆ ನೀತಿಯ ಸಾಗರ, ಸಾಮಾಜಿಕ ಕ್ಷೇತ್ರಕ್ಕೆ ಸಾಂಸ್ಕೃತಿಕ ನೆಲೆಗಟ್ಟನ್ನು ನೀಡಿರುವಂಥದ್ದು. ಜನರ ಸಾಮಾಜಿಕ ಮತ್ತು ನೈತಿಕ ಸಮತೋಲನಕ್ಕೆ ಅತ್ಯವಶ್ಯಕವಾದ ವಿಚಾರಗಳು ರಾಮಾಯಣದಲ್ಲಿವೆ’ ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥರಾದ ಸ್ವಾಮಿ ವೀರೇಶಾನಂದ ಸರಸ್ವತೀ ಅಭಿಪ್ರಾಯಪಟ್ಟರು.
    ಅವರು ಶ್ರೀರಾಮನವಮಿಯ ಅಂಗವಾಗಿ ಆಶ್ರಮದಲ್ಲಿ ಆಯೋಜಿಸಿದ್ದ ‘ಶಾರದಾ ನಿನಾದ’ ವಿಶೇಷ ಸತ್ಸಂಗದಲ್ಲಿ ಉಪನ್ಯಾಸ ನೀಡಿದರು.
    ‘ನಾಗರಿಕತೆಯು ಮಾನವನ ಬದುಕನ್ನು ಸುಲಭ, ಸುಖ ಹಾಗೂ ಲಾಭದಾಯಕವಾಗಿಸುವುದು ನಿಜ. ಆದರದು ಅಂತಿಮವಾಗಿ ಲೌಕಿಕ ಪಾಷಂಡತನವನ್ನು ಮೂಡಿಸುತ್ತದೆ. ಇಲ್ಲಿ ಸಂಸ್ಕೃತಿಯು ನಾಗರಿಕತೆಯ ಅನಿಷ್ಟಗಳನ್ನು ತಡೆದು, ನೈತಿಕತೆಯನ್ನು ಮುನ್ನೆಲೆಯಲ್ಲಿರಿಸಿ ಬದುಕಿಗೆ ಸಮಗ್ರ ದೃಷ್ಟಿಕೋನವನ್ನು ದೊರಕಿಸಿಕೊಡುತ್ತದೆ. ಶ್ರೀರಾಮಾಯಣ ಗ್ರಂಥಾವಲೋಕನವು ಈ ದಿಕ್ಕಿನಲ್ಲಿ ಬೆಳಕು ಚೆಲ್ಲುತ್ತದೆ’ ಎಂದರು.
    ‘ಬುದ್ಧಿಜೀವಿಗಳ ಹಾಗೂ ಢೋಂಗಿ ವಿಜ್ಞಾನವಾದಿಗಳಿಗೆ ಊಹಾಪೋಹವೆನಿಸಿದ್ದ ಶ್ರೀರಾಮಸೇತು ಇಂದು ನಾಸಾ ವಿಜ್ಞಾನಿಗಳ ಕಾರ್ಬನ್ ಡೇಟಿಂಗ್ ಮತ್ತು ಗ್ಲೋಬಲ್ ವಾರ್ಮಿಂಗ್ ಸಂಶೋಧನಾತ್ಮಕ ಪ್ರಕ್ರಿಯೆಗಳಿಂದ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿರುವುದು ಹರ್ಷದಾಯಕ ಸಂಗತಿ’, ಎಂದು ಸ್ವಾಮೀಜಿ ವಿವರಿಸಿದರು.
    ರಾಮೋತ್ಸವದ ಅಂಗವಾಗಿ ಬೆಂಗಳೂರಿನ ಸುಪ್ರಸಿದ್ಧ ಸಂಗೀತಗಾರ ವಿದ್ವಾನ್ ಶ್ರೀ ಸಿ.ಕೆ. ಪವನ್‌ದೀಪ್‌ ಸಂಗೀತ ಕಾರ್ಯಕ್ರಮವನ್ನು ನೆರವೇರಿಸಿದರು. ವಿದ್ವಾನ್ ಶ್ರೀ ಎಸ್. ಜನಾರ್ದನ್ (ವಯೋಲಿನ್), ವಿದ್ವಾನ್ ಶ್ರೀ ಫಣೀಂದ್ರ ಭಾಸ್ಕರ್ (ಮೃದಂಗ) ಮತ್ತು ತುಮಕೂರಿನ ವಿದ್ವಾನ್ ಬಿ.ಆರ್ ವಿದ್ಯಾಶಂಕರ್ (ಘಟಂ)ರವರು ಭಾಗವಹಿಸಿದ್ದರು.

    ಚಿತ್ರ:
    ರಾಮೋತ್ಸವದ ಅಂಗವಾಗಿ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮವನ್ನು ವಿದ್ವಾನ್ ಶ್ರೀ ಸಿ.ಕೆ. ಪವನ್‌ದೀಪ್‌ ಉದ್ಘಾಟಿಸಿದರು. ಚಿತ್ರದಲ್ಲಿ ಸ್ವಾಮಿ ವೀರೇಶಾನಂದಜೀ, ಸ್ವಾಮಿ ಧೀರಾನಂದಜೀ, ಶ್ರೀ ವಿದ್ಯಾಶಂಕರ್, ವಿದ್ವಾನ್ ಶ್ರೀ ಎಸ್. ಜನಾರ್ದನ್, ವಿದ್ವಾನ್ ಶ್ರೀ ಫಣೀಂದ್ರ ಭಾಸ್ಕರ್ ಮತ್ತು ವಿದ್ವಾನ್ ಬಿ.ಆರ್ ವಿದ್ಯಾಶಂಕರ್‌ರವರನ್ನು ಕಾಣಬಹುದು.