ತುಮಕೂರು(ಜು.13) tumkurnews.in
ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ 12 ಕೇಂದ್ರಗಳಲ್ಲಿ ಸೋಮವಾರದಿಂದ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪ್ರಾರಂಭವಾಗಿದೆ. ಮೌಲ್ಯಮಾಪನ ಕಾರ್ಯಕ್ಕೆ ಸಕಾರಣವಿಲ್ಲದೆ ಗೈರು ಹಾಜರಾದ 55 ವರ್ಷದೊಳಗಿನ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಿಡಿಪಿಐಗಳಾದ ಎಂ.ಆರ್. ಕಾಮಾಕ್ಷಿ ಹಾಗೂ ಎಂ. ರೇವಣಸಿದ್ಧಪ್ಪ ತಿಳಿಸಿದ್ದಾರೆ.
ತುಮಕೂರು ನಗರದ ಪ್ರೌಢಶಾಲೆಗಳಾದ ಆರ್ಯನ್, ಎಂಪ್ರೆಸ್, ಸೆಂಟ್ ಮೆರೀಸ್, ಸಿದ್ದಗಂಗಾ, ರೇಣುಕಾ ವಿದ್ಯಾಪೀಠ, ಸೋಮೇಶ್ವರ ಬಾಲಕಿಯರ ಪ್ರೌಢಶಾಲೆ ಹಾಗೂ ಮಧುಗಿರಿ ಪಟ್ಟಣದ ಕಾರ್ಡಿಯಲ್ ಆಂಗ್ಲ ಮಾಧ್ಯಮ ಶಾಲೆ, ಚಿರಕ್ ಪಬ್ಲಿಕ್ ಶಾಲೆ, ಚೇತನ ಪ್ರೌಢಶಾಲೆ, ಕೆ.ಆರ್. ಬಡಾವಣೆಯ ಸರ್ಕಾರಿ ಪ್ರೌಢಶಾಲೆ, ಎಂಜಿಎಂ, ಜೂಪಿಟರ್ ಸೇರಿದಂತೆ ಒಟ್ಟು 12 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯುತ್ತಿದೆ.
ಇಂದು ನಡೆದ ಮೌಲ್ಯಮಾಪನಕ್ಕೆ ತುಮಕೂರಿನ 2311 ಹಾಗೂ ಮಧುಗಿರಿಯ 1324 ಸೇರಿದಂತೆ ಒಟ್ಟು 3635 ಶಿಕ್ಷಕರು ನೋಂದಾಯಿಸಿದ್ದು, 2734(ತುಮಕೂರಿನ 1728 ಹಾಗೂ ಮಧುಗಿರಿಯ 1006)ಶಿಕ್ಷಕರು ಮಾತ್ರ ಹಾಜರಾಗಿದ್ದಾರೆ.
ಮೌಲ್ಯಮಾಪನ ಕೇಂದ್ರಕ್ಕೆ ಹಾಜರಾಗಲು ಅನುವಾಗುವಂತೆ ಇಲಾಖೆಯಿಂದ ಶಿಕ್ಷಕರಿಗಾಗಿ ತಿಪಟೂರು ಹಾಗೂ ತುರುವೇಕೆರೆ ತಾಲೂಕಿನಿಂದ ತಲಾ 8, ಕುಣಿಗಲ್ ತಾಲೂಕಿನಿಂದ 5, ಚಿಕ್ಕನಾಯಕನಹಳ್ಳಿ ಹಾಗೂ ಕೊರಟಗೆರೆಯಿಂದ ತಲಾ 3, ಪಾವಗಡ ಹಾಗೂ ಶಿರಾ ತಾಲೂಕಿನಿಂದ ತಲಾ 10 ಸೇರಿದಂತೆ ಒಟ್ಟು 47 ಖಾಸಗಿ ಶಾಲೆಗಳ ಬಸ್ ವ್ಯವಸ್ಥೆ ಮಾಡಲಾಗಿದೆ.
ಪ್ರತೀ ಮೌಲ್ಯ ಮಾಪನ ಕೇಂದ್ರದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಒಬ್ಬ ದೈಹಿಕ ಶಿಕ್ಷಕ ಹಾಗೂ ಸ್ಟಾಫ್ ನರ್ಸ್ ಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲ ಶಿಕ್ಷಕರ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮಾಡಿ ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ 55 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಮೌಲ್ಯಮಾಪನ ಕಾರ್ಯದಿಂದ ವಿನಾಯಿತಿ ನೀಡಲಾಗಿದೆ. ಉಳಿದಂತೆ ನೋಂದಾಯಿಸಿದ ಎಲ್ಲ ಶಿಕ್ಷಕರು ಕಡ್ಡಾಯವಾಗಿ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಬೇಕು ಎಂದು ಅವರು ಸೂಚಿಸಿದ್ದಾರೆ.
+ There are no comments
Add yours