Tumkurnews
ತುಮಕೂರು; ವಿದ್ಯಾವಂತರಾದರೆ ಕೋರ್ಟು, ಕಚೇರಿ, ಮತ್ತಿತರ ವ್ಯವಹಾರಗಳಿಗಾಗಿ ಬೇರೆಯವರನ್ನು ಆಶ್ರಯಿಸುವ ಅವಶ್ಯಕತೆ ಇರುವುದಿಲ್ಲ. ಅಕ್ಷರಸ್ಥರಾದರೆ ಅಪರಾಧದಲ್ಲಿ ಭಾಗಿಯಾಗುವುದು ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಕಾರಾಗೃಹದಲ್ಲಿ ಬಂಧಿಯಾಗಿರುವವರು ಅಕ್ಷರಸ್ಥರಾಗಿ ಬಿಡುಗಡೆ ಹೊಂದಬೇಕು ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಎಂ.ಶಾಂತಮ್ಮ ತಿಳಿಸಿದರು.
ಜಿಲ್ಲಾ ಕಾರಾಗೃಹ, ವಯಸ್ಕರ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಇತ್ತೀಚೆಗೆ ಕಾರಾಗೃಹದ ಬಂಧಿಗಳಿಗಾಗಿ ಹಮ್ಮಿಕೊಂಡಿದ್ದ ನವಚೇತನ ಸಾಕ್ಷರತಾ ಕಾರ್ಯಕ್ರಮ ಹಾಗೂ ಬೋಧಕರ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕಲಿಕಾರ್ಥಿಗಳಿಗೆ ಪಠ್ಯ ಪರಿಕರಗಳನ್ನು ವಿತರಿಸಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಜನಾರ್ಧನ್ ಮಾತನಾಡಿ, 21ನೇ ಶತಮಾನದಲ್ಲೂ ಅನಕ್ಷರಸ್ಥರಿರುವುದು ಶಾಪವಿದ್ದಂತೆ. ಕಲಿಕೆಗೆ ವಯಸ್ಸಿನ ಮಿತಿ ಇರುವುದಿಲ್ಲ. ಪ್ರತಿಯೊಬ್ಬ ಬಂಧಿಯೂ ಕಾರಾಗೃಹದಲ್ಲಿರುವ ಶಿಕ್ಷಣ ಸೌಲಭ್ಯದ ಸದುಪಯೋಗ ಪಡೆದು ಅಕ್ಷರಸ್ಥರಾಗಿ ಹೊರಹೊಮ್ಮಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸಹ ಶಿಕ್ಷಕ ರಮೇಶ್, ಕಾರ್ಯಕ್ರಮದ ಸಂಯೋಜಕ ಎಂ.ಎಸ್ ರಾಮಚಂದ್ರ ಮಾತನಾಡಿದರು. ಜೈಲರ್ ಪಿ.ವಿ. ಕೋಪರ್ಡೆ, ಸಹಶಿಕ್ಷಕ ಸಿದ್ದರಾಜು, ಸಹಾಯಕ ಜೈಲರ್ ಟಿ. ಶಿವರಾಜು ಉಪಸ್ಥಿತರಿದ್ದರು.
+ There are no comments
Add yours