ವಿಜ್ಞಾನಿ ಡಾ.ಮಂಜುನಾಥ್ ಅವರ ಜೀವಜಗತ್ತು ಪುಸ್ತಕ ಬಿಡುಗಡೆ

1 min read

ಜೀವಜಗತ್ತು ಪುಸ್ತಕ ಬಿಡುಗಡೆ
Tumkurnews
ತುಮಕೂರು: ಆಧುನಿಕ ತಂತ್ರಜ್ಞಾನದ ಹೆಸರಿನಲ್ಲಿ ರೈತರ ಮೂಲಕ ಪರಿಸರಕ್ಕೆ ಹಾನಿಮಾಡುವ ಪ್ರಯತ್ನಗಳನ್ನು ರಾಸಾಯನಿಕ ಕಂಪನಿಗಳು ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ರೈತರ ಜೊತೆಗೆ ಜೀವಜಗತ್ತಿನ ಹಿತ ಮುಖ್ಯವಾಗಬೇಕು ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಗೋವಿಂದ ರಾಜು ಅಭಿಪ್ರಾಯ ಪಟ್ಟರು.

ಕೇಂದ್ರದ ವಿರುದ್ಧ ಮತ್ತೊಮ್ಮೆ ಸಮರ ಸಾರಿದ ರೈತ ಸಂಘ; ರಾಜ್ಯವ್ಯಾಪ್ತಿ ಪ್ರತಿಭಟನೆಗೆ ಕರೆ
ನಗರದ ತುಮಕೂರು ವಿಜ್ಞಾನ ಕೇಂದ್ರದಲ್ಲಿ ಗಾಂಧೀಜಿ ಸಹಜ ಬೇಸಾಯ ಆಶ್ರಮದ ವತಿಯಿಂದ ಹಮ್ಮಿಕೊಂಡಿದ್ದ ವಿಜ್ಞಾನಿ ಡಾ.ಮಂಜುನಾಥ್ ಅವರ ಜೀವಜಗತ್ತು ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಅವರು ಮಾತನಾಡಿದರು.
ಇಡೀ ಜಗತ್ತು ರಾಸಾಯನಿಕ ಕಂಪನಿಗಳ ದಾಳಕ್ಕೆ ಸಿಲುಕಿದೆ. ಇದರಿಂದ ಹೆಚ್ಚು ಹೆಚ್ಚುವಿಷಪೂರಿತ ಆಹಾರ ಉತ್ಪಾದನೆಯಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಜೀವಜಗತ್ತು ಪುಸ್ತಕ ಓದುಗ ವರ್ಗಕ್ಕೆ ಹೆಚ್ಚಿನ ತಿಳುವಳಿಕೆ ನೀಡಿ ಅವರು ಸಾವಯವದ ಕಡೆ ಮುಖಮಾಡಲು ಪ್ರೇರೇಪಣೆ ನೀಡುವಂತದ್ದಾಗಿದೆ ಎಂದರು.

ಮುಖ್ಯಮಂತ್ರಿ ರೈತ ವಿದ್ಯಾನಿಧಿಗೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ
ಈ ಅನಿವಾರ್ಯತೆ ಇಂದು ಹೆಚ್ಚಿದ್ದು ಕೃಷಿಯಲ್ಲಿ ಆಗಿರುವ ರಾಸಾಯನಿಕ ಬದಲಾವಣೆಯು ಜೀವಜಗತ್ತಿನ ಅಂದರೇ ಸೂಕ್ಷ್ಮಾಣು ಜೀವಿಗಳನ್ನು ನಾಶ ಮಾಡಿದ್ದಲ್ಲದೇ ಭೂಮಿ ಸಹ ಬರಡಾಗುತ್ತಿದೆ. ಇದರ ಜೊತೆಗೆ ಕೃಷಿ ವೆಚ್ಚ ಜಾಸ್ತಿಯಾಗಿದೆ, ಬೆಳೆಗೆ ತಕ್ಕ ಬೆಲೆ ಇಲ್ಲ, ಬಂಡವಾಳ ವಾಪಾಸ್ ಬರುತ್ತಿಲ್ಲ. ಸಾಲಕೊಟ್ಟವರಿಗೆ ಹೆದರಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಬದುಕಿಗೆ ನ್ಯಾಯ ಒದಗಿಸಬೇಕಾದ ಸರ್ಕಾರಗಳು ಕನಿಷ್ಟ ವೈಜ್ಞಾನಿಕ ಬೆಂಬಲ ಬೆಲೆ ನೀಡದೆ ಕಾರ್ಪೋರೇಟಿಗರ ಸೇವಕರಾಗಿರುವುದು ದುರಂತ. ಇಂತಹ ಸ್ಥಿತಿಯಲ್ಲಿ ಕೃಷಿ ಬದುಕು ಉಳಿಸಿಕೊಳ್ಳಲು ಇರುವ ಮಾರ್ಗ ಸಹಜಬೇಸಾಯ ಆಗಿದೆ. ಇದರ ಮಹತ್ವದ ಕುರಿತೇ ಪುಸ್ತಕವನ್ನು ಡಾ. ಮಂಜುನಾಥ್ ಬರೆದಿದ್ದು ಸಹಜ ಬೇಸಾಯ ಬದುಕಿನ ರಕ್ಷಣೆ ಕುರಿತು ಮುತುವರ್ಜಿವಹಿಸಿದ್ದಾರೆಂದು ಶ್ಲಾಘಿಸಿದರು.
ಇದೇ ವೇಳೆ ಕಸ್ತೂರ್ಬಾ ಗಾಂಧಿ ಆಶ್ರಮದ ಟ್ರಸ್ಟಿ ಪ್ರೊ.ಜಿ.ಬಿ. ಶಿವರಾಜ್ ಅವರು ಮಾತನಾಡಿ, ಸಹಜವಾಗೇ ಇದ್ದ ನಮ್ಮ ಬದುಕು ಐಷಾರಾಮೀಕರಣಗೊಳ್ಳುತ್ತಿದೆ. ಈಗಾಗಲೇ ಹಳ್ಳಿಗಳನ್ನು ಆವರಿಸಿಬಿಟ್ಟಿದೆ. ಕೃಷಿ ಅವಲಂಬಿಗಳೇ ಆದ ನಮ್ಮ ಕುಟುಂಬಗಳ ಮಕ್ಕಳು ಕಲಿಕೆಯ ಕಾರಣಗಳಿಗೆ ದೂರವೇ ಉಳಿದಿದ್ದಾರೆ. ಅವರೆಲ್ಲ ಹಳ್ಳಿಗಳ ಕಡೆ ಮುಖಮಾಡಬೇಕು, ಈ ಚಟುವಟಿಕೆಗಳಲ್ಲಿ ಭಾಗಿಯಾಗಿಸಿಕೊಳ್ಳುವ ಪ್ರಯತ್ನಗಳಾಗಬೇಕು ಎಂದರು. ಮಹಾತ್ಮ ಗಾಂಧೀಜಿಯವರ ಬಳಿಗೆ ನೆಹರು ಆಗಮಿಸಿ ಆಡಳಿತದ ಕುರಿತು ಸಲಹೆ ಕೇಳಿದಾಗ ಗಾಂಧೀ 3 ಮುಖ್ಯ ವಿಷಯಗಳನ್ನ ಮರೆಯದಂತೆ ಹೇಳಿದ್ದರಂತೆ ಮೊದಲನೆಯದು ಹಳ್ಳಿಗಳನ್ನು ಮರೆಯಬಾರದು, 2. ಬಂದ ಹಾದಿಯನ್ನು ಮರೆಯಬಾರದು 3. ಹಿಂದೂ ಮುಸಲ್ಮಾನರನ್ನು ಮರೆಯಬಾರದು ಎಂಬಂತಹ ಸಲಹೆಗಳನ್ನು ನೀಡಿದ್ದರೆಂದು ನೆನಪು ಮಾಡಿಕೊಳ್ಳುತ್ತಲೇ ಗಾಂಧಿಯವರಿಗಿದ್ದ ಗ್ರಾಮ ಭಾರತದ ಒಲಮೆ ಪರಿಚಯ ಮಾಡಿದರು. ಈ ಎಲ್ಲದರ ನಡುವೆ ಮುಂದಿನ ಪೀಳಿಗೆಗೆ ವಿಷವುಣಿಸುವ ಪ್ರವೃತ್ತಿಗಳನ್ನು ಸಾಮಾಜಿಕವಾಗಿ ಮತ್ತು ಸಹಜ ಬೇಸಾಯದ ಮೂಲಕ ತಡೆಯಬೇಕೆಂದರು.
ಜೀವಜಗತ್ತು ಪುಸ್ತಕ ಜೀವಜಗತ್ತಿನ ಜೊತೆಗೆ ಭೌತಿಕ ಜಗತ್ತಿನ ಕಡೆಗೂ ಬೆಳಕು ಚೆಲ್ಲಿದ್ದು ಈ ಕೃತಿಯ ಗುರಿ ಓದುಗರ ಮೂಲಕವೂ ಸಾಕಾರಗೊಳ್ಳಲಿದೆ ಎಂದು ಪರಿಸರವಾದಿ ಸಿ. ಯತಿರಾಜು ಅಭಿಪ್ರಾಯಪಟ್ಟರು.
ಕಾರ್ಪೋರೇಟೀಕರಣದ ಹೊಸಯುಗ ಆರಂಭವಾಗಿದ್ದು ಇದನ್ನು ಮೀರಿ ದೇಶವನ್ನು ಕಟ್ಟಬೇಕಿರುವುದು ಸ್ಥಳೀಕರು. ನಾವೆಲ್ಲರು ಕಾರ್ಪೋರೇಟ್ ವ್ಯವಸ್ಥೆಯ ಗ್ರಾಹಕರಾಗದಂತೆ ಜನರನ್ನು ಎಚ್ಚರಿಸಬೇಕಿದೆ. ಅದರ ಸಣ್ಣ ಪ್ರಯತ್ನವೇ ಜೀವಜಗತ್ತು ಪುಸ್ತಕ ಎಂದು ಕೃತಿಕಾರ ಡಾ. ಮಂಜುನಾಥ್ ತಿಳಿಸಿದರು.

ತುಮಕೂರು; ಭಾರತ್ ಜೋಡೋ ಯಾತ್ರೆಯಲ್ಲಿ 30 ಸಾವಿರ ಮಂದಿ ಭಾಗಿ! ಬೆರಗಾದ ಕಾಂಗ್ರೆಸ್
ಜೀವನಶೈಲಿಯ ನಾನಾಥರದ ಸಮಸ್ಯೆಗಳಿಗೆ ಒಳಗಾಗುತ್ತಿದ್ದೇವೆ, ಈ ಸಮಯದಲ್ಲಿ ರಾಸಾಯನಿಕ ಮುಕ್ತಗ್ರಾಮಗಳನ್ನು ರೂಪಿಸುವ ಪ್ರಯತ್ನಗಳಿಗೆ ನಾವು ತಯಾರಿದ್ದೇವೆ ಎಂದು ತುಮಕೂರು ವಿಜ್ಞಾನ ಕೇಂದ್ರದ ಮರುಳಯ್ಯ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಗೋವಿಂದರಾಜು, ವಿಜ್ಞಾನಿ ಡಾ.ಮಂಜುನಾಥ್, ಪರಿಸರವಾದಿ ಸಿ.ಯತಿರಾಜು, ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಸಿ.ಪಿ.ಮಾಧವನ್, ಪ್ರೊ.ಜಿ.ಬಿ ಶಿವರಾಜ್ ಸೇರಿದಂತೆ ಗಾಂಧೀ ಆಶ್ರಮದ ಕಲಿಕಾರ್ಥಿಗಳು, ರೈತರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours