Tumkurnews
ತುಮಕೂರು; ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಧುಗಿರಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ವಿ ವೀರಭದ್ರಯ್ಯ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮಧುಗಿರಿಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಹೇಳಿದರು. ಕ್ಷೇತ್ರದ ಜನರ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿಯಾಗಿದ್ದೇನೆ. ಕ್ಷೇತ್ರದಲ್ಲಿ ಸಂಘಟನೆ ಇರಲಿಲ್ಲ, ರಾಜಣ್ಣರಿಗೆ ಎದುರಾಗಿ ನಿಲ್ಲಲಿಲ್ಲ.
ಈ ವಿಚಾರಗಳಿಗೆ ನಾನು ಅಧೀರನಾಗಿಲ್ಲ. ಮಾಜಿ ಶಾಸಕ ಕೆ.ಎನ್ ರಾಜಣ್ಣ ನನ್ನ ವಿರುದ್ಧ ಏನು ಟೀಕೆ ಮಾಡಿಲ್ಲ. ಯಾವುದೇ ಸನ್ನಿವೇಶದಲ್ಲಿ ಪಕ್ಷದ ಬಗ್ಗೆಯಾಗಲಿ, ನನ್ನ ವಿರುದ್ಧವಾಗಲಿ ದ್ವೇಷ ಸಾಧಿಸಲಿಲ್ಲ. ಹಿಂದಿನ ಚುನಾವಣೆಯಲ್ಲಿ ದ್ವೇಷ ಸಾಧಿಸಿ ಅದರ ಫಲ ಅನುಭವಿಸಿದ್ದರು ಎಂದರು.
ಚುನಾವಣೆ ಹತ್ತಿರದಲ್ಲಿ ಸಂಘಟನೆಯಾಗುತ್ತದೆ.
ಅವರು ನೆಗೆಟಿವ್ ಆಗಿ ಮಾತನಾಡಿದರು ಎಂದು ನಾನು ಅಧೀರನಾಗಿಲ್ಲ. ಕ್ಷೇತ್ರದ ಕಾರ್ಯಕರ್ತರ ಶಕ್ತಿ ಬಗ್ಗೆ ನನಗೆ ಭರವಸೆಯಿದೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸಲು
ವೈಯಕ್ತಿಕವಾಗಿ ಆರೋಗ್ಯ ಸರಿಯಿಲ್ಲ. ನನ್ನದೇ ಆದಂತಹ ಸಮಸ್ಯೆಯಿದೆ. ಮನೆಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಇಷ್ಟ ಪಡುತ್ತಿಲ್ಲ. ರಾಜಕೀಯಕ್ಕಾಗಿ ಮನೆಯನ್ನು ಎರಡು ಭಾಗ ಮಾಡಿಕೊಳ್ಳಲು ಇಷ್ಟವಿಲ್ಲ ಎಂದು ವೀರಭದ್ರಯ್ಯ ತಿಳಿಸಿದರು.
ಚುನಾವಣೆಯಿಂದ ಹಿಂದೆ ಸರಿಯುವ ಬಗ್ಗೆ ಈಗಾಗಲೇ ಕುಮಾರಸ್ವಾಮಿ ಹಾಗೂ ಹೈ ಕಮಾಂಡ್ ಮುಂದೆ ಮಾತನಾಡಿದ್ದೇನೆ. ಈಗ ಮಾತನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ. ನಾನು ನಿಮ್ಮ ಪ್ರೀತಿಗೆ ಅಭಾರಿಯಾಗಿದ್ದೇನೆ, ರಾಜಕೀಯ ಹೊರತಾಗಿ ನಿಮ್ಮ ಜೊತೆಗಿರುತ್ತೇನೆ ಎಂದು ಜೆಡಿಎಸ್ ಶಾಸಕ ಎಂ.ವಿ ವೀರಭದ್ರಯ್ಯ ಹೇಳಿದರು.
ಕಾರ್ಯಕರ್ತರ ವಿರೋಧ; ಶಾಸಕ ಎಂ.ವಿ ವೀರಭದ್ರಯ್ಯ ಚುನಾವಣೆ ನಿವೃತ್ತಿ ಘೋಷಿಸಿರುವುದನ್ನು ಅವರ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ವಿರೋಧಿಸಿದ್ದಾರೆ. ತಮಗೆ ಆರೋಗ್ಯ ಸಮಸ್ಯೆಯಾಗುವುದಾದರೇ ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಿ, ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಸದ್ಯ ಎಂ.ವಿ ವೀರಭದ್ರಯ್ಯರ ಮುಂದಿನ ನಡೆ ಏನೆಂಬುದನ್ನು ಕಾದು ನೋಡಬೇಕಿದೆ.
+ There are no comments
Add yours