ಒಂದು ಪ್ರೇಮ ಕಥೆ; ಮೂರು ಆತ್ಮಹತ್ಯೆ! ಇಂಥ ಸ್ಥಿತಿ ಯಾರಿಗೂ ಬಾರದಿರಲಿ

1 min read

Tumkurnews
ತುಮಕೂರು; ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಮನನೊಂದ ಪ್ರೇಮಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, 6 ತಿಂಗಳ ಬಳಿಕ ಅಸ್ಥಿಪಂಜರ ಪತ್ತೆಯಾಗುವ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ.
ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಮಾಗಡಿ ರಸ್ತೆ ಅರಣ್ಯ ಪ್ರದೇಶದಲ್ಲಿ ಮೃತ ಯುವಕನ ಅಸ್ಥಿಪಂಜರ ಪತ್ತೆಯಾಗಿದೆ.
ದುರಂತ ಪ್ರೇಮ; ಮೂಲತಃ ಕುಣಿಗಲ್ ತಾಲೂಕಿನ ಅರಮನೆ ಹೊನ್ನಮಾಚಹಳ್ಳಿ ಗ್ರಾಮದ ಹಾಲಿ ಬೆಂಗಳೂರು ಸುಂಕದಕಟ್ಟೆ ನಿವಾಸಿಯಾಗಿದ್ದ ಸಂತೋಷ್ (28) ಹಾಗೂ ಹುಲಿಯೂರುದುರ್ಗ ಹೋಬಳಿ ಕೆಬ್ಬಳಿ ಗ್ರಾಮದ ಶಾಲಿನಿ (21) ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಶಾಲಿನಿ ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಬೇಸತ್ತ ಶಾಲಿನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಶಾಲಿನಿ ವಿಷ ಸೇವಿಸಿದ್ದು ತಿಳಿದು ಅತ್ತ ಸಂತೋಷ್ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದನು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಇಬ್ಬರು ಪ್ರೇಮಿಗಳ ಪೈಕಿ ಸಂತೋಷ ಬದುಕುಳಿದನು. ಆದರೆ ಶಾಲಿನಿ ಉಳಿಯಲಿಲ್ಲ. ಕಳೆದ 2021ರ ಅಕ್ಟೋಬರ್ ನಲ್ಲಿ ಆಕೆ ಮೃತಪಟ್ಟಳು. ಇದರಿಂದಾಗಿ ಖಿನ್ನತೆಗೆ ಒಳಗಾದ ಸಂತೋಷ ಪುನಃ ಸಾಯಲು‌ ನಿರ್ಧರಿಸಿದನು. ಅದರಂತೆ 6 ತಿಂಗಳ ಹಿಂದೆ ಇದೀಗ ಅಸ್ಥಿಪಂಜರ ಪತ್ತೆಯಾಗಿರುವ ಅರಣ್ಯ ಪ್ರದೇಶಕ್ಕೆ ಬೈಕ್ ನಲ್ಲಿ ಬಂದು ಆತ್ಮಹತ್ಯೆಗೆ ಶರಣಾಗಿದ್ದನು. 6 ತಿಂಗಳ ‌ಹಿಂದೆ ಅನಾಮಧೇಯ ಬೈಕ್ ಪತ್ತೆಯಾಗಿದ್ದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು, ಇದೀಗ ಶವ ಪತ್ತೆಯಾಗುವ ಮೂಲಕ ಇಡೀ ಪ್ರಕರಣ ಬೆಳಕಿಗೆ ಬಂದಿದೆ.
ತಾಯಿಯೂ ಸಾವು; ದುರಂತವೆಂದರೆ ಮಗಳು ಶಾಲಿನಿ ಸತ್ತ ಕೆಲವೇ ದಿನಗಳಲ್ಲಿ ಆಕೆಯ ತಾಯಿಯೂ ಕೊನೆಯುಸಿರೆಳೆದಿದ್ದಾರೆ. ಮಗಳ ಆತ್ಮಹತ್ಯೆಯಿಂದಾಗಿ ಅಪಾರವಾಗಿ ನೊಂದಿದ್ದ ಶಾಲಿನಿಯ ತಾಯಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಒಟ್ಟಾರೆಯಾಗಿ ಒಂದು ಪ್ರೇಮಕಥೆ ಮೂರು ಅಮಾಯಕ ಜೀವಗಳನ್ನು ಬಲಿ ಪಡೆದಿದೆ. ಶಾಲಿನಿ ಹಾಗೂ ಸಂತೋಷ ಮದುವೆಗೆ ಎರಡೂ ಕಡೆಯವರು ಒಪ್ಪಿ ಮದುವೆ ಮಾಡಿದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲವೋ ಏನೋ? ಅಥವಾ ವಿಧಿ ಲಿಖಿತ ಹೀಗೆಯೇ ಇತ್ತೊ ಏನೋ? ಒಟ್ಟಿನಲ್ಲಿ ಒಂದು ಪ್ರೇಮ ಮೂರು ಆತ್ಮಹತ್ಯೆಗೆ ಕಾರಣವಾಗಿದ್ದು ಮಾತ್ರ ವಿಪರ್ಯಾಸ.

About The Author

You May Also Like

More From Author

+ There are no comments

Add yours