ತುಮಕೂರು ನ್ಯೂಸ್.ಇನ್
Tumkurnews.in (ಜು.18)
ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ರೋಗ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರಕಾರದಿಂದ ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಜಾರಿಗೆ ತರಲಾಗಿತ್ತು. ಲಾಕ್ ಡೌನ್ ತೆರವಾದ ನಂತರವೂ ಹಲವಾರು ದೇಗುಲಗಳು ಸ್ವಯಂ ನಿರ್ಬಂಧ ಹೇರಿಕೊಂಡು ಭಕ್ತರನ್ನು ಆದಷ್ಟು ನಿಯಂತ್ರಣ ಮಾಡುತ್ತಿದೆ. ಈ ಕಾರಣದಿಂದಾಗಿ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕೂಡ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮಠದ ಮುಖ್ಯದ್ವಾರವನ್ನು ಮುಚ್ಚಲಾಗಿದೆ. ಗಣ್ಯರು ಮತ್ತು ಸ್ಥಳೀಯ ಭಕ್ತರು ವಸ್ತು ಪ್ರದರ್ಶನ ಕಟ್ಟಡ ಭಾಗದಿಂದ ಪ್ರವೇಶಿಸುತ್ತಿದ್ದಾರೆ. ಇಲ್ಲಿಯೂ ಕೂಡ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದ್ದು, ಸೆಕ್ಯುರಿಟಿ ನೇಮಿಸಲಾಗಿದೆ.
ಅತೀ ಅಗತ್ಯವಿದ್ದವರನ್ನು ಮಾತ್ರ ಒಳಗೆ ಬಿಡಲಾಗುತ್ತಿದೆ.
ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮಿಗಳ ಕಚೇರಿ ಎದುರಿನಲ್ಲಿ ಸೆನ್ಸರ್ ಹೊಂದಿರುವ ಸ್ಯಾನಿಟೈಜರ್ ಇಡಲಾಗಿದೆ. ಇಲ್ಲಿ ಭಕ್ತರು, ಗಣ್ಯರು, ಮಠದ ಸಿಬ್ಬಂದಿ ತಮ್ಮ ಕೈಗಳನ್ನು ಸ್ಯಾನಿಟೈಜ್ ಮಾಡಿಕೊಂಡು ಶ್ರೀಗಳನ್ನು ಕಾಣುತ್ತಿದ್ದಾರೆ. ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮಿಗಳ ಗದ್ದುಗೆಯಲ್ಲಿ ಕೂಡ ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗಿದೆ.
ಸದ್ಯ ಮಠದಲ್ಲಿ ಕೆಲವು ವಿದ್ಯಾರ್ಥಿಗಳು, ಸಿಬ್ಬಂದಿ, ದಾಸೋಹ ಮಂದಿರದ ದುರಸ್ತಿ ಕಾರ್ಯ ಮಾಡುತ್ತಿರುವ ಕಾರ್ಮಿಕರನ್ನು ಮಾತ್ರ ಕಾಣಬಹುದಾಗಿದೆ. ಉಳಿದಂತೆ ಮಠದ ಆವರಣ ಬಿಕೋ ಎನ್ನುತ್ತಿದೆ.
ಸದ್ಯ ರಾಜ್ಯದ ಸಾಕಷ್ಟು ಭಕ್ತರು ಈ ಕೊರೋನಾ ಕಾಟದಿಂದ ಯಾವಾಗ ಮುಕ್ತಿ ಸಿಗುತ್ತದೆಯೋ, ನಾವು ಯಾವಾಗ ಮಠಕ್ಕೆ ಹೋಗಿ ತಮ್ಮ ಆರಾಧ್ಯ ದೈವ ಸಿದ್ಧಲಿಂಗ ಸ್ವಾಮಿಗಳನ್ನು, ಶಿವೈಕ್ಯ ಡಾ.ಶಿವಕುಮಾರ ಸ್ವಾಮಿಗಳ ಗದ್ದುಗೆಯನ್ನು ನೋಡುತ್ತೇವೋ ಎಂದು ಕಾತರದಿಂದ ಕಾಯುತ್ತಿದ್ದಾರೆ.
+ There are no comments
Add yours