ಆದರ್ಶ ಸಮಾಜ ನಿರ್ಮಾಣದ ದಾರ್ಶನಿಕ ಬಸವಣ್ಣ:
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕ್ರಾಂತಿಯೋಗಿಗೆ ಗೌರವ ನಮನ
Tumkur news
ತುಮಕೂರು: ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಬಸವ ಜಯಂತಿ ಅಂಗವಾಗಿ ಮುಖಂಡರು ಜಗಜ್ಯೋತಿ ಬಸವಣ್ಣ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಬಸವಣ್ಣ ನಾಡಿಗೆ ಕೊಟ್ಟ ಕೊಡುಗೆ ಸ್ಮರಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿ, ಶ್ರೇಷ್ಠ ವಚನಕಾರ, ವಿಶ್ವಗುರು ಬಸವಣ್ಣನವರು ಸಾರಿದ ತತ್ವಗಳು ಜಾತ್ಯತೀತತೆ, ಕಾಯಕ, ದಾಸೋಹ ಮತ್ತು ಸಮಾನತೆಯ ಆಧಾರದಲ್ಲಿವೆ. ಕಾಯಕವೇ ಕೈಲಾಸ ಎಂದು ಹೇಳಿ ದುಡಿದದ್ದನ್ನು ಸಮಾಜದೊಂದಿಗೆ ಹಂಚಿಕೊಳ್ಳಬೇಕೆಂದ ಆದರ್ಶ ಸಮಾಜದ ಪರಿಕಲ್ಪನೆ ಬಿತ್ತಿದರು ಎಂದು ಹೇಳಿದರು.
ಆಗಲೇ ಮಹಿಳಾ ಸಬಲೀಕರಣದ ಧ್ವನಿ ಎತ್ತಿದ್ದ ಬಸವಣ್ಣನವರು ಮಹಿಳೆಯರಿಗೆ ಸಮಾನ ಅವಕಾಶ, ವೇದಿಕೆ ಕಲ್ಪಿಸಿದರು. ಜಾತಿಭೇದವಿಲ್ಲದೆ ಮಾನವರೆಲ್ಲರೂ ಒಂದೇ ಎಂದು ಮಾನವ ಧರ್ಮ ಪ್ರತಿಪಾದಿಸಿದ ಬಸವಣ್ಣ, ಶೇಷ್ಠ ಮಾನವತಾವಾದಿ. ದಯವಿಲ್ಲದ ಧರ್ಮ ಯಾವುದಯ್ಯ ಎಂದು ಹೇಳಿ ಸಖಲ ಪ್ರಾಣಿ-ಪಕ್ಷಿ, ಮನುಷ್ಯರಲ್ಲಿ ದಯೆ ತೋರುವುದೇ ನಿಜವಾದ ಧರ್ಮ ಎಂದು ಸಾರಿದ ಬಸವಣ್ಣನವರ ತತ್ವಗಳನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಹಿರಿಯ ಉಪಾಧ್ಯಕ್ಷ ವೈ.ಹೆಚ್. ಹುಚ್ಚಯ್ಯ ಮಾತನಾಡಿ, ಜಾತಿ ವೈಷಮ್ಯಗಳನ್ನು ಬಿಟ್ಟು ಮನುಷ್ಯ ಸಮಾನತೆ ಸಾರಿದ ದಾರ್ಶನಿಕರು ಬಸವಣ್ಣ. ಬಸವಣ್ಣನವರ ತತ್ವಗಳು ಎಲ್ಲಾ ಧರ್ಮಗಳಿಗೂ ಆದರ್ಶಪ್ರಾಯ. ಸಮಾಜ ಸುಧಾರಣೆ, ಹೆಣ್ಣುಮಕ್ಕಳಿಗೆ ಸಮಾನ ಅವಕಾಶ ಸೇರಿದಂತೆ ನಮ್ಮ ಸಂವಿಧಾನಕ್ಕೆ ಮಿಗಿಲಾದ ಆಶಯಗಳ ಆದರ್ಶ ಸಮಾಜವನ್ನು ಕಟ್ಟುವ ಪ್ರಯತ್ನ ಮಾಡಿದ್ದರು ಎಂದು ಹೇಳಿದರು.
ಸಪ್ತಗರಿ ಕಾಲೇಜಿನ ಶಿಕ್ಷಣಾಧಿಕಾರಿ ಚನ್ನಪ್ಪ ಬಾರಿಗಿಡದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಬಸವಣ್ಣನವರ ಆದರ್ಶಗಳನ್ನು ಪರಿಚಯಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಾಗರನಹಳ್ಳಿ ವಿಜಯಕುಮಾರ್, ಕಾರ್ಯದರ್ಶಿಗಳಾದ ಹೆಚ್.ಎಂ. ರವೀಶಯ್ಯ, ಜ್ಯೋತಿ ತಿಪ್ಪೇಸ್ವಾಮಿ, ನಗರ ಅಧ್ಯಕ್ಷ ಟಿ.ಕೆ. ಧನುಷ್, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ, ಜಿಲ್ಲಾ ವಕ್ತಾರ ಟಿ.ಆರ್. ಸದಾಶಿವಯ್ಯ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನವಚೇತನ್, ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ಧರಾಮಣ್ಣ, ನಗರಪಾಲಿಕೆ ಮಾಜಿ ಮೇಯರ್ ಬಿ.ಜಿ. ಕೃಷ್ಣಪ್ಪ, ಮುಖಂಡರಾದ ಕೆ. ಮಲ್ಲಿಕಾರ್ಜುನ್, ಬಂಬೂ ಮೋಹನ್, ಪಂಚಾಕ್ಷರಯ್ಯ, ಗಂಗಾಧರ್ ಸೇರಿದಂತೆ ವಿವಿಧ ಮೋರ್ಚಾಗಳ ಮುಖಂಡರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿಜೆಪಿಯಿಂದ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ವೇಳೆ ಕೊಪ್ಪಲ್ ಸಿದ್ಧವೀರಯ್ಯ ಮತ್ತು ಪಾರ್ವತಮ್ಮ ಪ್ರತಿಷ್ಠಾನದಿಂದ ಕೊಪ್ಪಲ್ ನಾಗರಾಜು ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಿದರು.
