ಹತ್ತಿ ಬೀಜ ಉತ್ಪಾದನಾ ಕಂಪನಿಯಿಂದ ರೈತರಿಗೆ ವಂಚನೆ
ಹತ್ತಿ ಬೀಜ ಬೆಳೆದ ರೈತರಿಗೆ 500 ಕೋಟಿ ರೂ. ಬಾಕಿ; ಜಿಲ್ಲಾಡಳಿತದ ಮಧ್ಯಪ್ರವೇಶಕ್ಕೆ ರೈತ ಸಂಘ ಮನವಿ
Tumkur news
ತುಮಕೂರು: ಹತ್ತಿ ಬೀಜ ಬೆಳೆದುಕೊಟ್ಟ ಜಿಲ್ಲೆಯ ಮಧುಗಿರಿ, ಶಿರಾ, ಪಾವಗಡ ಮತ್ತು ಕೊರಟಗೆರೆ ತಾಲೂಕುಗಳ ರೈತರಿಗೆ ಬೀಜ ಉತ್ಪಾದನಾ ಕಂಪನಿಗಳಿಂದ ಸುಮಾರು 500 ಕೋಟಿ ರೂ. ಬಾಕಿ ಬರಬೇಕಿದ್ದು, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರೈತರ ಬಾಕಿ ಕೊಡಿಸುವುದರ ಜೊತೆಗೆ, ಬೀಜ ಉತ್ಪಾಧನಾ ಕಾಯ್ದೆ ಅನ್ವಯ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ ಶಂಕರಪ್ಪ ಒತ್ತಾಯಿಸಿದ್ದಾರೆ.
ನಗರದ ವಿಜ್ಞಾನ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10-20 ವರ್ಷಗಳಿಂದ ಜಿಲ್ಲೆಯ ಸುಮಾರು 9000ಕ್ಕೂ ಹೆಚ್ಚು ರೈತರೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳದೆ 19000 ಎಕರೆ ಪ್ರದೇಶದಲ್ಲಿ ಹತ್ತಿ ಬೀಜ ಉತ್ಪಾದನೆ ಮಾಡಿಸಲಾಗುತ್ತಿದೆ. ರೈತರು ತಮ್ಮ ಭೂಮಿಗಳಲ್ಲಿ ಉತ್ಪಾದಿಸಿದ 2024ರ ಸಾಲಿನಲ್ಲಿ ಬೀಜ ನೀಡಿದ ಬಾಕಿ 52 ಕೋಟಿಯ ಜೊತೆಗೆ, 2025ರಲ್ಲಿ ಬೀಜ ಬೆಳೆದು ನೀಡಿದ 3 ತಿಂಗಳು ಕಳೆದರೂ ರೈತರಿಗೆ ನೀಡಬೇಕಾದ 500 ಕೋಟಿ ರೂ. ಬಾಕಿ ನೀಡಿಲ್ಲ. ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ,ಔಷಧಗಳನ್ನು ನೀಡದೆ ರೈತರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ. ಹಾಗಾಗಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಬೀಜ ಉತ್ಪಾಧನಾ ಕಂಪನಿಗಳಿಂದ ಮೋಸ ಹೋಗಿರುವ ರೈತರಿಗೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದರು.
ಒಂದು ಎಕರೆಯಲ್ಲಿ ಹತ್ತಿ ಬಿತ್ತನೆ ಬೀಜ ಬೆಳೆಯಲು ಸುಮಾರು 2 ಲಕ್ಷ ರೂ ಖರ್ಚು ಬರುತ್ತದೆ. ನೆರೆ ರಾಜ್ಯಗಳಾದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರಗಳ 22 ಬೀಜ ಉತ್ಪಾಧನಾ ಕಂಪನಿಗಳಿಗೆ ರೈತರಿಗೆ ಒಂದಿಷ್ಟು ಮುಂಗಡ ಹಣ ನೀಡಿ, ಹತ್ತಿ ಬೀಜಗಳನ್ನು ಬೆಳೆಸಿಕೊಳ್ಳುತಿದ್ದು, ಸಂಸ್ಕರಣಾ ವೆಸ್ಟ್ ಎಂದು 100 ಕೆ.ಜಿ.ಗೆ ಬದಲಾಗಿ 107 ತೂಕ ಮಾಡುವುದಲ್ಲದೆ,45 ಕೆ.ಜಿ ಬ್ಯಾಗ್ ಮಾಡುವಾಗ 45.5 ಕೆ.ಜಿ. ತೂಗುವ ಮೂಲಕ ರೈತರನ್ನು ಶೋಷಣೆ ಮಾಡಲಾಗುತ್ತಿದೆ. ಅಲ್ಲದೆ ಬೀಜ ಕೊಂಡ ತಕ್ಷಣ ಹಣ ನೀಡುತ್ತಿಲ್ಲ. ಕಂಪನಿ ನೇರವಾಗಿ ವ್ಯವಹರಿಸದೆ ಏಜೆಂಟ್ ಮೂಲಕ ಕೆಲಸ ನಡೆಸುತ್ತಿದೆ.ರೈತರಿಗೆ ಗುಣಮಟ್ಟದ ಬೀಜ, ಗೊಬ್ಬರ, ಔಷಧಗಳನ್ನು ನೀಡಿಲ್ಲ. ಬೆಳೆ ನಷ್ಟವಾದರೆ ಪರಿಹಾರವಿಲ್ಲ. ಹಾಗಾಗಿ ಹತ್ತಿ ಬೀಜ ಉತ್ಪಾಧನಾ ಬೆಳೆಯನ್ನು ಫಸಲ್ ಭೀಮ ಯೋಜನೆಯ ಅಡಿಗೆ ಒಳಪಡಿಸಬೇಕು ಎಂದು ಜಿ.ಎಸ್.ಶಂಕರಪ್ಪ ಆಗ್ರಹ ಪಡಿಸಿದರು.
ಬೀಜ ಕಂಪನಿಗಳು ಹಣ ನೀಡುವುದು 2024ರಲ್ಲಿ ತಡವಾದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಸಲಾಗಿತ್ತು.ಈಗ ಅದೇ ರೀತಿಯ ಸಮಸ್ಯೆಗಳು ಮುಂದುವರೆದಿವೆ. ಹಾಗಾಗಿ ಜಿಲ್ಲಾಡಳಿತ ಮದ್ಯ ಪ್ರವೇಶ ಮಾಡಿ ನ್ಯಾಯ ದೊರಕಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ. ರೈತರಿಗೆ ಗುಣಮಟ್ಟದ ಬೀಜ ಮತ್ತು ಪೂರಕ ವಸ್ತುಗಳನ್ನು ನೀಡಬೇಕು.ಬಾಕಿ ಇರುವ ಹಣವನ್ನು ತುರ್ತಾಗಿ ರೈತರಿಗೆ ನೀಡಬೇಕು.ಹತ್ತಿ ಬೀಜ ಬೆಳೆಯನ್ನು ಫಸಲ್ ಭೀಮಾ ಯೋಜನೆಗೆ ಒಳಪಡಿಸಬೇಕು.ಎಲ್ಲಾ ಬೀಜ ಕಂಪನಿಗಳು ಕಚೇರಿ ತೆರೆದು,ರೈತರೊಂದಿಗೆ ಒಪ್ಪಂದ ಮಾಡಿ ಕೊಂಡು, ಏಜೆಂಟರ ಬದಲಾಗಿ, ನೇರವಾಗಿ ರೈತರೊಂದಿಗೆ ವ್ಯವಹರಿಸಬೇಕು ಎಂದು ಜಿ.ಎಸ್.ಶಂಕರಪ್ಪ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ,ಹತ್ತಿ ಬೀಜ ಉತ್ಪಾಧನಾ ಕಂಪನಿಗಳು ಬೀಜೋತ್ಪಾಧನಾ ಕಾಯ್ದೆಯ ನಿಯಮಗಳನ್ನು ಗಾಳಿಗೆ ತೂರಿ, ರೈತರೊಂದಿಗೆ ಯಾವುದೇ ಒಡಂಬಡಿಕೆ ಮಾಡಿಕೊಳ್ಳದೆ ಬೀಜವನ್ನು ಕೊಂಡು ಹಣ ನೀಡದೆ ಸತಾಯಿಸುತ್ತಿವೆ.ಇದೊಂದು ರೀತಿ ಹಗಲು ದರೋಡೆಯಂತಿದ್ದು, ಜಿಲ್ಲಾಡಳಿತ ಗಮನಹರಿಸಿ,ಸಮಸ್ಯೆಗೆ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದರು.
ಕಳೆದ ಮೂರು ತಿಂಗಳಿಂದ ನ್ಯಾಫೆಡ್ ಮೂಲಕ ಖರೀದಿಸಿರುವ ರಾಗಿಗೆ ಸರಕಾರ ಹಣ ನೀಡಿಲ್ಲ. ಸರಕಾರ ಬಾಕಿ ಹಣ ನೀಡಬೇಕು.
ರಾಜ್ಯದಲ್ಲಿ ಪೂರ್ವ ಮುಂಗಾರು ವಿಫಲವಾಗಿದೆ.ಹೆಸರು, ಉದ್ದು, ತೊಗರಿ, ಅಲಸಂದೆ ಬೆಳೆಯುತ್ತಿದ್ದ ರೈತರು ತಮ್ಮ ಭೂಮಿಯನ್ನು ಉಳುಮೆ ಮಾಡಲು ಸಾಧ್ಯವಾಗಿಲ್ಲ.ಇದರ ಜೊತೆಗೆ ವಿದ್ಯುತ್ ಕಣ್ಣಾಮುಚ್ಚಾಲೆ ರೈತರನ್ನು ಮತ್ತಷ್ಟು ಕಂಗೇಡಿಸಿದೆ.ಅತಿ ಹೆಚ್ಚು ಕೊಳವೆ ಬಾವಿಗಳಿರುವ ಗುಬ್ಬಿ ತಾಲೂಕಿಗೆ ದಿನವೊಂದಕ್ಕೆ ನೀಡಬೇಕಾದ 437 ಮೇಗಾ ವ್ಯಾಟ್ ವಿದ್ಯುತ್ಗೆ ಬದಲಾಗಿದೆ 127 ಮೇ.ವ್ಯಾ ಮಾತ್ರ ನೀಡುತಿದ್ದಾರೆ.ಇದರಿಂದ ತೋಟಗಳನ್ನು ಉಳಿಸಿಕೊಳ್ಳಲು ರೈತರು ಹೆಣಗಾಡುತಿದ್ದಾರೆ. ಕನಿಷ್ಠ ದಿನಕ್ಕೆ 6 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ನೀಡಬೇಕೆಂಬುದು ರೈತರ ಆಗ್ರಹವಾಗಿದೆ ಎಂದರು.
ನಂದಿಹಳ್ಳಿ-ಮಲ್ಲಸಂದ್ರ- ವಸಂತನರಸಾಪುರ ಔಟರ್ ರಿಂಗ್ ರಸ್ತೆಗೆ ರೈತರು ಭೂಮಿ ನೀಡುವುದಿಲ್ಲ ಎಂದು ಹೇಳಿದ್ದರೂ ಜಿಲ್ಲಾಡಳಿತ ಕೇಳಿಸಿಕೊಂಡಂತೆ ಕಂಡು ಬರುತ್ತಿಲ್ಲ.ಅಗಿಂದಾಗ್ಗೆ ಭೂ ಸ್ವಾಧೀನದಂತಹ ಪ್ರಕ್ರಿಯೆಗಳಿಗೆ ಅಧಿಕಾರಿಗಳು ಭೇಟಿ ನೀಡುತ್ತಲೇ ಇದ್ದಾರೆ. ಔಟರ್ ರಿಂಗ್ ರಸ್ತೆಗೆ ಹೋಗುವ ಸುಮಾರು 750 ಹೆಕ್ಟರ್ ಪ್ರದೇಶದಲ್ಲಿ 550 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳಿವೆ.ಸಾವಿರಾರು ಜನರು ಬೀದಿಗೆ ಬರಲಿದ್ದಾರೆ.ಪ್ರಸ್ತಾಪಿತ ರಸ್ತೆಯ ಜಾಗಕ್ಕೆ 150 ಮೀಟರ್ ದೂರದಲ್ಲಿ ಗುಬ್ಬಿ-ದಾಬಸಪೇಟೆ ನಕಾಶೆ ರಸ್ತೆಯಿದೆ.ಅದನ್ನು ಅಭಿವೃದ್ದಿ ಪಡಿಸುವಂತೆ ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರೈತರ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ,ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ, ವಿವಿಧ ತಾಲೂಕುಗಳ ಪದಾಧಿಕಾರಿಗಳಾದ ಚಿಕ್ಕಬೋರೇಗೌಡ, ಕೆಂಚಪ್ಪ, ನಾಗರಾಜು, ಷಬ್ಬೀರ್ ಪಾಷ, ಲೋಕೇಶ್, ಷಪಿ ಅಹಮದ್, ಟಿ.ಕೆ.ಲಕ್ಷ್ಮಣಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತುಮಕೂರು: ನನ್ನ ಸಾವಿಗೆ ಪರಮೇಶ್ವರ್, ಟಿ.ಬಿ ಜಯಚಂದ್ರ ಕಾರಣ: ಮಹಿಳೆ ಬೆದರಿಕೆ
