ಸರ್ಕಾರಿ ನೌಕರರು ಒಂದು ತಿಂಗಳ ಸಂಬಳ ನೀಡಿ: ಸ್ವಾಮೀಜಿ ಸಲಹೆ
ಭಗೀರಥ ಪೀಠದ ಡಾ. ಪುರುಷೋತ್ತಮಪುರಿ ಸ್ವಾಮೀಜಿ ಹೇಳಿಕೆ; ಪ್ರತಿ ವರ್ಷ ಹಬ್ಬ ಹರಿದಿನಗಳನ್ನು ಅದ್ದೂರಿಯಾಗಿ ಆಚರಿಸಿ ಹಣ ವ್ಯಯ ಮಾಡಬೇಡಿ ಎಂದ ಸ್ವಾಮೀಜಿ
Tumkur news
ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಸಮುದಾಯ ಭವನದ ಕಾರ್ಯಕ್ಕೆ ಭಗೀರಥ ಸಮಾಜದ ಸರ್ಕಾರಿ ನೌಕರರು ಕೈಜೋಡಿಸಬೇಕು. ಪ್ರತಿಯೊಬ್ಬರೂ ತಮ್ಮ ಒಂದು ತಿಂಗಳ ವೇತನವನ್ನು ಈ ಭವನ ನಿರ್ಮಾಣಕ್ಕೆ ನೀಡುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗಬೇಕು ಎಂದು ಭಗೀರಥ ಪೀಠದ ಡಾ. ಪುರುಷೋತ್ತಮಪುರಿ ಸ್ವಾಮೀಜಿ ತಿಳಿಸಿದರು.
ಹುಳಿಯಾರಿನಲ್ಲಿ ಅಂದಾಜು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭಗೀರಥ ಸಮುದಾಯ ಭವನದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,
ಭವನ ನಿರ್ಮಾಣದಂತಹ ದೊಡ್ಡ ಯೋಜನೆಗಳು ಯಶಸ್ವಿಯಾಗಲು ಕೇವಲ ಸರ್ಕಾರ ಅಥವಾ ಶಾಸಕರ ಅನುದಾನ ಸಾಕಾಗುವುದಿಲ್ಲ. ಸಮಾಜದ ಪ್ರಜ್ಞಾವಂತ ವರ್ಗವಾದ ಶಿಕ್ಷಕರು ಮತ್ತು ನೌಕರರು ಸ್ವಯಂಪ್ರೇರಿತರಾಗಿ ಧನಸಹಾಯ ಮಾಡಬೇಕು ಎಂದರು.
ಪ್ರತಿ ವರ್ಷ ಹಬ್ಬ-ಹರಿದಿನಗಳನ್ನು ಅದ್ದೂರಿಯಾಗಿ ಆಚರಿಸಿ ಹಣ ವ್ಯಯ ಮಾಡುವ ಬದಲು, ಐದು ವರ್ಷಕ್ಕೊಮ್ಮೆ ಸರಳವಾಗಿ ಆಚರಿಸಬೇಕು. ಇದರಿಂದ ಉಳಿತಾಯವಾಗುವ ಹಣವನ್ನು ಸಮುದಾಯ ಭವನದಂತಹ ಶಾಶ್ವತ ಆಸ್ತಿಗಳ ನಿರ್ಮಾಣಕ್ಕೆ ಬಳಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಒಂದು ವರ್ಷದವರೆಗೆ ಚಿನ್ನ ಖರೀದಿ ಮಾಡದಂತೆ, ಇಂಧನ ಬಳಕೆ ಕಡಿಮೆ ಮಾಡುವುದು ಸೇರಿದಂತೆ ಮಿತವ್ಯಯದ ಬಗ್ಗೆ ನೀಡಿರುವ ಹೇಳಿಕೆ ನಡುವೆಯೇ ಸ್ವಾಮೀಜಿ ನೀಡಿರುವ ಹೇಳಿಕೆ ಗಮನ ಸೆಳೆದಿದೆ.
