ಜಿಲ್ಲಾಧಿಕಾರಿ ಶುಭ ಕಲ್ಯಾಣ್ ದಿಟ್ಟ ಆದೇಶ :
ಗೂಳೂರು ಬಳಿ ಅಂದಾಜು 500 ಕೋಟಿ ರೂ. ಮೌಲ್ಯದ 106 ಎಕರೆ ಆಸ್ತಿ ಸ್ವಾಧೀನ
ತುಮಕೂರು: ತುಮಕೂರು ನಗರದಿಂದ ಸುಮಾರು 7 ಕಿ.ಮೀ. ದೂರದಲ್ಲಿರುವ 106 ಎಕರೆ 23 ಗುಂಟೆ ವಿಸ್ತೀರ್ಣದ ಅಮೂಲ್ಯ ಸಾರ್ವಜನಿಕ ಆಸ್ತಿಯನ್ನು ಸರ್ಕಾರದ ಸ್ವಾಧೀನದಲ್ಲಿ ಉಳಿಸುವ ನಿಟ್ಟಿನಲ್ಲಿ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮಹತ್ವದ ಹಾಗೂ ಐತಿಹಾಸಿಕ ಆದೇಶ ಹೊರಡಿಸಿದ್ದಾರೆ.
ರಾಜಧಾನಿ ಬೆಂಗಳೂರಿಗೆ ಹೆಬ್ಬಾಗಿಲಿನಂತಿರುವ ತುಮಕೂರು ಅತಿ ವೇಗವಾಗಿ ಬೆಳೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ತುಮಕೂರು ಸುತ್ತ ಮುತ್ತ ಭಾರಿ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ತುಮಕೂರು ಸುತ್ತಮುತ್ತ ಭೂಮಿಯ ಬೆಲೆ ಹೆಚ್ಚಾಗುತ್ತಿರುವುದನ್ನು ಕಾಣಬಹುದು.
ಹಣ ನೀಡಿದರೂ ಭೂಮಿ ಸಿಗದಿರುವ ಪರಿಸ್ಥಿತಿ ತುಮಕೂರು ಸುತ್ತಮುತ್ತ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸುಮಾರು 500 ಕೋಟಿ ರೂ. ಮೌಲ್ಯದ 106 ಎಕರೆ ಸಾರ್ವಜನಿಕ ಆಸ್ತಿಯು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಪಾಲಾಗುವುದನ್ನು ತಪ್ಪಿಸಿ ಮುಂಬರುವ ಪೀಳಿಗೆಗೆ ಸಾರ್ವಜನಿಕ ಉದ್ದೇಶಗಳಿಗೆ ಬಳಕೆಯಾಗಲು ಅನುವಾಗುವಂತೆ ಕ್ರಮಕೈಗೊಂಡಿರುವುದು ಪ್ರಶಂಸಾರ್ಹವಾಗಿದೆ.
ತುಮಕೂರು ತಾಲ್ಲೂಕಿನ ಗೂಳೂರು ಹೋಬಳಿಯ ಕೊಂಡಾಪುರ ಗ್ರಾಮದ ಸರ್ವೆ ನಂ.3 ಹಾಗೂ ಕಲ್ಲುಮಠ ಗ್ರಾಮದ ಸರ್ವೆ ನಂ.13, 17 ಮತ್ತು 20ರ ಜಮೀನುಗಳಿಗೆ ಸಂಬಂಧಿಸಿದಂತೆ 1974ರಲ್ಲಿ ಭೂಸುಧಾರಣಾ ಕಾಯ್ದೆ, 1961ರ ಕಲಂ 48ಎ(1)ರ ಅಡಿಯಲ್ಲಿ ಗೇಣಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಇಂಡೆಕ್ಸ್ ಆಫ್ ಲ್ಯಾಂಡ್ ದಾಖಲೆಗಳ ಪ್ರಕಾರ ಈ ಜಮೀನುಗಳು “ದೇವದಾಯ ಇನಾಂತಿ” ಜಮೀನುಗಳಾಗಿರುವುದರಿಂದ ಭೂಸುಧಾರಣಾ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹಿಂಬರಹ ನೀಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ಮೇಲ್ಮನವಿ ಹಾಗೂ ನ್ಯಾಯಾಂಗ ಪ್ರಕ್ರಿಯೆಗಳು ನಡೆದಿದ್ದು, ಅಂತಿಮವಾಗಿ ಕರ್ನಾಟಕ ಉಚ್ಚ ನ್ಯಾಯಾಲಯವು ದಿನಾಂಕ 02-06-1999ರಂದು ನೀಡಿದ ಆದೇಶದಲ್ಲಿ, ಸದರಿ ಜಮೀನುಗಳು ಮೈಸೂರು(ಧಾರ್ಮಿಕ ಮತ್ತು ದತ್ತಿ) ಇನಾಮುಗಳ ನಿರ್ಮೂಲನಾ ಕಾಯ್ದೆ, 1955ರ ವ್ಯಾಪ್ತಿಗೆ ಒಳಪಡುವ ಇನಾಂ ಜಮೀನುಗಳಾಗಿದ್ದು, ಅವುಗಳ ಕುರಿತ ಹಕ್ಕುದಾರಿಕೆ ಅರ್ಜಿಗಳನ್ನು ಪರಿಶೀಲಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಮಾತ್ರ ಇದೆ ಎಂದು ಸ್ಪಷ್ಟಪಡಿಸಿ, ಪ್ರಕರಣವನ್ನು ಮರುಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಿತ್ತು.
ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ಪ್ರಕರಣ ಸಂಖ್ಯೆ ಐಎನ್ಎ(ಅ) 26/1999-2000ರಲ್ಲಿ ಸಮಗ್ರ ವಿಚಾರಣೆ ನಡೆಸಿದರು. ಪ್ರಕರಣದಲ್ಲಿದ್ದ ಹಲವಾರು ಮೂಲ ಅರ್ಜಿದಾರರು ಮೃತಪಟ್ಟಿದ್ದು, ಅವರ ವಾರಸುದಾರರು ತಮ್ಮ ಪೂರ್ವಜರು ಸದರಿ ಜಮೀನುಗಳಲ್ಲಿ ಯಾವುದೇ ಕಾಲದಲ್ಲೂ ಉಳುಮೆ ನಡೆಸಿಲ್ಲ, ಸ್ವಾಧೀನದಲ್ಲಿಯೂ ಇರಲಿಲ್ಲ ಹಾಗೂ ತಪ್ಪು ತಿಳುವಳಿಕೆಯಿಂದ ಗೇಣಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು ಎಂದು ಲಿಖಿತವಾಗಿ ಒಪ್ಪಿಕೊಂಡು, ಅರ್ಜಿಗಳನ್ನು ವಜಾಗೊಳಿಸುವಂತೆ ಮನವಿ ಸಲ್ಲಿಸಿದ್ದರು.
ಲಭ್ಯ ದಾಖಲೆಗಳು, ಕ್ವಿಟ್ ರೆಂಟ್ ವಹಿಗಳು ಹಾಗೂ ಮೈಸೂರು(ವೈಯಕ್ತಿಕ ಮತ್ತು ಇತರೆ) ಇನಾಮುಗಳ ನಿರ್ಮೂಲನಾ ಅಧಿನಿಯಮ, 1954ರ ಕಲಂ 7(1)ರ ಅನ್ವಯ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು, ದಿನಾಂಕ 24-04-2026ರಂದು ಗೇಣಿ ಅರ್ಜಿಗಳನ್ನು ವಜಾಗೊಳಿಸಿ, ಸದರಿ ಜಮೀನುಗಳು ಗೂಳೂರು ಛತ್ರ, ಮುಜಾಫರ್ ಖಾನ ನಿರ್ವಹಣೆಯ ಉದ್ದೇಶಕ್ಕಾಗಿ ಮೀಸಲಿರಿಸಲಾದ ಸಾರ್ವಜನಿಕ ಸ್ವತ್ತಾಗಿವೆ ಎಂದು ಘೋಷಿಸಿ, ಹಕ್ಕು ದಾಖಲೆಗಳಲ್ಲಿ ಸಾರ್ವಜನಿಕ ಆಸ್ತಿಯಾಗಿ ದಾಖಲಿಸುವಂತೆ ತುಮಕೂರು ತಾಲ್ಲೂಕಿನ ತಹಶೀಲ್ದಾರ್ ಅವರಿಗೆ ಆದೇಶ ನೀಡಿದ್ದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಆದೇಶದಂತೆ ತುಮಕೂರು ತಾಲ್ಲೂಕಿನ ತಹಶೀಲ್ದಾರ್ ಅವರು ಪಹಣಿ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿಗಳು ಹಾಗೂ ಅನುಷ್ಠಾನ ಕ್ರಮಗಳನ್ನು ಕೈಗೊಂಡಿದ್ದಾರೆ. ಇದರೊಂದಿಗೆ ಸುಮಾರು 106 ಎಕರೆ 23 ಗುಂಟೆ ಮೌಲ್ಯಯುತ ಸಾರ್ವಜನಿಕ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲಾಗುವುದನ್ನು ತಡೆದು ಸರ್ಕಾರದ ಸ್ವಾಧೀನಕ್ಕೆ ಪಡೆಯಲಾಗಿದೆ.
ಜಿಲ್ಲಾಧಿಕಾರಿ ಅವರ ದೂರದೃಷ್ಟಿಯ ನಾಯಕತ್ವ, ದೃಢ ನಿರ್ಧಾರಗಳು ಹಾಗೂ ಆಡಳಿತ ಬದ್ಧತೆಯ ಫಲವಾಗಿ, ಅನ್ಯರ ಅಕ್ರಮ ಬಳಕೆಯಲ್ಲಿದ್ದ ಅಂದಾಜು 500 ಕೋಟಿ ರೂ. ಮೌಲ್ಯದ 106 ಎಕರೆ ಸರ್ಕಾರಿ ಭೂಮಿಯನ್ನು ಸರ್ಕಾರದ ವಶಕ್ಕೆ ಮರಳಿ ಪಡೆಯಲಾಗಿದೆ. ಇದು ಜಿಲ್ಲೆಯ ಆಡಳಿತಾತ್ಮಕ ಇತಿಹಾಸದಲ್ಲಿಯೇ ಮಹತ್ವದ ಸಾಧನೆಯಾಗಿದೆ.
ಈ ಬಗ್ಗೆ ಪ್ರತಿಕ್ರಯಿಸಿರುವ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು, ಇದೊಂದು ಮಹತ್ವದ ಮೈಲಿಗಲ್ಲು. ಈ ಹಿಂದೆ ಬಹುಕಾಲ ಈ ಪ್ರಕರಣ ಬಾಕಿಯಿದ್ದುದನ್ನು ಗಮನಿಸಲಾಗಿತ್ತು. ಉಚ್ಛ ನ್ಯಾಯಾಲಯದ ಆದೇಶದಂತೆ ಈ ಹಿಂದೆಯೇ ಬಗೆಹರಿಯಬಹುದಾಗಿದ್ದ ಪ್ರಕರಣವನ್ನು ಇತ್ಯರ್ಥಗೊಳಿಸಿದ ತೃಪ್ತಿ ತಮಗಿದೆ. ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ತುಮಕೂರು ಸುತ್ತಮುತ್ತ ಭೂಮಿಯ ಮೌಲ್ಯವೂ ಹೆಚ್ಚುತ್ತಿದೆ. ಸಾರ್ವಜನಿಕ ಉದ್ದೇಶಗಳಿಗೆ ಭೂಮಿ ಕೊರತೆ ಆಗಬಹುದಾದ ಇಂತಹ ಸಂದರ್ಭದಲ್ಲಿ ಈ ಒಂದು ಅಮೂಲ್ಯ ಮತ್ತು ಐತಿಹಾಸಿಕ ಆದೇಶವನ್ನು ಮಾಡಲಾಗಿದೆ ಎಂದಿದ್ದಾರೆ.
ತುಮಕೂರು ತಾಲ್ಲೂಕಿನ ಗೂಳೂರು ಹೋಬಳಿಯ ಕೊಂಡಾಪುರ ಹಾಗೂ ಕಲ್ಲುಮಠ ಗ್ರಾಮದಲ್ಲಿ ವಶಪಡಿಸಿಕೊಳ್ಳಲಾಗಿರುವ ಈ ಅಮೂಲ್ಯ ಸರ್ಕಾರಿ ಭೂಮಿಯನ್ನು ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಿ, ಶಿಕ್ಷಣ, ಆರೋಗ್ಯ, ಕ್ರೀಡೆ, ಪರಿಸರ ಸಂರಕ್ಷಣೆ ಸೇರಿದಂತೆ ಜನೋಪಯೋಗಿ ಮೂಲಸೌಕರ್ಯಗಳು ಅಥವಾ ಇತರೆ ದೀರ್ಘಕಾಲಿಕ ಅಭಿವೃದ್ಧಿ ಯೋಜನೆಗಳಿಗೆ ಬಳಸುವ ಮೂಲಕ ಮುಂದಿನ ಹಲವು ಪೀಳಿಗೆಗಳಿಗೂ ಶಾಶ್ವತ ಪ್ರಯೋಜನವನ್ನು ಒದಗಿಸಲು ಅನುಕೂಲವಾಗಿದೆ. ಈ ಭೂಮಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಮತ್ತು ಜನಕಲ್ಯಾಣವನ್ನು ಪ್ರತಿಬಿಂಬಿಸುವ ಯೋಜನೆಗಳು ಸಾಕಾರಗೊಂಡಾಗ ಮಾತ್ರ ಸರ್ಕಾರದ ವಶಕ್ಕೆ ಭೂಮಿಯನ್ನು ಮರಳಿ ಪಡೆಯುವ ಈ ಕಾರ್ಯಾಚರಣೆಯ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
