ತುಮಕೂರು ನ್ಯೂಸ್.ಇನ್(ಜೂ.16):
ಜಿಲ್ಲೆಯಲ್ಲಿ ಮಂಗಳವಾರ ಸಿರಾ ನಗರದ ಕಚೇರಿ ಮೊಹಲ್ಲಾ ನಿವಾಸಿ 35 ವರ್ಷದ ಪುರುಷನೋರ್ವನಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಹೊಸ ಸೋಂಕಿತನು ಮೂಲತಃ ಭದ್ರಾವತಿಯವನಾಗಿದ್ದು, ಕಳೆದ 9 ತಿಂಗಳಿನಿಂದ ಸಿರಾ ಟೌನ್ ಕಚೇರಿ ಮೊಹಲ್ಲಾದಲ್ಲಿ ವಾಸವಾಗಿದ್ದನು. ಈತ, ಜೂ.11ರಂದು ಸೋಂಕು ಪತ್ತೆಯಾಗಿದ್ದ (ಪಿ 6400) ವ್ಯಕ್ತಿಯೊಂದಿಗೆ ಪ್ರಥಮ ಹಾಗೂ ಈತನ ಸಹೋದರ(ಪಿ 5813)ನೊಂದಿಗೆ ದ್ವಿತೀಯ ಸಂಪರ್ಕದಲ್ಲಿದ್ದನು. ಈ ಹಿನ್ನೆಲೆಯಲ್ಲಿ ಈತನನ್ನು ಹೋಂ ಕ್ವಾರಂಟೈನ್ನಲ್ಲಿರಿಸಿ ಜೂ.12ರಂದು ಕೋವಿಡ್ 19 ಪರೀಕ್ಷೆಗೆ ಒಳಪಡಿಸಲಾಗಿತ್ತು, ಅದರ ವರದಿ ಜೂ.15ರಂದು ಬಂದಿದ್ದು, ಕೋವಿಡ್ 19 ಸೋಂಕು ತಗಲಿರುವುದು ಪತ್ತೆಯಾಗಿದೆ. ಈತನ ಕುಟುಂಬ ಸದಸ್ಯರು ಭದ್ರಾವತಿಯಲ್ಲಿ ವಾಸವಿದ್ದು, ಈತ ಒಬ್ಬನೇ ಸಿರಾದಲ್ಲಿ ನೆಲೆಸಿದ್ದನು, ಈ ಹಿನ್ನೆಲೆಯಲ್ಲಿ ಈತನಿಂದ ಕುಟುಂಬ ಸದಸ್ಯರಿಗೆ ಸೋಂಕು ಹರಡುವ ಆತಂಕವಿಲ್ಲ. ಆದರೆ ಈತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಚೇರಿ ಮೊಹಲ್ಲಾದ 14 ಜನರನ್ನು ಕ್ವಾರಂಟೈನ್ನಲ್ಲಿಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 42 ಜನರಿಗೆ ಕೋವಿಡ್ 19 ಸೋಂಕು ತಗಲಿದ್ದು, 31 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ರಿಸ್ಚಾರ್ಜ್ ಆಗಿದ್ದಾರೆ, ಇಬ್ಬರು ಮೃತಪಟ್ಟಿದ್ದಾರೆ, ಉಳಿದ 9 ಮಂದಿ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
+ There are no comments
Add yours