ತುಮಕೂರು ನ್ಯೂಸ್. ಇನ್
Tumkurnews.in
ರಾಬರಿಯಾಗಿದೆ ಎಂದು ಕಥೆ ಕಟ್ಟಿ ಬ್ಯಾಂಕಿನ 7.53 ಲಕ್ಷ ರೂ.ಗಳನ್ನು ಲಪಾಟಿಯಿಸಿದ್ದ ಕೋಟೆಕ್ ಮಹೇಂದ್ರ ಬ್ಯಾಂಕಿನ ರಿಕವರಿ ಎಕ್ಸಿಕ್ಯುಟೀವ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 15 ರಂದು ರಾತ್ರಿ 10.30ರ ಸಮಯದಲ್ಲಿ ಶಿರಾ ತಾಲ್ಲೂಕಿನ ಚಿಕ್ಕದಾಸರ ಹಳ್ಳಿಯವನಾದ ಕೋಟೆಕ್ ಮಹೇಂದ್ರ ಬ್ಯಾಂಕಿನ ರಿಕವರಿ ಎಕ್ಸಿಕ್ಯುಟೀವ್ ನಟರಾಜು.ಸಿ ಎಂಬಾತ ರಾಬರಿ ಕಥೆ ಕಟ್ಟಿ ಪೊಲೀಸರಿಗೆ ದೂರು ನೀಡಿದ್ದನು.
‘ಅಂದು ರಾತ್ರಿ 7.30ರ ಸಮಯದಲ್ಲಿ ಬ್ಯಾಂಕಿನ ರಿಕವರಿ ಮೊತ್ತ 7.53 ಲಕ್ಷ ರೂ.ಗಳನ್ನು ತನ್ನ ಬ್ಯಾಗಿನಲ್ಲಿಟ್ಟುಕೊಂಡು ಯರಗುಂಟೆ ಗೇಟ್ ನಿಂದ ಶಿರಾ ಕಡೆಗೆ ಬರುವಾಗ, ಉಲ್ಲಾಸ್ ತೋಪಿನ ಬಳಿ ಯಾರೋ ಇಬ್ಬರು ಅಪರಿಚಿತರು ಕಣ್ಣಿಗೆ ಕಾರದ ಪುಡಿಯನ್ನು ಎರಚಿ, ಕಬ್ಬಿಣದ ಚೈನ್ ನಿಂದ ಹೊಡೆದು, ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ’ ಎಂದು ಶಿರಾ ಪೊಲೀಸರಿಗೆ ದೂರು ನೀಡಿದ್ದನು.
*
ತನಿಖೆ ಆರಂಭಿಸಿದ ತಂಡ:
ಪ್ರಕರಣದ ಆರೋಪಿಗಳು ಮತ್ತು ಕಳವು ಹಣವನ್ನು ಪತ್ತೆ ಮಾಡಲು ಹನುಮಂತಪ್ಪ.ಪಿ.ಬಿ, ಪಿ.ಐ, ಶಿರಾ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ ತನಿಖೆ ಆರಂಭಿಸಿದ ಪೊಲೀಸರು ಅತೀ ಶೀಘ್ರದಲ್ಲೇ ತಮ್ಮ ಗುರಿ ಮುಟ್ಟಿದ್ದರು.
ಬ್ಯಾಂಕಿನ ಗ್ರಾಹಕ ಚಿದಾನಂದ ಮತ್ತು ಆರೋಪಿಗಳಾದ ನಟರಾಜು.ಸಿ ಹಾಗೂ ಸ್ನೇಹಿತ ಅಶೋಕ.ಬಿ.ಹೆಚ್, ಎಂಬುವರನ್ನು ವಿಚಾರಣೆ ಮಾಡಿದಾಗ ಪ್ರಕರಣ ಟ್ವಿಸ್ಟ್ ಪಡೆದುಕೊಂಡು ಪೊಲೀಸರಿಗೆ ದೂರು ಕೊಟ್ಟವನ ಕಡೆಗೇ ತಿರುಗಿಕೊಂಡಿತು.
ಪೊಲೀಸರು ತಾಂತ್ರಿಕವಾಗಿ ತನಿಖೆ ಮಾಡಿ ವಿಚಾರಣೆ ನಡೆಸಿದಾಗ ದೂರು ಕೊಟ್ಟವನು ಸೇರಿ ಇಬ್ಬರು ಆರೋಪಿಗಳು ತಾವೇ ಹಣವನ್ನು ತೆಗೆದುಕೊಂಡು ಹೋಗಿ ಬಚ್ಚಿಟ್ಟು, ರಾಬರಿಯಾದಂತೆ ಘಟನೆಯನ್ನು ಸೃಷ್ಠಿ ಮಾಡಿ, ಪೊಲೀಸ್ ಠಾಣೆಗೆ ದೂರು ಕೊಟ್ಟಿರುವುದಾಗಿ ಬಾಯಿ ಬಿಟ್ಟರು.
ಆರೋಪಿಗಳು ಬಚ್ಚಿಟ್ಟಿದ್ದ 7,53,000 ರೂ. ಹಣ ಹಾಗೂ ಕೃತ್ಯಕ್ಕೆ ಬಳಸಿದ ಎರಡು ಮೋಟಾರ್ ಸೈಕಲ್ ಗಳು, 03 ಮೊಬೈಲ್ ಗಳು, ಒಂದು ಸೈಕಲ್ ಚೈನ್, ಹಾಗೂ ಖಾರದಪುಡಿಯ ಪ್ಲಾಸ್ಟಿಕ್ ಕವರ್ ಮತ್ತು ಬಾಕ್ಸ್ ಅನ್ನು ಪೊಲೀಸರು ಅಮಾನತ್ತುಪಡಿಸಿ ಕಾನೂನು ರೀತ್ಯಾ ಕ್ರಮ ಕೈಗೊಂಡಿದ್ದಾರೆ.
*
ಬಂಧಿತ ಆರೋಪಿಗಳ ಹೆಸರು ಮತ್ತು ವಿಳಾಸ:
1) ನಟರಾಜು.ಸಿ ಬಿನ್ ಚಿಕ್ಕಣ್ಣ, 31 ವರ್ಷ, ಕೋಟೆಕ್ ಮಹೇಂದ್ರ ಬ್ಯಾಂಕ್ ನಲ್ಲಿ ರಿಕವರಿ ಎಕ್ಸಿಕ್ಯೂಟಿವ್, ಚಿಕ್ಕದಾಸರಹಳ್ಳಿ, ಕಳ್ಳಂಬೆಳ್ಳ ಹೋಬಳಿ, ಶಿರಾ ತಾಲ್ಲೂಕ್, ತುಮಕೂರು ಜಿಲ್ಲೆ.
2) ಅಶೋಕ.ಬಿ.ಹೆಚ್ ಬಿನ್ ಹುಚ್ಚವೀರಪ್ಪ, 32 ವರ್ಷ, ವ್ಯವಸಾಯ, ಭೂಪಸಂದ್ರ, ಕಳ್ಳಂಬೆಳ್ಳ ಹೋಬಳಿ, ಶಿರಾ ತಾಲ್ಲೂಕ್, ತುಮಕೂರು ಜಿಲ್ಲೆ.
*
ಭೇಷ್ ಎಂದ ಎಸ್ಪಿ:
ಸದರಿ ಪ್ರಕರಣದ ಆರೋಪಿ ಮತ್ತು ಕಳವು ಹಣವನ್ನು ವಶಪಡಿಸಿಕೊಳ್ಳಲು ಶ್ರಮಿಸಿದ ಉದೇಶ್, ಕೆ.ಎಸ್.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಕುಮಾರಪ್ಪ.ಎಲ್ ಡಿ.ಎಸ್.ಪಿ, ಶಿರಾ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ, ಹನುಮಂತಪ್ಪ.ಪಿ.ಬಿ, ಪಿ.ಐ, ಶಿರಾ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಭಾರತಿ ಎಸ್.ಸಿ ಪಿ.ಎಸ್,ಐ, ಸಿಬ್ಬಂದಿಗಳಾದ ನಾಗರಾಜು, ರಂಗನಾಥ, ನಂಜೇಗೌಡ, ಶಿವಕುಮಾರ, ಮಂಜುನಾಥ ಸ್ವಾಮಿ ಕೆ.ಬಿ, ಗೋಪಿನಾಥ, ನಾಗರಾಜು, ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ನರಸಿಂಹರಾಜು ರವರುಗಳ ತಂಡವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಐ.ಪಿ.ಎಸ್. ರವರು ಅಭಿನಂದಿಸಿದ್ದಾರೆ.
+ There are no comments
Add yours