ಅಮಾನಿಕೆರೆ ಪಾರ್ಕ್ನಲ್ಲಿ 500 ಟಬೂಬಿಯಾ ಗಿಡ
‘ಸಸಿ ಸಂಕಲ್ಪ 2026’ ಕಾರ್ಯಕ್ರಮದಲ್ಲಿ ಡಿಸಿಎಂ ಜಿ.ಪರಮೇಶ್ವರ ಚಾಲನೆ
-ಅಕ್ಕ ತಂಗಿ ಕೆರೆ ಪಾರ್ಕ್ ಅಭಿವೃದ್ಧಿಗೂ ಸೂಚನೆ
Tumkur news
ತುಮಕೂರು: ನಗರದ ಐತಿಹಾಸಿಕ ‘ಅಕ್ಕ ತಂಗಿ ಕೆರೆ’ಯನ್ನು ಸ್ವಚ್ಛಗೊಳಿಸಿ, ಕೆರೆ ಬಳಿ ಸುಂದರವಾದ ಉದ್ಯಾನವನ ಅಭಿವೃದ್ಧಿ ಮಾಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ತುಮಕೂರು ಜಿಲ್ಲಾಡಳಿತ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಅಮಾನಿಕೆರೆ ಪಾರ್ಕ್ನಲ್ಲಿ ಭಾನುವಾರ ಆಯೋಜಿಸಿದ್ದ “ಸಸಿ ಸಂಕಲ್ಪ 2026” ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಟಬೂಬಿಯಾ ಗಿಡ ನೆಟ್ಟು ಅವರು ಮಾತನಾಡಿದರು.
ತುಮಕೂರು ಜಿಲ್ಲಾಡಳಿತ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಅಮಾನಿಕೆರೆ ಪಾರ್ಕ್ನಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆ ಪ್ರಯುಕ್ತ “ಸಸಿ ಸಂಕಲ್ಪ 2026” ಕಾರ್ಯಕ್ರಮದಲ್ಲಿ ಟಬೂಬಿಯಾ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.
ಯಾವುದೇ ಒಂದು ಸ್ಥಳ ಸುಂದರವಾಗಬೇಕು ಎಂದರೆ ಅದಕ್ಕೆ ಪೂರಕವಾದ ಪ್ರಯತ್ನ ಮಾಡಬೇಕು. ತುಮಕೂರಿನ ಅಮಾನಿಕೆರೆ ಕೊಳಚೆ ನೀರಿನಿಂದ ಶುಚಿತ್ವ ಕಳೆದುಕೊಂಡು ಹಾಳಾಗಿತ್ತು. ಐತಿಹಾಸಿಕ ಕೆರೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿತ್ತು. ಕೆರೆಯನ್ನು ಶುದ್ಧಗೊಳಿಸಿ, ಜಿಪ್ಲೈನ್, ಕಯಾಕಿಂಗ್, ಬೋಟಿಂಗ್ ವ್ಯವಸ್ಥೆಯನ್ನು ಮಾಡಿ ತುಮಕೂರಿನ ಜನತೆಗೆ ಅವಕಾಶ ಮಾಡಿಕೊಡಲಾಗಿದೆ. ನಗರದ ಜನರ ವಾಯುವಿಹಾರಕ್ಕೆ ಅನುಕೂಲವಾಗಿದೆ ಎಂದು ಹೇಳಿದರು.
ಅಮಾನಿಕೆರೆಯಲ್ಲಿ ಇರುವಷ್ಟು ದೊಡ್ಡಮಟ್ಟದ ಪಾದಚಾರಿ ವ್ಯವಸ್ಥೆ ಬೇರೆ ಯಾವ ಕೆರೆಗಳಲ್ಲೂ ಇರಲಿಲ್ಲ. ನಮ್ಮ ಪೂರ್ವಜರು ನಮಗಾಗಿ ಕೆರೆ ಕಟ್ಟಿಸಿ ಹೋಗಿದ್ದಾರೆ. ಮುಂದಿನ ಪೀಳಿಗೆಗಾಗಿ, ಜೀವ ಸಂಕುಲ ಮತ್ತು ಅಂತರ್ಜಲ ವೃದ್ಧಿಗಾಗಿ ಕೆರೆಯನ್ನು ಉಳಿಸಿಕೊಂಡು ಹೋಗಬೇಕಿದೆ. ಅಮಾನಿಕೆರೆ ಪಾರ್ಕ್ನಲ್ಲಿ 500 ಟಬೂಬಿಯಾ ಗಿಡಗಳನ್ನು ನೆಡಲಾಗುತ್ತಿದೆ. ಚಳಿಗಾಲದ ಸಂದರ್ಭದಲ್ಲಿ ತಬೂಬಿಯಾ ಹೂ ಬಿಡುವುದರಿಂದ ಕೆರೆಯ ಸುತ್ತಮುತ್ತಲಿನ ವಾತಾವರಣ ಮತ್ತಷ್ಟು ಸುಂದರವಾಗಿಸಲಿದೆ. ಗಿಡಗಳನ್ನು ಉಳಿಸಿ, ಬೆಳೆಸಲು, ಎಲ್ಲರ ಸಹಕಾರ ಅವಶ್ಯ ಎಂದರು.
ಜಿಲ್ಲೆಯ ಎಲ್ಲ ರಸ್ತೆ ಬದಿಯಲ್ಲಿ ಹೆಚ್ಚಿನ ಗಿಡಗಳನ್ನು ನೆಡಬೇಕು. ಇದರಿಂದ ಹಸಿರು ಪದರ ಹೆಚ್ಚಾಗಿ, ಪರಿಸರ ವ್ಯವಸ್ಥೆ ಉತ್ತಮವಾಗಲಿದೆ. ಗಿಡಗಳನ್ನು ಹಾಕಿ ಉಳಿಸುವ ಕೆಲಸ ಮುಖ್ಯವಾಗಬೇಕು. ನಮ್ಮ ಪೂರ್ವಜರು ರಸ್ತೆ ಬದಿ ಆಲದ ಮರ ಹಾಕುತ್ತಿದ್ದರು. ಆಗಿನ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥೆ ಇರಲಿಲ್ಲ. ಎತ್ತಿನ ಗಾಡಿ, ನಡೆದುಕೊಂಡೇ ಹೋಗಬೇಕಿತ್ತು. ಅಂಥವರಿಗೆ ನೆರಳು ಇರಲಿ ಎಂಬ ಉದ್ದೇಶದಿಂದ ಹಾಕುತ್ತಿದ್ದರು. ಮರಗಳು ಬೆಳೆದರೆ ಹಕ್ಕಿಗಳು ಬರುತ್ತವೆ. ಪರಿಸರವೂ ಉತ್ತಮವಾಗುವುದರಿಂದ ತಾಪಮಾನ ಕಡಿಮೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಬಿ.ವಿ.ಅಶ್ವಿಜಾ, ಮಹಾನಗರ ಪಾಲಿಕೆ ಅಯುಕ್ತೆ ಶುಭ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಅಯುಕ್ತ ಉಮೇಶ್ ಚಂದ್ರ ಕೆ.ಎನ್ ಮುಂತಾದವರು ಉಪಸ್ಥಿತರಿದ್ದರು.
