ತುಮಕೂರು: ಸಾಮಾನ್ಯವಾಗಿ ಗ್ರಾಮೀಣ ಭಾಗದ ರೈತರು ತಮ್ಮ ಅಹವಾಲುಗಳನ್ನು ಕನ್ನಡದಲ್ಲೇ ಸಲ್ಲಿಸುವುದು ರೂಢಿ. ಆದರೆ ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿಯಲ್ಲಿ ವಯೋವೃದ್ಧ ರೈತರೊಬ್ಬರು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾರೆ.
https://www.facebook.com/share/v/15o2GAwmg8c/
ತಾಲೂಕು ಕಚೇರಿಗೆ ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಬಂದಿದ್ದ ರೈತ ಮೊದಲು ಕನ್ನಡದಲ್ಲಿ ಅಹವಾಲು ಮಂಡಿಸಿ, ಬಳಿಕ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತನಾಡಲು ಆರಂಭಿಸಿದರು. ರೈತನ ಭಾಷಾ ಪಾಂಡಿತ್ಯ ಮತ್ತು ಆತ್ಮವಿಶ್ವಾಸ ಕಂಡು ಅಲ್ಲಿದ್ದ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಶಾಸಕ ಸಿ.ಬಿ. ಸುರೇಶ್ ಬಾಬು ಅಚ್ಚರಿ ವ್ಯಕ್ತಪಡಿಸಿದರು.
ರೈತನ ಮಾತುಗಳನ್ನು ಗಮನದಿಂದ ಆಲಿಸಿದ ಶಾಸಕರು, ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ. ಈ ವೇಳೆ ಅಲ್ಲಿದ್ದ ಕೆಲವರು ರೈತನ ಭಾಷಣವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“ಗ್ರಾಮೀಣ ಪ್ರತಿಭೆ ಯಾರಿಗಿಂತಲೂ ಕಡಿಮೆ ಇಲ್ಲ”, “ರೈತನ ಜ್ಞಾನಕ್ಕೆ ಸಲಾಂ” ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿಯ ಈ ಘಟನೆ ಇದೀಗ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
