ಇಂದಿರಾಗಾಂಧಿ ನಂತರ ಯಾರಾದರೂ ಮಾಸ್ ಲೀಡರ್ ಇದ್ದರೇ, ಅದು ನರೇಂದ್ರ ಮೋದಿ ಮಾತ್ರ!; ಹಾಡಿ ಹೊಗಳಿದ ಕಾಂಗ್ರೆಸ್ ಶಾಸಕ
ಇಂದಿರಾಗಾಂಧಿ ನಂತರ ಯಾರಾದರೂ ಮಾಸ್ ಲೀಡರ್, ಜನರನ್ನು ಆಕರ್ಷಿಸುವ ನಾಯಕರಿದ್ದರೆ ಅದು ನರೇಂದ್ರ ಮೋದಿ ಮಾತ್ರ; ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಕೆ.ಎನ್.ರಾಜಣ್ಣ ಅಚ್ಚರಿಯ ಹೇಳಿಕೆ
Tumkur news
ಮಧುಗಿರಿ: ಇಂದಿರಾಗಾಂಧಿ ನಂತರ ಯಾರಾದರೂ ಮಾಸ್ ಲೀಡರ್, ಜನರನ್ನು ಆಕರ್ಷಿಸುವ ನಾಯಕರಿದ್ದರೆ ಅದು ನರೇಂದ್ರ ಮೋದಿ ಮಾತ್ರ ಎಂದು ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು. ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಗಾಂಧಿಯವರ ನಂತರ ಮಾಸ್ ಲೀಡರ್ ಅಂತ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿನೇ. ಹಾಗಂತ ನಾನು ಮೋದಿಯವರನ್ನು ಹೊಗಳುತ್ತಿಲ್ಲ, ವಾಸ್ತವ ಹೇಳುತ್ತಿದ್ದೇನೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.
ರಾಜಕಾರಣದಲ್ಲಿ ಪಾಪುಲಾರಿಟಿ ಯಾರಿಗೂ ಶಾಶ್ವತವಲ್ಲ. ಅದನ್ನು ಮೊದಲು ಅವರು ಅರಿಯಬೇಕು. ಈ ಹಿಂದೆ ಇಂದಿರಾಗಾಂಧಿಯವರ ಹೆಸರು ಹೇಳಿಕೊಂಡೇ 200 ಜನ ಎಂಪಿಗಳು ಗೆಲ್ಲುತ್ತಿದ್ದರು. ಆದರೆ ಅವರೇ ಪರಿಸ್ಥಿತಿಯ ಒತ್ತಡಗಳಿಗೆ ಸಿಲುಕಿ ಸ್ವಯಂ ಸೋಲು ಅನುಭವಿಸಬೇಕಾಯಿತು ಎಂದರು.
‘ನೀವು ಮೋದಿಯನ್ನು ಹೊಗಳಬಿಟ್ಟವ್ನೇ’ ಅಂತ ಬರೆದರೆ ನಮ್ಮವರೆಲ್ಲ ನನ್ನ ಮೇಲೆ ಕಣ್ಣು ಕೆಂಪಗೆ ಮಾಡ್ಕೋತಾರೆ. ನಾನು ವಾಸ್ತವಾಂಶವನ್ನ ಹೇಳುವವನು. ಮೋದಿ ಈಗ ಆಕಾಶದಲ್ಲಿ ಇದ್ದಾರೆ, ಭೂಮಿಗೆ ಬಂದಾಗ ಕಷ್ಟ, ಸುಖ ಎನು ಅಂತ ಗೊತ್ತಾಗುತ್ತೆ ಎಂದರು.
