ವಕ್ಕಲಿಗರ ಸಂಘದಲ್ಲಿ ಒಡಕು; 10 ವರ್ಷದಿಂದ ಸದಸ್ಯತ್ವ ನೀಡದ ಸಂಘದ ವಿರುದ್ಧ ಪ್ರತಿಭಟನೆ

1 min read

 

Tumkurnews
ತುಮಕೂರು; ಜಿಲ್ಲಾ ವಕ್ಕಲಿಗರ ಸಂಘದ ಆಡಳಿತಾಧಿಕಾರಿ ಚುನಾವಣಾ ವಿಚಾರದಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದು, ಕೂಡಲೇ ಅವರನ್ನು ವಜಾ ಮಾಡಬೇಕು ಹಾಗೂ ಷೇರು ಹಣ ಕಟ್ಟಿರುವ ಎಲ್ಲರಿಗೂ ಸದಸ್ಯತ್ವ ನೀಡಿ, ಮತದಾನಕ್ಕೆ ಅವಕಾಶ ಕಲ್ಪಿಸಿ ಚುನಾವಣೆ ನಡೆಸಬೇಕು ಎಂದು ವಕ್ಕಲಿಗ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ತುಮಕೂರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಹಿಮಾಲಯದಿಂದ ರಾಜ್ಯಕ್ಕೆ ಬಂದ ಚಳಿಗಾಲದ ಅತಿಥಿ; ಪಕ್ಷಿ ಪ್ರಿಯರಲ್ಲಿ ಸಂಭ್ರಮ
ಏನಿದು ವಿವಾದ?; ವಕ್ಕಲಿಗ ಮುಖಂಡ ಬ್ಯಾಟರಂಗೇಗೌಡ ನೀಡಿರುವ ಹೇಳಿಕೆಯಂತೆ, ತುಮಕೂರು ಜಿಲ್ಲಾ ವಕ್ಕಲಿಗರ ಸಂಘದ ಆಡಳಿತಾವಧಿ 2022ರ ಮಾರ್ಚ್ 31ಕ್ಕೆ ಪೂರ್ಣಗೊಂಡಿದ್ದು, ಸಹಕಾರ ಇಲಾಖೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ. ಆದರೆ ನಿಗದಿತ ಅವಧಿಯೊಳಗೆ ಚುನಾವಣೆ ನಡೆಸದ ಕಾರಣ ಕರ್ನಾಟಕ ಹೈಕೋರ್ಟ್ ಸದರಿ ಆಡಳಿತಾಧಿಕಾರಿಗಳಿಗೆ ನಿಗದಿತ ಅವಧಿಯೊಳಗೆ ಚುನಾವಣೆ ನಡೆಸುವಂತೆ ಆದೇಶ ಮಾಡಿದೆ.
ಹೈಕೋರ್ಟಿನ ಆದೇಶವನ್ನು ನೆಪವಾಗಿಟ್ಟುಕೊಂಡು 2008-09ನೇ ಸಾಲಿನಿಂದಲೂ ಸುಮಾರು 22 ಸಾವಿರ ಜನರು ಷೇರು ಹಣ ಹೂಡಿಕೆ ಮಾಡಿ, ಸದಸ್ಯತ್ವಕ್ಕಾಗಿ ಕಾಯುತಿದ್ದರೂ, ಅವರಿಗೆ ಸದಸ್ಯತ್ವ ನೀಡಿಲ್ಲ. ಕೆಲವು ವ್ಯಕ್ತಿಗಳ ಕಡೆಯಿಂದ ಶಿಫಾರಸ್ಸಾಗಿ ಇತ್ತೀಚೆಗೆ ಷೇರು ಶುಲ್ಕ ತುಂಬಿರುವ 500 ಜನರಿಗೆ ಮಾತ್ರ ಸದಸ್ಯತ್ವ ನೀಡಿ, ಅವರನ್ನೇ ಮತದಾರರೆಂದು ಘೋಷಿಸಿ, ಚುನಾವಣೆ ನಡೆಸಲು ಮುಂದಾಗಿದ್ದಾರೆ. ಆಡಳಿತಾಧಿಕಾರಿ ನಡೆ ಪಕ್ಷಪಾತದಿಂದ ಕೂಡಿದೆ. ಈ ಬಗ್ಗೆ ಸಹಕಾರ ಇಲಾಖೆಯ ಪ್ರಬಂಧಕರಿಗೆ ಮನವಿ ಮಾಡಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ನಿಯಮ ಮೀರಿ ಚುನಾವಣೆ ನಡೆಸಲು ವಕ್ಕಲಿಗರ ಸಂಘದ ಆಡಳಿತಾಧಿಕಾರಿಗೆ ಅವಕಾಶ ನೀಡಲಾಗಿದೆ. ಹಾಗಾಗಿ ಕೂಡಲೇ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಳಿಸಿ, ಈಗಾಗಲೇ ಷೇರು ಬಂಡವಾಳ ಹೂಡಿ, ಸದಸ್ಯತ್ವಕ್ಕೆ ಕಾಯುತ್ತಿರುವ 22 ಸಾವಿರ ಜನರಿಗೂ ಸದಸ್ಯತ್ವ ನೀಡಿ, ಮತದಾರರಾಗಿ ಪರಿಗಣಿಸಿ ಚುನಾವಣೆ ನಡೆಸಬೇಕು ಎನ್ನುವುದು ಬ್ಯಾಟರಂಗೇಗೌಡ ಅವರ ಆಗ್ರಹ.
ಬೆಳ್ಳಿ ಬ್ಲಡ್ ಬ್ಯಾಂಕ್‍ನ ಬೆಳ್ಳಿ ಲೋಕೇಶ್ ಮಾತನಾಡಿ, ವಕ್ಕಲಿಗರ ಸಂಘದ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ವ್ಯಕ್ತಿ ಕೆಲವರ ಕೈಗೊಂಬೆಯಂತೆ ವರ್ತಿಸುತ್ತಿದ್ದು, ಮತದಾರರ ಕರಡು ಪಟ್ಟಿಗೆ ಸುಮಾರು 125ಕ್ಕೂ ಹೆಚ್ಚು ಅಕ್ಷೇಪಣೆಗಳನ್ನು ಸಲ್ಲಿಸಿದ್ದರೂ ಒಂದಕ್ಕೂ ಉತ್ತರ ನೀಡಿಲ್ಲ. ನ್ಯಾಯಾಲಯ ನಿಗದಿ ಪಡಿಸಿದ್ದ ಅವಧಿ ಮುಗಿಯುತ್ತಾ ಬಂದಿದ್ದರೂ, ನ್ಯಾಯಲಯಕ್ಕೆ ಹೆಚ್ಚಿನ ಕಾಲಾವಕಾಶಕ್ಕೆ ಅರ್ಜಿ ಸಲ್ಲಿಸದೆ ಮೀನಾಮೇಷ ಎಣಿಸುತ್ತಿದ್ದಾರೆ. ಇದರಿಂದ ಕಳೆದ 10-12 ವರ್ಷಗಳಿಂದ ಸದಸ್ಯತ್ವಕ್ಕಾಗಿ ಷೇರು ಹಾಕಿ ಕಾಯುತ್ತಿರುವ ಆರ್ಹ ಒಕ್ಕಲಿಗ ಜನಾಂಗದ ವ್ಯಕ್ತಿಗಳಿಗೆ ಅನ್ಯಾಯವಾಗಲಿದೆ. ಹಾಗಾಗಿ ಕೂಡಲೇ ಆಡಳಿತಾಧಿಕಾರಿಯನ್ನು ವಜಾ ಮಾಡಿ, ಬೇರೊಬ್ಬರನ್ನು ನೇಮಕ ಮಾಡಿ, ಚುನಾವಣಾ ಪ್ರಕ್ರಿಯೆಯನ್ನು ಮೊದಲಿನಿಂದ ಪ್ರಾರಂಭಿಸಬೇಕು. ಆರ್ಹರಿಗೆ ಸದಸ್ಯತ್ವ ನೀಡಿ, ಅವರಿಗೂ ಮತ ಹಾಕುವ ಹಕ್ಕು ನೀಡಿದ ನಂತರವೇ ಚುನಾವಣೆ ಪ್ರಕ್ರಿಯೆ ಆರಂಭಿಸಬೇಕೆಂದು ಆಗ್ರಹಿಸಿದರು.
ಡಿ.ಆರ್ ಮತ್ತು ವಕ್ಕಲಿಗ ಮುಖಂಡರ ನಡುವೆ ವಾಗ್ವಾದ; ವಕ್ಕಲಿಗ ಮುಖಂಡರ ಒತ್ತಾಯದಂತೆ ಮನವಿ ಸ್ವೀಕರಿಸಲು ತುಮಕೂರು ಉಪವಿಭಾಗಾಧಿಕಾರಿ ಅಜಯ್ ಅವರೊಂದಿಗೆ ಆಗಮಿಸಿದ, ಸಹಕಾರ ಇಲಾಖೆಯ ಡಿ.ಆರ್. ಎನ್.ವೆಂಕಟೇಶ್ ಅವರೊಂದಿಗೆ ವಾಗ್ವಾದಕ್ಕೆ ಇಳಿದ ವಕ್ಕಲಿಗ ಮುಖಂಡರು, ಆಡಳಿತಾಧಿಕಾರಿಗಳೊಂದಿಗೆ ನೀವು ಸಹ ಸೇರಿ ಆರ್ಹರಿಗೆ ಸದಸ್ಯತ್ವ ನೀಡದೆ ಅನ್ಯಾಯ ಮಾಡುತ್ತಿದ್ದೀರಿ, ಮೊದಲು ಆಡಳಿತಾಧಿಕಾರಿಯನ್ನು ವಜಾಗೊಳಿಸಿ ಎಂದು ಒತ್ತಾಯಿಸಿದರು. ಈ ವೇಳೆ ಕೆಲ ಕಾಲ ಅಧಿಕಾರಿಯೊಂದಿಗೆ ಜೋರು ಮಾತಿನಲ್ಲಿಯೇ ವಾಗ್ವಾದಕ್ಕಿಳಿದರು. ಉಪವಿಭಾಗಾಧಿಕಾರಿ ಅಜಯ್ ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಿ, ಮುಂದಿನ ಎರಡು ದಿನದಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳು ಮತ್ತು ವಕ್ಕಲಿಗ ಮುಖಂಡರು ಸಭೆ ಕರೆದು ಚರ್ಚೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಭರವಸೆ ನೀಡಿದರು.
ಉಪವಿಭಾಗಾಧಿಕಾರಿಗಳ ಭರವಸೆಯ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ದೇವಪ್ರಕಾಶ್, ವಕೀಲರಾದ ರವಿಗೌಡ, ಚಿಕ್ಕರಂಗಣ್ಣ, ಕೆಂಪರಾಜು, ಕೈದಾಳ ರಮೇಶ್, ಸತ್ಯಪ್ಪ, ವಿಜಯಕುಮಾರ್, ಮಂಜುನಾಥಗೌಡ, ಪಾಲಿಕೆ ದಸ್ಯರಾದ ಧರಣೇಂದ್ರಕುಮಾರ್, ಶ್ರೀನಿವಾಸಕುಮಾರ್, ಮನೋಹರಗೌಡ, ಲಕ್ಕೇಗೌಡ, ಕುಣಿಗಲ್ ಶ್ರೀನಿವಾಸಗೌಡ, ಚಿಕ್ಕಸಾರಂಗಿ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

About The Author

You May Also Like

More From Author

+ There are no comments

Add yours