ಹಂದಿ ಮೇಯಿಸಲು ನಗರದಲ್ಲಿ 4 ಎಕರೆ ಮೀಸಲಿಗೆ ಪಾಲಿಕೆ ನಿರ್ಧಾರ

1 min read

ತುಮಕೂರು ನ್ಯೂಸ್.ಇನ್(ಜೂ.19)
ನಗರದ ಹೊರವಲಯದ ಅಜ್ಜಗೊಂಡನಹಳ್ಳಿಯಲ್ಲಿರುವ ಪಾಲಿಕೆಯ ಕಸ ಸುರಿಯುವ 40 ಎಕರೆ ಜಾಗದಲ್ಲಿ ತಾತ್ಕಾಲಿಕವಾಗಿ ಹಂದಿ ಸಾಕಾಣಿಕೆಗೆ ಹಾಗೂ 4 ಎಕರೆ ಪ್ರದೇಶದಲ್ಲಿ ಹಂದಿಗಳನ್ನು ಮೇಯಿಸಲು ಜಾಗ ನೀಡಲು ಪಾಲಿಕೆ ತೀರ್ಮಾನಿಸಿದೆ.
ಮಹಾನಗರ ಪಾಲಿಕೆಯ ಮೇಯರ್ ರವರ ಕಚೇರಿಯಲ್ಲಿ ಮೇಯರ್ ಫರಿದಾ ಬೇಗಂರವರ ಅಧ್ಯಕ್ಷತೆಯಲ್ಲಿ ಹಂದಿ ಸಾಕುವವರ ಸಭೆ ಕರೆದು ಚರ್ಚಿಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಯಿತು. ಇತ್ತೀಚೆಗೆ ನಗರದಲ್ಲಿ ಬಿಡಾಡಿ ಹಂದಿಗಳ ಹಾವಳಿಯಿಂದ ಅಪಘಾತಗಳು ಹೆಚ್ಚುತ್ತಿದ್ದು, ನಾಗರಿಕರು ಅಪಘಾತಗಳಿಗೆ ಒಳಗಾಗಿ ತೀವ್ರ ಸಂಕಷ್ಟವನ್ನು ಎದುರಿಸುವಂತಾಗಿದೆ. ನಾಗರಿಕ ಸಮಿತಿಗಳು, ಮಹಾನಗರ ಪಾಲಿಕೆಯ ಸದಸ್ಯರ ದೂರುಗಳ ಹಿನ್ನೆಲೆಯಲ್ಲಿ ನಗರದಲ್ಲಿ ಹಂದಿ ಸಾಕುವವರ ಸಭೆ ಕರೆದು ಚರ್ಚಿಸಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಆಯುಕ್ತರು ಮತ್ತು ಮಹಾನಗರ ಪಾಲಿಕೆಯ ಸದಸ್ಯರು ಮತ್ತು ಹಂದಿಜೋಗರ ಜತೆ ಸಮಾಲೋಚನೆ ನಡೆಸಿದರು.
ಅಜ್ಜಗೊಂಡನಹಳ್ಳಿಯಲ್ಲಿ ನೀರಿನ ವ್ಯವಸ್ಥೆ, ವಿದ್ಯುಚ್ಛಕ್ತಿ, ಸೆಕ್ಯುರಿಟಿ ಸಹ ನೀಡಲು ಪಾಲಿಕೆ ಸಿದ್ಧವಿದೆ ಎಂದು ಮೇಯರ್ ಮತ್ತು ಆಯುಕ್ತರು ಹಂದಿ ಜೋಗರಿಗೆ ಭರವಸೆ ನೀಡಿದರು. ಪಾಲಿಕೆ ಸದಸ್ಯ ನಯಾಜ್ ಅಹಮದ್ ಮಾತನಾಡಿ, ಗುಬ್ಬಿ ಹತ್ತಿರ ಇರುವ ಗೋಶಾಲೆಯಂತೆ ಹಂದಿ ಸಾಕಾಣಿಕೆಗೆ ಜಾಗ ಗುರುತಿಸಿ ಒಂದೇ ಕಡೆ ಹಂದಿ ಇರುವಂತೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುವಂತೆ ಮೇಯರ್ ರವರಿಗೆ ಸಲಹೆ ನೀಡಿದರು.
ಶಾಶ್ವತ ನೆಲೆ ಕಲ್ಪಿಸಿ: ಹಂದಿಜೋಗರಿಗೆ ಅಣ್ಣೇನಹಳ್ಳಿಯಲ್ಲಿ ಸರ್ಕಾರವು ಗುರುತಿಸಿರುವ ಜಾಗದಲ್ಲಿ ಶಾಶ್ವತ ನೆಲೆ ಕಲ್ಪಿಸಿ ಎಂದು ಹಂದಿ ಜೋಗರ ಸಂಘದ ರಾಜ್ಯಾಧ್ಯಕ್ಷೆ ರಾಮಕ್ಕ, ಮೇಯರ್ ಮತ್ತು ಆಯುಕ್ತರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಶಾಶ್ವತ ನೆಲೆ ಕಲ್ಪಿಸಲು ಪಾಲಿಕೆಗೆ ಅಧಿಕಾರವಿಲ್ಲ. ಆ ಅಧಿಕಾರ ಇರುವುದು ಜಿಲ್ಲಾಧಿಕಾರಿಗಳಿಗೆ ಮಾತ್ರ ಎಂದು ಹೇಳಿದರು.
ಅಜ್ಜಗೊಂಡನಹಳ್ಳಿಗೆ ಭೇಟಿಗೆ ನಿರ್ಧಾರ: ಹಂದಿಜೋಗರೊಂದಿಗೆ ಮೇಯರ್, ಆಯುಕ್ತರು ಮತ್ತು ಮಹಾನಗರ ಪಾಲಿಕೆಯ ಸದಸ್ಯರು, ಅಧಿಕಾರಿಗಳೊಂದಿಗೆ ಸೋಮವಾರ ಅಜ್ಜಗೊಂಡನಹಳ್ಳಿಗೆ ಭೇಟಿ ನೀಡಿ ಅಲ್ಲಿರುವ ಜಾಗದ ಸ್ಥಿತಿಗತಿಯ ಬಗ್ಗೆ ಹಂದಿಜೋಗರಿಗೆ ವಿವರಿಸಿ, ಅವರಿಗೆ ತಾತ್ಕಲಿಕ ವ್ಯವಸ್ಥೆಗೆ ಅನುವು ಮಾಡಿಕೊಡಲಾಗುವುದು ಎಂದು ಮೇಯರ್ ಹೇಳಿದರು.
ಸಭೆಯಲ್ಲಿ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ, ಹಣಕಾಸು ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಟಿ.ಎಂ. ಮಹೇಶ್, ಎಸ್.ಮಂಜುನಾಥ್, ಜೆ.ಕುಮಾರ್, ಶಿವರಾಮು, ವಿಷ್ಣುವರ್ಧನ್, ಸುಧೀಶ್ವರ್, ಡಿವೈಎಸ್.ಪಿ.ತಿಪ್ಪೇಸ್ವಾಮಿ, ಡಾ. ನಾಗೇಶ್‍ಕುಮಾರ್, ಹಂದಿಜೋಗರ ನಗರ ಅಧ್ಯಕ್ಷ ಗೋಪಿ, ಮುಖಂಡರಾದ ಅರ್ಜುನ್, ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.

About The Author

You May Also Like

More From Author

+ There are no comments

Add yours