ಹುಳಿಯಾರಿನಲ್ಲಿ ಕನಕ ಸಮುದಾಯ ಭವನಕ್ಕೆ ಭೂಮಿಪೂಜೆ:
ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರೀ ಈಶ್ವರಾನಂದ ಪುರಿ ಶ್ರೀಗಳ ಕರೆ
Tumkur news
ಚಿಕ್ಕನಾಯಕನಹಳ್ಳಿ: ಹುಳಿಯಾರು ಪಟ್ಟಣದ ಬೀರದೇವರ ಕಟ್ಟೆ (ಮೂಲತಪೋ ಸುಕ್ಷೇತ್ರ) ಆವರಣದಲ್ಲಿ ಶ್ರೀ ಬೀರಲಿಂಗೇಶ್ವರ ಸ್ವಾಮಿ ಸೇವಾ ಛಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗುತ್ತಿರುವ ಕನಕ ಸಮುದಾಯ ಭವನಕ್ಕೆ ಕಾಗಿನೆಲೆ ಕನಕ ಗುರುಪೀಠದ ಕೆಲ್ಲೋಡು ಶಾಖಾಮಠದ ಶ್ರೀ ಈಶ್ವರಾನಂದ ಪುರಿ ಮಹಾಸ್ವಾಮಿಗಳು ಶಾಸಕ ಸಿ.ಬಿ.ಸುರೇಶ್ ಬಾಬು ಅವರೊಂದಿಗೆ ಭೂಮಿಪೂಜೆ ನೆರವೇರಿಸಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, ಮನುಷ್ಯ ತನ್ನ ವ್ಯಕ್ತಿತ್ವವನ್ನು ಹೂವಿನಂತೆ ಮೃದುವಾಗಿ ಹಾಗೂ ನೀರಿನಂತೆ ನಿರ್ಮಲವಾಗಿ ಇಟ್ಟುಕೊಳ್ಳಬೇಕು. ಸಮಾಜದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಅಹಂಕಾರ ಪಡದೆ, ಸರಳ ಸಜ್ಜನಿಕೆಯಿಂದ ಬದುಕುವುದೇ ನಿಜವಾದ ಧರ್ಮ ಎಂದರು.
ಸಾರ್ವಜನಿಕ ಜೀವನದಲ್ಲಿ ಇರುವವರು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕು. ಶಾಸಕ ಸಿ.ಬಿ. ಸುರೇಶ್ ಬಾಬು ಅವರು ಇಂತಹ ಗುಣಗಳನ್ನು ಹೊಂದಿದ್ದಾರೆ ಎಂದು ಶಾಸಕರ ಕಾರ್ಯವೈಖರಿಯನ್ನು ಶ್ಲಾಘಿಸಿದ ಶ್ರೀಗಳು, ಶಾಸಕರು ಸದಾ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಸರಳ ಸಜ್ಜನಿಕೆಯ ವ್ಯಕ್ತಿತ್ವದವರು. ಈ ಸಮುದಾಯ ಭವನದ ನಿರ್ಮಾಣಕ್ಕಾಗಿ ಅವರು ತಮ್ಮ ಅನುದಾನದಿಂದ 50 ಲಕ್ಷ ರೂ.ಗಳನ್ನು ನೀಡುವ ಮೂಲಕ ಸಮುದಾಯದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಈ ಅನುದಾನವು ಸಮಾಜದ ಬಡವರ ಮತ್ತು ಅವಶ್ಯಕತೆ ಇರುವವರ ಕಲ್ಯಾಣಕ್ಕಾಗಿ ಸದ್ಬಳಕೆಯಾಗಲಿ ಎಂದು ಶ್ರೀಗಳು ಹರಸಿದರು.
ಸಮುದಾಯ ಭವನಗಳು ಕೇವಲ ಒಂದು ಜಾತಿಗೆ ಅಥವಾ ವರ್ಗಕ್ಕೆ ಸೀಮಿತವಾಗಬಾರದು. ಇವು ಸಮಾಜದ ಸೌಹಾರ್ದತೆ ಮತ್ತು ಏಕತೆಯ ಸಂಕೇತಗಳಾಗಬೇಕು. ಸರ್ವ ಜನಾಂಗದವರು ಒಟ್ಟಾಗಿ ಸೇರುವ, ಶುಭ ಕಾರ್ಯಗಳನ್ನು ನಡೆಸುವ ಪವಿತ್ರ ತಾಣಗಳಾಗಿ ಇವು ರೂಪುಗೊಳ್ಳಬೇಕು, ಇಡೀ ಸಮಾಜದ ಹಿತಕ್ಕಾಗಿ ಬಳಕೆಯಾಗಬೇಕು ಎಂದು ಶ್ರೀಗಳು ಆಶಿಸಿದರು.
ಈ ಭವನವು ಶೀಘ್ರವಾಗಿ ಪೂರ್ಣಗೊಂಡು, ಇಡೀ ನಾಡಿಗೆ ಮಾದರಿಯಾದ ಶಕ್ತಿ ಕೇಂದ್ರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದ ಶ್ರೀಗಳು ನಾವು ಕಟ್ಟುವ ಕಟ್ಟಡಗಳ ಜೊತೆಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನೂ ಉಳಿಸಿಕೊಳ್ಳುವುದು ಮುಖ್ಯ. ಭವಿಷ್ಯದ ಪೀಳಿಗೆಗೆ ಉತ್ತಮ ಆದರ್ಶಗಳನ್ನು ಬಿಟ್ಟು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಶಾಸಕ ಸಿ.ಬಿ. ಸುರೇಶ್ ಬಾಬು ಮಾತನಾಡಿ, ಕ್ಷೇತ್ರಾದ್ಯಂತ ಸಮುದಾಯ ಭವನಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹುಳಿಯಾರಿನ ಈ ಭಾಗದಲ್ಲಿ ಬೀರಲಿಂಗೇಶ್ವರ ಸಮುದಾಯ ಭವನದ ಅವಶ್ಯಕತೆ ಇತ್ತು. ಭವನ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನದ ಜೊತೆಗೆ ಮುಂದಿನ ದಿನಗಳಲ್ಲಿ ಇತರ ಸೌಲಭ್ಯಗಳನ್ನು ಕಲ್ಪಿಸಲು ತಾವು ಬದ್ಧರಾಗಿರುವುದಾಗಿ ತಿಳಿಸಿದರು. ಈ ಅಭಿವೃದ್ಧಿ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಿ, ಗುಣಮಟ್ಟದ ಕಟ್ಟಡ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರೀತಿ ರಾಘವೇಂದ್ರ, ಉಪಾಧ್ಯಕ್ಷೆ ಕಾವ್ಯರಾಣಿ, ಟ್ರಸ್ಟ್ನ ಗೌಡರಾದ ಎಸ್. ರಾಮಯ್ಯ, ಮುಖ್ಯ ಗೌಡರಾದ ರಂಗನಾಥ್ ಸೇರಿದಂತೆ ಕೆ.ಇ.ಬಿ ಮುಖ್ಯ ಅಭಿಯಂತರ ಗವಿರಂಗಪ್ಪ, ಪಟ್ಟಣ ಪಂಚಾಯಿತಿ ಸದಸ್ಯ ಹೇಮಂತ್ ಕುಮಾರ್, ಎಸ್ಆರ್ಎಸ್ ದಯಾನಂದ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರಾಘವೇಂದ್ರ, ಮುಖಂಡ ಏಜಾಸ್ ಪಾಷ, ಜೆಡಿಎಸ್ ಯುವ ಮುಖಂಡ ಗುರುಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.
