ಎಂಟು ತಿಂಗಳಲ್ಲಿ 60ಕ್ಕೂ ಹೆಚ್ಚು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನಡೆಸಿದ ತುಮಕೂರು ಜಿಲ್ಲಾಸ್ಪತ್ರೆ!
ಇಡೀ ರಾಜ್ಯದಲ್ಲಿ ಮೆಡಿಕಲ್ ಕಾಲೇಜುಗಳ ಸಹಯೋಗವಿಲ್ಲದೆ ಈ ರೀತಿಯ ಶಸ್ತ್ರಚಿಕಿತ್ಸೆ ನಡೆಸಿ, ಯಶಸ್ವಿಯಾಗಿರುವ ಏಕೈಕ ಆಸ್ಪತ್ರೆ
Tumkur news
ತುಮಕೂರು: ಜಿಲ್ಲಾಸ್ಪತ್ರೆಯ ನರರೋಗ ವಿಭಾಗದ ನುರಿತ ಶಸ್ತ್ರಚಿಕಿತ್ಸಾ ತಂಡ ಕಳೆದ 8 ತಿಂಗಳಲ್ಲಿ 60ಕ್ಕೂ ಹೆಚ್ಚು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನಡೆಸುವ ಮೂಲಕ ರಾಜ್ಯದ ಗಮನ ಸೆಳೆದಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್ ಬೇಗ್ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎಂಟು ತಿಂಗಳ ಹಿಂದೆ ಡಾ.ದರ್ಶನ್ ಅವರು ನಗರದ ಶ್ರೀದೇವಿ ಆಸ್ಪತ್ರೆಯಿಂದ ತುಮಕೂರು ಜಿಲ್ಲಾಸ್ಪತ್ರೆಗೆ ತಜ್ಞ ವೈದ್ಯರಾಗಿ ಬಂದಿದ್ದು,ಅವರೊಂದಿಗೆ ಅನಸ್ಥೇಸಿಯಾ, ಶ್ರುಶೂಷಕರ ತಂಡ ಸೇರಿ ಇದುವರೆಗೂ 60 ಶಸ್ತ್ರಚಿಕಿತ್ಸೆ ನಡೆಸಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಶಸ್ತ್ರಚಿಕಿತ್ಸೆಗೆ ಕನಿಷ್ಠವೆಂದರೆ 2.50 ಲಕ್ಷ ದಿಂದ 5 ಲಕ್ಷದವರೆಗೂ ಖರ್ಚಾಗುತ್ತದೆ. ಒಂದು ಶಸ್ತ್ರಚಿಕಿತ್ಸೆ ನಡೆಸಲು ಕನಿಷ್ಠ 2-30 ಗಂಟೆಯಿಂದ 4 ಗಂಟೆಗಳ ಕಾಲಾವಕಾಶ ಬೇಕು. ಕ್ಲಿಷ್ಟಕರ ಅಪರೇಷನ್ಗಳನ್ನು ನಮ್ಮ ವೈದ್ಯರು ಬಹಳ ಪರಿಶ್ರಮದಿಂದ ಮಾಡುವ ಮೂಲಕ ಸರಕಾರಿ ಆಸ್ಪತ್ರೆಗೆ ಘನತೆ ತಂದಿದ್ದಾರೆ. ಇಡೀ ರಾಜ್ಯದಲ್ಲಿ ಮೆಡಿಕಲ್ ಕಾಲೇಜುಗಳ ಸಹಯೋಗವಿಲ್ಲದೆ ಈ ರೀತಿಯ ಶಸ್ತ್ರಚಿಕಿತ್ಸೆ ನಡೆಸಿ, ಯಶಸ್ವಿಯಾಗಿರುವ ಆಸ್ಪತ್ರೆ ಎಂದರೆ ಅದು ತುಮಕೂರು ಮಾತ್ರ. ಇದಕ್ಕಾಗಿ ಡಾ.ದರ್ಶನ್ ಮತ್ತು ತಂಡಕ್ಕೆ ಜಿಲ್ಲಾಸ್ಪತ್ರೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಜಿಲ್ಲಾಸ್ಪತ್ರೆಯಲ್ಲಿ ಮುಂದಿನ ದಿನಗಳಲ್ಲಿ ಬಡ ಹೃದ್ರೋಗಿಗಳಿಗೆ ಅನುಕೂಲವಾಗುವಂತೆ ಕ್ಯಾತಲ್ಯಾಬ್ ತೆರೆಯಲು ಮುಂದಾಗಿದ್ದೇವೆ. ಅಲ್ಲದೆ ಸದ್ಯದಲ್ಲಿಯೇ ಮೆಡಿಕಲ್ ಕಾಲೇಜು ಸಹ ಆರಂಭವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಡಾ.ಆಸ್ಗರ್ ಬೇಗ್, ತಿಂಗಳಿಗೆ ನಾಲ್ಕು ನೂರು ಹೆರಿಗೆಗಳು ನಡೆಯುತ್ತಿವೆ. ಒಂದು ಬ್ಲಡ್ ಬ್ಯಾಂಕ್ ಇದ್ದು, ತಿಂಗಳಲ್ಲಿ 25 ಕ್ಯಾಂಪ್ಗಳ ಮೂಲಕ 2 ಸಾವಿರ ಯೂನಿಟ್ ರಕ್ತ ಸಂಗ್ರಹಿಸಲಾಗುತ್ತಿದೆ. ನಮ್ಮ ಬ್ಲಡ್ ಬ್ಯಾಂಕ್ನಿಂದ ರಕ್ತ ಬೇಕು ಎಂದವರು, ಒಬ್ಬರ ರಕ್ತ ದಾನ ಮಾಡಿ, ತೆಗೆದುಕೊಂಡು ಹೋಗಬಹುದಾಗಿದೆ. ಹಾಗಾಗಿ ಜನರು ರಕ್ತದಾನಕ್ಕೆ ಮುಂದಾಗಬೇಕು ಎಂದು ಡಾ.ಅಸ್ಗರ್ ಬೇಗ್ ಮನವಿ ಮಾಡಿದರು.
ಜಿಲ್ಲಾಸ್ಪತ್ರೆಯ ನರರೋಗ ತಜ್ಞ ಡಾ.ದರ್ಶನ್ ಮಾತನಾಡಿ, ತೆಮಿಳುನಾಡಿನ ತಂಜಾವೂರಿನಲ್ಲಿ ಎಂ.ಎಸ್ ಮುಗಿಸಿ, ಕೆಲ ದಿನ ಕೆಲಸ ಮಾಡಿ, ತದನಂತರ ನಮ್ಮ ಸ್ವತಃ ಜಿಲ್ಲೆಯ ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೆ. ಕಳೆದ ಎಂಟು ತಿಂಗಳಿನಿಂದ ಸರಕಾರಿ ಅಸ್ಪತ್ರೆಯ ನರರೋಗ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತೇನೆ. ಜಿಲ್ಲಾ ಸರ್ಜನ್ ಹಾಗು ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಸಹಕಾರದೊಂದಿಗೆ ಇದುವರೆಗೂ 60ಕ್ಕೂ ಹೆಚ್ಚು ಅಪರೇಷನ್ ಮಾಡಿದ್ದು, ಶೇ100 ಸಕ್ಸಸ್ ರೇಟ್ ಇದೆ. ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ನಮ್ಮ ತಂಡಕ್ಕೆ ಅಗತ್ಯವಿರುವ ಎಲ್ಲಾ ಸಕಲರಣೆಗಳನ್ನು ಸಕಾಲದಲ್ಲಿ ಒದಗಿಸುವ ಮೂಲಕ ಈ ಸಾಧನೆಗೆ ಕಾರಣಿಭೂತರಾಗಿದ್ದಾರೆ. ನಮ್ಮ ಸೇವೆ ದಿನ 24 ಗಂಟೆ, ವಾರದ ಏಳು ದಿನವೂ ಇರುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವೈದ್ಯರಾದ ಡಾ.ನಾಗನಾಥ್ ಉಪಸ್ಥಿತರಿದ್ದರು.
