ಶ್ರೀ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನಲ್ಲಿ ಸ್ಪೂರ್ತಿ ಸಮಾರೋಪ ಸಮಾರಂಭ
Tumkur news
ತುಮಕೂರು: ಪಠ್ಯದಾಚೆಗೂ ಜ್ಞಾನವನ್ನು ಬೆಳೆಸುವುದೇ ನಿಜವಾದ ಶಿಕ್ಷಣ. ಆ ಕೆಲಸವನ್ನು ಸಿದ್ದಗಂಗಾ ಶಿಕ್ಷಣ ಸಂಸ್ಥೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಬೆಂಗಳೂರಿನ ಎಸ್.ಜೆ.ಆರ್.ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರೇಮ ಸಿದ್ದರಾಜು ಹೇಳಿದರು.
ನಗರದ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಎನ್.ಎಸ್.ಎಸ್., ಎನ್.ಸಿ.ಸಿ., ಕ್ರೀಡೆ, ಸಾಂಸ್ಕೃತಿಕ ಘಟಕ, ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಸ್ಪೂರ್ತಿ-2025-26 ರ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಡಾ.ಶ್ರೀ ಶಿವಕುಮಾರಸ್ವಾಮೀಜಿಗಳ ಕಂಡ ಕನಸು ನನಸಾಗಿದೆ ಎಂದರು.
ವಿದ್ಯಾರ್ಥಿ ದಿಸೆಯಲ್ಲಿ ಪದವಿ ಎಂಬುದು ಒಂದು ಮಹತ್ವದ ಘಟ್ಟ. ಇಲ್ಲಿ ನೀವು ವಿದ್ಯೆಗೆ ಕಲಿಯುಲು ನೀಡುವ ನಿರಂತರ ಪರಿಶ್ರಮ, ಗುರಿ ಮುಟ್ಟಲು ಆಯ್ಕೆ ಮಾಡಿಕೊಳ್ಳುವ ದಾರಿ ಎರಡು ಬಹಳ ಮುಖ್ಯವಾಗಿರುತ್ತದೆ. ಅದು ನಿಜ ಜೀವನದಲ್ಲಿ ಬರುವ ಅಡ್ಡಿ ಆತಂಕಗಳನ್ನು ಸಮರ್ಥವಾಗಿ ಎದುರಿಸಲು ಸಹಾಯಕಾರಿಯಾಗುತ್ತವೆ. ನಾವು ಆಯ್ಕೆ ಮಾಡಿಕೊಳ್ಳವು ಕ್ಷೇತ್ರದ ಬಗ್ಗೆ ಸರಿಯಾದ ಜ್ಞಾನ ಇಲ್ಲದಿದ್ದರೆ ಬದುಕು ಕಟ್ಟಿಕೊಳ್ಳುವುದು ಕಷ್ಟ. ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಯಾದರೂ ಬದಲಾವಣೆಗೆ ತಕ್ಕಂತೆ ನಾವು ಸಹ ಬದಲಾದಾಗ ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉಳಿಯಲು ಸಾಧ್ಯ ಎಂದು ಡಾ.ಪ್ರೇಮ ಸಿದ್ದರಾಜು ತಿಳಿಸಿದರು.
ಸೇವೆ ಎಂಬುದು ಭಾರತೀಯರ ರಕ್ತದಲ್ಲಿಯೇ ಬಂದಿದೆ. ಸೇವೆಯ ಮೂಲಕ ಸಾರ್ಥಕ ಜೀವನ ನಡಸಲು ಎನ್.ಎಸ್.ಎಸ್ ಮಾರ್ಗದರ್ಶನ ನೀಡುತ್ತದೆ. ಕ್ರೀಡೆಯ ಜೊತೆಗೆ, ಸಾಂಸ್ಕೃತಿಕ ಚಟುವಟಿಕೆಗಳ ಕಡೆಗೆ ಗಮನಹರಿಸಿದೆ. ಹೆಚ್ಚು ಓದಿ,ಪರ ಧರ್ಮ ಸಹಿಷ್ಣತೆಯನ್ನು ರೂಢಿಸಿಕೊಳ್ಳಿ, ಅದೇ ನಿಜವಾದ ಸಂಪತ್ತು, ಇಂದಿನ ಪ್ರಕ್ಷುಬ್ಧ ಪರಿಸ್ಥಿತಿ ನಿವಾರಣೆಗೆ ಅದೊಂದೇ ದಾರಿ ಎಂದು ಡಾ.ಪ್ರೇಮ ಸಿದ್ದರಾಜು ಕಿವಿಮಾತು ಹೇಳಿದರು.
ಗಾಯಕಿ ಶಶಿಕಲಾ ಸುನೀಲ್ ಮಾತನಾಡಿ, ಹೆಣ್ಣು ಎಂದರೆ ಆದಿ ಶಕ್ತಿಯ ಸ್ವರೂಪ. ಆಕೆಗೆ ಸರಿಯಾದ ಮಾರ್ಗದರ್ಶನ ದೊರೆತರೆ ಅಸಾಧ್ಯವಾದುದ್ದನ್ನು ಸಾಧಿಸಬಲ್ಲಳು ಎಂಬುದಕ್ಕೆ ನಮ್ಮ ನಡುವೆಯೇ ಹಲವಾರು ಉದಾಹರಣೆಗಳಿವೆ. ಸಾಧನೆಗೆ ಅಡ್ಡದಾರಿಗಳಿಲ್ಲ. ದೌರ್ಭಲ್ಯಗಳನ್ನು ಮೆಟ್ಟಿನಿಂತರೆ, ಸಾಧನೆ ನಿಮ್ಮೆದುರು ನಿಲ್ಲುತ್ತದೆ ಎಂದರು.
ಪ್ಯಾರಾ ಬ್ಯಾಡ್ಮಿಟನ್ ಆಟಗಾರ ಪೂರ್ಣರಾವ್ ಮಾತನಾಡಿ, ಜೀವನದಲ್ಲಿ ನಾವು ಊಹಿಸಲಾರದ ಸವಾಲುಗಳು ನಮ್ಮ ಕಣ್ಣೆದುರು ಬರುತ್ತೇವೆ. ಆದರೆ ಅವುಗಳನ್ನು ಮೆಟ್ಟಿ ನಿಂತರೆ ನೀವು ಈ ಜಗತ್ತಿನಲ್ಲಿ ಉಳಿಯಲು ಸಾಧ್ಯ. 22 ವರ್ಷದವನಿದ್ದಾಗ ಅಪಘಾತದಲ್ಲಿ ಬೆನ್ನುಮೂಳೆಗೆ ಪೆಟ್ಟಾಗಿ ಸ್ವಾಧೀನ ಕಳೆದುಕೊಂಡರೂ, ವ್ಹೀಲ್ ಚೇರ್ನಲ್ಲಿಯೇ ಆಟವಾಡಿ, ಹಲವಾರು ಪದಕ ಪಡೆದಿದ್ದೇನೆ. ನಮ್ಮಂತಹವರ ಜೀವನದ ಪ್ರತಿ ಕ್ಷಣವೂ ಹೋರಾಟ. ಹಾಗಾಗಿ ಚಯನ್ನಾಗಿ ಓದಿ, ವಾಹನ ಚಲಾಯಿಸುವಾಗ ಹೆಲ್ಮೇಟ್ ಧರಿಸುವುದರ ಜೊತೆಗೆ, ಸಂಚಾರಿ ನಿಯಮಗಳನ್ನು ಪಾಲಿಸಿ, ಕ್ರೀಡೆಯಿಂದ ಬದುಕು ಕಟ್ಟಿಕೊಳ್ಳಬಹುದು. ದೈಹಿಕ ಮಾನಸಿಕ ದೃಢತೆಯನ್ನು ಆಟಗಳು ತಂದುಕೊಡಲಿವೆ. ಹಾಗಾಗಿ ಒಂದು ಒಳ್ಳೆಯ ಗುರಿ, ಅದನ್ನು ತಲುಪಲು ಕಠಿಣ ಪರಿಶ್ರಮ ಮತ್ತು ದೃಢತೆ ಇದ್ದರೆ ನೀವು ಸಹ ಸಾಧನೆಯ ಮೆಟ್ಟಿಲು ಹತ್ತಲು ಸಾಧ್ಯ ಎಂದರು.
ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಮಾತನಾಡಿ, ಸಾಹಿತ್ಯ, ಸಂಗೀತ, ಕ್ರೀಡೆ ಎಲ್ಲವೂ, ಶಿಕ್ಷಣದಷ್ಟು ಮುಖ್ಯವಾದವು. ಪಠ್ಯಗಳು ಜ್ಞಾನ ನೀಡಿದರೆ, ಪಠ್ಯೇತರ ಚಟುವಟಿಕೆಗಳು ನಾಯಕತ್ವದ ಗುಣದ ಜೊತೆಗೆ, ಒಳ್ಳೆಯ ಆರೋಗ್ಯ, ಸ್ವಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಎಂ.ದಕ್ಷಿಣಮೂರ್ತಿ ಮಾತನಾಡಿ, ಪ್ರತಿವರ್ಷ ಸಂಪ್ರದಾಯದಂತೆ ಸ್ಪೂರ್ತಿ ಕಾರ್ಯಕ್ರಮವನ್ನು ಮೂರು ಹಂತಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಇದು ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆ ಹೊರಹಾಕಲು ಒಳ್ಳೆಯ ವೇದಿಕೆಯಾಗಿದೆ. ಮಕ್ಕಳಲ್ಲಿ ಸ್ಪರ್ಧಾ ಮನೋಭಾವದ ಜೊತೆಗೆ, ಸವಾಲುಗಳನ್ನು ಮೆಟ್ಟಿ ನಿಲ್ಲುವ ಆತ್ಮ ವಿಶ್ವಾಸವನ್ನು ನೀಡುತ್ತದೆ ಎಂದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸ್ಪೂರ್ತಿಯ ಸಂಚಾಲಕ ಡಾ.ಜಗದೀಶ್.ಎಂ.,1982ರಲ್ಲಿ ಡಾ.ಶ್ರೀ ಶಿವಕುಮಾರಸ್ವಾಮೀಜಿಗಳು ಗ್ರಾಮೀಣ ಮತ್ತು ನಗರದ ಬಡ ಹೆಣ್ಣು ಮಕ್ಕಳ ಉನ್ನತ ಶಿಕ್ಷಣದ ಕನಸಿನೊಂದಿಗೆ 200 ಹೆಣ್ಣು ಮಕ್ಕಳಿಂದ ಆರಂಭಗೊಂಡ ಕಾಲೇಜು ಇಂದು 1475 ಮಕ್ಕಳು ಕಲಿಯುತಿದ್ದಾರೆ. 1988ರಲ್ಲಿ ಸ್ಪೂರ್ತಿ ವೇದಿಕೆಯನ್ನು ಹುಟ್ಟು ಹಾಕಿದ್ದು, 42 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಇದುವರೆಗೆ ಸುಮಾರು 140 ರ್ಯಾಂಕ್ಗಳನ್ನು ನಮ್ಮ ಕಾಲೇಜು ಗಳಿಸಿದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿಯೂ ಅಂತರ ವಿಶ್ವವಿದ್ಯಾಲಯ, ದಕ್ಷಿಣ ಭಾರತ ವಲಯ ಮಟ್ಟದಲ್ಲಿಯೂ ನಮ್ಮ ಮಕ್ಕಳು ಪದಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದರು.
ಶ್ರೀಸಿದ್ದಗಂಗಾ ಪದವಿ ಕಾಲೇಜುಗಳ ಸಂಯೋಜಕ ಡಾ.ಡಿ.ಎನ್ ಯೋಗೀಶ್ವರಪ್ಪ, ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ದತ್ತಿ ಪ್ರಶಸ್ತಿಗಳ ವಿವರ ಮಂಡಿಸಿ, ವಿಜೇತರಿಗೆ ದತ್ತಿ ಪ್ರಶಸ್ತಿ ನೀಡಿದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕಿ ಕೆ.ಪಿ.ಶೀಲಾ, ಸ್ಪೂರ್ತಿ ಸಹಸಂಚಾಲಕಿ ಅಮೂಲ್ಯ .ಜೆ.ಹಾಗೂ ದತ್ತಿ ದಾನಿಗಳು, ಕಾಲೇಜಿನ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
