ಇ-ಆಸ್ತಿ ಖಾತೆಗಳ ಸಮಸ್ಯೆ: ಸದನದಲ್ಲಿ ಗಮನ ಸೆಳೆದ ಶಾಸಕ ಜಿ.ಬಿ.ಜ್ಯೋತಿಗಣೇಶ್
Tumkur News
ತುಮಕೂರು: ಕಳೆದ ಮೂರು ತಿಂಗಳಿನಿಂದ ಸಬ್ ರಿಜಿಸ್ಟ್ರರ್ ಆಫೀಸ್ನಲ್ಲಿ ಕಾವೇರಿ 2.0 ತಂತ್ರಾಂಶ ಜತೆಗೆ ಇ-ಆಸ್ತಿ ಮತ್ತು ಯು.ಎಲ್.ಎಂ.ಎಸ್. ತಂತ್ರಾಂಶ ಲಿಂಕ್ ಮಾಡಲಾದ ಕಾರಣ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗಿರುವುದರ ಕುರಿತು ಸದನದಲ್ಲಿ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಗಮನ ಸೆಳೆದರು.
ಸದನದಲ್ಲಿ ಮಾತನಾಡಿದ ಶಾಸಕ ಜಿ.ಬಿ ಜ್ಯೋತಿಗಣೇಶ್, ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಇ-ಆಸ್ತಿ ನೊಂದಣಿ ಕಾರ್ಯದಲ್ಲಿ ಸರಿಯಾಗಿ ಶೇ.15 ರಷ್ಟು ಸಹ ನೊಂದಣಿ ಕಾರ್ಯ ಆಗಿರುವುದಿಲ್ಲ. ಸಾರ್ವಜನಿಕರು ಯಾವುದೇ ಸ್ವತ್ತುಗಳ ನೊಂದಣಿ, ಅಡಮಾನ, ಒಳಗೊಂಡಂತೆ ಯಾವುದೇ ವಹಿವಾಟು ನಡೆಸಲು ಆಗುತ್ತಿಲ್ಲ. ಈ ಸಂದರ್ಭವನ್ನು ಮಧ್ಯವರ್ತಿಗಳು ಕೆಟ್ಟದಾಗಿ ಬಳಸಿಕೊಳ್ಳುತ್ತಿದ್ದು, ಇ-ಆಸ್ತಿ ಮಾಡಿಸಲು ಸಾರ್ವಜನಿಕರು ಪರದಾಡುತ್ತಿದ್ದಾರೆ ಎಂದರು. ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಲಕ್ಷಕ್ಕೂ ಅಧಿಕ ಖಾತೆಗಳು ನೊಂದಣಿಯಾಗಬೇಕಾಗಿದ್ದು, ಅದರಲ್ಲಿ ಕೇವಲ ಸುಮಾರು 20 ಸಾವಿರ ಖಾತೆಗಳು ಮಾತ್ರ ಇಲ್ಲಿಯವರೆಗೂ ಇ-ಆಸ್ತಿ ಖಾತೆ ಮಾಡಲಾಗಿದ್ದು, ನಗರಾಭಿವೃದ್ಧಿ ಇಲಾಖೆಯೊಂದಿಗೆ ಚರ್ಚೆ ಮಾಡಿ, ಇ-ಆಸ್ತಿ ಕಾರ್ಯ ತುರ್ತಾಗಿ ಆಗಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಂದು ಶಾಸಕರು ತಿಳಿಸಿದರು.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವರು, ಸಂಬಂಧಪಟ್ಟ ಇಲಾಖೆಯೊಂದಿಗೆ ಹಾಗೂ ತುಮಕೂರು ಮಹಾನಗರಪಾಲಿಕೆಯ ಆಯುಕ್ತರೊಂದಿಗೆ ಚರ್ಚಿಸಿ, ಇ-ಆಸ್ತಿ ಕಾರ್ಯ ತ್ವರಿತಗತಿಯಲ್ಲಿ ತುರ್ತಾಗಿ ನಡೆಸಲು ಹೆಚ್ಚುವರಿ ಸಿಬ್ಬಂದಿಯನ್ನ ಗುತ್ತಿಗೆ ಆಧಾರದ ಮೇಲೆ ನಿಯೋಜಿಸಿ, ಇ-ಆಸ್ತಿ ಕಾರ್ಯವನ್ನು ಚುರುಕುಗೊಳಿಸುವುದರ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಲಾಗುವುದು ಎಂದು ತಿಳಿಸಿದರು.
+ There are no comments
Add yours