ಕೊಬ್ಬರಿಗೆ 25 ಸಾವಿರ ಬೆಂಬಲ ಬೆಲೆಗೆ ಆಗ್ರಹ
Tumkurnews
ತುಮಕೂರು; ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 25 ಸಾವಿರ ರೂ. ನೀಡಬೇಕು, ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಮಾರಾಟವಾಗುವುದನ್ನು ತಡೆಯಲು ನ್ಯಾಫೇಡ್ ಮೂಲಕ ಖರೀದಿಸಲು ಮುಂದಾಗಬೇಕು ಹಾಗು ವಿದೇಶಗಳಿಂದ ಆಮದಾಗುತ್ತಿರುವ ಕೊಬ್ಬರಿಗೆ ಹೆಚ್ಚಿನ ಸುಂಕ ವಿಧಿಸಿ, ಕೊಬ್ವರಿ ಬೆಳೆಗಾರರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ ಪಟೇಲ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್, ಸರಕಾರವೇ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತರ ಉತ್ಪನ್ನಗಳನ್ನು ಖರೀದಿಸುವುದು ಕಾನೂನಿನ ಪ್ರಕಾರ ತಪ್ಪು.ಆದರೆ ರಾಜ್ಯದಲ್ಲಿ ಸರಕಾರವೇ ನಿಗದಿಪಡಿಸಿದ ಬೆಂಬಲ ಬೆಲೆ 11,750 ಕ್ಕಿಂತ ಕಡಿಮೆ ಬೆಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಕೊಬ್ಬರಿಯನ್ನು ಕೊಳ್ಳಲಾಗುತ್ತಿದೆ. ಇಂತಹ ವರ್ತಕರ ವಿರುದ್ದ ಸರಕಾರ ಕ್ರಮ ಕೈಗೊಂಡು ರೈತರಿಗೆ ಒಳ್ಳೆಯ ಬೆಲೆ ಸಿಗುವತೆ ಮಾಡಬೇಕೆಂದು ಒತ್ತಾಯಿಸಿದರು.
ಆನಂದ್ ಪಟೇಲ್ ಮಾತನಾಡಿ, 2015 ರಲ್ಲಿ ರೈತರು ಕೊಬ್ಬರಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಹಮ್ಮಿಕೊಂಡ ಬೆಂಗಳೂರು ಚಲೋ ಪಾದಯಾತ್ರೆಗೆ ಬೆದರಿದ ಸರಕಾರ ತೋಟಗಾರಿಕಾ ಇಲಾಖೆ ಮಾಹಿತಿ ಪಡೆದು ಕ್ವಿಂಟಾಲ್ ಕೊಬ್ಬರಿಗೆ 11,750 ನಿಗದಿ ಮಾಡಿದ್ದರ ಪರಿಣಾಮ, ಕೇಂದ್ರದ ಸಹಾಯಧನವೂ ಸೇರಿ ಕೊಬ್ಬರಿ ಬೆಳೆಗಾರರು ಅಂದು ಕ್ವಿಂಟಾಲ್ ಕೊಬ್ಬರಿಗೆ 16750 ಪಡೆಯುವಂತಾಯಿತು. ಆದರೆ ಪ್ರಸ್ತುತ ಕೊಬ್ಬರಿ ಬೆಲೆ ಬೆಂಬಲ ಬೆಲೆಗಿಂತ ಕೆಳ ಮಟ್ಟಕ್ಕೆ ಕುಸಿದಿದೆ. ವಿಧಿಯಿಲ್ಲದೆ ಸಾಲ ಮಾಡಿ ಸುಸ್ತಾಗಿರುವ ರೈತ ಕಡಿಮೆ ಬೆಲೆಗೆ ನೀಡುತ್ತಿದ್ದಾನೆ. ಇದರಿಂದ ಕೊಬ್ಬರಿ ಅತ್ಯಂತ ನಷ್ಟ ಹೊಂದಿದೆ ಹಾಗಾಗಿ ಕೊಬ್ವರಿಗೆ ಕನಿಷ್ಠ ಬೆಂಬಲ ಬೆಲೆ 25 ಸಾವಿರ ನೀಡಬೇಕು, ಅಲ್ಲಿಯವರೆಗೆ ನ್ಯಾಫೇಡ್ ಮೂಲಕ ಕೊಬ್ಬರಿ ಖರೀದಿಸಿ, ರೈತರಸಂಕಷ್ಟ ಕ್ಕೆ ಸ್ಪಂದಿಸಬೇಕೆಂದು ಆಗ್ರಹಿಸಿದರು
ರಾಜ್ಯದಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಪರಿಣಾಮ ಮತ್ತು ಹೊರದೇಶಗಳಿಂದ ಯತೇಚ್ಚವಾಗಿ ತೆಂಗಿನ ಉತ್ಪನ್ನಗಳು ಕಡಿಮೆ ಸುಂಕಕ್ಕೆ ಅಮದಾಗುತ್ತಿದೆ, ಪರಿಣಾಮ ಕೊಬ್ಬರಿ ಬೆಲೆ ಕುಸಿದಿದೆ. ಹಾಗಾಗಿ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದು ಪಡಿಸುವುರ ಜೊತೆಗೆ, ಹೊರದೇಶಗಳಿಂದ ಬರುತ್ತಿರುವ ಕೊಬ್ಬರಿಗೆ ಹೆಚ್ಚಿನ ಅಮದು ಸುಂಕ ವಿಧಿಸಿ, ಅಮದು ಪ್ರಮಾಣ ಗಣನೀಯವಾಗಿ ಕುಸಿಯುವಂತೆ ಮಾಡಿದರೆ ಹೆಚ್ಚಿನ ಅನುಕೂಲವಾಗಲಿದೆ. ಈನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ರೈತರ ಪರವಾಗಿ ದ್ವನಿ ಎತ್ತಬೇಕು. ಇಲ್ಲದಿದ್ದಲ್ಲಿ ಚುನಾವಣೆಯಲ್ಲಿ ಮತ ಕೇಳಲು ಬರುವ ನಿಮ್ಮನ್ನು ರೈತರು ಅಟ್ಟಾಡಿಸಿಕೊಂಡು ಹೊಡೆಯಲಿದ್ದಾರೆ ಎಂದು ಆನಂದಪಟೇಲ್ ಎಚ್ಚರಿಕೆ ನೀಡಿದರು
ಈ ವೇಳೆ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಎಸ್.ಧನಂಜಯಾರಾಧ್ಯ, ಜಿಲ್ಲಾ ಕಾರ್ಯದರ್ಶಿ ರುದ್ರಶ್ ಗೌಡ, ಸಂಪಿಗೆ ಕೀರ್ತಿ, ಉಪಾಧ್ಯಕ್ಷರುಗಳಾದ ಕುದುರೆಕುಂಟೆ ಲಕ್ಕಣ್ಣ, ಕಂದಿಕೆರೆ ನಾಗಣ್ಣ, ತಾಲೂಕು ಅಧ್ಯಕ್ಷರುಗಳಾದ ಅನಿಲ್, ನಾಗೇಂದ್ರ, ಬಸ್ತಿಹಳ್ಳಿ ರಾಜಣ್ಣ, ಬಂಡಿಮನೆ ಲೋಕಣ್ಣ, ಸಿದ್ದರಾಜು, ಸಣ್ಣದ್ಯಾಮೇಗೌಡ, ಕುಣಿಗಲ್ ಕಾರ್ಯದರ್ಶಿ ವೆಂಕಟೇಶ್, ಹೆಚ್.ಎಸ್, ಸೇರಿದಂತೆ ಹತ್ತಾರು ಜನರು ಭಾಗವಹಿಸಿದ್ದರು.
ಉಂಡೆ ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಪಡಿಸಿದ ಕೇಂದ್ರ; ಖರೀದಿಗೆ ದಿನ ನಿಗದಿ
+ There are no comments
Add yours