ಸಾಸಿವೆ ಕುಲಗೆಡಿಸುವ ಕೇಂದ್ರದ ನಿಲುವು ಖಂಡನೀಯ; ಮತ್ತೊಂದು ವಿವಾದಕ್ಕೆ ಸಿಲುಕಿದ ಕೇಂದ್ರ ಸರ್ಕಾರ

1 min read

 

ಸಾಸಿವೆ ಕುಲಗೆಡಿಸುವ ಕೇಂದ್ರದ ನಿಲುವು ಖಂಡನೀಯ;
ಬಹುರಾಷ್ಟ್ರೀಯ ಕಂಪನಿ ಮಂತ್ರ ಜಪಿಸುತ್ತಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ; ಆರೋಪ

Tumkurnews
ತುಮಕೂರು; ಸಾಸಿವೆ ಕುಲಾಂತರಿ ಬೀಜ ಬೆಳೆಯಲು ಭಾರತದಲ್ಲಿ ಅವಕಾಶ ಮಾಡಿ ಕೊಟ್ಟು ಬಹುರಾಷ್ಟ್ರೀಯ ಕಂಪನಿ ಮಂತ್ರ ಜಪಿಸುತ್ತಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ನೇತೃತ್ವದ ತೀರ್ಮಾನ ಅವೈಜ್ಞಾನಿಕ ಹಾಗೂ ಹಾಸ್ಯಾಸ್ಪದ ಎಂದು ಗಾಂಧೀ ಸಹಜ ಬೇಸಾಯ ಶಾಲೆ ಖಂಡಿಸುತ್ತದೆ ಎಂದು ಸಂಚಾಲಕರುಗಳಾದ ಡಾ. ಮಂಜುನಾಥ್ ಮತ್ತು ಪರಿಸರವಾದಿ ಸಿ.ಯತಿರಾಜು ತಿಳಿಸಿದ್ದಾರೆ.

ಕೇಂದ್ರದ ವಿರುದ್ಧ ಮತ್ತೊಮ್ಮೆ ಸಮರ ಸಾರಿದ ರೈತ ಸಂಘ; ರಾಜ್ಯವ್ಯಾಪ್ತಿ ಪ್ರತಿಭಟನೆಗೆ ಕರೆ
ಬೇಯರ್ ನಂತಹ ಬಹುರಾಷ್ಟ್ರೀಯ ಕಂಪನಿಗಳಿಗೆ ಕುಲಾಂತರಿ ತಳಿಬೀಜಗಳು ಮತ್ತು ಆಹಾರೋತ್ಪಾದನೆಗಳ ಮೂಲಕ ಭಾರತದಲ್ಲಿ ವಸಾಹತು ಸ್ಥಾಪನೆ ಮಾಡಲು ಅವಕಾಶ ಮಾಡಿಕೊಡುತ್ತಿರುವ ಭಾರತ ಸರಕಾರದ ನಿರ್ಧಾರವನ್ನು ಈ ಸಂಬಂಧ ಧೀರ್ಘವಾದ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಇವರುಗಳು ಬೇಯರ್ ನಂತಹ ಬಹುರಾಷ್ಟ್ರೀಯ ಕಂಪನಿಗಳ ಕುಲಾಂತರಿ ತಳಿಬೀಜಗಳಿಂದ ಮಾನವನ ಮೇಲಾಗುವ ಪರಿಣಾಮಗಳನ್ನು ವಿವರಿಸಿ ಬೇಯರ್ ಕುಲಾಂತರಿ ಸಾಸವೆಯನ್ನು ಭಾರತದಲ್ಲಿ ಬೆಳೆಯಲು ಅವಕಾಶ ನೀಡುತ್ತಿರುವುದಕ್ಕೆ ತೀವ್ರವಾಗಿ ಖಂಡಿಸಿದ್ದಾರೆ.
ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಯಲ್ಲಿ ಸಾಸಿವೆಗೆ ಬಹುಮುಖ್ಯ ಪಾತ್ರವಿದೆ. ಅಷ್ಟೇ ಅಲ್ಲ ಸಾಸಿವೆಯಲ್ಲಿ ಭರಪೂರ ಆರೋಗ್ಯಕರ ಅಂಶಗಳೂ ಅಡಕವಾಗಿವೆ. ರಕ್ತದಲ್ಲಿ ಕೊಲೆಸ್ಟರಾಲ್ ಅಂಶವನ್ನು ತಗ್ಗಿಸುವಲ್ಲಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುವಲ್ಲಿ ಸಾಸಿವೆ ಕೆಲಸ ಮಾಡುತ್ತದೆ. ಇದರ ಹೊರತಾಗಿಯೂ ಅದರಲ್ಲಿರುವ ಔಷಧೀಯ ಮೌಲ್ಯಗಳು ಅನೇಕ.
ಅದು ದೇಹದ ಚರ್ಮವನ್ನು ತಿಳಿಗೊಳಿಸುವಲ್ಲಿ, ಕೂದಲಿನ ಆರೋಗ್ಯ ಕಾಪಾಡುವಲ್ಲಿ ಮತ್ತು ಮಧುಮೇಹವನ್ನು ನಿಗ್ರಹಿಸುವಲ್ಲಿಯೂ ಕೆಲಸ ಮಾಡುತ್ತದೆ. ಭಾರತ ದೇಶವು ದೊಡ್ಡ ಪ್ರಮಾಣದಲ್ಲಿ ಮಳೆಯಾಶ್ರಿತ ಕೃಷಿಭೂಮಿಯನ್ನು ಹೊಂದಿರುವ ದೇಶವಾಗಿದ್ದು, ಇಲ್ಲಿನ ಒಟ್ಟಾರೆ ಕೃಷಿಭೂಮಿಯ ಪೈಕಿ ಶೇ.70 ಮಳೆಯಾಶ್ರಿತ ವರ್ಗಕ್ಕೆ ಸೇರಿದ್ದಾಗಿದೆ ಎಂದು ಹೇಳಿದ್ದಾರೆ.
ಸಾಸಿವೆ ಗಿಡದ ಕಡುಹಳದಿ ಬಣ್ಣದ ಹೂವುಗಳು ಕೀಟಗಳನ್ನು ಆಕರ್ಷಿಸುವ ಕೆಲಸವನ್ನು ಮಾಡುತ್ತವೆಯಲ್ಲದೇ, ಮಿಕ್ಕುಳಿದ ಮುಖ್ಯ ಬೆಳೆಗಳಿಗೆ ಕೀಟಗಳಿಂದಾಗುವ ಹಾನಿಯನ್ನು ತಪ್ಪಿಸುವಲ್ಲಿಯೂ ಸಕ್ಷಮವಾಗಿ ಕೆಲಸ ಮಾಡುತ್ತದೆ. ಸಾಸಿವೆಯ ಹೂವಿನ ಕಾರಣದಿಂದಾಗಿ ಜೇನ್ನೊಣಗಳು ಅದರತ್ತ ಆಕರ್ಷಿತವಾಗಿ ಪರಾಗಸ್ಪರ್ಶ ಪ್ರಕ್ರಿಯೆ ಚೆನ್ನಾಗಿ ಆಗುತ್ತದೆ ಮತ್ತು ಇದರ ಫಲಸ್ವರೂಪವಾಗಿ ಇತರೆ ಮುಖ್ಯ ಕೃಷಿಬೆಳೆಗಳ ಇಳುವರಿ ಶೇ.12 ರಷ್ಟು ಹೆಚ್ಚಾಗುತ್ತದೆ ಎಂದೂ ಅಂದಾಜಿಸಲಾಗಿದೆ ಎಂದಿದ್ದಾರೆ.
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಅತಿವೃಷ್ಠಿ ಮತ್ತು ಅನಾವೃಷ್ಠಿ ಇದ್ದಾಗ್ಯೂ ಸಾಸಿವೆಬೆಳೆ ಬಹಳ ಚೆನ್ನಾಗಿ ಬರುತ್ತದೆ. ಹವಾಮಾನ ಆಧಾರಿತ ಕೃಷಿಗೆ ಸಾಸಿವೆ ಹೇಳಿಮಾಡಿಸಿದ್ದು, ಇದರಿಂದ ದೇಶದ ಸಣ್ಣ ಮತ್ತು ಮಧ್ಯಮ ವರ್ಗದ ಕೃಷಿಕರಿಗೆ ಬಹಳ ಅನುಕೂಲವಾಗುತ್ತಿದೆ. ಆದರೆ ದುರದೃಷ್ಟದ ಸಂಗತಿಯೆಂದರೆ ಭಾರತ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿಯಲ್ಲಿ 18-10-2022 ರಂದು ಕುಲಾಂತರಿ ಸಾಸಿವೆ ತಳಿಗೆ ಅಂಕಿತವನ್ನು ಕೊಟ್ಟಿದೆ. ಹೀಗೆ ಅಂಕಿತ ನೀಡುವ ಮುನ್ನ ಯಾವುದೇ ಶಾಸನಬದ್ಧ ಪ್ರಯೋಗಗಳನ್ನು ಮಾಡಲಾಗಿಲ್ಲ ಮತ್ತು ಇದು ಜೀವವೈವಿಧ್ಯತಾ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಖಂಡಿಸಿದ್ದಾರೆ.
ಕುಲಾಂತರಿ ಸಾಸಿವೆಯಲ್ಲಿ ದೇಸೀ ತಂತ್ರಜ್ಞಾನವನ್ನು ಬಳಸಲಾಗಿದೆ ಎಂಬ ಅಸತ್ಯ ಸಂಗತಿಯನ್ನು ಹರಿಯಬಿಡಲಾಗಿದೆ. ಸಾರ್ವಜನಿಕರ ಗಮನಕ್ಕೆ ಈ ಮೂಲಕ ತರಬಯಸುವುದೇನೆಂದರೆ ಸದರಿ ಉತ್ಪಾದನೆಯು ಬೇಯರ್ ಕಂಪನಿಯ ಪೇಟೆಂಟ್ ಅಡಿಯಲ್ಲಿದೆ. ಈ ಕುಲಾಂತರಿ ತಳಿಯಲ್ಲಿ ಬರ್ನೇಸ್ ಮತ್ತು ಬಸ್ತಾರ್ ಎಂಬ ಎರಡು ವಂಶವಾಹಿಗಳನ್ನು ಮಣ್ಣಿನಲ್ಲಿ ಅಡಕವಿರುವ ಬ್ಯಾಕ್ಟಿರಿಯಾ ಆದ ಬಾಸಿಲಸ್ ಅಮೈಲೋಲಿಕ್ವಿಫೇಸಿಯನ್ಸ್ ಎಂಬುದರಿಂದ ಪಡೆದುಕೊಳ್ಳಲಾಗಿದೆ ಎಂದಿದ್ದಾರೆ.
ಇವೆರಡೂ ವಂಶವಾಹಿಗಳು ಬಾಯರ್ ಆಗ್ರೋ ಸೈನ್ಸ್‍ನವರ ಪೇಟೆಂಟ್ ಆಗಿದ್ದು ಅವುಗಳನ್ನು ದೇಸೀ ತಂತ್ರಜ್ಞಾನ ಎಂಬ ಸುಳ್ಳು ಪ್ರಚಾರದೊಂದಿಗೆ ಮುನ್ನೆಲೆಗೆ ತರಲಾಗುತ್ತಿದೆ. ಈಗ ನಮ್ಮ ಮುಂದಿರುವ ಪ್ರಶ್ನೆಗಳೆಂದರೆ ಬೇಯರ್ ಕಂಪನಿ ಯಾರ ಮಾಲೀಕತ್ವದಲ್ಲಿದೆ? ಅದು ಮೂಲತಃ ಯಾವ ದೇಶದ್ದು? ಅದರ ತಾಂತ್ರಿಕತೆಯಿಂದ ಯಾರಿಗೆ ಲಾಭವಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

About The Author

You May Also Like

More From Author

+ There are no comments

Add yours