Tumkurnews ತುಮಕೂರು; ವಿದ್ಯುತ್ ತಂತಿ ತಗುಲಿ ಪಾವಗಡದಲ್ಲಿ ಮಹಿಳೆಯೋರ್ವಳು ಮೃತಪಟ್ಟಿದ್ದು, ಮೃತಳ ಸಂಬಂಧಿಕರು ಬೆಸ್ಕಾಂ ಕಚೇರಿ ಎದುರು ಶವ ಇರಿಸಿ ಪ್ರತಿಭಟನೆ ನಡೆಸಿದರು.
ಪಾವಗಡ ತಾಲ್ಲೂಕಿನ ಕೆಂಚಮ್ಮನಹಳ್ಳಿ ನಿವಾಸಿ ಮಂಗಳ ಗೌರಮ್ಮ(28) ಮೃತ ಮಹಿಳೆ. ಗ್ರಾಮದ ಜಮೀನಿನಲ್ಲಿ ಬೆಸ್ಕಾಂ ವಿದ್ಯುತ್ ತಂತಿ ಅತ್ಯಂತ ಕೆಳಮಟ್ಟದಲ್ಲಿ ನೇತಾಡುತ್ತಿತ್ತು. ಈ ಬಗ್ಗೆ ಇಲಾಖೆಯ ಇಂಜಿನಿಯರ್ ರಾಮಾಂಜಿನಯ್ಯ ಅವರ ಗಮನಕ್ಕೆ ತಂದಿದ್ದ ಗ್ರಾಮಸ್ಥರು ತಂತಿಯನ್ನು ಮೇಲ್ಮಟ್ಟದಲ್ಲಿ ಅಳವಡಿಸುವಂತೆ ಮನವಿ ಮಾಡಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಬೆಸ್ಕಾಂ ಈ ಸಮಸ್ಯೆ ಬಗೆಹರಿಸಿರಲಿಲ್ಲ. ಇದರ ಬೆನ್ನಲ್ಲೇ ಇಂದು ಮಹಿಳೆ ಬಲಿಯಾಗಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಶವ ಇರಿಸಿ ಪ್ರತಿಭಟನೆ; ಬೆಸ್ಕಾಂ ನಿರ್ಲಕ್ಷ್ಯದಿಂದಾಗಿ ಮೃತ ಪಟ್ಟಿರುವ ಮಹಿಳೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಮಹಿಳೆಯ ಪತಿ ರವಿ ಹಾಗೂ ಇಬ್ಬರು ಮಕ್ಕಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಮೃತಳ ಸಂಬಂಧಿಕರು ಬೆಸ್ಕಾಂ ಕಚೇರಿ ಎದುರು ಶವ ಇರಿಸಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಪೊಲೀಸರು ಹಾಗೂ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.
ವರದಿ; ಇಮ್ರಾನ್ ಉಲ್ಲಾ, ಪಾವಗಡ
+ There are no comments
Add yours