ತುಮಕೂರು(ಜು.10) tumkurnews.in
ಕೊರೋನಾ ವೈರಸ್ ಸೋಂಕು ಬಂದ ಬಳಿಕ ಇಡೀ ದೇಶದಲ್ಲಿ ಜನರು ಕಷ್ಟದಲ್ಲಿದ್ದಾರೆ. ವ್ಯಾಪಾರ, ಉದ್ಯೋಗ ನಷ್ಟ ಅನುಭವಿಸಿ ಜೀವನ ದೂಡಲು ಇನ್ನಿಲ್ಲದ ಕಷ್ಟ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ಕೆಲವೆಡೆ ಭ್ರಷ್ಟಾಚಾರ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ.
ಕೆಲವು ರಾಜಕಾರಣಿಗಳು ಸಿಕ್ಕ ಸಿಕ್ಕಲ್ಲಿ ನನಗೇನು ಲಾಭ ಸಿಗುತ್ತದೆ ಎಂದು ನೋಡುತ್ತಿದ್ದಾರೆ. ಆದರೆ ತುಮಕೂರಿನ ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ಸೊಗಡು ಶಿವಣ್ಣ(ಎಸ್
ಶಿವಣ್ಣ) ಅವರು ಇತರೆ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಹಾಕಿಕೊಡುವ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ.
ತುಮಕೂರು ನಗರದ ಖಾಸಗಿ ಬಸ್ ನಿಲ್ದಾಣ ಸಮೀಪದಲ್ಲಿ ಇರುವ ತಮ್ಮ ಐಷಾರಾಮಿ ಹೋಟೆಲೊಂದನ್ನು ಉಚಿತವಾಗಿ ಕೊರೋನಾ ವಾರಿಯರ್ಸ್ ಗಳಿಗೆ ಬಿಟ್ಟುಕೊಟ್ಟಿದ್ದಾರೆ.
ಕೊರೋನಾ ಕಾಣಿಸಿಕೊಂಡ ಪ್ರಾರಂಭದಲ್ಲೇ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದ ಸೊಗಡು ಶಿವಣ್ಣ, ತಮ್ಮ ಐಷಾರಾಮಿ ಹೋಟೆಲನ್ನು ಕೊರೋನಾ ತಡೆಯಲು ಯಾವುದೇ ಕೆಲಸಕ್ಕೆ ಸಂಪೂರ್ಣವಾಗಿ ಉಚಿತವಾಗಿ ಬಳಸಿಕೊಳ್ಳುವಂತೆ ವಿನಮ್ರವಾಗಿ ಮನವಿ ಮಾಡಿದ್ದರು.
ಸೊಗಡು ಶಿವಣ್ಣ ಅವರ ಈ ಕಾರ್ಯಕ್ಕೆ ಮನಸೋತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, ಅದಕ್ಕೆ ಸಮ್ಮತಿ ಸೂಚಿಸಿದ್ದರು. ಅದರಂತೆ ಅವರ ಹೋಟೆಲನ್ನು ಇದೀಗ ಕೊರೋನಾ ವಾರಿಯರ್ಸ್ ಗಳಿಗೆ ಉಳಿದುಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ.
ತುಮಕೂರಿನ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಐದಾರು ವೈದ್ಯರು ಈ ಐಷರಾಮಿ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಅಧಿಕವಾಗುತ್ತಿರುವುದರಿಂದ ಇನ್ನಷ್ಟು ವೈದ್ಯರು ಮನೆಗೆ ಹೋಗಲು ಸಾಧ್ಯವಾಗದೇ ಸೊಗಡು ಶಿವಣ್ಣ ಅವರ ಹೋಟೆಲ್ ನಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಇಂತಹ ಸಂದರ್ಭಗಳಲ್ಲಿ ತಮ್ಮ ಕೈಯಲ್ಲಿ ಏನು ಆಗುತ್ತದೆಯೋ ಅಷ್ಟನ್ನಾದರೂ ಸಮಾಜಕ್ಕೆ ಒಳಿತು ಮಾಡಬೇಕು ಎಂಬುದನ್ನು ಈ ಹಿರಿಯ ರಾಜಕಾರಣಿ ತೋರಿಸಿಕೊಟ್ಟಿದ್ದಾರೆ.
+ There are no comments
Add yours