ಎಳೆಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ವರದಕ್ಷಿಣೆ ವಿರೋಧಿ ವೇದಿಕೆ ತೀವ್ರ ಕಳವಳ

1 min read

ಎಳೆಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ವರದಕ್ಷಿಣೆ ವಿರೋಧಿ ವೇದಿಕೆ ತೀವ್ರ ಕಳವಳ

Tumkurnews
ತುಮಕೂರು; ಎಳೆಯ ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳು, ಮಹಿಳೆಯರ ಮೇಲೆ ಹಿಂಸಾತ್ಮಕ ಕೃತ್ಯಗಳು ಘಟಿಸುತ್ತಿರುವುದು ನಾಗರಿಕ ಸಮಾಜದಲ್ಲಿ ಅತ್ಯಂತ ಆತಂಕಕಾರಿ ವಿಷಯಗಳು ಎಂದು ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ ಲಲಿತ ಕಳವಳ ವ್ಯಕ್ತಪಡಿಸಿದರು.

ಸುರೇಶ್ ಗೌಡ ವಿರುದ್ಧ FIR; ಕಾರ್ಯಕರ್ತರಿಗೆ ಭದ್ರತೆ ಕೋರಿದ ಗೌರಿಶಂಕರ್
ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನದ ಅಂಗವಾಗಿ ವರದಕ್ಷಿಣೆ ವಿರೋಧಿ ವೇದಿಕೆ-ಸಾಂತ್ವನ ಕೇಂದ್ರದಲ್ಲಿ ಆಯೋಜಿಸಿದ್ದ ಚರ್ಚಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಗರಿಕತೆ ಹೆಚ್ಚಿದಂತೆ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಬೇಕು. ಆದರೆ ದೌರ್ಜನ್ಯಗಳ ಸ್ವರೂಪ ಬದಲಾಗಿ ಹೆಚ್ಚಳ ಕಾಣುತ್ತಿರುವುದು ಅನಾಗರಿಕ ಸಂಸ್ಕೃತಿಯನ್ನು ಪ್ರತಿಪಾದಿಸುವಂತಿದೆ ಎಂದರು. ವಯಸ್ಸಿನ ಇತಿಮಿತಿ ಇಲ್ಲದೆ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಸಂಘಟನಾತ್ಮಕವಾಗಿ ಪ್ರತಿಭಟಿಸುವ ಮನೋಭಾವ ಸಮಾಜದಲ್ಲಿ ಹೆಚ್ಚಬೇಕಿದೆ. ದೌರ್ಜನ್ಯಗಳ ವಿರುದ್ಧ ಎಲ್ಲ ಕಡೆ ಅರಿವು ಮೂಡಬೇಕಿದೆ ಎಂದು ತಿಳಿಸಿದರು.
ಲೇಖಕಿ ಬಾ.ಹ ರಮಾಕುಮಾರಿ ಮಾತನಾಡಿ, ಮಾಧ್ಯಮಗಳು ಮತ್ತು ಮೊಬೈಲ್ ಬಳಕೆ ಇಂದು ಯುವ ಜನತೆಯನ್ನು ಕೆಟ್ಟದಾರಿಗೆ ಕೊಂಡೊಯ್ಯುತ್ತಿವೆ. ಮಾಧ್ಯಮಗಳಲ್ಲಿ ಬರುವ ಚಿತ್ರಣಗಳು, ಸಾಮಾಜಿಕ ಜಾಲತಾಣದ ದೃಶ್ಯಗಳು ಯುವ ಜನತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಶಾಲಾ ಕಾಲೇಜಿಗೆ ಹೋಗಿಬರುತ್ತಿರುವ ಹೆಣ್ಣು ಮಕ್ಕಳು ಕಾಣೆಯಾಗುತ್ತಿರುವ ವರದಿಗಳು ಮರುಕಳಿಸುತ್ತಲೇ ಇವೆ, ಹೀಗೆ ಕಾಣೆಯಾದವರು ಎಲ್ಲಿಗೆ ಹೋಗುತ್ತಿದ್ದಾರೆ? ಇದು ಅತ್ಯಂತ ಗಂಭೀರ ಹಾಗೂ ಯೋಚಿಸಬೇಕಾದ ಸಂಗತಿಯಾಗಿದ್ದು ಸಮಾಜದ ಪ್ರತಿಯೊಬ್ಬರೂ ಈ ಬಗ್ಗೆ ಚಿಂತಿಸಬೇಕು. ಯುವ ಜನತೆ ಅಡ್ಡದಾರಿ ಹಿಡಿಯುತ್ತಿದ್ದು, ಅವರ ಕೃತ್ಯಗಳಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳು ಮತ್ತಷ್ಟು ಗಂಭೀರವಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮಾಜದಲ್ಲಿ ನಡೆಯುವ ವಿವಿಧ ರೀತಿಯ ದೌರ್ಜನ್ಯಗಳ ಬಗ್ಗೆ ಹೆಣ್ಣು ಮಕ್ಕಳು ಪೋಷಕರ ಬಳಿ ಹೇಳಿಕೊಳ್ಳಬೇಕು. ಆಗ ಪರಿಹಾರ ಕ್ರಮಗಳಿಗೆ ಅವಕಾಶ ಸಿಗುತ್ತದೆ. ಎಷ್ಟೋ ಹೆಣ್ಣು ಮಕ್ಕಳು ಹೇಳಿಕೊಳ್ಳಲು ಅವಕಾಶವಿಲ್ಲದೆ ಜೀವವನ್ನೇ ನಶ್ವರ ಮಾಡಿಕೊಳ್ಳುತ್ತಿದ್ದಾರೆ. ವಿವೇಚನಾ ಶಕ್ತಿ ಬಳಸಿಕೊಳ್ಳದಿರುವುದೇ ಇದಕ್ಕೆ ಕಾರಣ ಎಂದು ತಿಳಿಸಿದರು.
ಲೇಖಕಿ ಸಿ.ಎಲ್ ಸುನಂದಮ್ಮ ಮಾತನಾಡಿ, ಬಹಳಷ್ಟು ದೌರ್ಜನ್ಯಗಳು ಸಂಬಂಧಿಗಳಿಂದಲೇ ಘಟಿಸುತ್ತಿವೆ. ವಿಶ್ವಸಂಸ್ಥೆಯ ವರದಿಯಲ್ಲಿಯೇ ಇದನ್ನು ಉಲ್ಲೇಖಿಸಲಾಗಿದೆ. ಮಹಿಳೆಗೆ ದುಡಿಮೆ ಇದ್ದರೂ ಶೋಷಣೆ ತಪ್ಪಿಲ್ಲ. ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಮೊಬೈಲ್ ಗೀಳಿನಿಂದ ಮಕ್ಕಳು, ಪೋಷಕರು ಹೊರಬರಬೇಕು ಎಂದು ಮನವಿ ಮಾಡಿದರು.
ವಕೀಲೆ ಮಮತ ರವಿಕುಮಾರ್ ಮಾತನಾಡಿ, ಸುಶಿಕ್ಷಿತರು, ಹಣಬಲವುಳ್ಳವರು ತಪ್ಪು ಮಾಡಿ ಕಾನೂನಿನ ಮಾರ್ಗ ಹಿಡಿಯುತ್ತಾರೆ. ಹಣದ ಮೂಲಕ ನ್ಯಾಯ ದೊರಕಿಸಿಕೊಳ್ಳುತ್ತಾರೆ. ಆದರೆ ಆರ್ಥಿಕವಾಗಿ ಸಬಲರಿಲ್ಲದವರು ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇಂತಹವರ ಪರವಾಗಿ ಸಂಘ ಸಂಸ್ಥೆಗಳು ನಿಲ್ಲಬೇಕು. ಅಂತಹ ನೊಂದವರ ಪರವಾಗಿ ಸಾಂತ್ವನ ಕೇಂದ್ರಗಳು ಹಾಗೂ ಸಂಘ ಸಂಸ್ಥೆಗಳು ಇವೆ ಎಂಬುದನ್ನು ತಿಳಿಸಬೇಕು ಎಂದರು.

ಸುರೇಶ್ ಗೌಡ ವಿರುದ್ಧ FIR; ಕಾರ್ಯಕರ್ತರಿಗೆ ಭದ್ರತೆ ಕೋರಿದ ಗೌರಿಶಂಕರ್
ಗೀತಾ ನಾಗೇಶ್ ಮಾತನಾಡಿ, ಹಾಸ್ಟೆಲ್‍ಗಳು ಸೇರಿದಂತೆ ಸಮಾಜದಲ್ಲಿ ವಿವಿಧ ಪ್ರದೇಶಗಳು ಹೆಣ್ಣು ಮಕ್ಕಳಿಗೆ ಸುರಕ್ಷಿತವಲ್ಲ ಎಂಬುದನ್ನು ಇತ್ತೀಚಿನ ಕೆಲವು ಬೆಳವಣಿಗೆಗಳು ತೋರಿಸಿಕೊಟ್ಟಿವೆ. ಇವುಗಳ ವಿರುದ್ಧ ಜಾಗೃತರಾಗಬೇಕು ಎಂದು ತಿಳಿಸಿದರು.
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ನಿವೃತ್ತ ಸಂರಕ್ಷಣಾಧಿಕಾರಿ ಜಯಲಕ್ಷ್ಮಿ ಮಾತನಾಡಿ, ಕುಟುಂಬದೊಳಗೆ ಕೆಲವು ಸಂದರ್ಭಗಳಲ್ಲಿ ಮಹಿಳೆ ಹೇಗೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ, ನ್ಯಾಯ ದೊರಕಿಸಿಕೊಳ್ಳಲು ಆಕೆ ಎಷ್ಟು ಕಷ್ಟ ಪಡಬೇಕು ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು.
ರಾಜೇಶ್ವರಿ ಚಂದ್ರಶೇಖರ್, ಪಾರ್ವತಮ್ಮ, ಗಂಗಲಕ್ಷ್ಮಿ, ಪ್ರಹ್ಲಾದ ಇತರರು ಮಾತನಾಡಿದರು.
ಸಾಂತ್ವನ ಕೇಂದ್ರದ ಸಮಾಲೋಚಕಿ ರಾಧಮ್ಮ ಮತ್ತಿತರರು ಉಪಸ್ಥಿತರಿದ್ದರು. ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ ರಾಜಕುಮಾರ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿವೃತ್ತಿ ಹೊಂದಿದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಸಂರಕ್ಷಣಾಧಿಕಾರಿ ಜಯಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.

About The Author

You May Also Like

More From Author

+ There are no comments

Add yours