ತುಮಕೂರು(ಜು.8) tumkurnews.in
ನಗರದಲ್ಲಿ ಹಾಡ ಹಗಲೇ ವ್ಯಕ್ತಿಯೋರ್ವನ ಕೊಲೆಯಾಗಿದೆ. ಅಕ್ಕನೊಂದಿಗೆ ಅನುಚಿತವಾಗಿ ವರ್ತಿಸಿದಲ್ಲದೆ ರಸ್ತೆಯಲ್ಲಿ ಅಡ್ಡಗಟ್ಟಿ ಗಲಾಟೆ ಮಾಡಿದ ಎಂಬ ಕಾರಣಕ್ಕೆ ವ್ಯಕ್ತಿಯೋರ್ವನ ಕೊಲೆಯಾಗಿದೆ. ತುಮಕೂರು ನಗರದ ಮಂಡಿಪೇಟೆಯ ಜಾಮಿಯಾ ಮಸೀದಿ ಬಳಿ ಘಟನೆ ನಡೆದಿದ್ದು, ದಾದಾಪಿರ್(55) ಕೊಲೆಯಾದವನು.
ಆರೋಪಿ ಮಧು ಕುಮಾರ್ ಅಲಿಯಾಸ್ ಮಧು ಅಲಿಯಾಸ್ 307 ಎಂಬಾತನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ:
ಮಧು ಕುಮಾರ್ ಎಂಬಾತನ ಅಕ್ಕ ಲಕ್ಷ್ಮಿ ಎಂಬುವರು ಸ್ವತಂತ್ರ ಚೌಕ ವೃತ್ತದ ಬಳಿ ಟೀ ಕ್ಯಾಂಟೀನ್ ಹೊಂದಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆಗೆ ಅಲ್ಲಿಗೆ ಹೋಗಿದ್ದ ತಮ್ಮ ಮಧುಕುಮಾರ್ ಟೀ ಕುಡಿಯುತ್ತಾ ಕುಳಿತಿದ್ದನು. ಆಗ ಅಲ್ಲಿಗೆ ಬಂದ ದಾದಾಪಿರ್, ಬಿಸ್ಕೇಟ್ ಪಾಕೆಟ್ ಕೇಳಿದ್ದಾನೆ. ಆಗ ಲಕ್ಷ್ಮಿಯವರು ಹಣ ಕೊಡಿ ಎಂದು ಹೇಳಿದ್ದಾರೆ. ಆಗ ದಾದಾಪಿರ್, ನಾನೇನು ದುಡ್ಡು ಪ್ರಿಂಟ್ ಮಾಡ್ತೀನಾ ಎಂದು ಮಾತನಾಡಿದ್ದಾನೆ. ಆಗ ಲಕ್ಷ್ಮಿಯವರು ಹಣ ಕೊಟ್ಟರೆ ಮಾತ್ರ ಬಿಸ್ಕತ್ತು ನೀಡುವುದಾಗಿ ಹೇಳುತ್ತಾರೆ. ಆಗ ದಾದಾಪಿರ್ ಅವಾಚ್ಯ ಶಬ್ದದಿಂದ ನಿಂದಿಸುತ್ತಾನೆ.
ಇದರಿಂದ ಕೆರಳಿದ ಮಧು, ದಾದಾಪಿರ್ ಗೆ ಸರಿಯಾಗಿ ಮಾತನಾಡುವಂತೆ ತಿಳಿ ಹೇಳಿದ್ದಾನೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅಲ್ಲಿಯೇ ಇದ್ದ ಸ್ನೇಹಿತರು ಇಬ್ಬರನ್ನು ಜಗಳ ಬಿಡಿಸಿ ಕಳುಹಿಸಿದ್ದಾರೆ.
ಆದರೆ ಅಷ್ಟಕ್ಕೇ ಸುಮ್ಮನಾಗದ ದಾದಾಪಿರ್, ಮಧುಕುಮಾರ್ ನನ್ನು ಹಿಂಬಾಲಿಸಿಕೊಂಡು ಹೋಗಿ ಜಾಮಿಯಾ ಮಸೀದಿ ಬಳಿ ಅಡ್ಡ ಹಾಕಿದ್ದಾನೆ. ಅಲ್ಲಿ ಪುನಃ ಜಗಳ ತೆಗೆದಿದ್ದು, ಏನೋ ಹೊಡಿತೀಯಾ.. ಹೊಡಿ ನೋಡ್ತೀನಿ.. ಹೊಡಿಯೋ ನೋಡ್ತೀನಿ… ಎಂದು ಅವಾಜ್ ಹಾಕಿದ್ದಾನೆ. ಅಲ್ಲದೇ ತಾನೇ ಮೊದಲು ಮಧುಕುಮಾರನ ಕಪಾಳಕ್ಕೆ ಬಾರಿಸಿದ್ದಾರೆ. ಕೆನ್ನೆಯ ಮೇಲೆ ಗುರುತು ಬೀಳುವಂತೆ ಹೊಡೆತ ಬಿದ್ದಿದ್ದರಿಂದ ಮಧುಕುಮಾರ್ ಕೆರಳಿದ್ದಾನೆ. ತಕ್ಷಣವೇ ತಿರುಗಿಸಿ ದಾದಾಪಿರ್ ಗೆ ಎರಡು ಏಟು ಕಪಾಳಕ್ಕೆ ಪಂಚ್ ಮಾಡಿದ್ದಾನೆ. ದಾದಾಪಿರ್ ಕುಸಿದು ಬಿದ್ದಿದ್ದು, ಮತ್ತೊಮ್ಮೆ ಮಧುಕುಮಾರ್ ಆತನಿಗೆ ಕಾಲಿನಿಂದ ಒದ್ದಿದ್ದಾನೆ. ಅಷ್ಟೇ ನೋಡ ನೋಡುತ್ತಿದ್ದಂತೆ ದಾದಾಪಿರ್ನ ಕೊಲೆಯಾಗಿದೆ.
ಒಂದು ಸಣ್ಣ ಜಗಳ, ಕೋಪ ಕೊಲೆಯಲ್ಲಿ ಅಂತ್ಯವಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ತಿಪ್ಪೇಸ್ವಾಮಿ, ಇನ್ಸ್ ಪೆಕ್ಟರ್ ನವೀನ್, ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಹಾಗೂ ಕ್ರೈಂ ಸಿಬ್ಬಂದಿಗಳು ಭೇಟಿ ನೀಡಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ.
+ There are no comments
Add yours