ಗ್ಯಾರಂಟಿ ಅನುಷ್ಠಾನ ಉಸ್ತುವಾರಿ ಸಮಿತಿ ಕಚೇರಿಯಲ್ಲಿ ಗೌರಿಶಂಕರಗೆ ಏನು ಕೆಲಸ? ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಪ್ರಶ್ನೆ
ತುಮಕೂರು ಗ್ರಾಮಾಂತರ ಕ್ಷೇತ್ರದ ಪರಾಜಿತ ಮತ್ತು ಅನೂರ್ಜಿತ ಅಭ್ಯರ್ಥಿ ಎನಿಸಿರುವ ಗೌರಿಶಂಕರ್ ಅವರು ಗ್ಯಾರಂಟಿ ಅನುಷ್ಠಾನ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದು ಕಾನೂನು ಬಾಹಿರವಲ್ಲವೇ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಪ್ರಶ್ನಿಸಿದ್ದಾರೆ.
Tumkur news
ತುಮಕೂರು: ಗ್ಯಾರಂಟಿ ಅನುಷ್ಠಾನ ಉಸ್ತುವಾರಿ ಸಮಿತಿ ಕಚೇರಿಯಲ್ಲಿ ಮಾಜಿ ಶಾಸಕರಿಗೆ ಏನು ಕೆಲಸ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಪ್ರಶ್ನಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ರವಿಶಂಕರ್, ಈ ಪ್ರಶ್ನೆಯನ್ನು ನಾವು ಕೇಳಬೇಕಾಗಿ ಬಂದಿರುವುದು ದುರದೃಷ್ಟಕರ. ಅಷ್ಟೇ ಅಲ್ಲ ಕಾನೂನಿನ ಆಡಳಿತ ಪಾಲನೆ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ. ಏಕೆಂದರೆ ಪ್ರತಿ ಶುಕ್ರವಾರ ತುಮಕೂರು ತಾಲ್ಲೂಕು ಕಚೇರಿಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಪರಾಜಿತ ಮತ್ತು ಅನೂರ್ಜಿತ ಅಭ್ಯರ್ಥಿ ಎನಿಸಿರುವ ಗೌರಿಶಂಕರ್ ಅವರು ಗ್ಯಾರಂಟಿ ಅನುಷ್ಠಾನ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದು ಕಾನೂನು ಬಾಹಿರವಲ್ಲವೇ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಪ್ರಶ್ನಿಸಿದ್ದಾರೆ.
ಅವರು ಯಾವ ಕಾನೂನಿನ ಅಡಿಯಲ್ಲಿ ಈ ಕೆಲಸ ಮಾಡುತ್ತಿದ್ದಾರೆ ಎನ್ನುವುದು ನಮಗೆ ತಿಳಿಯುತ್ತಿಲ್ಲ. ಇದು ಇವತ್ತು ಮಾತ್ರ ನಡೆದ ವಿದ್ಯಮಾನವಲ್ಲ. ಪ್ರತಿ ಶುಕ್ರವಾರ ಅವರು ಇದೇ ರೀತಿ ಕಾನೂನಿಗೆ ಸಂಪೂರ್ಣ ವಿರುದ್ಧವಾದ ತಮ್ಮ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ.
ಇದನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳಾಗಲೀ, ಜಿಲ್ಲಾ ಮಟ್ಟದ ಅಧಿಕಾರಿಗಳಾಗಲೀ ಇದುವರೆಗೆ ತಡೆಯದೇ ಇರುವುದನ್ನು ನೋಡಿದರೆ ತುಮಕೂರು ಜಿಲ್ಲೆಯಲ್ಲಿ ಕಾನೂನಿಗೆ ಯಾವುದೇ ಮಾನ್ಯತೆ ಇಲ್ಲ ಎನ್ನುವುದು ತಿಳಿಯುತ್ತದೆ.
ಗೌರಿಶಂಕರ್ ಅವರು ಇಂಥ ಅಕ್ರಮಗಳಿಗೆ ಹೆಸರುವಾಸಿಯಾಗಿದ್ದಾರೆ. ಅದಕ್ಕಾಗಿಯೇ ಅವರು ಶಾಸಕರಾಗಿ ಆಯ್ಕೆಯಾದುದನ್ನು ಮಾನ್ಯ ಹೈಕೋರ್ಟ್ ಅನೂರ್ಜಿತಗೊಳಿಸಿದೆ. ಆದಾಗ್ಯೂ ಅವರು ಎಚ್ಚರಗೊಳ್ಳದೇ ಇರುವುದು ನಮಗೆ ಆಶ್ಚರ್ಯವನ್ನೇನೂ ಉಂಟು ಮಾಡಿಲ್ಲ. ಅದು ಅವರ ಸ್ವಭಾವ. ಆದರೆ, ತಾಲ್ಲೂಕು ಆಡಳಿತ ಮತ್ತು ಜಿಲ್ಲಾ ಆಡಳಿತ ಇದನ್ನೆಲ್ಲ ನೋಡಿಕೊಂಡು ಕಣ್ಣುಮುಚ್ಚಿಕೊಂಡು ಕುಳಿತಿರುವುದು ನಮಗೆ ಆಘಾತವುಂಟು ಮಾಡಿದೆ.
ಈ ಕುರಿತು ತಾಲ್ಲೂಕು ಅಧಿಕಾರಿಗಳು ಅಸಹಾಯಕರಾಗಿರಬಹುದು. ಅವರು ಗೌರಿಶಂಕರ್ ಅವರ ಮರ್ಜಿಯಲ್ಲಿಯೂ ಇರಬಹುದು. ಆದರೆ, ದಕ್ಷತೆಗೆ, ಪ್ರಾಮಾಣಿಕತೆಗೆ ಹೆಸರಾದ ಜಿಲ್ಲಾಧಿಕಾರಿಗಳು ಮತ್ತು ಸಜ್ಜನ ರಾಜಕಾರಣಿ ಎನಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಅವರು ಇಂಥದಕ್ಕೆಲ್ಲ ಮೂಕ ಸಾಕ್ಷಿಯಾಗಬಾರದು. ಇದಕ್ಕೆ ತಕ್ಷಣ ಕಡಿವಾಣ ಹಾಕದೇ ಇದ್ದರೆ ಈ ಅಕ್ರಮಕ್ಕೆ ಈ ಉಭಯತ್ರರ ಅನುಮತಿ ಇದೆ ಎಂದೇ ಅರ್ಥವಾಗುತ್ತದೆ. ಆದರೆ, ರಾಜ್ಯದಲ್ಲಿ ಜವಾಬ್ದಾರಿಯುತವಾದ ವಿರೋಧ ಪಕ್ಷವಾಗಿ ನಾವು ಸುಮ್ಮನೆ ಇರಲಾಗದು. ತಾಲ್ಲೂಕು ಕಚೇರಿಗೆ ಬರದಂತೆ ಮತ್ತು ಗ್ಯಾರಂಟಿ ಅನುಷ್ಠಾನ ಕಲಾಪದಲ್ಲಿ ಭಾಗವಹಿಸದಂತೆ ಗೌರಿಶಂಕರ್ ಅವರಿಗೆ ಅಡ್ಡಿ ಮಾಡುವ ಎಲ್ಲ ಅಧಿಕಾರವನ್ನೂ ಪ್ರಜಾಪ್ರಭುತ್ವ ನಮಗೆ ಕೊಟ್ಟಿದೆ.
ಈ ವಿಚಾರವನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಬೇಕು ಎಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
