cool hit counter

ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿ ಉದ್ಘಾಟಿಸಿದ ರಾಷ್ಟ್ರಪತಿ

Tumkur News
Ashok R.P. is a passionate journalist and media professional known for his dedication to truthful, people-centric reporting. With a keen interest in regional news, public issues,...
5 Min Read

ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿ ಉದ್ಘಾಟಿಸಿದ ರಾಷ್ಟ್ರಪತಿ

ಮಠದ ಶಿಕ್ಷಣ ಕ್ರಾಂತಿಗೆ ರಾಷ್ಟ್ರಪತಿ ಶ್ಲಾಘನೆ; ಕರ್ನಾಟಕ ರಾಷ್ಟ್ರ ನಿರ್ಮಾಣದ ಪ್ರಮುಖ ಕೇಂದ್ರ;
ಭಾಷಣದಲ್ಲಿ ಕುವೆಂಪು ನೆನೆದ ರಾಷ್ಟ್ರಪತಿ

Tumkur News
ತುಮಕೂರು: ಶಿಕ್ಷಣವು ವ್ಯಕ್ತಿತ್ವ ವಿಕಸನ ಮತ್ತು ವ್ಯಕ್ತಿತ್ವ ನಿರ್ಮಾಣದ ಅಡಿಪಾಯವಾಗಿದೆ ಹಾಗೂ ಶಿಕ್ಷಣವು ಸ್ವಾವಲಂಬನೆಗೆ ದಾರಿ ಮಾಡಿಕೊಡಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಪ್ರಾಯ ವ್ಯಕ್ತಪಡಿಸಿದರು.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಬುಧವಾರ ಆಯೋಜಿಸಿದ್ದ ಲಿಂಗೈಕ್ಯ ಡಾ: ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮ ದಿನಾಚರಣೆ ಹಾಗೂ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಅಥವಾ ವಿದ್ಯೆ ವ್ಯಕ್ತಿತ್ವ ವಿಕಸನ ಮತ್ತು ವ್ಯಕ್ತಿತ್ವ ನಿರ್ಮಾಣದ ಅಡಿಪಾಯವಾಗಿದ್ದು, ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಶಿಕ್ಷಣ ಒದಗಿಸುವ ಮೂಲಕ ಸಮಾಜಕ್ಕೆ ಶ್ರೀ ಸಿದ್ದಗಂಗಾ ಮಠವು ಅತ್ಯಂತ ಅಮೂಲ್ಯ ಕೊಡುಗೆ ನೀಡುತ್ತಿರುವುದು ಅತ್ಯಂತ ಪ್ರಶಂಸನೀಯ ಎಂದು ಅವರು ಅಭಿಪ್ರಾಯಿಸಿದರು.
ಶ್ರೀ ಮಠವು ಬಸವಣ್ಣನವರ ಆದರ್ಶಗಳನ್ನು ಅನುಸರಿಸುವ ಮೂಲಕ ತಾರತಮ್ಯದ ಸಾಮಾಜಿಕ ವ್ಯವಸ್ಥೆ ಮತ್ತು ಸಾರ್ವತ್ರಿಕ ಭಾಗವಹಿಸುವಿಕೆಯ ಆಧಾರದ ಮೇಲೆ ಕಾರ್ಯನಿರ್ವಹಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಕೈಗನ್ನಡಿಯಾಗಿದೆ ಎಂದರು.
‘ದಯವೇ ಧರ್ಮದ ಮೂಲವಯ್ಯ’ ಎಂಬ ಬಸವಣ್ಣನವರ ಆಶಯದಂತೆ ಸಿದ್ದಗಂಗಾ ಮಠವು ಎಲ್ಲಾ ಸಮುದಾಯದ ಎಲ್ಲಾ ಜನವರ್ಗಗಳಿಗೆ ಅನ್ನ, ಅಕ್ಷರ, ಆಶ್ರಯದ ಮೂಲ ಮಂತ್ರದೊಂದಿಗೆ ಸಂಸ್ಕಾರವನ್ನು ನೀಡುತ್ತಿದೆ. ಎಲ್ಲಾ ನಂಬಿಕೆಗಳ ಆಧಾರ ಕರುಣೆ. ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲಿ ಇಡೀ ಪ್ರಪಂಚದ ಬಗ್ಗೆ ಪ್ರೀತಿ ಮತ್ತು ಕರುಣೆಯ ಭಾವನೆ ಇರಬೇಕು. ಈ ನಿಟ್ಟಿನಲ್ಲಿ ಸಿದ್ದಗಂಗೆ ಮಠದ ಲಿಂಗೈಕ್ಯ ಡಾ: ಶಿವಕುಮಾರ ಸ್ವಾಮೀಜಿ ಅವರು ತಮ್ಮ ಜನ್ಮ ಶತಮಾನೋತ್ಸವ ಆಚರಿಸಿದ ನಂತರ ಹಲವು ವರ್ಷಗಳ ಕಾಲ ತಮ್ಮ ಆಧ್ಯಾತ್ಮಿಕ ಚಟುವಟಿಕೆಯಿಂದ ಮಾನವೀಯತೆಯನ್ನು ಶ್ರೀಮಂತಗೊಳಿಸಿದ್ದರು ಎಂದು ಕೇಳಲ್ಪಟ್ಟಿದ್ದೇನೆ. ಬಡವರು ಹಾಗೂ ದುರ್ಬಲರ ಸೇವೆಗೆ ತಮ್ಮ ಇಡೀ ಆಯುಷ್ಯವನ್ನು ಮುಡಿಪಾಗಿಟ್ಟಿದ್ದರು. ರಾಷ್ಟ್ರ ನಿರ್ಮಾಣ, ಲೋಕೋಪಕಾರ ಮತ್ತು ಕರ್ತವ್ಯ ನಿಷ್ಠೆಯ ಮಾರ್ಗವನ್ನು ಅನುಸರಿಸಿದರೆ ಮಾತ್ರ ನಾವು ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ರಾಷ್ಟ್ರೀ ನಿರ್ಮಾಣದ ಪ್ರಮುಖ ಕೇಂದ್ರ: ಕಠಿಣ ಪರಿಶ್ರಮ, ಸಾರ್ವಜನಿಕ ಸೇವೆ ಮತ್ತು ರಾಷ್ಟ್ರೀಯ ಸೇವೆ ಪರಸ್ಪರ ಸಂಬಂಧ ಹೊಂದಿವೆ. ಸಾರ್ವಜನಿಕ ಸೇವೆ ಮತ್ತು ರಾಷ್ಟ್ರೀಯ ಸೇವೆಗೆ ಆಧ್ಯಾತ್ಮಿಕತೆಯು ಬಲವಾದ ಅಡಿಪಾಯ ಒದಗಿಸುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕವು ಸಾರ್ವಜನಿಕ ಸೇವೆ, ರಾಷ್ಟ್ರೀಯ ಸೇವೆ, ಆಧ್ಯಾತ್ಮಿಕತೆ ಹಾಗೂ ಆಧುನಿಕ ಪ್ರಗತಿಯ ಕೆಲವು ಪ್ರಭಾವಶಾಲಿ ಉದಾಹರಣೆಗಳನ್ನು ನೀಡುತ್ತದೆ. ಇದಕ್ಕಾಗಿ ಕರ್ನಾಟಕದ ಶ್ರಮಶೀಲ ಮತ್ತು ಪ್ರತಿಭಾನ್ವಿತ ನಿವಾಸಿಗಳು ಅಭಿನಂದನೆಗೆ ಅರ್ಹರು. ಕರ್ನಾಟಕದ ಜನರು ನಿರಂತರವಾಗಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಕರ್ನಾಟಕವು ರಾಷ್ಟ್ರ ನಿರ್ಮಾಣದ ಪ್ರಮುಖ ಕೇಂದ್ರವಾಗಬಹುದು ಎಂಬುದು ನನ್ನ ನಂಬಿಕೆ ಎಂದರು.
ಕುವೆಂಪು ವಿರಚಿತ ನಾಡಗೀತೆಗೆ ರಾಷ್ಟ್ರಪತಿ ನಮನ: ವಂದೇ ಮಾತರಂ ರಾಷ್ಟ್ರೀಯ ಗೀತೆಯ ರಚನೆಗೆ 150 ವರ್ಷಗಳು ಸಂದಿದ್ದು, ದೇಶಾದ್ಯಂತ 150ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ಕರ್ನಾಟಕ ಗೀತೆಯಲ್ಲಿ ಕರ್ನಾಟಕ ಮಾತೆಯನ್ನು ಭಾರತ ಮಾತೆಯ ಮಗಳು ಎಂದು ವರ್ಣಿಸಿರುವುದು ನೆನಪಾಗುತ್ತದೆ ಎಂದ ಅವರು, “ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ” ಎಂಬ ಆ ಅಮರ ವಾಣಿಯು ದೇಶ ವಾಸಿಗಳ ಹೃದಯದಲ್ಲಿ ಕರ್ನಾಟಕದ ಬಗ್ಗೆ ಹಾಗೂ ರಾಷ್ಟ್ರೀಯ ಏಕತೆಯ ಬಗ್ಗೆ ಇರುವ ಹೆಮ್ಮೆಯ ಭಾವನೆಯನ್ನು ಜಾಗೃತಗೊಳಿಸುತ್ತದೆ. ಈ ಮೂಲಕ ಗೀತೆಯ ಭಾರತೀಯ ಮೌಲ್ಯಗಳ ಸಮಗ್ರತೆ ಮತ್ತು ಔದಾರ್ಯದ ವಿವರಣೆಯನ್ನು ಒದಗಿಸುತ್ತದೆ. ಇದೇ ಭಾರತೀಯ ಮೌಲ್ಯಗಳು ಲಿಂಗೈಕ್ಯ ಶ್ರೀಗಳ ಅಸಾಧಾರಣ ಕೊಡುಗೆಯಲ್ಲಿಯೂ ಪ್ರತಿಫಲಿಸುತ್ತವೆ ಎಂದರು.
ಶ್ರೀ ಶಿವಕುಮಾರ ಸ್ವಾಮೀಜಿಯವರ ಸತ್ಕಾರ್ಯಗಳ ಪರಂಪರೆಯನ್ನು ಇಂದಿನ ಶ್ರೀಗಳು ಮುಂದುವರೆಸಿಕೊಂಡು ಹೋಗುತ್ತಿದ್ದು, ಮಠದೊಂದಿಗಿನ ಭಕ್ತರ ಬಾಂಧವ್ಯ ಶ್ರೀಮಠದಿಂದ ಗ್ರಾಮೀಣ ಮಕ್ಕಳಿಗೆ ಮತ್ತು ಗ್ರಾಮೀಣ ಜನತೆಗೆ ಸಿಗುತ್ತಿರುವ ತ್ರಿವಿಧ ದಾಸೋಹ ಮತ್ತು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಸಿಗುತ್ತಿರುವ ವಿಶೇಷ ಸೌಲಭ್ಯಗಳು ಮತ್ತಷ್ಟು ಉನ್ನತ ಮಟ್ಟದಲ್ಲಿ ನಡೆಯಲಿ ಎಂದು ಆಶಿಸಿದ ಅವರು, ಇಂತಹ ಶ್ರೇಷ್ಠ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಮಗೆ ಅತ್ಯಂತ ಸಂತೋಷದ ದಿನವಾಗಿದೆ ಎಂದರು.
ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಮಾತನಾಡಿ, ಲಿಂಗೈಕ್ಯ ಡಾ: ಶ್ರೀ ಶಿವಕುಮಾರ ಸ್ವಾಮೀಜಿ ಅವರು ಆದರ್ಶ ಜೀವಿಗಳು. ಸರಳತೆ ಮತ್ತು ಮಾನವೀಯತೆಯ ಮೂಲಕ ಬಡವರಿಗೆ ತ್ರಿವಿಧ ದಾಸೋಹದ ಮೂಲಕ ಸೇವೆಯನ್ನು ಮಾಡುವ ಮೂಲಕ ಆದರ್ಶಪ್ರಾಯರಾಗಿದ್ದಾರೆ ಎಂದರು. ಶ್ರೀ ಸಿದ್ದಗಂಗಾ ಮಠವು ಕೇವಲ ಧಾರ್ಮಿಕ ಕೇಂದ್ರವಲ್ಲದೆ, ಇದು ಆಧ್ಯಾತ್ಮಕತೆಯ ಮೂಲಕ ಸಮಾನತೆ ಮತ್ತು ಮಾನವೀಯ ಮೌಲ್ಯವನ್ನು ಬಿತ್ತುವ ಮೂಲಕ ನಿರಂತರ ಸೇವೆಯನ್ನು ಮಾಡುತ್ತಿರುವ ಸಾಮಾಜಿಕ ಕೇಂದ್ರವಾಗಿದೆ ಎಂದರು.
ದಿವ್ಯ ಸಾನಿಧ್ಯವಹಿಸಿಕೊಂಡಿದ್ದ ಶ್ರೀ ಸಿದ್ಧಗಂಗಾ ಮಠದ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, 111 ವರ್ಷಗಳ ಸುದೀರ್ಘ ತಮ್ಮ ಜೀವಿತಾವಧಿಯಲ್ಲಿ 79 ವರ್ಷಗಳ ಸುದೀರ್ಘ ಸೇವೆಯನ್ನು ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸಮಾಜ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದರು. ಇದು ಅವರ ಆದರ್ಶ, ಆಚಾರ, ವಿಚಾರ, ವಿಸ್ಮಯ, ಪವಾಡ ಎಂದರೆ ತಪ್ಪಾಗಲಾರದು. ಗ್ರಾಮಾಂತರ ಭಾಗದ ಬಡ ಮಕ್ಕಳಿಗೆ, ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಬೇಕೆಂಬುದು ಶ್ರೀಗಳ ಮಹತ್ತರ ಆಶಯವಾಗಿತ್ತು. ಈ ನಿಟ್ಟಿನಲ್ಲಿ ಭಕ್ತರಿಗೆ ಸನ್ಮಾರ್ಗವನ್ನು ತೋರುವ ಮೂಲಕ ಶ್ರೀ ಮಠವು ನಿರಂತರ ಸೇವೆಯನ್ನು ಮುಂದುವರೆಸಿದೆ ಎಂದರು.
ಕೇಂದ್ರ ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಶ್ರೀ ಸಿದ್ಧಗಂಗಾ ಮಠವು ಕೇವಲ ಆಧ್ಯಾತ್ಮಿಕ ಕೇಂದ್ರವಲ್ಲದೆ, ಆಧುನಿಕ ಸಂಶೋಧನಾ ಕೇಂದ್ರವಾಗಿದೆ. ಸಂಸ್ಕಾರವನ್ನು ಕೊಡುವ ಮೂಲಕ ಭಕ್ತರಿಗೆ ಸನ್ಮಾರ್ಗವನ್ನು ತೋರಿಸುವ ವಿಶ್ವದ ಏಕೈಕ ಮಠ. ಇದಕ್ಕೆ ಕಾರಣ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಹಸಿವಿನ ಅರ್ಥವಾಗಿತ್ತು. ಜಾತಿ, ಧರ್ಮವನ್ನು ಮೀರಿ ಬಡವರು ಹಸಿವಿನಿಂದ ನರಳಬಾರದು. ಹಣವಿಲ್ಲದವರು ಜ್ಞಾನದಿಂದ ವಂಚಿತರಾಗಬಾರದು ಎಂಬ ಧ್ಯೇಯವನ್ನು ಇಟ್ಟುಕೊಂಡಿರುವ ವಿಶ್ವದ ಏಕೈಕ ಮಠ ಇದಾಗಿದೆ. ಈ ಮೂಲಕ ಲಿಂಗೈಕ್ಯ ಶ್ರೀಗಳು ಮನುಷ್ಯನಿಂದ ಮಹಾದೇವರಾದರು ಎಂದರು.
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಸಚಿವರಾದ ಎಂ.ಬಿ. ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್ ಉಪಸ್ಥಿತರಿದ್ದರು.

ಡಾ.ಶಿವಕುಮಾರ ಸ್ವಾಮಿಗಳ ಜಯಂತಿ ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಶ್ರೀಗಳ ಕಡೆಗಣನೆ!; ಭಕ್ತರ ಆಕ್ರೋಶ

Share This Article
Follow:
Ashok R.P. is a passionate journalist and media professional known for his dedication to truthful, people-centric reporting. With a keen interest in regional news, public issues, politics, social developments, and ground-level reporting, he has built a reputation for delivering accurate and impactful stories that connect with the common people. He actively covers current affairs, civic issues, crime reports, political events, cultural programs, and human-interest stories with a commitment to ethical journalism. His reporting style focuses on clarity, credibility, and public awareness, making his work relatable and informative to readers across Karnataka. Ashok R.P. believes journalism is a powerful medium to raise public voice and strengthen democracy through responsible reporting and factual storytelling. Special Interests: * Regional & Political News * Public Interest Stories * Social Awareness Reporting * Ground Reality Journalism * Digital Media & News Publishing
Leave a Comment