https://chat.whatsapp.com/Haj1IrKLgZpAIglCBfQbtB" alt="" width="397" height="133" />
ಬೆಂಗಳೂರು ನಗರ ವಿಶ್ವ ಮನ್ನಣೆ ಗಳಿಸಲು ಕೆಂಪೇಗೌಡರ ದೂರದೃಷ್ಟಿತ್ವವೇ ಕಾರಣ
Tumkurnews
ತುಮಕೂರು: ಇಂದಿನ ಬೆಂಗಳೂರು ನಗರವು ಉದ್ಯಾನ ನಗರಿ, ಸ್ವಚ್ಛನಗರಿ, ಸಿಲಿಕಾನ್ ಸಿಟಿ, ಕೂಲ್ ಸಿಟಿ, ಐಟಿಬಿಟಿ ಸಿಟಿ ಎಂದೆಲ್ಲಾ ವಿಶ್ವಮನ್ನಣೆ ಪಡೆಯಲು ನಾಡಪ್ರಭು ಕೆಂಪೇಗೌಡರ ದೂರದೃಷ್ಟಿತ್ವವೇ ಕಾರಣವೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಭಿಪ್ರಾಯಪಟ್ಟರು.
ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಹುತ್ರಿದುರ್ಗ, ದೇವರಾಯನ ದುರ್ಗ ಸೇರಿ ರಾಜ್ಯದ 16 ಪ್ರದೇಶಗಳಲ್ಲಿ ದುರ್ಗಗಳನ್ನು ನಿರ್ಮಾಣ ಮಾಡಿರುವ ಹೆಗ್ಗಳಿಕೆ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಜನರ ಮೇಲೆ ಅಪಾರ ಪ್ರೀತಿ ಹೊಂದಿದ್ದ ಕೆಂಪೇಗೌಡರು ಉತ್ತಮ ಆಡಳಿತಗಾರರಾಗಿದ್ದರು. ಯಲಹಂಕ ಗ್ರಾಮದಲ್ಲಿದ್ದ ತಮ್ಮ ಆಡಳಿತವನ್ನು 1540ರಲ್ಲಿ ಬೆಂಗಳೂರಿಗೆ ಸ್ಥಳಾಂತರಿಸಿ ಹಲವಾರು ಅಭಿವೃದ್ದಿ ಕಾರ್ಯಗಳ ಮೂಲಕ ಬೆಂಗಳೂರು ನಗರವನ್ನು ಅತೀ ಎತ್ತರಕ್ಕೆ ಕೊಂಡೊಯ್ದರು. “ದೇಶ ಸುತ್ತು ಕೋಶ ಓದು” ಎನ್ನುವ ನಾಣ್ನುಡಿಯಂತೆ ದೇಶ-ವಿದೇಶಗಳಿಗೆ ಭೇಟಿ ನೀಡಿ ಅಲ್ಲಿನ ರಾಜನೀತಿಯನ್ನು ಆಳವಾಗಿ ಅಧ್ಯಯನ ಮಾಡಿ ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ಪುರುಷರಾಗಿದ್ದರು. ತಮ್ಮ ತಂದೆಯಿಂದ ಉತ್ತಮ ಆಡಳಿತ ರೀತಿ-ನೀತಿಯನ್ನು ಬಳುವಳಿಯಾಗಿ ಪಡೆದಿದ್ದ ಕೆಂಪೇಗೌಡರು ಸತ್ಯ, ಧರ್ಮದ ಆಧಾರದಲ್ಲಿ ಆಡಳಿತ ನಡೆಸಿ ನಾಡಪ್ರಭು ಎನಿಸಿಕೊಂಡರು. ಇವರ ಆದರ್ಶ, ಸಿದ್ಧಾಂತಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸರ್ಕಾರದಿಂದ ಕೆಂಪೇಗೌಡರ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, 1510ರಲ್ಲಿ ಜನಿಸಿದ ಕೆಂಪೇಗೌಡರಿಗೆ 1528ರಲ್ಲಿ ಪಟ್ಟಾಭಿಷೇಕ ಮಾಡಲಾಯಿತು. ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಳ್ವಿಕೆ ಮಾಡುವ ಮೂಲಕ ಬೆಂಗಳೂರನ್ನು ವಿಶ್ವವೇ ಹಾಡಿ ಹೊಗಳುವಂತೆ ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ.
ತುಮಕೂರು: ಅಟ್ಟಿಕಾ ಬಾಬು ಬಂಧನ: ಕೇಸ್ ಏನು ಗೊತ್ತೇ?
ವಿದ್ಯಾರ್ಥಿಗಳು, ಯುವ ಜನಾಂಗ ಇವರ ಸಾಧನೆಯ ಸೂತ್ರಗಳನ್ನು ಹಾಗೂ ನಾಡಿನ ಅಭಿವೃದ್ಧಿಗೆ ನೀಡಿರುವ ಅದ್ವಿತೀಯ ಕೊಡುಗೆಗಳನ್ನು ತಿಳಿದುಕೊಂಡು ಅವರ ಮೌಲ್ಯಯುತ ಗುಣವನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ದೇಶದ 4ನೇ ಅತಿ ದೊಡ್ಡ ನಗರವೆಂದು ಗುರುತಿಸಿಕೊಂಡಿರುವ ರಾಜ್ಯದ ರಾಜಧಾನಿ ಬೆಂಗಳೂರು ನಗರದಿಂದ ರಾಜ್ಯಕ್ಕೆ ಶೇ.80ರಷ್ಟು ರಾಜಸ್ವ ನೇರವಾಗಿ ಬರುತ್ತಿದೆ. ಇಡೀ ರಾಜ್ಯ ಅಭಿವೃದ್ಧಿಗೆ ಈ ರಾಜಸ್ವವನ್ನು ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ತುಮಕೂರು: ಒಂದು ಮಗು ಅಪಹರಣ ಕೇಸ್ ಹಿಂದೆ ಹೋದ ಪೊಲೀಸರಿಂದ 9 ಮಕ್ಕಳ ರಕ್ಷಣೆ!: ಮಕ್ಕಳ ಕಳ್ಳರ ಜಾಲ ಪತ್ತೆ
ಬೆಂಗಳೂರಿನಲ್ಲಿ ಜನರ ಬದುಕಿಗೆ ಆರ್ಥಿಕ ಶಕ್ತಿ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲು ಅಕ್ಕಿಪೇಟೆ, ರಾಗಿಪೇಟೆ, ಮಂಡಿಪೇಟೆ, ಬಳೆಪೇಟೆ ಸೇರಿದಂತೆ ಮತ್ತಿತರ ಪೇಟೆಗಳನ್ನು ನಿರ್ಮಿಸಿದ್ದಾರೆ. ಈ ಪೇಟೆಗಳು ಇಂದಿಗೂ ರಾಜಧಾನಿಯಲ್ಲಿ ಎಲ್ಲಾ ವರ್ಗದ ಶಾಪಿಂಗ್ ಕೇಂದ್ರವಾಗಿರುವುದು ನಾವಿಲ್ಲಿ ಸ್ಮರಿಸಬಹುದು ಎಂದು ತಿಳಿಸಿದರು.
ಬೆಂಗಳೂರಿಗೆ ಭೇಟಿ ನೀಡುವ ಪ್ರತಿಯೊಬ್ಬ ಕನ್ನಡಿಗರ ಮನದಲ್ಲಿ ಏನೋ ಹೊಸ ಸಂಚಲನ ಮೂಡಿದ ಹಾಗೆ, ಮೈ-ರೋಮಾಂಚನವಾಗುವ ಅನುಭವವಾಗುತ್ತದೆ. ಇಂದಿನ ಯುವ ಪೀಳಿಗೆಯು ಕೆಂಪೇಗೌಡರ ನಗರ ನಿರ್ಮಾಣದ ಪರಿಕಲ್ಪನೆ, ನಿಸ್ವಾರ್ಥ ಸೇವೆ, ಕನ್ನಡ ಭಾಷೆ-ಸಂಸ್ಕೃತಿಯ ಮೇಲಿನ ಕಾಳಜಿಯ ಪರಂಪರೆಯನ್ನು ಬೆಳೆಸುವ ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು.
ತುಮಕೂರು: ಮಹಾನಗರ ಪಾಲಿಕೆಯಲ್ಲಿ ಹುದ್ದೆ: ಅರ್ಜಿ ಆಹ್ವಾನ
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕೆಂಪೇಗೌಡರ ಅದ್ವಿತೀಯ ಸಾಧನೆಗಳು ಇಂದಿಗೂ ಯುವ ಪೀಳಿಗೆಗೆ ಆಶಾಕಿರಣವಾಗಿವೆ. ಗ್ರಾಮ ನಿಮಾಣ ಮಾಡುವುದೇ ಕಷ್ಟಸಾಧ್ಯವಾಗಿರುವಾಗ ಬೆಂಗಳೂರಿನಂತಹ ಮಹಾನಗರದ ಸೃಷ್ಟಿಗೆ ಕಾರಣಕರ್ತರಾದ ಕೆಂಪೇಗೌಡರ ಯೋಜನೆಗಳು ಸದಾ ಸ್ಮರಿಸುವಂತಹದು. ಕೆಂಪೇಗೌಡರು ಸುಮಾರು 450 ವರ್ಷಗಳ ಹಿಂದೆಯೇ ಸರ್ವರಿಗೂ ಸಮಾನ ಅವಕಾಶ, ಕುಡಿಯುವ ನೀರು, ಕಲೆ, ವಾಸ್ತು ಶಿಲ್ಪ, ಸಾಂಸ್ಕೃತಿಕ ಆಚರಣೆ, ದೇವಾಲಯ ಸೇರಿದಂತೆ ಹಲವು ರೀತಿಯಲ್ಲಿ ಸಮಾನತೆ ಕಲ್ಪಿಸಿಕೊಟ್ಟಿದ್ದರು ಎಂದು ಮಾರ್ಮಿಕ ನುಡಿಗಳನ್ನಾಡಿದರು.
ತುಮಕೂರು: ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನ
ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿದರು. ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಗೋವಿಂದರಾಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಡಿಡಿಪಿಐ ಕೆ.ಮಂಜುನಾಥ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸೂರ್ಯಕಲಾ, ಲಕ್ಷ್ಮಿರಂಗಯ್ಯ ಸೇರಿದಂತೆ ವಿವಿಧ ಮುಖಂಡರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಗಣ್ಯರಿಂದ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಕೆಂಪೇಗೌಡರ ಸಾಧನೆ ಕುರಿತು ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಿದ್ದ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿಗಳನ್ನು ನೀಡಲಾಯಿತು.
ಬಹುಮಾನ ವಿಜೇತರು:
ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಬೆಳ್ಳಾವಿ ಮೇಘನ ಸಿ.ಎಸ್., ದೇವರಾಯಪಟ್ಟಣದ ಎಸ್. ವೈಷ್ಣವಿ, ಅಂತರಸನಹಳ್ಳಿಯ ಎ. ಯಶಸ್ವಿನಿ; ಚಿತ್ರಕಲಾ ಸ್ಪರ್ಧೆಯಲ್ಲಿ ದೇವರಾಯಪಟ್ಟಣದ ದೃತೀನ್, ಚಿಕ್ಕತೊಟ್ಟುಕೆರೆಯ ಎನ್.ಆರ್. ವಿಶಾಲ್., ಬೆಳ್ಳಾವಿಯ ಕೆ.ಪಿ.ಎಸ್ ಶಾಲೆಯ ತೇಜಸ್ವಿನಿ ಆರ್.ಸಿ.; ಭಾಷಣ, ಚರ್ಚಾ ಸ್ಪರ್ಧೆಯಲ್ಲಿ ದೇವರಾಯಪಟ್ಟಣ ವಿದ್ಯಾ ಆಂಗ್ಲ ಶಾಲೆಯ ಅಕ್ಷತ ಎನ್., ಚಿಕ್ಕತೊಟ್ಟುಕೆರೆಯ ಸ.ಮಾ.ಹಿ.ಪ್ರಾ.ಶಾಲೆಯ ಸಿ.ವಿ.ಲಕ್ಷ್ಮಿ, ಮೆಳೇಕೋಟೆ ಆಲಿಯಾ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಗಳಿಸಿದ್ದಾರೆ.
ತುಮಕೂರು: ಈ ಶಾಲೆಗಳು ಅನಧಿಕೃತ: ಮಕ್ಕಳನ್ನು ಸೇರಿಸುವ ಮುನ್ನ ಇರಲಿ ಎಚ್ಚರ
ಪ್ರೌಢಶಾಲಾ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಕೆ.ಪಿ.ಎಸ್. ಎಂಪ್ರೆಸ್ ಶಾಲೆಯ ಉಮಾದೇವಿ ಹೆಚ್ ಆರ್. ಪ್ರಥಮ, ದೇವರಾಯಪಟ್ಟಣ ವಿದ್ಯಾ ಆಂಗ್ಲ ಶಾಲೆ ಹಂಸಿನಿ ಜೆ. ದ್ವಿತೀಯ, ಬೆಳ್ಳಾವಿ ಕೆ.ಪಿ.ಎಸ್. ದೊಡ್ಡತಾಯಮ್ಮ ಎಸ್.ಆರ್. ತೃತೀಯ; ಚಿತ್ರಕಲಾ ಸ್ಪರ್ಧೆಯಲ್ಲಿ ಗಾಂಧಿನಗರ ಸೆಂಟ್ ಮೇರಿಸ್ ಪ್ರೌಢಶಾಲೆಯ ತೆಹರಾ ತಬಸ್ಸುಮ್., ರಾಘವೇಂದ್ರನಗರ ನಳಂದ ಪ್ರೌಢಶಾಲೆಯ ಗಗನ್ ಗೌಡ., ಹೊನಸಿಗೆರೆ ಸರ್ಕಾರಿ ಪ್ರೌಢಶಾಲೆ ಪುನೀತ್ ಅವರು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ; ಭಾಷಣ, ಚರ್ಚಾ ಸ್ಪರ್ಧೆಯಲ್ಲಿ ಆರ್ಯನ್ ಪ್ರೌಢಶಾಲೆಯ ಬಿ.ಜೆ. ಯಶಸ್ವಿನಿ. ಮೊದಲ, ಕೆ.ಪಿ.ಎಸ್. ಎಂಪ್ರೆಸ್ ಶಾಲಯ ಐಶ್ವರ್ಯ ಜೆ. ದ್ವಿತೀಯ, ಬೆಳ್ಳಾವಿ ಕೆ.ಪಿ.ಎಸ್ ಶಾಲೆಯ ಯಶಸ್ವಿನಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ತುಮಕೂರು: ಪತ್ರಕರ್ತನ ಕೊಲೆಗೆ ಸಂಚು, ಸುಪಾರಿ: ಮೂವರ ಬಂಧನ
ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಜಮುನ (ದ್ವಿತೀಯ ಪಿಯುಸಿ), ಭಾರತಿ (ದ್ವಿತೀಯ ಪಿಯುಸಿ), ಉಷಾ ಎನ್.ಎಂ (ಪ್ರಥಮ ಪಿ.ಯು.ಸಿ); ಚಿತ್ರಕಲಾ ಸ್ಪರ್ಧೆಯಲ್ಲಿ ಸಿಂಚನಾ ಆರ್ (ಪ್ರಥಮ ಪಿ.ಯು.ಸಿ), ಶಿಲ್ಪ ಹೆಚ್.ಕೆ. (ದ್ವಿತೀಯ ಪಿಯುಸಿ), ಶಾಫಿಯಾ ಖಾನಂ (ದ್ವಿತೀಯ ಪಿಯುಸಿ) ಅವರು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ್ದು ಭಾಷಣ, ಚರ್ಚಾ ಸ್ಪರ್ಧೆಯಲ್ಲಿ ತ್ರಿವೇಣಿ (ದ್ವಿತೀಯ ಪಿಯುಸಿ) ಪ್ರಥಮ ಹಾಗೂ ತಿಮ್ಮೇಗೌಡ (ದ್ವಿತೀಯ ಪಿಯುಸಿ) ದ್ವಿತೀಯ ಸ್ಥಾನ ಪಡೆದು ವಿಜೇತರಾಗಿದ್ದಾರೆ.
+ There are no comments
Add yours