ಕರ್ತವ್ಯ ಲೋಪ; ಕಿರಿಯ ಇಂಜಿನಿಯರ್ ಅಮಾನತು
Tumkurnews
ತುಮಕೂರು; ಕರ್ತವ್ಯ ಲೋಪ ಹಾಗೂ ನಿರ್ಲಕ್ಷತೆ ಹಿನ್ನೆಲೆಯಲ್ಲಿ ಕುಣಿಗಲ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಕಿರಿಯ ಇಂಜಿನಿಯರ್ ರವಿಕುಮಾರ್ ಟಿ.ಬಿ. ಇವರನ್ನು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ ವಿದ್ಯಾಕುಮಾರಿ ಅವರು, ಇಲಾಖಾ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ.
ಕುಣಿಗಲ್ ತಾಲ್ಲೂಕು ಅಮೃತೂರು ಹೋಬಳಿ ಸಂಕೇನಪುರದಿಂದ ಹೊಳಲಗುಂದ ರಸ್ತೆ ಅಭಿವೃದ್ಧಿ ಕಾಮಗಾರಿಯು 2019-20ನೇ ಸಾಲಿನ ನಬಾರ್ಡ್ ಯೋಜನೆಯಡಿ ಅನುಮೋದನೆಗೊಂಡಿದ್ದು, ಸದರಿ ಕಾಮಗಾರಿಯನ್ನು ಜುಲೈ 30, 2019ರಂದು ಪ್ರಾರಂಭಿಸಿ ಮಾರ್ಚ್ 6, 2020ರಂದು ಪೂರ್ಣಗೊಳಿಸಲಾಗಿತ್ತು. ಸದರಿ ರಸ್ತೆಯು ಮೂರು ವರ್ಷಗಳ ನಿರ್ವಹಣಾ ಅವಧಿಯಲ್ಲಿರುತ್ತದೆ. ಆದರೆ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಸದರಿ ರಸ್ತೆ ಹಾಳಾಗಿದ್ದು, ಸಾರ್ವಜನಿಕರು ಓಡಾಡಲು ತೊಂದರೆಯಾಗಿರುತ್ತದೆ ಮತ್ತು ಕುಣಿಗಲ್ ಶಾಸಕರು ಈ ಕುರಿತು ಆಕ್ಷೇಪಣೆ ವ್ಯಕ್ತ ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದರಿ ರಸ್ತೆ ಕಾಮಗಾರಿ ಸ್ಥಳವನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಂ.ರಾ.ಇಂ. ಉಪವಿಭಾಗ ಕುಣಿಗಲ್ ಅವರೊಂದಿಗೆ ಸ್ಥಳ ಪರಿಶೀಲನೆ ಮಾಡಲಾಗಿದ್ದು, ಪರಿವೀಕ್ಷಣೆಯಲ್ಲಿ ಸದರಿ ರಸ್ತೆಯು ಸಂಪೂರ್ಣ ಹಾಳಾಗಿರುವುದು ಕಂಡುಬಂದಿರುತ್ತದೆ. ಸದರಿ ರಸ್ತೆಗೆ ಗ್ರಾವೇಲ್ನಿಂದ ರಸ್ತೆಯನ್ನು ಸಮತಟ್ಟು ಮಾಡಿ, ಜಿ.ಎಸ್.ಬಿ. ಜಿ-2 ಮತ್ತು ಜಿ-3 ಪದರಗಳನ್ನು ಹಾಕಲಾಗಿದ್ದು, ಸರಿಯಾಗಿ ನಿರ್ಮಿಸದ ಕಾರಣ ಈ ಎಲ್ಲಾ ಪದರಗಳು ಹಾಳಾಗಿರುತ್ತದೆ ಮತ್ತು ಡಾಂಬರಿನೊಂದಿಗೆ ಕಿತ್ತು ಹೋಗಿರುತ್ತದೆ.
ಸದರಿ ರಸ್ತೆಯನ್ನು ಮರುನಿರ್ಮಾಣ ಮಾಡುವಂತೆ ಶಾಖಾಧಿಖಾರಿ ಹಾಗೂ ಎಇಇ ಅವರಿಗೆ ಸೂಚಿಸಲಾಗಿದ್ದು, ಇದುವರೆಗೂ ಕಾಮಗಾರಿ ನಿರ್ವಹಿಸಿರುವುದಿಲ್ಲ ಎಂದು ಛಾಯಾಚಿತ್ರಗಳೊಂದಿಗೆ ಕಾರ್ಯಪಾಲಕ ಇಂಜಿನಿಯರ್ ಪಂ.ರಾ.ಇಂ. ವಿಭಾಗ ತುಮಕೂರು ಇವರು ವರದಿಯನ್ನು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಮಾನತು ಆದೇಶ ಮಾಡಲಾಗಿದೆ.
ಶಿರಾ ಅಪಘಾತ; ರಾಜ್ಯ ಸರ್ಕಾರದಿಂದ ಪರಿಹಾರ ಘೋಷಣೆ
+ There are no comments
Add yours