Tumkurnews
ತುಮಕೂರು; ಪತ್ನಿಯೊಂದಿಗೆ ಜಗಳ ಮಾಡಿಕೊಂಡು ಸಿಲಿಂಡರ್ ಸ್ಪೋಟಿಸಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ರಕ್ಷಣೆಗೆ ಧಾವಿಸಿದ ಇಬ್ಬರು ಪೊಲೀಸರೂ ಗಾಯಗೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಸೋರೆಕುಂಟೆ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಗೋವಿಂದಪ್ಪ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ ಗೋವಿಂದಪ್ಪ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ, ಈ ಬಗ್ಗೆ ಮಾಹಿತಿ ಪಡೆದ ಗ್ರಾಮಾಂತರ ಠಾಣೆ ಹೆಡ್ ಕಾನ್ಸ್ಟೇಬಲ್ ಗವಿರಂಗಪ್ಪ ಹಾಗೂ ಚಾಲಕ ಗುಳಿಗೆಪ್ಪ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ. ಅಷ್ಟರಲ್ಲಾಗಲೇ ಗೋವಿಂದಪ್ಪ ಮನೆಯ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದ. ಕಿಟಕಿ ಮೂಲಕ ಆತನನ್ನು ಸಮಾಧಾನ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದರು.
ಆದರೆ, ಮಾತು ಕೇಳದ ಗೋವಿಂದಪ್ಪ ಮನೆಯೊಳಗೆ ಗ್ಯಾಸ್ ಸಿಲಿಂಡರ್ ತೆರೆದು ಕೈಯಲ್ಲಿದ್ದ ಗ್ಯಾಸ್ ಲೈಟರ್ ಆನ್ ಮಾಡಿದ್ದಾನೆ. ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ರಭಸಕ್ಕೆ ಕಿಟಕಿ ಬಳಿ ನಿಂತಿದ್ದ ಪೊಲೀಸರ ಮುಖಕ್ಕೆ ಬೆಂಕಿ ತಗುಲಿದ್ದು, ಮುಖ ಹಾಗೂ ತಲೆಭಾಗಗಳಿಗೆ ಸುಟ್ಟ ಗಾಯಗಳಾಗಿವೆ.
ಬೆಂಕಿ ತಗುಲಿ ಬಹುತೇಕ ಸುಟ್ಟು ಹೋಗಿದ್ದ ಗೋವಿಂದಪ್ಪನನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಪೊಲೀಸ್ ಸಿಬ್ಬಂದಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
+ There are no comments
Add yours