ತುಮಕೂರು ನ್ಯೂಸ್. ಇನ್
(ಜು.15) tumkurnews.in
ಕೊರೋನಾ ಸೋಂಕಿಗೆ ಬುಧವಾರ ಬಲಿಯಾದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ವಿಶ್ವೇಶ್ವರ ಶಿವಾಚಾರ್ಯ ಸ್ವಾಮಿಗಳು ಇನ್ನು ಐದು ದಿನ ಕಳೆದಿದ್ದರೆ ಜನ್ಮ ದಿನೋತ್ಸವವನ್ನು ಆಚರಿಸಿಕೊಳ್ಳಬೇಕಿತ್ತು.
ತ್ರಿವಿಧ ದಾಸೋಹಕ್ಕೆ ಹೆಸರಾದ ಹಾಲಸ್ವಾಮಿ ಬೃಹನ್ಮಠ ರಾಂಪುರದ 5ನೇ ಪಟ್ಟಾಧಿಕಾರ ಗುರುಗಳು ಆಗಿರುವ ಇವರು ಇದೇ ಮಠದ 4ನೇ ಗುರುಗಳಾದ ಶ್ರೀ ವಿಶ್ವರಾದ್ಯ ಹಾಲಸ್ವಾಮಿಗಳು ಮತ್ತು ಗಿರಿಜಾಂಬರವರಿಗೆ 1965 ಜುಲೈ 20 ರಂದು ಜನಿಸಿದ್ದು, ಕೊರೋನಾ ಸೋಂಕಿಗೆ ತುತ್ತಾಗಿ 2020ರ ಜುಲೈ 15 ರಂದು ಶಿವೈಕ್ಯರಾಗಿದ್ದಾರೆ.
ಈ ತಪ್ಪು ಕಾರಣವಾಯಿತಾ?:
ಜೂನ್ ತಿಂಗಳ ಕೊನೆಯಲ್ಲಿ ಕೊರೊನಾ ಪಾಸಿಟಿವ್ ಇರುವ ಭಕ್ತನೋರ್ವ ಮಠಕ್ಕೆ ಭೇಟಿ ನೀಡಿ ಶ್ರೀಗಳ ಪಾದವನ್ನು ಸ್ಪರ್ಶಿಸಿ ಆಶೀರ್ವಾದ ಪಡೆದುಕೊಂಡಿದ್ದನು. ಸಾಲದಕ್ಕೆ ಮಠದ ತುಂಬಾ ಓಡಾಡಿ ಎಲ್ಲರನ್ನೂ ಮಾತನಾಡಿಸಿದ್ದನು.
ಆ ಬಳಿಕ ಶ್ರೀಗಳ ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ ಕಾಣಿಸಿಕೊಂಡಿತ್ತು. ಆದರೆ ಶ್ರೀಗಳು ತಮ್ಮ ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡಿದರು. ತಮ್ಮ ಕಫದ ಸಮಸ್ಯೆಯಿಂದ ಅನಾರೋಗ್ಯ ಉಂಟಾಗಿದೆ ಎಂದುಕೊಂಡಿದ್ದರು.
ಆದರೆ ದಿನದಿಂದ ದಿನಕ್ಕೆ ಶ್ರೀಗಳ ಆರೋಗ್ಯ ಹದಗೆಡಲಾರಂಭಿಸಿತು. ಆಗ ಮಠದ ಸಿಬ್ಬಂದಿ ಹಾಗೂ ಭಕ್ತರು ಬಲವಂತ ಮಾಡಿ ಜುಲೈ 11 ರಂದು ಶಿವಮೊಗ್ಗದ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದ್ದರು. ವರದಿಯಲ್ಲಿ ಪಾಸಿಟಿವ್ ಬಂದಿದ್ದು ಭಕ್ತರಿಗೆ ಶಾಕ್ ನೀಡಿತ್ತು.
ಕೂಡಲೇ ಶ್ರೀಗಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಶ್ರೀಗಳ ದೇಹ ವೆಂಟಿಲೇಟರ್ ಮತ್ತು ಆಕ್ಸಿಜನ್ ಚಿಕಿತ್ಸೆಗೆ ಹೊಂದಿಕೊಳ್ಳಲಿಲ್ಲ. ಅಂತಿಮವಾಗಿ ಜುಲೈ 15 ರಂದು ಮಧ್ಯಾಹ್ನದ ವೇಳೆಗೆ ತಮ್ಮ ಕೋಟ್ಯಾಂತರ ಭಕ್ತರನ್ನು ಶ್ರೀಗಳು ಅನಾಥರನ್ನಾಗಿಸಿ ಶಿವನನ್ನು ಸೇರಿಕೊಂಡರು.
ಶ್ರೀಗಳು ಸದಾ ಭಕ್ತರ ಬಗ್ಗೆ ಯೋಚಿಸಿ, ತಮ್ಮ ಅರೋಗ್ಯದ ಕುರಿತು ನಿರ್ಲಕ್ಷ್ಯ ಮಾಡಿದ್ದು ಇಷ್ಟಕ್ಕೆಲ್ಲಾ ಕಾರಣವಾಗಿರಬಹುದು ಎನ್ನುವುದು ಭಕ್ತರ ನೋವಿನ ನುಡಿ.
ಸರ್ವ ಧರ್ಮ ಪೂಜಿತ:
ಶ್ರೀಗಳು ಸರ್ವ ಧರ್ಮಿಯರಿಂದ ಪೂಜಿಸಲ್ಪಡುತ್ತಿದ್ದರು. ಜಾತಿ, ಧರ್ಮ ಅವರ ಹತ್ತಿರಕ್ಕೂ ಸುಳಿದಿರಲಿಲ್ಲ. ಮನುಕುಲದ ಒಳಿತು ಎಂಬುದಷ್ಟೇ ಅವರ ಧರ್ಮವಾಗಿತ್ತು. ಭಕ್ತರ ಸೇವೆಯಿಂದಲೇ ಮಠವನ್ನು ಮುನ್ನಡೆಸುತ್ತಿದ್ದರು.
ಶ್ರೀ ವಿಶ್ವೇಶ್ವರಯ್ಯ ಶಿವಾಚಾರ್ಯ ಶ್ರೀಗಳ ಅಗಲಿಕೆಗೆ ಇಡೀ ಭಕ್ತ ಕೋಟಿ ಕಂಬನಿ ಮಿಡಿದಿದೆ. ಸಾಧು, ಸಂತರು ಅಘಾತಕ್ಕೊಳಗಾಗಿದ್ದಾರೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಕುಪ್ಪೂರು ಗದ್ದುಗೆ ಮಠದ ಅಧ್ಯಕ್ಷರಾದ ಶ್ರೀ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿಗಳು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
+ There are no comments
Add yours