ತುಮಕೂರು(ಜೂ.30) tumkurnews.in
ಮಹಾಮಾರಿ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ಕೋವಿಡ್-19 ನಿಧಿಗೆ ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ದೇಣಿಗೆ ನೀಡಿರುವುದು 290,98,14,057 ರೂ.ಗಳಾಗಿದ್ದು, ಕೊರೋನಾ ತಡೆಗೆ ಇದರಲ್ಲಿ ನಯಾ ಪೈಸೆಯನ್ನು ಖರ್ಚು ಮಾಡಿಲ್ಲ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತುಮಕೂರು ಜಿಲ್ಲಾಧಕ್ಷ ತಾಜುದ್ದೀನ್ ಶರೀಫ್ ಆರೋಪಿಸಿದ್ದಾರೆ
ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಯಿಂದ ಈ ಮಾಹಿತಿ ಬಹಿರಂಗವಾಗಿದೆ ಎಂದು ತಿಳಿಸಿರುವ ಅವರು, ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣೆಗೆ ಈವರೆಗೆ ಎಷ್ಟು ಖರ್ಚಾಗಿದೆ? ಕೇಂದ್ರದಿಂದ ಎಷ್ಟು ಹಣ ಬಂದಿದೆ? ಎಂಬ ಬಗ್ಗೆ ಮುಖ್ಯಮಂತ್ರಿಗಳು ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದ್ದಾರೆ.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷ ತಾಹಿರ್ ಹುಸೇನ್ ಸಲ್ಲಿಸಿದ್ದ ಅರ್ಜಿಗೆ ಮುಖ್ಯಮಂತ್ರಿ ಸಚಿವಾಲಯ ವಿವರ ನೀಡಿದ್ದು, ‘ಕೊರೋನಾ ಸೋಂಕು ನಿಯಂತ್ರಣಕ್ಕೆ ಸರಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಅನುದಾನದಲ್ಲಿ ಕೊರೋನಾ ರೋಗ ಹರಡುವಿಕೆ ತಪ್ಪಿಸಲು ವೆಚ್ಚ ಮಾಡಿದ್ದೇವೆ. ಸಿಎಂ ಪರಿಹಾರ ನಿಧಿಯಲ್ಲಿರುವ ಹಣವನ್ನು ಅವಶ್ಯಕ ತುರ್ತು ಸೇವೆಗಳಿಗೆ ಉಪಯೋಗಿಸುವ ಸಲುವಾಗಿ ‘ಆಪತ್ ನಿಧಿ’ಯಾಗಿ ಕಾಯ್ದಿರಿಸಲಾಗಿದೆ’ ಎಂದು ಸ್ಪಷನೆ ನೀಡಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಚಿವಾಲಯದ ಈ ಮಾಹಿತಿ ನಿಜಕ್ಕೂ ದಂಗು ಬಡಿಸುವಂತೆ ಮಾಡಿದೆ. ಸೋಂಕು ನಿಯಂತ್ರಣಕ್ಕೆ ಖರ್ಚು ಮಾಡಬೇಕಾದ ಸರ್ಕಾರ ಈ ನಿಧಿಯಲ್ಲಿ ನಯಾ ಪೈಸೆ ಖರ್ಚು ಮಾಡಿಲ್ಲದಿರುವುದು ಶೋಚನೀಯ ಸಂಗತಿ. ಆಪತ್ ನಿಧಿಗೆ ಕಾಯ್ದಿರಿಸಲಾಗಿದೆ ಎಂದು ಹೇಳಿರುವುದು ಜನರಿಗೆ ಮಾಡಿದ ವಂಚನೆಯಾಗಿದೆ ಎಂದು ದೂರಿದ್ದಾರೆ.
+ There are no comments
Add yours