ತುಮಕೂರು ನ್ಯೂಸ್.ಇನ್, (ಜೂ.17)
ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ಚೀನಾದ ವಸ್ತುಗಳನ್ನು ತಿರಸ್ಕರಿಸಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ಕರೆ ನೀಡಿದರು.
ನಗರದ ಟೌನ್ಹಾಲ್ ಸಮೀಪದ ಶಾಸಕರ ಕಚೇರಿ ಆವರಣದಲ್ಲಿ ಬುಧವಾರ ಸಂಜೆ ಹುತಾತ್ಮ ವೀರ ಯೋಧರಿಗೆ ಶೃದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು. ಕೊರೊನಾ ಇದ್ದರೂ ಭಾರತದ ಗಡಿಯಲ್ಲಿ ಚೀನಾ ದೇಶವು ತೀಟೆ ಮಾಡುತ್ತಿತ್ತು, ಅದರ ನಡುವೆ ನಡೆದ ಘರ್ಷಣೆಯಲ್ಲಿ ನಮ್ಮ ದೇಶದ ಯೋಧರಾದ ಹವಾಲ್ದಾರ್ ಪಳನಿ, ಕರ್ನಲ್ ಸಂತೋಷ್ ಬಾಬು, ಅಂಕುಶ್ ಠಾಕೂರ್ ಸೇರಿದಂತೆ 20ಕ್ಕೂ ಅಧಿಕ ಯೋಧರು ಹುತಾತ್ಮರಾಗಿದ್ದಾರೆ. ಇದು ಎಚ್ಚರಿಕೆಯ ಘಟನೆ, ಈ ಚೀನಾ ಎನ್ನುವ ದೇಶ ಇಡೀ ವಿಶ್ವಕ್ಕೆ ಮುಂದೆ ಮಾರಕವಾಗುವ ಸನ್ನಿವೇಶವನ್ನು ನಾವೆಲ್ಲರೂ ನೋಡುತ್ತಿದ್ದೇವೆ ಎಂದರು.
ಇಡೀ ವಿಶ್ವಕ್ಕೆ ವೈರಸ್ ಬಿಟ್ಟು ವಿಶ್ವದ ಆರ್ಥಿಕತೆಯನ್ನು ನೆಲಕಚ್ಚುವಂತೆ ಮಾಡಿ ಲಕ್ಷಾಂತರ ಜನ ಸಾವನ್ನಪ್ಪಿದ್ದಾರೆ ಮತ್ತು ಕೋಟ್ಯಾಂತರ ಜನರು ಮುಂದೆ ಯಾವುದೇ ಆರ್ಥಿಕತೆ ಇಲ್ಲದೇ, ಬ್ಯುಸಿನೆಸ್ ಇಲ್ಲದೇ ಸಾಕಷ್ಟು ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಕೂಡ ಕಾಲು ಕೆರೆದುಕೊಂಡು ಬಂದು ಸಾವಿರಾರು ವರ್ಷಗಳಿಂದ ಶಾಂತಿ, ಸೌಮ್ಯತೆಗೆ ಹೆಸರಾದ ಭಾರತದ ವಿರುದ್ಧ ಪಾಕಿಸ್ತಾನದ ಜೊತೆಗೆ ಸೇರಿ ಪದೇ ಪದೇ ಚೀನಾ ದೇಶವು ತೊಂದರೆ ಕೊಡುತ್ತಿದೆ. ಈ ಸಮಯದಲ್ಲಿ ಲಡಾಕ್ನ ಕೆಳಗಿರುವ ನಮ್ಮ ದೇಶದ ಭೂಭಾಗಕ್ಕೆ ಪ್ರವೇಶಿಸಿದಾಗ ಅವಘಡ ನಡೆದಿದೆ ಎಂದು ತಿಳಿಸಿದರು.
ಕೊರೊನಾದಿಂದ ಆರ್ಥಿಕತೆವರೆಗೆ ಹಾಗೂ ನಮ್ಮ ಗಡಿ ಭಾಗದಲ್ಲಿ ಭಯೋತ್ಪಾದಕರಿಗೆ ಪಾಕಿಸ್ತಾನದ ಮೂಲಕ ಪ್ರಚೋದನೆ ನೀಡುತ್ತಿರುವ ಚೀನಾಗೆ ತಕ್ಕ ಪಾಠ ಕಲಿಸಬೇಕು, ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ನಾವೆಲ್ಲರೂ ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು, ದೇಶಿಯ ವಸ್ತುಗಳನ್ನು ಖರೀದಿ ಮಾಡಬೇಕು, ಯಾವುದೇ ಮದ್ದುಗುಂಡುಗಳನ್ನು ಬಳಸದೇ ಬರಿಗೈನಲ್ಲಿ ನಮ್ಮ ದೇಶದ ಭೂಮಿ ಉಳಿಸಿಕೊಳ್ಳುವುದಕ್ಕಾಗಿ ಗಡಿ ಭೂಮಿಯಲ್ಲಿ ಹೋರಾಟ ನಡೆಸಿ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ, ಈ ಸಂದರ್ಭದಲ್ಲಿ ಹುತಾತ್ಮ ಯೋಧರಿಗೆ ಶಾಂತಿ ಸಿಗಬೇಕು ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿಪಾಲಿಕೆ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿವಪ್ರಸಾದ್, ಮುಖಂಡರಾದ ವೇದಮೂತಿ, ಅನಸೂಯಮ್ಮ, ಕೊಪ್ಪಳ್ನಾಗರಾಜು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹನುಮಂತರಾಜು, ಪಾಲಿಕೆ ಸದಸ್ಯರಾದ ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ಮಂಜುಳಾ ಆದರ್ಶ್, ಚಂದ್ರಕಲಾ ಪುಟ್ಟರಾಜು ಮತ್ತು ಟಿ.ಎನ್.ರುದ್ರೇಶ್, ಶ್ರೀನಿವಾಸ್, ಮಹೇಶ್ಬಾಬು ಮತ್ತಿತರರು ಇದ್ದರು.
+ There are no comments
Add yours