ಕಾಡುಗೊಲ್ಲರನ್ನು ಎಸ್ಟಿ ಜಾತಿ ಪಟ್ಟಿಗೆ ಸೇರಿಸಲು ವಿರೋಧ ಮಾಡಿಲ್ಲ; ಪೂರ್ಣಿಮ ಶ್ರೀನಿವಾಸ್

1 min read

ಕಾಡುಗೊಲ್ಲರನ್ನು ಎಸ್ಟಿ ಜಾತಿ ಪಟ್ಟಿಗೆ ಸೇರಿಸಲು ವಿರೋಧ ಮಾಡಿಲ್ಲ; ಪೂರ್ಣಿಮ ಶ್ರೀನಿವಾಸ್

Tumkurnews
ತುಮಕೂರು; ಪಕ್ಷವನ್ನು ಸಮರ್ಥಿಸಿಕೊಳ್ಳಲು ಬೇರೆ ವೇದಿಕೆಗಳಿವೆ. ಆದರೆ ಸಮುದಾಯದ ವಿಷಯ ಬಂದಾಗ ಜನಾಂಗ ಮೊದಲು, ನಂತರ ಪಕ್ಷ ಎಂದು ಹಿರಿಯೂರು ಶಾಸಕಿ ಪೂರ್ಣೀಮ ಶ್ರೀನಿವಾಸ್ ತಿಳಿಸಿದರು.
ನಗರದ ಕನ್ನಡಭವನದಲ್ಲಿ ಶ್ರೀಕೃಷ್ಣ ಗೆಳೆಯರ ಬಳಗ(ರಿ) ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ಮತ್ತು ಗೊಲ್ಲಗಿರಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಇಂದು ಶಾಸಕಿಯಾಗಿದ್ದೇನೆ ಎಂದರೆ ಅದಕ್ಕೆ ಕಾರಣ ನನ್ನ ಸಮುದಾಯ. ಹಾಗಾಗಿ ಸಮುದಾಯದ ವಿಷಯಕ್ಕೆ ಮೊದಲ ಅದ್ಯತೆ ನೀಡಲಾಗುವುದು, ಗೊಲ್ಲ ಸಮುದಾಯ ಶಿಕ್ಷಣ, ಸಂಘಟನೆ ಮತ್ತು ರಾಜಕಾರಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಕಡೆಗೆ ಸಮುದಾಯದ ಯುವಜನತೆ ಆಸಕ್ತಿ ತೋರುತಿದ್ದಾರೆ. ಆದರೆ ರಾಜಕೀಯದ ಕಡೆಗೆ ಅಷ್ಟು ಆಸಕ್ತಿ ತೋರುತ್ತಿಲ್ಲ. ಹಾಗಾಗಿ ಸುಮಾರು 20 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಮ್ಮ ಸಮುದಾಯದಲ್ಲಿ ಓರ್ವ ಶಾಸಕರು, ಓರ್ವ ವಿಧಾನಪರಿಷತ್ ಸದಸ್ಯರನ್ನು ಮಾತ್ರ ಹೊಂದಲು ಸಾಧ್ಯವಾಗಿದೆ. ಎಲ್ಲೆಲ್ಲಿ ಅವಕಾಶಗಳು ದೊರೆಯುತ್ತವೆಯೋ ಅಲ್ಲೆಲ್ಲಾ ಗೊಲ್ಲ ಸಮುದಾಯ ರಾಜಕೀಯವಾಗಿ ಬೆಳೆಯಲು ಅಗತ್ಯ ವೇದಿಕೆ ಸಿದ್ದಪಡಿಸಿಕೊಳ್ಳಬೇಕು, ನಿಮಗೆ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಸಿದ್ದರಿದ್ದೇವೆ ಎಂದರು.
ಗೊಲ್ಲಸಮುದಾಯದಲ್ಲಿ ಸಂಘಟನೆ ಎಂಬುದು ಕುಸಿತ ಕಾಣುತ್ತಿದೆ. ಇದಕ್ಕೆ ಕಾರಣ ನಮ್ಮಲ್ಲಿರುವ ಗೊಲ್ಲ, ಕಾಡುಗೊಲ್ಲ ಎಂಬ ಗೊಂದಲ. ಎಂದಿಗೂ ನಾನಾಗಲಿ, ನಮ್ಮ ಕುಟುಂಬದವರಾಗಲಿ ಕಾಡುಗೊಲ್ಲರನ್ನು ಎಸ್ಟಿ ಜಾತಿ ಪಟ್ಟಿಗೆ ಸೇರಿಸಲು ವಿರೋಧ ಮಾಡಿಲ್ಲ. ಆದರೆ ಕೆಲವರು ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ನನಗೆ ಒಡೆಯುವುದು ಗೊತ್ತಿಲ್ಲ. ಒಗ್ಗೂಡಿಸುವುದಷ್ಟೇ ಗೊತ್ತು. ಛಿದ್ರಗೊಂಡಿರುವ ಗೊಲ್ಲ ಸಮುದಾಯದ ಸಂಘಟನೆಗಳು ಒಂದು ವೇದಿಕೆಗೆ ಬಂದು ಹೋರಾಟ ರೂಪಿಸಿದಾಗ ಮಾತ್ರ ನಮ್ಮ ಬೇಡಿಕೆಗಳು ಈಡೇರಲು ಸಾಧ್ಯ ಎಂದು ತಿಳಿಸಿದರು.
ಅಭಿನಂದನೆ ಸ್ವೀಕರಿಸಿದ ವಿಧಾನಪರಿಷತ್ ಸದಸ್ಯ ನಾಗರಾಜ್‍ ಯಾದವ್ ಮಾತನಾಡಿ, ನಮ್ಮದೆ ಸಮುದಾಯದ ಉಪಪಂಗಡ ವಾಗಿರುವ ಕಾಡುಗೊಲ್ಲ ಸಮುದಾಯವನ್ನು ಬದಿಗಿಟ್ಟು ಸಮುದಾಯ ಸಂಘಟನೆ ತರವಲ್ಲ. ಅವರ ಎಸ್ಟಿ ಮೀಸಲಾತಿ ಹೋರಾಟಕ್ಕೆ ನಾವೆಲ್ಲರೂ ಕೈಜೋಡಿಬೇಕಿದೆ. ಎ.ಕೃಷ್ಣಪ್ಪ ನಂತರ ಕಾಡುಗೊಲ್ಲ ಸಮುದಾಯದಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ನಾಯಕತ್ವದ ಕೊರತೆ ಎದುರಿಸುತ್ತಿದ್ದೇವೆ. ಇದರ ಜೊತೆಗೆ 2-3ನೇ ಹಂತದ ನಾಯಕರ ಕೊರತೆಯನ್ನು ಎದುರಿಸುತ್ತಿದ್ದೇವೆ. ಇವುಗಳು ನಿವಾರಣೆಯಾಗಬೇಕಾದರೆ ಎಲ್ಲರೂ ನಮ್ಮ ಭಿನ್ನಾಭಿಪ್ರಾಯ ಮರೆತು ಒಗ್ಗೂಡಿ ಹೋರಾಟ ರೂಪಿಸಬೇಕಿದೆ. ಪ್ರಬಲ ಸಮುದಾಯಗಳು ಮೀಸಲಾತಿ ಕೇಳಿದರೆ ತಕ್ಷಣವೇ ಒಪ್ಪುವ ಡಬಲ್ ಇಂಜಿನ್ ಸರಕಾರ, ಕಾಡುಗೊಲ್ಲರ ಬೇಡಿಕೆಯನ್ನು ನಿರ್ಲಕ್ಷಿಸುತ್ತಿರುವುದು ಏಕೆ ಎಂಬುದನ್ನು ಪ್ರಶ್ನಿಸಬೇಕಾಗಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದ್ದರೆ ನಮ್ಮಗಳ ನಡುವಿನ ಯಾದವಿ ಕಲಹ ಕೊನೆಗೊಳ್ಳಬೇಕು ಎಂದರು.
ಅಭಿನಂದನೆ ಸ್ವೀಕರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆಯನ್ನು ಮುಂದಿಟ್ಟುಕೊಂಡು, ಸಚಿವರಾಗಿ ಆಯ್ಕೆಯಾಗಿದ್ದರೂ ಕೊನೆಯ ಕ್ಷಣದಲ್ಲಿ ಶಾಸಕಿ ಪೂರ್ಣಿಮ ಅವರಿಗೆ ಸಚಿವ ಸ್ಥಾನ ತಪ್ಪಿಸಲಾಯಿತು. ಕಾಂಗ್ರೆಸ್ ಪಕ್ಷ ಎ.ಕೃಷ್ಣಪ್ಪ ನವರಿಗೆ ಎಲ್ಲವನ್ನೂ ನೀಡಿತ್ತು. ಸಮಾಜ ಕಲ್ಯಾಣ ಸಚಿವರನ್ನಾಗಿ ಮಾಡಿತ್ತು. ಅವರ ಕುಡಿಯಾಗಿರುವ ನೀವು ಎಷ್ಟು ದಿನ ಬಿಜೆಪಿಯಲ್ಲಿ ಈ ಅವಮಾನ ಸಹಿಸಿಕೊಂಡು ಇರುತ್ತೀರಿ, ಕಾಂಗ್ರೆಸ್ ಪಕ್ಷಕ್ಕೆ ಬನ್ನಿ, ನಿಮ್ಮನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ ಎಂದು ಆಹ್ವಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಗೊಲ್ಲ (ಯಾದವ) ಸಂಘದ ರಾಜ್ಯಾಧ್ಯಕ್ಷ ಡಿ.ಟಿ ಶ್ರೀನಿವಾಸ್ ಮಾತನಾಡಿ, ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ನಾನು ರಾಜ್ಯಾಧ್ಯಕ್ಷನಾದ ನಂತರ ಇಡೀ ರಾಜ್ಯವನ್ನು ನಾಲ್ಕು ಬಾರಿ ಪ್ರವಾಸ ಮಾಡಿದ್ದೇನೆ. ಹಲವಾರು ದಿನಗಳಿಂದ ಕಾಡುಗೊಲ್ಲರನ್ನು ಎಸ್ಟಿ ಸಮುದಾಯಕ್ಕೆ ಸೇರಿಸಬೇಕೆಂಬ ಪೈಲ್‍ನ ಹಿಂದೆ ಸುತ್ತುತಿದ್ದರೂ ನಮ್ಮ ಮೇಲಿನ ಆಪಾದನೆ ನಿಂತಿಲ್ಲ. ಕಾಡುಗೊಲ್ಲರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂಬ ಕಡತ ಅಂತಿಮ ಹಂತದಲ್ಲಿದೆ. ಕಾಡುಗೊಲ್ಲರು ಕಾಡುಗಳಲ್ಲಿ ಇದ್ದು, ಬೇಟೆಯಾಡುತ್ತಿದ್ದರೂ ಎಂಬುದಕ್ಕೆ ಪುರಾವೆ ಒದಗಿಸುವಂತೆ ಕೇಂದ್ರ ಸರಕಾರ ಕೇಳಿದೆ. ಅದನ್ನು ಸಲ್ಲಿಸಿದ ತಕ್ಷಣವೇ ನಮ್ಮ ಕೆಲಸ ಆಗುತ್ತದೆ. ಇದರ ಜೊತೆಗೆ ಪ್ರವರ್ಗ ಒಂದರಲ್ಲಿ ಇರುವ ಇತರೆ ಗೊಲ್ಲ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕೆಂಬ ಹೋರಾಟವು ನಡೆಯುತ್ತಿದ್ದು, ಎಲ್ಲರೂ ಒಗ್ಗೂಡಿ ಪ್ರಯತ್ನಿಸಿದರೆ ಖಂಡಿತವಾಗಿ ಭವಿಷ್ಯದಲ್ಲಿ ಸರಕಾರದ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದರು.

ನವೋದಯ ಪರೀಕ್ಷೆ; ಅರ್ಜಿ ಸಲ್ಲಿಸಲು ಅವಕಾಶ
ಶ್ರೀಕೃಷ್ಣ ಗೆಳೆಯರ ಬಳಗದ ಗೌರವಾಧ್ಯಕ್ಷ ಡಿ.ಎಂ.ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ ಮಾಜಿ ಅಧ್ಯಕ್ಷ ಜಿ.ಜೆ ರಾಜಣ್ಣ, ಧರ್ಮದರ್ಶಿ ಪಾಪಣ್ಣ, ಮುರುಳಿಕೃಷ್ಣಪ್ಪ, ಸೌಭಾಗ್ಯಮ್ಮ, ಮಾಚೇನಹಳ್ಳಿ ಕರಿಯಪ್ಪ ಅವರುಗಳಿಗೆ ಗೊಲ್ಲಗಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ವಿಧಾನಪರಿಷ್ ಸದಸ್ಯೆ ಜಯಮ್ಮ ಬಾಲರಾಜ್, ಜಿ.ಪಂ ಮಾಜಿ ಅಧ್ಯಕ್ಷೆ ಪ್ರೇಮ ಮಹಾಲಿಂಗಪ್ಪ, ಪಾವಗಡದ ಬಲರಾಮ ರೆಡ್ಡಿ, ಪಾಲಿಕೆ ಸದಸ್ಯೆ ಚಂದ್ರಕಲಾ ಪುಟ್ಟರಾಜು, ಚಲನಚಿತ್ರ ನಿರ್ದೇಶಕ ಕೀರ್ತಿ, ಗಾಯಕ ಮೋಹನ್, ಶ್ರೀಕೃಷ್ಣ ಗೆಳೆಯರ ಬಳಗದ ಅಧ್ಯಕ್ಷ ಕುಣಿಹಳ್ಳಿ ಆರ್.ಮಂಜುನಾಥ್, ಗಂಗಾಧರ್.ಕೆ, ಸತೀಶ್, ಲಿಂಗಾರೆಡ್ಡಿ, ಬಿ.ಎಸ್.ಜಯಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours