ಕ್ಷೀರಭಾಗ್ಯ ದಶಮಾನೋತ್ಸವ: ಸಿಎಂ, ಪರಂ, ರಾಜಣ್ಣ ಭಾಷಣದಲ್ಲಿ ಹೇಳಿದ್ದೇನು? ಸಮಗ್ರ ವರದಿ

1 min read

‘ಕ್ಷೀರಭಾಗ್ಯ’ ಯೋಜನೆಗೆ ಅಂತಾರಾಷ್ಟ್ರೀಯ ಮನ್ನಣೆ-ಮುಖ್ಯಮಂತ್ರಿ ಸಿದ್ಧರಾಮಯ್ಯ

Tumkurnews
ತುಮಕೂರು: ರಾಜ್ಯದ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಸದುದ್ದೇಶದಿಂದ ಕಳೆದ 10 ವರ್ಷದ ಹಿಂದೆ ನಮ್ಮದೇ ಸರ್ಕಾರ ಜಾರಿಗೆ ತಂದಂತಹ ‘ಕ್ಷೀರಭಾಗ್ಯ’ ಯೋಜನೆ ಅಭೂತಪೂರ್ವ ಯಶಸ್ಸನ್ನು ಕಂಡಿದ್ದು, ಇಂದು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ, ಬೆಂಗಳೂರು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ಮಧುಗಿರಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ `ಕ್ಷೀರಭಾಗ್ಯ’ ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸರ್ಕಾರಿ, ಅನುದಾನಿತ, ಅಂಗನವಾಡಿ ಶಾಲೆಗಳ 54 ಲಕ್ಷಕ್ಕೂ ಹೆಚ್ಚಿನ ಮಕ್ಕಳಿಗೆ ಸತ್ವಭರಿತ ಹಾಲನ್ನು ವಿತರಿಸಲಾಗುತ್ತಿದೆ. ಅಂತೆಯೇ 10ನೇ ತರಗತಿಯವರೆಗೆ ಮಕ್ಕಳಿಗೆ ವಾರಕ್ಕೆ 2 ದಿನ ಮೊಟ್ಟೆಯನ್ನು ಸಹ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಮಧುಗಿರಿ V/S ತಿಪಟೂರು ಜಿಲ್ಲಾ ಕೇಂದ್ರ: ಮಹತ್ವದ ಘೋಷಣೆ ಮಾಡಿದ ಸಿಎಂ
ಸರ್ಕಾರದ ಪ್ರಮುಖ ಯೋಜನೆಗಳ ಪೈಕಿ ‘ಕ್ಷೀರಭಾಗ್ಯ’ ಯೋಜನೆ ಅತ್ಯಂತ ಪ್ರಮುಖವಾದ ಯೋಜನೆಯಾಗಿದ್ದು, ಆಗಸ್ಟ್ 1, 2015ರಂದು ಹೊಸಕೋಟೆಯಲ್ಲಿ ಈ ಯೋಜನೆಯನ್ನು ಉದ್ಘಾಟಿಸಲಾಗಿತ್ತು ಎಂದು ಸ್ಮರಿಸಿದ ಅವರು, ಅಂದಿನ ದಿನಗಳಲ್ಲಿ ಹಾಲು ಉತ್ಪಾದನೆ ಹೆಚ್ಚಳವಾಗಿದ್ದು, ಹೆಚ್ಚುವರಿ ಹಾಲಿನ ಮಾರಾಟ ಹಾಗೂ ಉಪ ಉತ್ಪನ್ನ ತಯಾರಿಸುವುದು ಕಷ್ಟಕರ ಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಇದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶೇ.80ಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದುದನ್ನು ಮನಗಂಡು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಅಂದು ಕ್ಷೀರಭಾಗ್ಯವನ್ನು ಜಾರಿಗೆ ತಂದಿದ್ದು, ಇದರಿಂದ ಕೆಎಂಎಫ್ ಒಕ್ಕೂಟಗಳಿಗೂ ಸಹ ಲಾಭವಾಯಿತು ಎಂದು ತಿಳಿಸಿದರು.

ಕ್ಷೀರ ಭಾಗ್ಯ ಸಂಭ್ರಮಾಚರಣೆ: ಡಿಫರೆಂಟಾಗಿ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ
ಇಂಟರ್ ನ್ಯಾಷನಲ್ ಡೈರಿ ಫೆಡರೇಷನ್ ಪ್ರಶಸ್ತಿಯನ್ನು ಧಕ್ಕಿಸಿಕೊಳ್ಳುವ ಮೂಲಕ ಕ್ಷೀರಭಾಗ್ಯ ಕಾರ್ಯಕ್ರಮಕ್ಕೆ ಅಂತರರಾಷ್ಟ್ರೀಯ ಮನ್ನಣೆ ದೊರಕಿದೆ ಎಂದು ಈ ಸಂದರ್ಭ ತಿಳಿಸಿದರು.
ಪಶುಪಾಲಕರಿಗೆ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು 3 ರೂ. ಹೆಚ್ಚಳ ಮಾಡಲಾಯಿತು ಎಂದು ಈ ಸಂದರ್ಭ ತಿಳಿಸಿದ ಅವರು, ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಇಂದು 11ನೇ ವರ್ಷಕ್ಕೆ ಕಾಲಿಡುತ್ತಿರುವ `ಕ್ಷೀರಭಾಗ್ಯ’ ಯೋಜನೆಗೆ ಸರ್ಕಾರ ಈ ವರ್ಷ ಒಂದು ಸಾವಿರಕ್ಕೂ ಹೆಚ್ಚು ಕೋಟಿಗಳನ್ನು ಖರ್ಚು ಮಾಡುತ್ತಿದೆ ಎಂದು ತಿಳಿಸಿದರು.
ಶ್ರೀಮಂತರ ಮಕ್ಕಳಿನಂತೆ ಹಳ್ಳಿಗಾಡಿನ ಮಕ್ಕಳೂ ಸಹ ಶೂ, ಸಾಕ್ಸ್, ಯೂನಿಫಾರ್ಮ್ ಧರಿಸಬೇಕೆಂಬ ಉದ್ದೇಶದಿಂದ ಮಧುಗಿರಿ ತಾಲ್ಲೂಕಿನಲ್ಲಿಯೇ ಶೂ ಭಾಗ್ಯವನ್ನು ನಮ್ಮ ಸರ್ಕಾರ ಘೋಷಣೆ ಮಾಡಿದ್ದು, ಈ ಯೋಜನೆಯೂ ಸಹ ಯಶಸ್ವಿಯಾಗಿ ಸಾಗಿದೆ ಎಂದು ಸ್ಮರಿಸಿದರು.

ಮಧುಗಿರಿಯನ್ನು‌ ಜಿಲ್ಲಾಕೇಂದ್ರ ಮಾಡಿ: ಸಿಎಂಗೆ ಬೇಡಿಕೆ ಇಟ್ಡ ಪರಮೇಶ್ವರ್!
ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಲು ‘ಅನ್ನಭಾಗ್ಯ’ ಯೋಜನೆಯನ್ನು ತಾವು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ ಜಾರಿಗೆ ತರಲಾಗಿತ್ತು. ಬಡವರು 3 ಹೊತ್ತು ಊಟ ಮಾಡಬೇಕು. ಯಾರೂ ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶವನ್ನು ಅನ್ನಭಾಗ್ಯ ಯೋಜನೆ ಹೊಂದಿದ್ದು, ಇಂದು 4.42ಕೋಟಿ ಜನರಿಗೆ ಅಕ್ಕಿಯನ್ನು ನೀಡುತ್ತಿದ್ದೇವೆ ಮತ್ತು ಪಡಿತರ ಚೀಟಿದಾರರ ಕುಟುಂಬದ ಅರ್ಹ ಸದಸ್ಯರಿಗೆ 170 ರೂ.ಗಳನ್ನು ಮಾಸಿಕ ನೀಡಲಾಗುತ್ತಿದೆ ಎಂದು ತಿಳಿಸಿದರು.
ತಮ್ಮ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ 5 ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿ ಯೋಜನೆಗಳನ್ನು ಇಂದು ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗಿದ್ದು, ರಾಜ್ಯದಲ್ಲಿ 53ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ಓಡಾಡುತ್ತಿದ್ದಾರೆ. ಅಂದಾಜು ಪ್ರತಿ ದಿನ 50 ಲಕ್ಷಕ್ಕೂ ಹೆಚ್ಚು ಹೆಣ್ಣು ಮಕ್ಕಳು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ ಎಂದರು.

ಬಿಜೆಪಿ, ಜೆಡಿಎಸ್ ಪಕ್ಷಗಳಿಂದ ಸಾಮಾಜಿಕ ನ್ಯಾಯ ಸಿಗುವುದಿಲ್ಲ; ಕುರುಬರ ಸಮಾವೇಶದಲ್ಲಿ ಸಿದ್ದರಾಮಯ್ಯ
`ಗೃಹಜ್ಯೋತಿ’ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯವನ್ನು ಅರ್ಹ ಕುಟುಂಬಗಳು ಇಂದು ಪಡೆದಿರುತ್ತಾರೆ. ‘ಗೃಹಲಲಕ್ಷ್ಮಿ ಯೋಜನೆಯಡಿ ಒಂದು ಕೋಟಿ 10 ಲಕ್ಷ ಕುಟುಂಬದ ಯಜಮಾನಿ ಮಹಿಳೆಯರು ನೋಂದಾಯಿಸಿಕೊಂಡಿದ್ದು, ಪ್ರತಿ ಮಾಹೆ ಅರ್ಹ ಯಜಮಾನಿ ಮಹಿಳೆಯ ಖಾತೆಗೆ ಮಾಸಿಕ 2000 ರೂ.ಗಳನ್ನು ಜಮೆ ಮಾಡಲಾಗುತ್ತಿದ್ದು, ಬರುವ ಜನವರಿ-2024 ರಂದು ಯುವನಿಧಿ ಯೋಜನೆಯಡಿ 2 ವರ್ಷಗಳವರೆಗೆ ಪದವೀಧರ ನಿರುದ್ಯೋಗಿಗಳಿಗೆ 2,000 ಹಾಗೂ ಡಿಪ್ಲೋಮಾದವರಿಗೆ 1,500 ರೂ. ನೀಡಲಾಗುವುದು. ಹಾಗೂ ಇವರುಗಳು 2 ವರ್ಷದೊಳಗಾಗಿ ಉದ್ಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಕೌಶಲ್ಯ ತರಬೇತಿಯನ್ನೂ ಸಹ ನೀಡಲಾಗುವುದು ಎಂದು ತಿಳಿಸಿದರು.

ಇಂದಿನ ತಿಪಟೂರು ಕೊಬ್ಬರಿ ಧಾರಣೆ
ನಮ್ಮ ಸರ್ಕಾರ ರೈತರಿಗೆ 5 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುವ ಹಾಗೂ 15 ಲಕ್ಷದವರೆಗೆ ಶೇ.2ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲು ಆಯವ್ಯಯದಲ್ಲಿ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆ ಸೇರಿದಂತೆ ನೀರಿನ ಅಭಾವವಿರುವ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಎತ್ತಿನಹೊಳೆ ಯೋಜನೆಯನ್ನು ತಾವು ಮುಖ್ಯಮಂತ್ರಿಯಾಗಿದ್ದಾಗ ಯೋಜನೆಯನ್ನು ಉದ್ಘಾಟಿಸಿದ್ದು, ಇದೀಗ ಆದಷ್ಟು ಜಾಗ್ರತೆ ವಹಿಸಿ ಯೋಜನೆಗೆ ಒತ್ತು ನೀಡಿ ಎತ್ತಿನಹೊಳೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಆಹಾರ ಸಂಸ್ಕರಣಾ ಉದ್ದಿಮೆಗಳ ಪ್ರಚಾರ ವಾಹನಕ್ಕೆ ಸಚಿವ ಪರಮೇಶ್ವರ್ ಚಾಲನೆ
ಭದ್ರಾ ಮೇಲ್ದಂಡೆ ಯೋಜನೆಯನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಿ ಕೇಂದ್ರ ಸರ್ಕಾರ 5200 ಕೋಟಿ ರೂ.ಗಳನ್ನು ಕೂಡಲೇ ಯೋಜನೆಗೆ ಬಿಡುಗಡೆ ಮಾಡಬೇಕು ಎಂದು ಈ ಸಂದರ್ಭ ಆಗ್ರಹಿಸಿದರು.
ಮಧುಗಿರಿಗೆ ತಾಯಿ-ಮಕ್ಕಳ ಆಸ್ಪತ್ರೆ ಸ್ಥಾಪಿಸುವ ನಿಟ್ಟಿನಲ್ಲಿ ಅನುದಾನ ಒದಗಿಸುವ ಸಂಬಂಧ ಮುಂದಿನ ಆಯವ್ಯಯದಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದ ಮುಖ್ಯಮಂತ್ರಿಗಳು, ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ, ಕನ್ನಡವೇ ನಮ್ಮ ಉಸಿರು ಎಂದು ಮುಖ್ಯಮಂತ್ರಿಗಳು ಈ ಸಂದರ್ಭ ಉದ್ಘಾಟನೆ ನೆರವೇರಿಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಮಾತನಾಡಿ, ಬಡವರು ಹಸಿವಿನಿಂದ ಬಳಲಬಾರದು ಎಂಬ ಯೋಚನೆಯಿಂದ ಜಾರಿಗೆ ತಂದಂತಹ ಅನ್ನಭಾಗ್ಯ ಯೋಜನೆ ಪುಣ್ಯದ ಕಾರ್ಯಕ್ರಮವಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬಡವರು ಋಣಿಯಾಗಿರಬೇಕು ಎಂದು ಕರೆ ನೀಡಿದರು.

ಗೃಹಲಕ್ಷ್ಮಿ; ಜಿಲ್ಲೆಯ 1.35ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆ: ಉಳಿದವರಿಗೆ ಯಾವಾಗ? ಇಲ್ಲಿದೆ ಮಾಹಿತಿ
ಮಧುಗಿರಿ ತಾಲ್ಲೂಕು ಕೇಂದ್ರವನ್ನು ಜಿಲ್ಲೆಯನ್ನಾಗಿ ಘೋಷಿಸಬೇಕು ಮತ್ತು ಏಷ್ಯಾ ಖಂಡದಲ್ಲಿಯೇ ಅತ್ಯಂತ ಹೆಸರುವಾಸಿಯಾಗಿರುವ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಕೇಬಲ್‌ಕಾರು ಅಳವಡಿಸುವಂತೆ ಈ ಸಂದರ್ಭ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ಮಾತನಾಡಿ, ಮಧುಗಿರಿ ತಾಲ್ಲೂಕನ್ನು ಜಿಲ್ಲೆಯನ್ನಾಗಿ ನೋಡಬೇಕೆಂಬುದು ಕೆ.ಎನ್.ರಾಜಣ್ಣನವರ ಹಾಗೂ ಇಲ್ಲಿನ ಜನರ ಬಹಳ ವರ್ಷದ ಕನಸಾಗಿದ್ದು, ಮುಖ್ಯಮಂತ್ರಿಗಳು ಮಧುಗಿರಿ ತಾಲ್ಲೂಕನ್ನು ಜಿಲ್ಲೆಯನ್ನಾಗಿ ಘೋಷಿಸುವ ಮೂಲಕ ಇಲ್ಲಿನ ಜನರ ಬಹುದಿನದ ಕನಸನ್ನು ನನಸು ಮಾಡಬೇಕೆಂದು ಮನವಿ ಮಾಡಿದರು.
2015 ರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಧಿಕಾರ ಸ್ವೀಕರಿಸಿದ ಕೇವಲ ಅರ್ಧ ಗಂಟೆಯಲ್ಲಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದರು. ಅಂತೆಯೇ 2013 ರಲ್ಲಿ ಕ್ಷೀರಭಾಗ್ಯವನ್ನು ಜಾರಿಗೆ ತಂದಿದ್ದು, ಈ ಹತ್ತು ವರ್ಷಗಳಲ್ಲಿ ಕೋಟ್ಯಾಂತರ ಮಕ್ಕಳು ಕ್ಷೀರಭಾಗ್ಯ ಯೋಜನೆಯ ಲಾಭವನ್ನು ಪಡೆದಿರುತ್ತಾರೆ ಎಂದು ತಿಳಿಸಿದರು.

ಗೃಹಲಕ್ಷ್ಮಿಗೆ ಈಗಲೂ ನೋಂದಣಿ ಮಾಡಿಸಬಹುದೇ?; ಮುರಳೀಧರ ಹಾಲಪ್ಪ ಸ್ಪಷ್ಟನೆ
156 ಕೋಟಿ ರೂ.ಗಳ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಇಂದು ಮುಖ್ಯಮಂತ್ರಿಗಳು ನೆರವೇರಿಸಿದ್ದು, ಸಚಿವ ಕೆ.ಎನ್. ರಾಜಣ್ಣನವರು ಹಲವು ಯೋಜನೆಗಳನ್ನು ತಾಲ್ಲೂಕಿಗೆ ತರುತ್ತಿದ್ದಾರೆ ಎಂದು ಶ್ಲಾಘಿಸಿದರು.
ಪ್ರಣಾಳಿಕೆಯ ಪ್ರತಿಯೊಂದು ಅಂಶವನ್ನು ಅನುಷ್ಟಾನಗೊಳಿಸುವ ಬದ್ಧತೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರ ಸರ್ಕಾರಕ್ಕಿದ್ದು, ಶೇ.80ರಷ್ಟು ಭರವಸೆಗಳನ್ನು ಈಡೇರಿಸಲಾಗಿದೆ ಎಂದು ತಿಳಿಸಿದರು.
ಮಧುಗಿರಿ ಉಪವಿಭಾಗ ಬರಪೀಡಿತ ಪ್ರದೇಶವಾಗಿದ್ದು, ಶಿರಾ, ಪಾವಗಡ, ಕೊರಟಗೆರೆ ಮಧುಗಿರಿ ಸೇರಿದಂತೆ ಈ ಭಾಗದ 4 ತಾಲ್ಲೂಕುಗಳು ಖಾಯಂ ಬರ ತಾಲ್ಲೂಕುಗಳಾಗಿದ್ದು, ಎತ್ತಿನ ಹೊಳೆ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸುವಂತೆ ಮನವಿ ಮಾಡಿದರು.
ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೀರಭಾಗ್ಯ ಯೋಜನೆಯ ಜಾರಿಯಿಂದಾಗಿ 27 ಲಕ್ಷ ಹಾಲು ಉತ್ಪಾದಕರು ಹಾಗೂ 14 ಹಾಲು ಒಕ್ಕೂಟಗಳಿಗೆ ಲಾಭವಾಗಿದೆ. ಕ್ಷೀರಭಾಗ್ಯ ಯೋಜನೆಯ ಮೂಲಕ ಕೆಎಂಎಫ್‌ಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದ ಅವರು, ಹಾಲಿನ ಪುಡಿಯ ದರವನ್ನು ಹೆಚ್ಚಳ ಮಾಡುವಂತೆ ಈ ಸಂದರ್ಭ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ 10 ಮಕ್ಕಳಿಗೆ ಸಾಂಕೇತಿಕವಾಗಿ ಕ್ಷೀರ ಭಾಗ್ಯ ಯೋಜನೆಯ ದಶಮಾನೋತ್ಸವದ ಸಂಭ್ರಮಾಚರಣೆ ಅಂಗವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಾಲನ್ನು ವಿತರಿಸಿದರು ಮತ್ತು ಮಕ್ಕಳು ಸಂತಸದಿಂದ ಹಾಲನ್ನು ಸೇವಿಸಿದರು.

ಮಧುಗಿರಿ V/S ತಿಪಟೂರು ಜಿಲ್ಲಾ ಕೇಂದ್ರ: ಮಹತ್ವದ ಘೋಷಣೆ ಮಾಡಿದ ಸಿಎಂ
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ದಶಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ಬೃಹತ್ ಹೂವಿನ ಹಾರವನ್ನು ಹಾಕಲಾಯಿತು ಮತ್ತು ಹಸು-ಕರು ಬೆಳ್ಳಿಯ ವಿಗ್ರಹವನ್ನು ನೀಡಿ ಸನ್ಮಾನಿಸಲಾಯಿತು.
ಕ್ಷೀರಭಾಗ್ಯ ಕಾರ್ಯಕ್ರಮವನ್ನು ಅಂದು ಯಶಸ್ವಿಯಾಗಿ ಅನುಷ್ಟಾನಗೊಳಿಸಿದ ಹಿರಿಯ ನಿವೃತ್ತ ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್ ಹಾಗೂ ಕರ್ನಾಟಕ ಹಾಲು ಮಂಡಳ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರಾದ ಎ.ಎಸ್ ಪ್ರೇಮನಾಥ್ ಅವರುಗಳಿಗೆ ಈ ಸಂದರ್ಭ ಮುಖ್ಯಮಂತ್ರಿಗಳು ಆತ್ಮೀಯವಾಗಿ ಸನ್ಮಾನಿಸಿದರು.
ಸಮಾರಂಭದಲ್ಲಿ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಕರ್ನಾಟಕ ರಾಜ್ಯ ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರುಗಳಾದ ರಾಜೇಂದ್ರ, ರಂಗನಾಥ್, ಕೆ.ಷಡಾಕ್ಷರಿ, ವೆಂಕಟೇಶ್, ಎಸ್.ಆರ್.ಶ್ರೀನಿವಾಸ್, ಸಹಕಾರ ಸಂಘಗಳ ನಿಬಂಧಕರಾದ ಡಾ. ಕೆ.ರಾಜೇಂದ್ರ, ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್ ಮಂಜುನಾಥ್ ಪ್ರಸಾದ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿ.ಪಂ. ಸಿಇಓ ಜಿ.ಪ್ರಭು, ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೆ.ಎಂ.ಎಫ್.ನ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಸ್ವಾಗತಿಸಿದರು. ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಸ್ಮರಣ ಸಂಚಿಕೆಯನ್ನು ಈ ಸಂದರ್ಭ ಬಿಡುಗಡೆ ಮಾಡಲಾಯಿತು.

About The Author

You May Also Like

More From Author

+ There are no comments

Add yours