ಮಧ್ಯವರ್ತಿಗಳ ಹಾವಳಿ, ವ್ಯಾಪಕ ಭ್ರಷ್ಟಾಚಾರ; ಪಾಲಿಕೆ ಸಭೆಯಲ್ಲಿ ಸದಸ್ಯರ ಆಕ್ರೋಶ

1 min read

 

ಮಧ್ಯವರ್ತಿಗಳ ಹಾವಳಿ, ವ್ಯಾಪಕ ಭ್ರಷ್ಟಾಚಾರ; ಪಾಲಿಕೆ ಸಭೆಯಲ್ಲಿ ಸದಸ್ಯರ ಆಕ್ರೋಶ

Tumkurnews
ತುಮಕೂರು: ಮಹಾನಗರ ಪಾಲಿಕೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ, ಬ್ರೋಕರ್’ಗಳಿಂದ ಬರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಲಂಚ ನೀಡಿದವರ ಕೆಲಸ ಮೊದಲು ಎಂಬಂತಾಗಿದೆ. ಕೋಟ್ಯಂತರ ರೂ.ಗಳ ಭ್ರಷ್ಟಾಚಾರ ನಡೆದಿದ್ದರೂ ಬೆಳಕಿಗೆ ಬರುವುದೇ ಇಲ್ಲ ಎಂದು ಪಾಲಿಕೆ ಸದಸ್ಯ ಟಿ.ಎಂ. ಮಹೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪಾಲಿಕೆ ಸಭಾಂಗಣದಲ್ಲಿ ಬುಧವಾರ ನಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆಯಲ್ಲಿನ ಮಧ್ಯವರ್ತಿಗಳ ಹಾವಳಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಭ್ರಷ್ಟಾಚಾರ ಆರೋಪಗಳ ಬಗ್ಗೆ ಸೂಕ್ತ ತನಿಖೆಗೆ ಒತ್ತಾಯಿಸಿದರು.
ಈ ಬಗ್ಗೆ ಧ್ವನಿಗೂಡಿಸಿದ ಇತರೆ ಸದಸ್ಯರು ಹಲವು ಸಮಸ್ಯೆಗಳ ಕುರಿತು ಸಭೆಯ ಗಮನ ಸೆಳೆದರು. ಸದಸ್ಯರ ಒತ್ತಾಯಕ್ಕೆ ಸ್ಪಂದಿಸಿದ ಆಯುಕ್ತರು ಕೂಲಕಂಶವಾಗಿ ಪರಿಶೀಲಿಸುವುದಾಗಿ ಸಭೆಗೆ ಭರವಸೆ ನೀಡಿದರು.
ಪಾಲಿಕೆ ಸದಸ್ಯ ಬಿ.ಎಸ್.ಮಂಜುನಾಥ್ ಮಾತನಾಡಿ, ಹಿಂದಿನ ಸಾಮಾನ್ಯ ಸಭೆಗಳಲ್ಲಿ ಕೈಗೊಂಡಿರುವ ತೀರ್ಮಾನಗಳು ಇದುವರೆಗೂ ಕಾರ್ಯಗತಗೊಂಡಿಲ್ಲ. ಸಾಮಾನ್ಯ ಸಭೆಗಳನ್ನು ನಡೆಸುವ ಅಗತ್ಯವೇನೆಂದು ಪ್ರಶ್ನಿಸಿದಾಗ ಉಪ ಆಯುಕ್ತೆ(ಕಂದಾಯ) ಸುಮತಿ ಮಾತನಾಡಿ, ಹಿಂದಿನ ಸಭೆಯಲ್ಲಿ ಬಾಕಿಯಿದ್ದ ವಿಷಯಗಳನ್ನು ಚರ್ಚಿಸಿ ಇಂದು ನಿರ್ಣಯ ಕೈಗೊಳ್ಳಲಾಗುವುದೆಂದು ಉತ್ತರಿಸಿದರು.
ವಿರೋಧ ಪಕ್ಷದ ನಾಯಕ ವಿಷ್ಣುವರ್ಧನ್ ಮಾತನಾಡಿ, ಪಾಲಿಕೆ ವ್ಯಾಪ್ತಿಯ ಅನಧಿಕೃತ ಕಟ್ಟಡಗಳ ಮಾಲೀಕರಿಂದ ತೆರಿಗೆ ವಸೂಲಿ ಮಾಡಬೇಕು. ಇದರಿಂದ ಪಾಲಿಕೆ ಆದಾಯ ಹೆಚ್ಚಾಗಲಿದೆ. ಅನಧಿಕೃತ ಕಟ್ಟಡಗಳು ವಿದ್ಯುತ್, ಒಳಚರಂಡಿ, ನಳಸಂಪರ್ಕ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಪಾಲಿಕೆಯಿಂದ ಪಡೆದಿರುವುದರಿಂದ ಕಡ್ಡಾಯವಾಗಿ ತೆರಿಗೆಯನ್ನು ವಸೂಲಿ ಮಾಡಬೇಕೆಂದು ಪಟ್ಟು ಹಿಡಿದಾಗ ಸುಮತಿ ಪ್ರತಿಕ್ರಿಯಿಸಿ, ಈಗಾಗಲೇ ಅನಧಿಕೃತ ಕಟ್ಟಡಗಳಿಂದ ದುಪ್ಪಟ್ಟು ತೆರಿಗೆಯನ್ನು ವಸೂಲಾತಿ ಮಾಡಲಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.
3ನೇ ವಾರ್ಡಿನ ಸದಸ್ಯ ಲಕ್ಷ್ಮಿ ನರಸಿಂಹರಾಜು ಮಾತನಾಡಿ, ಪಾಲಿಕೆಯ ಕಂದಾಯ ಇಲಾಖೆಯು ಜನರಿಗೆ ಸ್ಪಂದಿಸುತ್ತಿಲ್ಲ. ಇದರಿಂದ ನಾಗರಿಕರಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
29ನೇ ವಾರ್ಡಿನ ಸದಸ್ಯೆ ನಾಜೀಮಾಬೀ ಮಾತನಾಡಿ, ಕೈಬಿಟ್ಟಿರುವ ಖಾತೆಗಳನ್ನು ಮುಂದುವರೆಸಬೇಕೆಂದು ಮನವಿ ಮಾಡಿದಾಗ ದನಿಗೂಡಿಸಿದ ಸದಸ್ಯರಾದ ಧರಣೇಂದ್ರ ಕುಮಾರ್, ಜೆ. ಕುಮಾರ್, ಶ್ರೀನಿವಾಸ್‍ಮೂರ್ತಿ, ಸೈಯದ್ ನಯಾಜ್, ಸಿ.ಎನ್.ರಮೇಶ್ ಅವರು ಒಕ್ಕೊರಲಿನಿಂದ ಅಧಿಕೃತ, ಅನಧಿಕೃತ ಖಾತೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕೆಂದು ಸಭೆಯಲ್ಲಿ ಆಗ್ರಹಿಸಿದರು.
ಮತ್ತೋರ್ವ ಸದಸ್ಯ(7ನೇ ವಾರ್ಡ್) ಜೆ. ಕುಮಾರ್ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಬೇಕೆಂದೇ ಸಾರ್ವಜನಿಕರ ಅರ್ಜಿಗಳನ್ನು ಕಳೆದು ಹಾಕುವುದು, ಅಗತ್ಯ ದಾಖಲಾತಿಗಳಿಲ್ಲವೆಂದು ನೆಪವೊಡ್ಡಿ ಆಕ್ಷೇಪಣೆ ಹಾಕುವುದನ್ನು ತಪ್ಪಿಸಬೇಕು ಎಂದು ಅಧ್ಯಕ್ಷರಲ್ಲಿ ಮನವಿ ಮಾಡಿದಾಗ ಪಾಲಿಕೆ ಆಯುಕ್ತೆ ಅಶ್ವಿಜ ಪ್ರತಿಕ್ರಿಯಿಸಿ ಅಧಿಕಾರಿಗಳು ಸಾರ್ವಜನಿಕರಿಂದ ಸ್ವೀಕೃತ ಎಲ್ಲಾ ಅರ್ಜಿಗಳನ್ನು ನಿಯಮಾನುಸಾರ ನಿಗದಿತ ಸಮಯದೊಳಗೆ ವಿಲೇವಾರಿ ಮಾಡಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.
ಕಾಗದ ರಹಿತ ಆಡಳಿತ ನಡೆಸಬೇಕೆಂಬ ಸರ್ಕಾರದ ನಿರ್ದೇಶನವಿದ್ದರೂ ಪಾಲಿಕೆಯಲ್ಲಿ ಇನ್ನೂ ಜಾರಿಯಾಗದಿರುವುದು ವಿಪರ್ಯಾಸ. ಎಲ್ಲಾ ವ್ಯವಹಾರಗಳನ್ನು ಡಿಜಿಟಲೀಕರಣಗೊಳಿಸಿದಾಗ ಮಾತ್ರ ಅರ್ಜಿ, ಕಡತಗಳು ಕಾಣೆಯಾಗುವುದು ತಪ್ಪುತ್ತದೆ ಎಂದು ಸದಸ್ಯರೆಲ್ಲರೂ ಸಲಹೆ ನೀಡಿದರು.
ಆಯುಕ್ತೆ ಮಾತನಾಡಿ, ಕಡತಗಳನ್ನು ಕಳೆದು ಹಾಕುವ ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಂದು ಕಡತಗಳನ್ನು ಡಿಜಿಟಲೀಕರಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಸದಸ್ಯೆ ನಳಿನ ಇಂದ್ರಕುಮಾರ್ ಮಾತನಾಡಿ, ಪಾಲಿಕೆ ಕೆಲಸಗಳು ಬ್ರೋಕರ್’ಗಳಿಂದ ಬಂದರೆ ಸುಲಭವಾಗಿ ಆಗುತ್ತವೆ. ಬ್ರೋಕರ್’ಗಳ ಹಾವಳಿಗೆ ಕಡಿವಾಣ ಬೀಳಬೇಕು. ಬಾಕಿ ಇರುವ ಅರ್ಜಿಗಳನ್ನು ವಿಚಾರಿಸಿದರೆ ಸಂಬಂಧಿಸಿದ ಅಧಿಕಾರಿಗಳು ವರ್ಗಾವಣೆಯಾಗಿದ್ದಾರೆ, ರಜೆ ಮೇಲೆ ತೆರಳಿದ್ದಾರೆ ಎಂದು ಸಬೂಬು ಹೇಳುತ್ತಾರೆಂದು ದೂರಿದಾಗ ಆಯುಕ್ತರು ಸ್ಪಂದಿಸಿ ಅಧಿಕಾರಿ ಮತ್ತು ಜನಪ್ರತಿನಿಧಿಗಳ ನಡುವೆ ಸಮನ್ವಯತೆ ಇದ್ದಾಗ ಮಾತ್ರ ಪಾಲಿಕೆ ಅಭಿವೃದ್ಧಿ ಸಾಧ್ಯ. ಕೆಲಸಕ್ಕೆ ವೇಗ ನೀಡುವ ಸಲುವಾಗಿ ಪಾಲಿಕೆ ನೌಕರರ ಶಾಖೆಗಳನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸದಸ್ಯ ಎ. ಶ್ರೀನಿವಾಸ್ ಮಾತನಾಡಿ, ಜನರಿಂದ ಅರ್ಜಿ ಪಡೆಯುವಾಗಲೇ ಪೂರ್ಣದಾಖಲೆ ಪಡೆದು ಯಾವುದೇ ಆಕ್ಷೇಪಣೆ ಹಾಕದೆ ಖಾತೆ ಬದಲಾವಣೆ, ಅಳತೆ ತಿದ್ದುಪಡಿ, ಕೈಬಿಟ್ಟಿರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ಮನವಿ ಮಾಡಿದರು.

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ನೇರ ನೇಮಕಾತಿ; ಸಂದರ್ಶನಕ್ಕೆ ಆಹ್ವಾನ
ಪಾಲಿಕೆ ಸದಸ್ಯೆ ನಾಜೀಮಾಬಿ ಮಾತನಾಡಿ, ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ಹುಳುಗಳಿಂದ ಕೂಡಿದ ಕೊಳೆತ ಮೊಟ್ಟೆಗಳನ್ನು ತಿನ್ನಲು ವಿತರಿಸಲಾಗಿದೆ. ನಗರದ ಕೊಳಕನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವವರಿಗೆ ತಿನ್ನಲು ಕೊಳೆತ ಆಹಾರವನ್ನು ನೀಡಲಾಗುತ್ತಿದೆ. ಈ ಅಮಾನವೀಯ ಘಟನೆಗೆ ಕಾರಣರಾದ ಆರೋಗ್ಯ ನಿರೀಕ್ಷಕರ ವಿರುದ್ಧ ಕ್ರಮಕೈಗೊಳ್ಳಬೇಕು. ಆಹಾರ ಸರಬರಾಜು ಮಾಡಿದ ಗುತ್ತಿಗೆದಾರರ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಿ ತನಿಖೆಯಾಗಬೇಕೆಂದು ಆಗ್ರಹಿಸಿದಾಗ ಪ್ರತಿಕ್ರಿಯಿಸಿದ ಮೇಯರ್ ಪೌರಕಾರ್ಮಿಕರ ಊಟೋಪಹಾರಕ್ಕಾಗಿ ಪ್ರತೀ ಮಾಹೆಯಾನ 2.45ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಇಂತಹ ಕಳಪೆ ಆಹಾರ ನೀಡುವ ಬದಲು ಅವರ ಖಾತೆಗೆ ಉಪಹಾರದ ವೆಚ್ಚದ ಹಣವನ್ನು ವರ್ಗಾವಣೆ ಮಾಡುವುದೇ ಸೂಕ್ತ. ಈ ಬಗ್ಗೆ ಚಿಂತನೆ ನಡೆಸಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ಉಪಮೇಯರ್ ಟಿ.ಕೆ. ನರಸಿಂಹಮೂರ್ತಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಪಾಲಿಕೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವ್ಯಾಪಾರಿಗಳಿಗೆ ಸಾಲ ಸೌಲಭ್ಯ; ಪಾಲಿಕೆಯಿಂದ ಅರ್ಜಿ ಆಹ್ವಾನ

About The Author

You May Also Like

More From Author

+ There are no comments

Add yours