ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಭೆ; ಇಲ್ಲಿದೆ ಸಮಗ್ರ ವರದಿ

1 min read

Tumkurnews
ತುಮಕೂರು; ಸಮಾಜಕಲ್ಯಾಣ ಮತ್ತು ಬಿಸಿಎಂ ಹಾಸ್ಟೆಲ್‍ಗಳಲ್ಲಿ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ನೀಡಬೇಕು, ಸ್ವಚ್ಚತೆ ಕಾಪಾಡಿಕೊಳ್ಳಬೇಕು, ವಾರ್ಡ’ನ್’ಗಳು ಮಕ್ಕಳ ಜೊತೆ ಬೆರೆಯುವ ಮೂಲಕ ಮಕ್ಕಳ ಭಾವನೆಗಳಿಗೆ ಸ್ಪಂದಿಸಬೇಕು ಮತ್ತು ಈ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಂತಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬಾಲನ್ಯಾಯ ಕಾಯ್ದೆ-2015, ಆರ್‍ಟಿಇ-2009, ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣಾ ಕಾಯ್ದೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ಗಳಲ್ಲಿ ಜಿಲ್ಲೆಯಲ್ಲಿ 2500 ಹೆಣ್ಣು ಮಕ್ಕಳಿದ್ದು, ಬಿಸಿಎಂ ಹಾಸ್ಟೆಲ್‍ಗಳಲ್ಲಿ 4100 ಹೆಣ್ಣು ಮಕ್ಕಳಿದ್ದಾರೆ. ಇಲ್ಲಿ ಕಡ್ಡಾಯವಾಗಿ ಮಹಿಳಾ ಮೇಲ್ವಿಚಾರಕಿಯನ್ನು ನೇಮಿಸಬೇಕು ಎಂದು ಸೂಚಿಸಿದ ಅವರು, ಮಕ್ಕಳಿಗೆ ಹಾಸ್ಟೆಲ್ ಆವರಣದ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಕಾಪಾಡಿಕೊಳ್ಳುವ ಉತ್ತಮ ಚಟುವಟಿಕೆಗಳನ್ನು ಹೇಳಿ ಕೊಡಬೇಕು ಎಂದು ತಿಳಿಸಿದರು.

ಮೋದಿ ಸ್ವಾಗತಕ್ಕೆ ಸಜ್ಜಾಗುತ್ತಿದೆ ತುಮಕೂರು; ನಮೋ ಭೇಟಿಗೆ ದಿನಗಣನೆ
ಕಾರ್ಮಿಕ ಇಲಾಖೆಯ ವತಿಯಿಂದ ಯಾರಿಗೂ ಸುಳಿವು ನೀಡದಂತೆ ಗೌಪ್ಯವಾಗಿ ಸಿದ್ಧತೆ ನಡೆಸಿ ಬಾಲ ಕಾರ್ಮಿಕ ಪದ್ಧತಿ ಜಾರಿಯಲ್ಲಿರುವ ಸ್ಥಳಗಳಿಗೆ ತೆರಳಿ ದಾಳಿ ಮಾಡಬೇಕು. ಬಾಲ ಕಾರ್ಮಿಕ ಪದ್ಧತಿಯಿಂದ ರಕ್ಷಿಸಲ್ಪಟ್ಟ ಮಕ್ಕಳ ಹೆಸರಿನಲ್ಲಿ 35 ಸಾವಿರ ರೂ.ಗಳ ಠೇವಣಿ ಇಡಬೇಕು ಎಂದು ತಿಳಿಸಿದರು.
ಗಡಿ ಪ್ರದೇಶಗಳಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಿದ್ದು, ಇಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಕೆಲಸಗಳು ಆಗಬೇಕು. ಶಾಲೆಗಳಲ್ಲಿ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಹಚ್ಚುವ ಮೂಲಕ ಬಾಲ್ಯವಿವಾಹ ನಿಷೇಧ ಕುರಿತು ಜಾಗೃತಿ ಮೂಡಿಸಬೇಕು. ತಹಶೀಲ್ದಾರ್ ಅಧ್ಯಕ್ಷತೆಯ ತಾಲ್ಲೂಕು ಬಾಲ್ಯ ವಿವಾಹ ನಿಷೇಧ ಸಮಿತಿಯು ತಿಂಗಳಿಗೊಮ್ಮೆ ಸಭೆ ಸೇರಿ ಪರಿಸ್ಥಿತಿ ಅವಲೋಕಿಸಬೇಕು. ಸಭೆಯ ನಡಾವಳಿಯನ್ನು ಕಳುಹಿಸಿಕೊಡಬೇಕೆಂದು ಸೂಚಿಸಿದರು.

ರೈತರಿಗೆ ವಿವಿಧ ಪಶುಪಾಲನೆ ಕುರಿತು ಉಚಿತ ತರಬೇತಿ
ಶಿಕ್ಷಣ ಇಲಾಖೆಯಿಂದ ನೀಡಲಾಗುವ ಮಧ್ಯಾಹ್ನದ ಬಿಸಿಯೂಟ ಉತ್ತಮ ಗುಣಮಟ್ಟದ್ದಾಗಿರಬೇಕು. ಎಲ್ಲಿಯೂ ಕಳಪೆ ಆಹಾರ ಸೇವಿಸಿ ವಾಂತಿ, ಬೇದಿ ಉಂಟಾಗುವ ಪ್ರಕರಣಗಳು ಬರಬಾರದು. ಟೆಂಡರ್ ಕರೆದ ಪ್ರಕಾರವೇ ಗುಣಮಟ್ಟದ ಆಹಾರ ಸಾಮಗ್ರಿ ಪೂರೈಕೆಯಾಗಬೇಕು. ಉತ್ತಮ ನೀರು ಮತ್ತು ಸ್ವಚ್ಛತೆ ಶಾಲಾ ಆವರಣದಲ್ಲಿ ಕಾಪಾಡಿಕೊಳ್ಳಬೇಕು. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕು. ವಲಸೆ ಕಾರ್ಮಿಕರು ಹೆಚ್ಚಿರುವ ಕಡೆ ತೆರಳಿ ಅವರ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಬಾಲ ಕಾರ್ಮಿಕ ಶಾಲೆ ಅಥವಾ ಅಂಗನವಾಡಿ ಶಾಲೆಗಳಿಗೆ ಸೇರಿಸಬೇಕು ಎಂದು ಸೂಚಿಸಿದರು.
ಮಕ್ಕಳ ಮೇಲೆ ದೌರ್ಜನ್ಯ ಎಸಗುವಂತಹ ಶಿಕ್ಷಕರುಗಳನ್ನು ಗುರುತಿಸಿ, ಅವರೊಂದಿಗೆ ಸಮಾಲೋಚಿಸಬೇಕು. ಅವರು ಬದಲಾಗದಿದ್ದಲ್ಲಿ ಕಠಿಣ ಕ್ರಮಕೈಗೊಳ್ಳಬೇಕು. ಗಂಡು ಮಕ್ಕಳಿಗೂ ಸಹ ಪ್ರತಿ 6 ತಿಂಗಳಿಗೊಮ್ಮೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಡಿಡಿಪಿಐಗಳಿಗೆ ಸೂಚಿಸಿದರು.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಆಟೋ ಚಾಲಕ ಸೇರಿ ಇಬ್ಬರಿಗೆ ಜೈಲು ಶಿಕ್ಷೆ
ಅಪೌಷ್ಟಿಕ ತಾಯಿ-ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಟಿಕ ಆಹಾರ ನೀಡುವ ಕೆಲಸ ಸಿಡಿಪಿಓಗಳಿಂದ ಆಗಬೇಕು. ಇತ್ತೀಚಿನ ದಿನಗಳಲ್ಲಿ ಗುಟಕಾ ತಿನ್ನುವುದು, ಮಾದಕ ವಸ್ತುಗಳ ಸೇವನೆ ಮತ್ತು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಈ ಕುರಿತು ಆರೋಗ್ಯ ಇಲಾಖೆ ವತಿಯಿಂದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹೆಚ್ಚು ಹೆಚ್ಚು ರೂಪಿಸಬೇಕು ಎಂದು ತಿಳಿಸಿದರು.
ಶಾಲಾ ಆವರಣದಿಂದ 100 ಮೀಟರ್‌ಗಿಂತ ಕಡಿಮೆ ಪ್ರದೇಶದಲ್ಲಿ ಮದ್ಯದಂಗಡಿಗಳು ಇದ್ದಲ್ಲಿ ಎತ್ತಂಗಡಿ ಮಾಡಬೇಕು. ಪಬ್, ಬಾರ್’ಗಳಲ್ಲಿ ಮಕ್ಕಳನ್ನು ದುಡಿಸಬಾರದು. ಮೆಡಿಕಲ್ ಸ್ಟೋರ್’ಗಳಲ್ಲಿ ದೊಡ್ಡವರು ಬಳಸುವ ವಸ್ತುಗಳು ಮಕ್ಕಳ ಕೈಗೆ ಸಿಗದಂತೆ ತಹಶೀಲ್ದಾರರು ಕ್ರಮ ವಹಿಸಬೇಕು. ಬಸ್‍ಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಮಕ್ಕಳ ಸಾಗಾಣಿಕೆ ಮಾಡಬಾರದು. ಶಾಲಾ ವಾಹನಗಳಿಗೆ ಬ್ರೇಕ್ ಲೈಟ್ ಇರುವ ವ್ಯವಸ್ಥೆ ಮಾಡಬೇಕು. ಅಂಗನವಾಡಿಗಳಲ್ಲಿ ಮಕ್ಕಳಿಗೆ ಆಟದ ವಸ್ತುಗಳನ್ನು ನೀಡಿ ಆರೋಗ್ಯಕರ ಬೆಳವಣಿಗೆಗೆ ಕಾರಣವಾಗಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರು ನೀಡಿದ ಎಲ್ಲಾ ನಿರ್ದೇಶನಗಳನ್ನು ಪಾಲಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.
ಜಿ.ಪಂ ಸಿಇಓ ವಿದ್ಯಾ ಕುಮಾರಿ ಮಾತನಾಡಿ, ಅಧಿಕಾರಿಗಳು ಮಕ್ಕಳ ಜೊತೆ ಮಾನವೀಯ ಸ್ಪರ್ಶ ಹಾಗೂ ಅಂತಃಕರಣದಿಂದ ಬೆರೆಯಬೇಕಾಗುತ್ತದೆ. ಹೀಗಾದಲ್ಲಿ ಮಾತ್ರ ಸರ್ಕಾರಿ ನಿಲಯಗಳಲ್ಲಿ ಬೆಳೆಯುವ ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆಯಲು ಸಾಧ್ಯ ಎಂದು ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಮೂರ್ತಿ ಜಯಶಂಕರ್, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉಪ ಕಾರ್ಯದರ್ಶಿ ಹಾಗೂ ನ್ಯಾಯಮೂರ್ತಿ ರಾಘವೇಂದ್ರ ಶೆಟ್ಟಿಗಾರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ನ್ಯಾ.ನೂರುನ್ನಿಸಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪರಮೇಶ್ವರ್’ಗೆ ಸಿದ್ದರಾಮಯ್ಯ ಸಮುದಾಯದವರು ವಿರೋಧ ಮಾಡುವ ಸಂದರ್ಭ ಬರಬಹುದು; ಕೆ.ಎನ್. ರಾಜಣ್ಣ; ವಿಡಿಯೋ

About The Author

You May Also Like

More From Author

+ There are no comments

Add yours