ಲೋನ್ ಪಡೆದು ವಂಚನೆ; ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ
Tumkurnews
ತುಮಕೂರು: ನಗರದ ವಿನಾಯಕ ನಗರದ ನಿವಾಸಿ, ಬ್ಯಾಂಕ್ ಉದ್ಯೋಗಿ ಟಿ.ಯು.ಭರತ್ (32) ಎಂಬುವರು ತಮ್ಮ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಭರತ್ ಅವರು ತುಮಕೂರು ತಾಲ್ಲೂಕಿನ ಹೆಗ್ಗೆರೆ ಗ್ರಾಮದ ಇಂಡಿಯನ್ ಓವರ್’ಸಿಸ್ ಬ್ಯಾಂಕ್ನಲ್ಲಿ ಕಳೆದ ಹಲವು ವರ್ಷಗಳಿಂದ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಗುರುವಾರ ಮಧ್ಯಾಹ್ನ ಮನೆಯವರು ತಾಲ್ಲೂಕಿನ ಹರಳೂರು ಜಾತ್ರೆಗೆ ಹೋಗಿದ್ದ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನ್ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯವರು ಜಾತ್ರೆಯಿಂದ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಮೂವರ ವಿರುದ್ಧ ಕೇಸ್: ಘಟನೆ ಕುರಿತು ಭರತ್ ತಂದೆ ಎಚ್.ಸಿ ಉಮೇಶ್ ಅವರು ತುಮಕೂರು ನಗರ ಪೊಲೀಸ್ ಠಾಣೆಗೆ ಮೂವರ ವಿರುದ್ಧ ದೂರು ನೀಡಿದ್ದಾರೆ. ತುಮಕೂರಿನ ವಿನಾಯಕ ನಗರ ನಿವಾಸಿಗಳಾದ ಆನಂದಪ್ಪ, ಅವರ ತಂಗಿ ತ್ರಿವೇಣಿ ಹಾಗೂ ಅವರ ಅಕ್ಕ, ಈ ಮೂವರು ನನ್ನ ಮಗ ಭರತ್’ನ ಆತ್ಮಹತ್ಯೆಗೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೇಲಿನ ಮೂವರ ವಿರುದ್ಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಾರಿ ಲೋನ್ ಪಡೆದು ವಂಚನೆ: ದೂರು ದಾರ ಎಚ್.ಸಿ ಉಮೇಶ್ ಹೇಳುವಂತೆ, ‘ಆನಂದಪ್ಪ ಅವರು ಭರತ್ ಹೆಸರಿನಲ್ಲಿ ಫೈನಾನ್ಸ್’ನಿಂದ ಸಾಲ ಪಡೆದು ಲಾರಿ ಖರೀದಿಸಿದ್ದರು. ಆದರೆ ಸಾಲದ ಕಂತಿನ ಹಣವನ್ನು ಕಟ್ಟುತ್ತಿರಲಿಲ್ಲ. ಇದರಿಂದಾಗಿ ಕಂತು ಕಟ್ಟುವಂತೆ ಫೈನಾನ್ಸ್ ಸಂಸ್ಥೆಯಿಂದ ಭರತ್’ಗೆ ನೋಟಿಸ್ ಬರುತ್ತಿತ್ತು. ಇದಲ್ಲದೆ ಲಾರಿಯನ್ನು ಮಾರಾಟ ಮಾಡಲು ಸಹಿ ಹಾಕುವಂತೆ ಮಗ ಭರತ್’ಗೆ ಆನಂದಪ್ಪ ಒತ್ತಾಯ ಮಾಡುತ್ತಿದ್ದರು. ಇದರಿಂದ ಮನನೊಂದು ಭರತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ದೂರಿನಲ್ಲಿ ಉಮೇಶ್ ಹೇಳಿದ್ದಾರೆ.
+ There are no comments
Add yours