Tumkurnews
ತುಮಕೂರು; ಪದೇ ಪದೆ ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ ಎಂಬ ಕಾರಣಕ್ಕೆ ಮೂರುವರೆ ವರ್ಷದ ಪುಟ್ಟ ಬಾಲಕನ ಮೂತ್ರಾಂಗಕ್ಕೆ ಬೆಂಕಿಯಿಂದ ಸುಟ್ಟಿರುವ ಅಮಾನವೀಯ ಘಟನೆ ನಡೆದಿದೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಗೋಡೇಕೆರೆ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗೋಡೇಕೆರೆ ಅಂಗನವಾಡಿ ಕೇಂದ್ರಕ್ಕೆ ಸ್ಥಳೀಯ ನಿವಾಸಿಯೋರ್ವರು ತಮ್ಮ ಮೂರುವರೆ ವರ್ಷದ ಮಗನನ್ನು ದಾಖಲಿಸಿದ್ದರು. ಈ ಬಾಲಕ ಅಂಗನವಾಡಿ ಕೇಂದ್ರದಲ್ಲಿ ಪದೇ ಪದೆ ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದನು ಎನ್ನಲಾಗಿದೆ. ಇದರಿಂದ ಬೇಸತ್ತ ಅಂಗನವಾಡಿ ಕಾರ್ಯಕರ್ತೆ ನಾಗರತ್ನ ಹಾಗೂ ಸಹಾಯಕಿ ಸೇರಿ ಬಾಲಕನ ಮೂತ್ರಾಂಗಕ್ಕೆ ಬೆಂಕಿ ಕಡ್ಡಿ ಗೀರಿ ಇಟ್ಟಿದ್ದಾರೆ. ಸುಟ್ಟ ಗಾಯದಿಂದ ಮನೆಗೆ ತೆರಳಿದ್ದ ಬಾಲಕನು ಮನೆಯಲ್ಲಿ ನೋವಿನಿಂದ ಅಳುತ್ತಿದ್ದದ್ದನ್ನು ಗಮನಿಸಿದ ಆತನ ಅಜ್ಜಿ, ಏನಾಯಿತೆಂದು ವಿಚಾರಿಸಿದಾಗ ಬಾಲಕನು ಅಂಗನವಾಡಿಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾನೆ.
ಬಳಿಕ ಬಾಲಕನ ಪೋಷಕರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಗೆ ಹಾಗೂ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಿದ್ದಾರೆ. ಆರೋಪಿಗಳಿಂದ ಕ್ಷಮಾಪಣೆ ಪತ್ರ ಪಡೆದು ಪ್ರಕರಣವನ್ನು ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿದುಬಂದಿದೆ.
+ There are no comments
Add yours