ರಾಜ್ಯದ ಜನತೆಯ ತಲಾ ಆದಾಯ ಇಡೀ ದೇಶದಲ್ಲೇ ಮುಂಚೂಣಿಯಲ್ಲಿದೆ; ಸಿಎಂ
ಮೋದಿ ಅವಧಿಯಲ್ಲಿ ದೇಶದ ಸಾಲ ಏರಿಕೆ; ತುಮಕೂರಿನಲ್ಲಿ ಸಾಧನಾ ಸಮರ್ಪಣೆಯಲ್ಲಿ ಸಿದ್ದು ಗುದ್ದು
Tumkur news
ತುಮಕೂರು: ದೇಶಕ್ಕೆ ಸ್ವಾತಂತ್ರ ಬಂದಾಗಿನಿಂದಲೂ 53.11 ಲಕ್ಷ ಕೋಟಿ ರೂ. ದೇಶದ ಸಾಲವಿತ್ತು, ಮೋದಿ ಅಧಿಕಾರಕ್ಕೆ ಬಂದ ನಂತರ 120 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ದೇಶವನ್ನು ಹಾಳು ಮಾಡಿ, ಹಿಂದು ಮುಸ್ಲಿಂ ನಡುವೆ ದ್ವೇಷ ತಂದು ಹಾಕುವ ಕೆಲಸ ಮಾಡುತ್ತಿದ್ದಾರೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಈ ದೇಶ ಏನಾಗುತ್ತದೆ ಎನ್ನುವುದು ಗೊತ್ತಾಗುತ್ತಿದೆ, ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಜನತೆ ಕಾಂಗ್ರೆಸನ್ನು ಅಧಿಕಾರಕ್ಕೆ ತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನಾ ಸಮರ್ಪಣಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿಯವರು ನೀಡಿದ ಭರವಸೆಯಂತೆ ವರ್ಷಕ್ಕೆ 2 ಕೋಟಿಯಂತೆ 12 ವರ್ಷದ ಅಧಿಕಾರವಧಿಯಲ್ಲಿ 24 ಕೋಟಿ ಉದ್ಯೋಗ ಕೊಡಬೇಕಿತ್ತು, ಆದರೇ 2 ಕೋಟಿ ಕೂಡ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಕಾಂಗ್ರೆಸ್ ಅಧಿಕಾರವಧಿಯಲ್ಲಿ ರಾಜ್ಯದ ಜನತೆಯ ತಲಾ ಆದಾಯ ಇಡೀ ದೇಶದಲ್ಲಿ ಮುಂಚೂಣಿಯಲ್ಲಿದೆ. ನಮ್ಮ ಸರ್ಕಾರದಲ್ಲಿ ಆಗಿರುವ ಎಲ್ಲಾ ಕೆಲಸಗಳನ್ನು ವಸ್ತು ಪ್ರದರ್ಶನದಲ್ಲಿ ಬಿಂಬಿಸುವ ಕೆಲಸವನ್ನು ಜಿ.ಪರಮೇಶ್ವರ್ ಮಾಡಿದ್ದಾರೆ, ಅದಕ್ಕಾಗಿ ಅಭಿನಂದಿಸುತ್ತೇನೆ. ಮೂರು ವರ್ಷದ ಸಾಧನೆಗಳ ಬಗ್ಗೆ ಕಾರ್ಯಕ್ರಮ ಮಾಡಬೇಕೆಂದು ಯೋಚಿಸಿದಾಗಿ ಜಿ.ಪರಮೇಶ್ವರ್ ಸ್ವಯಂ ಪ್ರೇರಿತರಾಗಿ ತುಮಕೂರಿನಲ್ಲಿ ಮಾಡುವುದಾಗಿ ಹೇಳಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ನಮ್ಮ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ಹೋಗಿ ಕಂದಾಯ ಇಲಾಖೆಯ ಸೇವೆಗಳನ್ನು ತಲುಪಿಸುತ್ತಿದ್ದಾರೆ. ಬಿಜೆಪಿಯವರು ಅವರ ಅಧಿಕಾರವಧಿಯಲ್ಲಿ ಮಾಡದ ಕೆಲಸಗಳನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ 40 ಲಕ್ಷಕ್ಕಿಂತ ಹೆಚ್ಚು ಜಮೀನುಗಳು ಮೃತರ ಹೆಸರಿನಲ್ಲೇ ಮುಂದುವರೆದಿದೆ. ವಾರಸುದಾರರ ಹೆಸರಿಗೆ ವರ್ಗಾವಣೆಯಾಗಿರಲಿಲ್ಲ, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನಾವೇ ಮನೆ ಬಾಗಲಿಗೆ ಹೋಗಿ ಖಾತೆ ಬದಲಾವಣೆ ಮಾಡಿಕೊಡುತ್ತಿದ್ದೇವೆ. ತಹಸೀಲ್ದಾರ್, ಎಸಿ ಕೋರ್ಟ್ನಲ್ಲಿ ಬಾಕಿ ಇದ್ದ ಕೇಸುಗಳ ಪೈಕಿ ಶೇ.90ರಷ್ಟನ್ನು ಇತ್ಯರ್ಥ ಪಡಿಸಿದ್ದೇವೆ ಎಂದರು.
ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ನಿಗಮ ಮಂಡಳಿಗಳಿಗೆ ಕೂಡಲೇ ನೇಮಕ ಮಾಡಬೇಕು, ಸರ್ಕಾರಕ್ಕೆ 3 ವರ್ಷ ಪೂರೈಕೆಯಾಗುತ್ತಿದ್ದು, ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದೆ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸವಾಗಬೇಕು. ಮುಂದಿನ ಎರಡು ವರ್ಷದಲ್ಲಿ ನಾವು ಮತ್ತೊಮ್ಮೆ ಯುದ್ಧಕ್ಕೆ ಹೋಗಬೇಕಿದೆ. ಈಗಾಗಲೇ ತಡವಾಗಿದ್ದು, ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸವಾಗಬೇಕು ಎಂದು ಸಮಾವೇಶದಲ್ಲಿ ಒತ್ತಾಯಿಸಿದರು.
ಸಚಿವ ಜಮೀರ್ ಅಹಮದ್ ಮಾತನಾಡಿ, ನಾವು ಚುನಾವಣೆ ಸಂದರ್ಭದಲ್ಲಿ ಮನೆ ಕೊಡುವ ಭರವಸೆ ನೀಡಿರಲಿಲ್ಲ, ಆದರೂ ಜನರು ಬೀದಿಯಲ್ಲಿದ್ದಾರೆ ಎಂದು ನಮ್ಮ ಸರ್ಕಾರ ಬಂದ ಮೇಲೆ 80 ಸಾವಿರ ಮನೆಗಳನ್ನು ವಿತರಿಸಿದ್ದೇವೆ. ಬಿಜೆಪಿ, ಜೆಡಿಎಸ್ ಪಕ್ಷದಿಂದ ಈ ಕೆಲಸ ಏಕೆ ಆಗಲಿಲ್ಲ, ಅವರು ಕೇವಲ ಭರವಸೆಗಳನ್ನಷ್ಟೇ ಕೊಡುತ್ತಾರೆ, ಬಡವರ ಕೆಲಸ ಮಾಡುವುದಿಲ್ಲ ಎಂದು ಟೀಕಿಸಿದರು.
ಸಚಿವ ಈಶ್ವರ ಖಂಡ್ರೆ ಮಾತನಾಡಿ, ಇಡೀ ದೇಶದಲ್ಲಿ ತಲಾ ಅದಾಯ ಹೆಚ್ಚಿರುವ ರಾಜ್ಯ ಕರ್ನಾಟಕ, ಅದರ ಶ್ರೇಯಸ್ಸು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಲ್ಲಬೇಕು, ನಮ್ಮ ಗ್ಯಾರಂಟಿ ಯೋಜನೆಗಳನ್ನೇ ಪಶ್ಚಿಮ ಬಂಗಾಳ ಸೇರಿದಂತೆ ಬಿಜೆಪಿ ಇತರೆ ರಾಜ್ಯಗಳಲ್ಲಿ ಅನುಷ್ಠಾನ ಮಾಡುವ ಮೂಲಕ ನಕಲು ಮಾಡುತ್ತಿದೆ. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಮಾಡುವ ಮೂಲಕ ರೈತರ ರಕ್ತ ಹೀರುತ್ತಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮೂಲಕ ಯುವಕರ, ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಿದೆ ಎಂದು ಕಿಡಿಕಾರಿದರು.
ಹೈಲೈಟ್ಸ್
• ಕಿಕ್ಕಿರಿದು ತುಂಬಿದ ಸಭಾಂಗಣ
• ಕಾರ್ಯಕ್ರಮದ ನಿರೂಪಣೆ ಮಾಡಿದ ಸಚಿವ ಕೃಷ್ಣ ಬೈರೇಗೌಡ
• ಕಂದಾಯ ಗ್ರಾಮಗಳನ್ನು ಗುರುತಿಸಿ ಹಕ್ಕು ಪತ್ರ ವಿತರಿಸಲು ಶ್ರಮಿಸಿದ ಜಿಲ್ಲೆಯ ಎಲ್ಲಾ 10 ತಾಲ್ಲೂಕುಗಳ ತಹಸೀಲ್ದಾರರಿಗೆ ಪ್ರಶಂಸನಾ ಪತ್ರವನ್ನು ವಿತರಿಸಲಾಯಿತು.
• ವೇದಿಕೆ ಕಾರ್ಯಕ್ರಮ ನಿಭಾಯಿಸಲು ಸ್ವಯಂ ಸೇವಕನಂತೆ ಓಡಾಡಿ ಗಮನ ಸೆಳೆದ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ.
• ಏಕಕಾಲದಲ್ಲಿ 650 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ನೇಮಕಾತಿ ಪತ್ರ ವಿತರಣೆ.
• 61 ಮಂದಿ ಕಂದಾಯೇತರ ಫಲಾನುಭವಿಗಳಿಗೆ ಸವಲತ್ತು ವಿತರಣೆ.
• 84 ಮಂದಿಗೆ ಹಕ್ಕುಪತ್ರ ವಿತರಣೆ, ಸಾಂಕೇತಿಕವಾಗಿ 24 ಮಂದಿಗೆ ವಿತರಣೆ.
“ಸರ್ಕಾರದ ಸಾಧನಾ ಸಮರ್ಪಣಾ ಸಮಾವೇಶವನ್ನು ಯಾವ ಪುರುಷಾರ್ಥಕ್ಕೆ ಮಾಡುತ್ತಿದ್ದಾರೆ ಎಂದು ಕಾರ್ಯಕ್ರಮದ ಬಗ್ಗೆ ಜಿಲ್ಲೆಯ ಬಿಜೆಪಿ ನಾಯಕರು ಲಘುವಾಗಿ ಮಾತನಾಡಿದ್ದಾರೆ, ನಾನದನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ, ರಾಜ್ಯದ ಜನತೆಗೆ ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಗೊತ್ತಾಗಬೇಕು, ಕೇವಲ ಟೀಕೆ ಟಿಪ್ಪಣಿಗಳನ್ನು ಮಾಡಿದರೆ ಉತ್ತರ ಸಿಗುವುದಿಲ್ಲ, ಬಡವರು, ನೊಂದವರು, ಶೋಷಿತರಿಗೆ ನ್ಯಾಯ ಒದಗಿಸುವುದು ನಮ್ಮ ಆದ್ಯತೆ, ಬಡವರಿಗೆ ಹಕ್ಕು ಪತ್ರ ಕೊಡುವುದನ್ನು ಬಿಜೆಪಿ ಸಹಿಸುವುದಿಲ್ಲ.”
– ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ.
