Ad image

ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಯಿಂದ ಉಚಿತ ಇಂಜಿನಿಯರಿಂಗ್ ಶಿಕ್ಷಣ!

Ashok RP
2 Min Read

ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಯಿಂದ ಉಚಿತ ಇಂಜಿನಿಯರಿಂಗ್ ಶಿಕ್ಷಣ!

ಮೇ 10ರಂದು ಆಕಾಂಕ್ಷಿಗಳಿಗೆ ಸಿಇಟಿ ಮಾದರಿ ಪರೀಕ್ಷೆ; ರ್ಯಾಂಕಿಂಗ್’ಗೆ ತಕ್ಕಂತೆ ವಿವಿಧ ರಿಯಾಯಿತಿ: ಹುಲಿನಾಯ್ಕರ್

Tumkur news
ತುಮಕೂರು: ಬಡತನ ಉನ್ನತ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬ ಸದುದ್ದೇಶ, ಸಾಮಾಜಿಕ ಕಳಕಳಿಯಿಂದ ಶ್ರೀದೇವಿ ಸಮೂಹ ವಿದ್ಯಾಸಂಸ್ಥೆ ಸ್ಕಾಲರ್‌ಶಿಪ್ ಯೋಜನೆಯನ್ನು ಇಂಜಿನೀಯರಿಂಗ್ ವಿದ್ಯಾರ್ಥಿಗಳಿಗಾಗಿ ಕಳೆದ ಹತ್ತು ವರ್ಷಗಳಿಂದ ಜಾರಿಗೊಳಿಸುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಎಂ.ಆರ್.ಹುಲಿನಾಯ್ಕರ್ ಹೇಳಿದರು.
ನಗರದಲ್ಲಿ‌ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಸ್ಥೆ ವಾರ್ಷಿಕ 2 ಕೋಟಿ ರೂಪಾಯಿಗಳನ್ನು ವಿನಿಯೋಗಿಸುತ್ತಿದೆ. ಇದೇ ಮೇ 10ರಂದು ಕಾಲೇಜಿನ ಆವರಣದಲ್ಲಿ ಸ್ಕಾಲರ್‌ಶಿಪ್ ಟೆಸ್ಟ್ ನಡೆಯಲಿದ್ದು ಇದರಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಮೊದಲ 11 ವಿದ್ಯಾರ್ಥಿಗಳಿಗೆ ನಾಲ್ಕು ವರ್ಷ ಉಚಿತ ಶಿಕ್ಷಣ ನೀಡಲಾಗುತ್ತದೆ. ಸಿಇಟಿ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಅವರು ಹೇಳಿದರು.
11 ರಿಂದ 20ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸಿಇಟಿ ಶುಲ್ಕ ಮಾತ್ರ ತೆಗೆದುಕೊಳ್ಳಲಾಗುತ್ತದೆ. 31 ರಿಂದ 60ನೇ ರ್ಯಾಂಕ್ ಪಡೆದ ಪಡೆದ ವಿದ್ಯಾರ್ಥಿಗಳಿಗೆ ಶೇ.25 ರಷ್ಟು ಸ್ಕಾಲರ್‌ಶಿಪ್ ಮತ್ತು ಟ್ಯೂಷನ್ ಶುಲ್ಕವನ್ನು ಮನ್ನ ಮಾಡಲಾಗುವುದು. 61 ರಿಂದ 100ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಶೇ. 10ರಷ್ಟು ಸ್ಕಾಲರ್‌ಶಿಪ್ ಮತ್ತು ಟ್ಯೂಷನ್ ಶುಲ್ಕವನ್ನು ಮನ್ನಮಾಡಲಾಗುವುದು. 101 ಮತ್ತು ಅದಕ್ಕಿಂತ ಹೆಚ್ಚಿನ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ 10 ಸಾವಿರ ರೂಪಾಯಿ ಲ್ಯಾಬ್ ಶುಲ್ಕ ಮನ್ನಾ ಮಾಡಲಾಗುತ್ತದೆ. ಹೀಗೆ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳಿಗೂ ಒಂದಲ್ಲ ಒಂದು ರೀತಿ ಆರ್ಥಿಕ ಪ್ರಯೋಜನವಾಗುತ್ತದೆ. ಕಳೆದ ಹತ್ತು ವರ್ಷಗಳಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡು ಮುಂದೆ ಬಂದಿದ್ದಾರೆ. ಬದುಕುಕಟ್ಟಿಕೊಂಡಿದ್ದಾರೆ. ಸ್ಕಾಲರ್‌ಶಿಪ್ ಟೆಸ್ಟಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಮತ್ತು ಊಟ-ತಿಂಡಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯವರೆಗೆ 1,300ಕ್ಕೂ ಹೆಚ್ಚು ಜನ ನೊಂದಣಿ ಮಾಡಿಕೊಂಡಿದ್ದು, ಶನಿವಾರದ ವೇಳೆಗೆ ಈ ಸಂಖ್ಯೆ 2000 ಗಡಿ ದಾಟುವ ನಿರೀಕ್ಷೆ ಇದೆ ಎಂದು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ನಮ್ಮ ಕಾಲೇಜಿನಿಂದ ಹೊರಬರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಉದ್ಯೋಗ ದೊರಕುತ್ತಿದೆ, ಪ್ರಮುಖ ಕಂಪನಿಗಳಲ್ಲಿ ವಾರ್ಷಿಕ 5 ರಿಂದ 15 ಲಕ್ಷದವರೆಗೆ ವೇತನ ಸಿಗುತ್ತಿದೆ. ಇದರ ಫಲವಾಗಿ ಪ್ರತಿ ವರ್ಷ ವಿದ್ಯಾರ್ಥಿಗಳ ಪ್ರವೇಶ ಹೆಚ್ಚಾಗುತ್ತಿದೆ. ಅದೇ ರೀತಿ ಕಾಲೇಜಿನಲ್ಲಿ ವಿಶ್ವ ದರ್ಜೆಯ ಮೂಲ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಇನ್ನೂ ಪ್ರತಿ ಸೆಮಿಸ್ಟರ್‌ನಲ್ಲಿ 9 ಅಂಕ (ಅತಿ ಹೆಚ್ಚು ಅಂಕ) ತೆಗೆಯುವ ವಿದ್ಯಾರ್ಥಿಗಳಿಗೆ 6000 ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಪ್ರಸಕ್ತ ವರ್ಷ 400 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್, ಕಾಲೇಜಿನ ಉಪಪ್ರಾಂಶುಪಾಲ ಡಾ.ಚಂದ್ರಶೇಖರ್, ಎಂ.ಬಿ.ಎ. ವಿಭಾಗದ ಮುಖ್ಯಸ್ಥ ರಾಮಕೃಷ್ಣ ಹಾಜರಿದ್ದರು.

ಬಾಕ್ಸ್: ಸ್ಕಾಲರ್‌ಶಿಪ್ ಟೆಸ್ಟ್‌ನಲ್ಲಿ ಪಾಲ್ಗೊಳ್ಳಲು ಬಯಸುವ ವಿದ್ಯಾರ್ಥಿಗಳು https://forms.gle/v3dwe9j9TVadeXc46 ವೆಬ್ ಸೈಟ್’ಗೆ ಭೇಟಿ ನೀಡಬಹುದು. ಅಥವಾ ನೇರವಾಗಿ ಟೆಸ್ಟ್‌ಗೆ ಹಾಜರಾಗಬಹುದು.

Share This Article
Leave a Comment

Leave a Reply

Your email address will not be published. Required fields are marked *