web tracker

ಡಾ.ಶಿವಕುಮಾರ ಸ್ವಾಮಿಗಳ ಜಯಂತಿ ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಶ್ರೀಗಳ ಕಡೆಗಣನೆ!; ಭಕ್ತರ ಆಕ್ರೋಶ

✍️ ಲೇಖಕ: Tumkur News 📅 April 1, 2026 | ⏰ 9:52 am

Spread the love

ಡಾ.ಶಿವಕುಮಾರ ಸ್ವಾಮಿಗಳ ಜಯಂತಿ ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಶ್ರೀಗಳ ಕಡೆಗಣನೆ!; ಭಕ್ತರ ಆಕ್ರೋಶ

ಗುರುವಂದನೆ ಕಾರ್ಯಕ್ರಮದಲ್ಲಿ ಮಠಾಧ್ಯಕ್ಷರನ್ನೇ ಕಡೆಗಣಿಸಲಾಗಿದೆ ಎಂದು ಭಕ್ತರ ಅಸಮಾಧಾನ

Tumkur News
ತುಮಕೂರು: ಶ್ರೀ ಸಿದ್ದಗಂಗಾ ಮಠದಲ್ಲಿ ಬುಧವಾರ ನಡೆದ ಲಿಂ.ಡಾ. ಶ್ರೀ ಶಿವಕುಮಾರ ಸ್ವಾಮಿಗಳ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವದಲ್ಲಿ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಯನ್ನು ಶಿಷ್ಟಾಚಾರದ ಹೆಸರಿನಲ್ಲಿ ಕಡೆಗಣಿಸಲಾಗಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಂದನಾ ಮಹೋತ್ಸವ ಕಾರ್ಯಕ್ರಮದಲ್ಲಿ, ಪೀಠಾಧ್ಯಕ್ಷರಿಗೆ ವೇದಿಕೆಯ ತುದಿಯಲ್ಲಿ ಆಸನದ ವ್ಯವಸ್ಥೆಯನ್ನು ಕಲ್ಪಿಸಿರುವುದು ಇದೀಗ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
‘ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಶ್ರೀಗಳನ್ನು ವೇದಿಕೆಯ ತುದಿಯ ಆಸನದಲ್ಲಿ ಕುಳ್ಳಿರಿಸಿರುವ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಶ್ರೀ ಮಠದ ಭಕ್ತನಾಗಿ ಹಲವು ಪ್ರಶ್ನೆಗಳು ಹುಟ್ಟುತ್ತಿವೆ. ಶಿಷ್ಟಾಚಾರ ಎಂದರೇನು? ಕಾರ್ಯಕ್ರಮದ ರೂವಾರಿಗಳನ್ನೇ ಕಡೆಗಣಿಸುವುದಾ? ಇದು ಸರ್ಕಾರಿ ಕಾರ್ಯಕ್ರಮವೇ? ಇದರ ಉದ್ದೇಶವೇನು? ಇದಕ್ಕೆ ಯಾರು ಕಾರಣ? ಪೀಠಾಧ್ಯಕ್ಷರಿಗೂ ಶಿಷ್ಟಾಚಾರವೇ? ಯಾರ್ಯಾರು ಎಲ್ಲಿ ಕುಳಿತಿದ್ದಾರೆ?’ ಎಂದು ಮಠದ ಭಕ್ತ ಹುಳಿಯಾರಿನ ಎಚ್.ಆರ್ ಗುರುಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಈ ಹಿಂದಿನ ಕಾರ್ಯಕ್ರಮಗಳಲ್ಲಿ, ಪೂಜ್ಯರಿಗೆ ವೇದಿಕೆಯ ಮಧ್ಯಭಾಗದಲ್ಲಿ, ಅಂದರೆ ಅತಿ ಗಣ್ಯರು, ಗಣ್ಯರ ಪಕ್ಕದಲ್ಲಿ ಆಸನ ಮೀಸಲಿರಿಸಲಾಗುತ್ತಿತ್ತು. ಆದರೆ, ಈ ಬಾರಿ ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಿಗೆ ವೇದಿಕೆಯ ಅಂಚಿನಲ್ಲಿ ಆಸನ ನೀಡಿರುವುದು ಎಷ್ಟು ಸಮಂಜಸ…? ಈ ನಡೆ ನಿಜಕ್ಕೂ ಬೇಸರ ತಂದಿದೆ. ಈ ರೀತಿಯ ನಡೆಗೆ ನಿಜಕ್ಕೂ ಪ್ರಾಯಶ್ಚಿತ್ತ ಖಂಡಿತವಾಗಿಯೂ ಆಗೇ ಆಗುತ್ತದೆ. ಕಾಲವೇ ಎಲ್ಲದಕ್ಕೂ ಉತ್ತರಿಸುತ್ತದೆ’ ಎಂದು ಎಚ್.ಆರ್.ಗುರುಪ್ರಸಾದ್ ಹೇಳಿದ್ದಾರೆ.

About The Author

Leave a Reply

Your email address will not be published. Required fields are marked *

© 2020-2026 Tumkur News. All Rights Reserved. | Designed & Developed by Webbrahma