ತುಮಕೂರು, ಜೂ. 19:
ಬಡ ಮಕ್ಕಳ ಜ್ಞಾನದ ಹಸಿವು ಹಾಗೂ ಹೊಟ್ಟೆಯ ಹಸಿವನ್ನು ನೀಗಿಸುವ ಸಿದ್ದಗಂಗಾ ಮಠಕ್ಕೆ ಕೃಷಿ ಇಲಾಖೆಯಿಂದ ಸುಮಾರು 7.5 ಕೋಟಿ ರೂ. ವೆಚ್ಚದಲ್ಲಿ ತರಕಾರಿ ಸಂಗ್ರಹಣೆಗಾಗಿ ಕೋಲ್ಡ್ ಸ್ಟೋರೇಜ್ ಮಂಜೂರು ಮಾಡಿರುವುದಾಗಿ ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.
ಕಳೆದ ಬಾರಿ ತಾವು ಮಠಕ್ಕೆ ಬಂದಿದ್ದ ಸಂದರ್ಭದಲ್ಲಿ ಭಕ್ತರು ಶ್ರೀಮಠದಲ್ಲಿ ಸುಮಾರು 10 ರಿಂದ 12 ಸಾವಿರ ಮಕ್ಕಳು ಪ್ರತಿದಿನ ಊಟ ಮಾಡುತ್ತಾರೆ. ತರಕಾರಿ ಕೆಡದಂತೆ ಸಂಗ್ರಹಿಸುವ ವ್ಯವಸ್ಥೆಯ ಅಗತ್ಯವಿದೆ ಎಂದು ಮನವಿ ಮಾಡಿದ್ದರು. ಹಾಗಾಗಿ ಭಕ್ತರ ಕೋರಿಕೆ ಮೇರೆಗೆ ಕೃಷಿ ಇಲಾಖೆಯ ನಬಾರ್ಡ್ ನಿಂದ ತರಕಾರಿ ದಾಸ್ತಾನಿಡುವ ಕೋಲ್ಡ್ಸ್ಟೋರೇಜ್ ಮಂಜೂರು ಮಾಡಲಾಗಿದೆ. ಇದು ಶ್ರೀಮಠಕ್ಕೆ ಬಹಳ ಉಪಯುಕ್ತವಾಗಲಿದೆ ಎಂದರು.
ಸಿದ್ದಗಂಗಾ ಮಠದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಕೆಲವೆಡೆ ಮಾತ್ರ ಮಳೆಯಾಗುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಮಳೆಯಾಗುತ್ತಿದೆ. ಹಾಗೆಯೇ ಬಿತ್ತನೆ ಕಾರ್ಯವೂ ಜಾಸ್ತಿಯಾಗುತ್ತಿದೆ ಎಂದು ಅವರು ಹೇಳಿದರು. Tumkurnews.in
ಬಿತ್ತನೆ ಕಾರ್ಯ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದೆ. ರೈತರ ಬೇಡಿಕೆಗನುಸಾರವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಜ್ಯೋತಿಗಣೇಶ್ ಮತ್ತಿತರರು ಉಪಸ್ಥಿತರಿದ್ದರು.
+ There are no comments
Add yours