ವಿಕಲಚೇತನರಿಗೆ ಬೇಕಾದುದು ಸಹಾನುಭೂತಿ ಅಲ್ಲ, ಸಮಾನ ಅವಕಾಶ ಬೇಕು
Tumkurnews
ತುಮಕೂರು: ಸಮಾಜದಲ್ಲಿ ವಿಕಲಚೇತನರಿಗೆ ಬೇಕಾದುದು ಕೇವಲ ಸಹಾನುಭೂತಿ ಅಲ್ಲ. ಬದಲಾಗಿ ಎಲ್ಲ ಸಮಾನ ಅವಕಾಶಗಳು ಸಿಗಬೇಕು. ಅವಕಾಶಗಳು ನೀಡಿದರೆ ಅವರಲ್ಲಿರುವ ಪ್ರತಿಭೆಯನ್ನು ಹೊರತರಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಅಭಿಪ್ರಾಯ ವ್ಯಕ್ತಪಡಿಸಿದರು.
ಬುಧವಾರ ನಗರದ ಬಾಲ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಕಲಚೇತನರು ವಿಶೇಷ ಚೇತನರು. ಸಮಾಜದಲ್ಲಿ ಅವರಿಗೆ ಸಮಾನವಾಗಿ ಅವಕಾಶಗಳು ತಲುಪಿದ್ದಲ್ಲಿ, ಅವರು ಇನ್ನಷ್ಟು ಉನ್ನತ ಮಟ್ಟಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿಕಲಚೇತನರ ಕಲ್ಯಾಣ ಕಾಯ್ದೆ 2016ರ ಪ್ರಕಾರ ಅವರಿಗೆ ಸಮಾನ ಅವಕಾಶಗಳು, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸೌಲಭ್ಯಗಳು ಸಿಗಬೇಕು. ವಿಕಲಚೇತನರನ್ನು ನೋಡಿಕೊಳ್ಳುವ ಆರೈಕೆದಾರರು ಯಾವುದೇ ರೀತಿ ನಿರ್ಲಕ್ಷ್ಯ ವಹಿಸಬಾರದು ಮತ್ತು ಅವರ ಶುಚಿತ್ವವನ್ನು ಕಾಪಾಡಬೇಕು, ಆರೈಕೆ ಮಾಡಲು ಸಾಧ್ಯವಾಗದಿದ್ದರೆ ಅವರನ್ನು ಸರ್ಕಾರಿ ಅಥವಾ ಸರ್ಕಾರಿ ಪ್ರಾಯೋಜಿತ ಆರೈಕೆ ಕೇಂದ್ರಗಳಿಗೆ ಸೇರಿಸಲು ಅವಕಾಶವಿದೆ ಎಂದರು.
ಮನೆ, ದೇವಸ್ಥಾನ, ಮಸೀದಿ, ಚರ್ಚುಗಳಲ್ಲಿ ವಿಕಲಚೇತನರು ಅಥವಾ ಬುದ್ಧಿಮಾಂದ್ಯತೆ ಹೊಂದಿರುವವರನ್ನು ಮೂಢನಂಬಿಕೆಗಳ ಕಾರಣದಿಂದ ಸಂಕೋಲೆಗಳಲ್ಲಿ ಸಿಲುಕಿಸಿ ಹಿಂಸೆ ನೀಡುವುದು ಗಂಭೀರ ಅಪರಾಧ. ಇಂತಹ ಕೃತ್ಯ ಎಸಗುವವರಿಗೆ ಕಠಿಣ ಶಿಕ್ಷೆಯ ಜೊತೆಗೆ ದಂಡವನ್ನೂ ವಿಧಿಸಲಾಗುವುದು ಎಂದು ಅವರು ಎಚ್ಚರಿಸಿದರು. ಸಂವಿಧಾನದಡಿ ವಿಕಲಚೇತನರು ಘನತೆ-ಗೌರವದಿಂದ ಬದುಕುವ ಹಕ್ಕನ್ನು ಹೊಂದಿದ್ದಾರೆ ಮತ್ತು ಅವರ ಹಕ್ಕುಗಳಿಗೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.
ವಿಕಲಚೇತರ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನಟರಾಜು ಮಾತನಾಡಿ ವಿಶ್ವ ವಿಕಲಚೇತನರ ದಿನಾಚರಣೆಯ ಇತಿಹಾಸ ಮತ್ತು ಉದ್ದೇಶವನ್ನು ವಿವರಿಸಿದರು. ವಿಕಲಚೇತನರೂ ಸಹ ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಸಂವಿಧಾನಾತ್ಮಕವಾಗಿ ಅವರಿಗೂ ಸಹ ಎಲ್ಲರಂತೆ ಸಮಾಜದಲ್ಲಿ ಬದುಕುವ ಹಕ್ಕನ್ನು ನೀಡಲಾಗಿದೆ ಎಂದು ತಿಳಿಸಿದರು.
ವಿಕಲಚೇತನರನ್ನು ಎಲ್ಲಾ ಕೆಲಸಗಳಲ್ಲಿ ತೊಡಗುವಂತೆ ಮಾಡಬೇಕು. ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಅವರಿಗೆ ಸಮರ್ಪಕವಾಗಿ ತಲುಪಬೇಕು. ವಿಕಲಚೇತನರು ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಬಲ್ಲರು ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಇತ್ತೀಚೆಗೆ ಅಂಗವಿಕಲ ಮಹಿಳೆಯರ ವಿಶ್ವ ವಲ್ರ್ಡ್ ಕಪ್ ಕ್ರಿಕೆಟ್ನಲ್ಲಿ ನಮ್ಮ ದೇಶ ವಿಜಯಶಾಲಿಯಾಗಿದ್ದು, ಈ ತಂಡದಲ್ಲಿ ತುಮಕೂರು ಜಿಲ್ಲೆಯವರಾದ ದೀಪಿಕಾ ಹಾಗೂ ಕಾವ್ಯ ಅವರು ಭಾಗವಹಿಸಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಬದುಕಿನಲ್ಲಿ ಹುಟ್ಟು ಎಷ್ಟು ಆಕಸ್ಮಿಕವೋ, ಸಾವು ಅಷ್ಟೇ ನಿಶ್ಚಿತ. ಜೀವಿತಾವಧಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲವನ್ನು ಹೊಂದಿರಬೇಕು. ದೈಹಿಕ ವ್ಯತ್ಯಾಸಗಳು ಎಷ್ಟೇ ಇದ್ದರೂ ಸವಾಲುಗಳನ್ನು ಮೆಟ್ಟಿ ನಿಂತು, ಏನನ್ನಾದರೂ ಸಾಧಿಸಬೇಕು ಎಂದು ಆತ್ಮಸ್ಥೈರ್ಯದ ಮಾತುಗಳನ್ನಾಡಿದರು.
ವಿಶ್ವ ವಿಕಲಚೇತನ ದಿನಾಚರಣೆ ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರೋತ್ಸಾಹಿಸುವುದು. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಇತರ ಕ್ಷೇತ್ರಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು. ವಿಕಲಚೇತನರನ್ನು ಕೇವಲ ಅನುಕಂಪದಿಂದ ನೋಡದೆ, ಅವರಿಗೆ ಕಾನೂನಿನಡಿ ಇರುವ ಹಕ್ಕು ಮತ್ತು ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಈಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸಿದ್ರಾಮಣ್ಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.




+ There are no comments
Add yours