ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ಆಕಾಶವಾಣಿ ನಿವೃತ್ತ ಅಧಿಕಾರಿ ನಾಗಮಣಿ ಎಸ್ ರಾವ್ ಅವರ ಏಕೈಕ ಪುತ್ರ ವಿನಯ್ ಎಸ್ ಬಾದಾಮಿ (56) ಹೃದಯಾಘಾತದಿಂದ ನಿಧನರಾಗಿದ್ದಾರೆ.
ವಿನಯ್ ಎಸ್ ಬಾದಾಮಿ ಅವರು ರಾಜ್ಯ ಮಟ್ಟದ ಅಂಡರ್-21 ಕ್ರಿಕೆಟ್ ತಂಡದ ನಾಯಕನಾಗಿ ಗುರುತಿಸಿಕೊಂಡಿದ್ದರು. ವಿಶ್ವವಿದ್ಯಾನಿಲಯ ಕ್ರಿಕೆಟ್ ತಂಡಕ್ಕೂ ನಾಯಕತ್ವ ವಹಿಸಿದ್ದ ಅವರು, ಖ್ಯಾತ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ಮತ್ತು ವೆಂಕಟೇಶ್ ಪ್ರಸಾದ್ ಅವರೊಂದಿಗೆ ಕೂಡ ಕ್ರಿಕೆಟ್ ಆಡಿದ್ದರು ಎಂದು ತಿಳಿದುಬಂದಿದೆ.
ಅಂತರರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಸತ್ಯಜಿತ್ ರಾವ್ ಮತ್ತು ನಾಗಮಣಿ ಎಸ್ ರಾವ್ ದಂಪತಿಯ ಪುತ್ರರಾಗಿದ್ದ ವಿನಯ್ ಅವರ ನಿಧನಕ್ಕೆ ಕರ್ನಾಟಕ ಮಾಧ್ಯಮ ಅಕಾಡೆಮಿ ಸಂತಾಪ ಸೂಚಿಸಿದೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ದೊರಕಲಿ ಎಂದು ಅಕಾಡೆಮಿ ಪ್ರಾರ್ಥಿಸಿದೆ.
