ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರದಲ್ಲಿ ದ್ವಿವಿವಾಹಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಮನೆಯವರ ಒತ್ತಡಕ್ಕೆ ಮಣಿದ ವ್ಯಕ್ತಿಯೊಬ್ಬನು ಈಗಾಗಲೇ ಮದುವೆಯಾಗಿರುವುದನ್ನು ಮರೆಮಾಚಿ ಮತ್ತೊಂದು ಮದುವೆಗೆ ಮುಂದಾಗಿದ್ದಾನೆ. ಆದರೆ ಹಸೆಮಣೆ ಏರಬೇಕಿದ್ದ ಕ್ಷಣದಲ್ಲೇ ಮೊದಲ ಪತ್ನಿ ಕಲ್ಯಾಣ ಮಂಟಪಕ್ಕೆ ಬಂದು ಮದುವೆಯನ್ನು ನಿಲ್ಲಿಸಿದ ಘಟನೆ ನಡೆದಿದೆ.
ನಗರದ ಬಸವ ಭವನದಲ್ಲಿ ಇಂದು ಬೆಳಗ್ಗೆ ನಡೆಯಬೇಕಿದ್ದ ಈ ಮದುವೆ ಡ್ರಾಮಾತ್ಮಕವಾಗಿ ಸ್ಥಗಿತಗೊಂಡಿತು. ಕಳೆದ ಒಂದು ವರ್ಷದಿಂದ ಕೇರಳ ಮೂಲದ ಮಹಿಳೆಯೊಂದಿಗೆ ಪ್ರೀತಿಸಿ ಮದುವೆಯಾಗಿದ್ದ ಕುಮಾರ್, ಆಕೆಯನ್ನು ಬಿಟ್ಟು ಮತ್ತೆ ಮದುವೆಯಾಗಲು ಮುಂದಾಗಿದ್ದನು. ಈ ಮಹಿಳೆ ಈಗಾಗಲೇ ಏಳು ತಿಂಗಳ ಗರ್ಭಿಣಿಯಾಗಿರುವುದೂ ಗಮನಾರ್ಹವಾಗಿದೆ.
ಮದುವೆ ವಿಷಯವನ್ನು ತಡರಾತ್ರಿ ಮಹಿಳೆಗೆ ತಿಳಿಸಿದ್ದ ಕುಮಾರ್, ಕುಟುಂಬದ ಒತ್ತಡದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾನೆ. ವಿಷಯ ತಿಳಿದ ಕೂಡಲೇ ಗರ್ಭಿಣಿ ಮಹಿಳೆ ಕಲ್ಯಾಣ ಮಂಟಪಕ್ಕೆ ಧಾವಿಸಿ ಮದುವೆಯನ್ನು ತಡೆದಿದ್ದಾಳೆ
ಸ್ಥಳಕ್ಕೆ ಬಂದ ದೊಡ್ಡಬಳ್ಳಾಪುರ ನಗರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ವರನನ್ನು ಠಾಣೆಗೆ ಕರೆದುಕೊಂಡು ಹೋಗಿದರು. ನಂತರ ಪೊಲೀಸ್ ಠಾಣೆಯಲ್ಲಿ ಮೊದಲ ಮದುವೆಯ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ.
ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.


